ಕೇಳಿದ್ದು ಅಂಕೋಲೆ ಇಶಾಡು, ಸಿಕ್ಕಿದ್ದು ಅಂಬರದ ಗುಬ್ಬಿ!

ಕೇಳಿದ್ದು ಅಂಕೋಲೆ ಇಶಾಡು, ಸಿಕ್ಕಿದ್ದು ಅಂಬರದ ಗುಬ್ಬಿ!

ಹೊಸತು ಮತ್ತು ವೈಚಾರಿಕ ಪ್ರಖರ ಬೆಳಕಿಗೆ ಕಣ್ಣು ಒಡ್ಡಲಾರದಷ್ಟು ನಾವು ಮೂಢರಾಗಿದ್ದೇವೆ. ಹಾಗಾಗಿ ನಮ್ಮ ನಡುವೆ ದೇವರು, ಧರ್ಮ, ನಂಬಿಕೆ ಹೆಸರುಗಳಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಗಳೆಲ್ಲಾ ಎಗ್ಗಿಲ್ಲದೆ ಸಾಗಿವೆ.
ಸ್ನಾತಕೋತ್ತರ ಪದವಿ ಓದಿದವರೂ ಈ ಮೂಢತೆಗಳನ್ನು ವಿರೋಧಿಸದೆ ಪರಮಮೂಢರಾಗಿದ್ದಾರೆ. ಎಂ.ಎ.ಎಂ.ಎಸ್ಸಿ. ಎಂ. ಕಾಂ. ನಂಥ ಉನ್ನತ ಶಿಕ್ಷಣ ಪಡೆದವರು ಮೆಟ್ರಿಕ್ ಪೂರೈಸಿ, ಪೂರೈಸದೆ ಸರ್ಕಾರಿ ಕೆಲಸ ಮಾಡುವವರನ್ನೋ, ಅನೈತಿಕ ಧನ ಸಂಗ್ರಹಕಾರರನ್ನೋ ವರಿಸುವ ಬೌದ್ಧಿಕ ದಿವಾಳಿತನ ನಮ್ಮೆದುರಿಗಿದೆ.
ಶೂದ್ರರಾಗಿರುವ ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ-ವರ್ಗಗಳಲ್ಲಿ ಗೌರವದ ದುಡಿಮೆಗಿಂತ ಹಣ, ಪ್ರತಿಷ್ಠೆ-ಭದ್ರತೆಗಳೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಈ ಅವ್ಯವಸ್ಥೆಗಳನ್ನು ಉಪಾಯದಿಂದ ಸಾಕಿ, ಸಲಹುವ ಪುರೋಹಿತಶಾಹಿ ನೇರ ಪ್ರಗತಿಪರ, ಜಾತ್ಯಾತೀತ ಸಿದ್ಧಾಂತಿಗಳನ್ನು ಟಾರ್ಗೆಟ್ ಮಾಡಿದರೆ, ಪರೋಕ್ಷವಾಗಿ ಈ ಅಶಿಕ್ಷಿತ ಅರೆಶಿಕ್ಷಿತ, ಶಿಕ್ಷಿತ ಮೂಢರನ್ನೇ ನುಂಗಿ ನೊಣೆಯುತ್ತದೆ.
ಈ ವಿಚಾರಗಳೆಲ್ಲಾ ಪದವಿ, ಸ್ನಾತಕೋತ್ತರಪದವಿಧರರನ್ನೂ ಆಪೋಶನ ಮಾಡುತ್ತಿರುವಾಗ ಪಾಪದ, ಬಡ ಅಶಿಕ್ಷಿತ, ಅರೆಶಿಕ್ಷಿತರ ಪಾಡೇನು?
ಈ ಬಗ್ಗೆ ಎಲ್ಲಾ ಯೋಚಿಸುತ್ತಾ, ಚಿಂತಿಸುತ್ತಾ ಈ ವಾರ ಎರಡು ಪುಸ್ತಕಗಳನ್ನು ತರಿಸಿಕೊಂಡು ಓದಿದೆ.
‘ನಾವೇಕೆ ದೇವರನ್ನು ನಂಬಲಿಲ್ಲ’ ಎನ್ನುವ ಹೊತ್ತಿಗೆಯೊಂದರಲ್ಲಿ 5 ವಿಚಾರ ಪ್ರಚೋದಕ ಲೇಖನಗಳಿವೆ.
ಪ್ರಸಿದ್ಧ ಪ್ರಮುಖರಾದ ಅನಿಬೆಸೆಂಟ್, ರಸೆಲ್ಸ್ ಬ್ರಾಡಲಾಫ್ ಇಂಗರ ಫಾಲ್‍ರರ ಲೇಖನಗಳು ಕುವೆಂಪು, ಅಂಬೇಡ್ಕರ್ ಕೋವೂರ್, ಪೆರಿಯಾರ್ ಸೇರಿದಂತೆ ಅನೇಕರನ್ನು ನೆನಪು
ಮಾಡುತ್ತವೆ. ಈ ಪುಸ್ತಕದ ಬಗ್ಗೆ ಮತ್ತೆ ಎಂದಾದರೂ ಬರೆದೇನು.
ಊರು ಸೂರಿನೊಳಗೆಲ್ಲಾ …….
ಅಂಕೋಲಾದ ರಾಮಮೂರ್ತಿ ನಾಯಕ ತಮ್ಮ ಚೊಚ್ಚಲ ಕವನ ಸಂಕಲನದಿಂದ ತಾನೊಬ್ಬ ಉತ್ತಮ ಕವಿ ಎಂದು ಗುರುತಿಸಿಕೊಂಡಿದ್ದಾರೆ. ಅಂಕೋಲಾದ ವಿಷ್ಣು ನಾಯ್ಕ, ಶಾಂತರಾಮ ಹಿಚ್ಕಡ,ರಾಜೇಂದ್ರ ನಾಯಕ ಸಗಡಗೇರಿ, ಶ್ರೀದೇವಿ, ರೇಣುಕಾ ನಾಯಕ, ಕೃಷ್ಣ ನಾಯಕ ಹಿಚ್ಕಡರು, ಹಬ್ಬು, ಅಮ್ಮೆಂಬಳರೆಲ್ಲಾ ಸೇರಿದ ಅನೇಕ ‘ಹಿತಕಾವ್ಯ’ ಪರಂಪರೆಯ ಸರಳ ಸಹಜ ವ್ಯಕ್ತಿ ರಾಮಮೂರ್ತಿ ನಾಯಕರ “ಊರು ಸೂರಿನೊಳಗೆಲ್ಲ’ ಎಂಬ ಪ್ರಬಂಧ ಅಥವಾ ಅನುಭವ ಸಂಗ್ರಹ ಒಂಥರಾ ವಿಶಿಷ್ಟ ಬರವಣಿಗೆಯಿಂದ ಮನಗೆಲ್ಲುತ್ತದೆ.
ಎಲ್ಲರಿಗೂ ಬಾಲ್ಯ, ಸುಗ್ಗಿ, ಸಂಬಂಧಗಳೇ ಕಚಗುಳಿ ಇಡುವುದು, ಇವೆಲ್ಲವುಗಳನ್ನು ಬಿಡಿ-ಬಿಡಿಯಾಗಿ ಇಡಿಯಾಗಿಸಿದರೆ ಇಷ್ಟವಾಗಲಾರದೆ? ರಾಮಮೂರ್ತಿ ಒಬ್ಬ ಸತ್ಯ-ವಾಸ್ತವಗಳ ಅನ್ವೇಷಿಯಾಗಿ ಎಲ್ಲರಿಗೂ ಇಷ್ಟ. ಅವರ ಕಾವ್ಯ ಅವರ ಒಳಹೊರಗನ್ನೂ ಪ್ರತಿಬಿಂಬಿಸಿ ಗೆದ್ದಿದೆ.
ಈಗ “ಊರು ಸೂರಿನೊಳಗೆಲ್ಲಾ’ ಒಂಥರಾ ಆಪ್ತವಾಗುತ್ತಲೇ ಹೊಸ ಶೈಲಿಯ ಅಮಾಯಕತೆಯಿಂದ ಕಾಡುತ್ತದೆ. ರಾಮಮೂರ್ತಿಯವರ ಶೈಲಿ ಅದ್ಭುತವೆನ್ನುವಂಥದ್ದಿದೆ. ಅದು ಈ ಪುಸ್ತಕ ಅಥವಾ ಅವರ ಅಂಬರದ ಗುಬ್ಬಿ ಕಾವ್ಯದಲ್ಲೂ ಸರಿಯಾಗಿ ಒಸರಿಲ್ಲ! ಅವರಿಂದ ಹೊರಬರಲು ತಡಕಾಡುತ್ತಿರುವ ಹೊಸ ರೋಚಕ ಗದ್ಯಶೈಲಿಯ ಮುನ್ನುಡಿಗಳಂತಿರುವವು ಈ ‘ಊರು ಸೂರಿನೊಳಗೆಲ್ಲಾ’ ಮತ್ತು ‘ಅಂಬರದ ಗುಬ್ಬಿ’
ಉತ್ತರ ಕನ್ನಡದ ಗಟ್ಟಿ ಬರಹಗಾರ, ರೋಚಕ ಗದ್ಯ ಗಾರುಡಿಗ ಆಗುವ ಎಲ್ಲಾ ಲಕ್ಷಣಗಳಿರುವ ರಾಮಮೂರ್ತಿ ನಾಯಕರ ಈ ಹೊತ್ತಿಗೆಗೆ ದೇವು ಹನೇಹಳ್ಳಿ ಬರೆದಿರುವ ಮುನ್ನುಡಿ ಈ ಪುಸ್ತಕ, ಬರಹಗಾರನನ್ನು ಅದ್ಭುತವಾಗಿ ಪರಿಚಯಿಸಿದೆ. ಅಕ್ಷರ ಸಂಗಾತಿಗಳಾದ ದೇವು ಮತ್ತು ರಾಮು ಉತ್ತರಕನ್ನಡದ ಹೊಸ ಬೆಳಕು, ನೀರು. ದೇವು ಅವರ ಮುನ್ನುಡಿಯೊಂದಿಗೆ ಈ ಎರಡು ಪುಸ್ತಕಗಳನ್ನು ಓದಿ ಹಿಗ್ಗುವ ಮಜ ನಿಮ್ಮದಾಗಲಿ. (- ಕನ್ನೇಶ್)
ಊರು ಸೂರಿನೊಳಗೆಲ್ಲಾ
ನಲ್ನುಡಿ
ಮಿತ್ರ ಬಾಸ್ಗೋಡು ರಾಮಮೂರ್ತಿ ನಾಯಕರ ಕಿರುಹೊತ್ತಿಗೆಗೆ ಈ ನಾಲ್ಕಾರು ಸಾಲುಗಳನ್ನುನಾನುಬರೆಯುವಂತಾದುದಕ್ಕೆ ಸಹಜವಾಗಿ ಫಲಿಸಿದ ನಮ್ಮ ಸ್ನೇಹ ಮತ್ತು ಅವರ ಸಾಕ್ಷಿಯಲ್ಲಿ ಘಟಿಸಿದ ನಗಣ್ಯವೆನ್ನಬಹುದಾದ ಒಂದು ಘಟನೆಯೇ ಕಾರಣ, ಹೊರತು (ನನ್ನಲ್ಲಿಲ್ಲದ) ವಿದ್ವತ್ತಾಗಲೀ, ವಿಷಯ ಪರಿಣತಿಯಾಗಲೀ ಅಲ್ಲ.
ಆ ಘಟನೆಯನ್ನು ಹೇಳುತ್ತೇನೆ ಕೇಳಿ. ಅಂಕೋಲಾ ವಲಯ ಉತ್ತಮದರ್ಜೆಯ ಮಾವಿನಹಣ್ಣುಗಳಿಗೆಹೆಸರುವಾಸಿಯಲ್ಲವೆ? ಹಾಗೇನೇ ಅಲ್ಲಿಂದ ಹಣ್ಣುಗಳನ್ನು ಕೊಂಡೊಯ್ಯುವ ಇರಾದೆಯಿಂದ ಶ್ರೀ ರಾಮಮೂರ್ತಿಯವರ ಮೂಲಕ ಬಾಸ್ಗೋಡಿನ ಹಣ್ಣಿನ ವ್ಯಾಪಾರಿ ಸಣಕೂಸ ಗೌಡರನ್ನು ಸಂಪರ್ಕಿಸಿದೆ.
ಮಾತನಾಡಿಕೊಂಡಂತೆ ಒಂದು ದಿನ ಅವರಲ್ಲಿಗೆಹೋದೆ; ಮೂರು ಬುಟ್ಟಿ ಹಣ್ಣುಗಳನ್ನು ಕೊಂಡೆ; ಲೆಕ್ಕ ಹೇಳಿದರು; ಪಾವತಿಸಿದೆ; ಶ್ರೀ ರಾಮಮೂರ್ತಿಯವರೇ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟರು;
ನನ್ನ ಹನೆಹಳ್ಳಿಗೆ ಕೊಂಡುಹೋದೆ; ತಿಂದೆವು ; ಸಂತುಷ್ಟರಾದೆವು; ಮರೆತೆವು. ಆದರೆ ಅವರು ಮರೆಯಲಿಲ್ಲ. ಅವರೆಂದರೆ ಆ ವ್ಯಾಪಾರಿ. ಸರಿಸುಮಾರು ಒಂದು ತಿಂಗಳ ಅನಂತರ ಅವರು ಶ್ರೀರಾಮಮೂರ್ತಿಯವರ ಮನೆಗೆ ಬಂದು “ಆ ದಿನ ಹೇಗೆ ಲೆಕ್ಕ ಮಾಡಿದೆನೋ ಗೊತ್ತಿಲ್ಲ. ನಾನು ಹೇಳಿದೆ, ಅವರು ಕೊಟ್ಟರು. ಆದರೆ ನನಗೆ ನೂರು ರೂಪಾಯಿ ಜಾಸ್ತಿ ಸಂದಾಯವಾಗಿದೆ. ಇಗೋ ತಗ್ಗೊಳ್ಳಿ, ನಿಮ್ಮ ಸ್ನೇಹಿತರು ಇನ್ನೊಮ್ಮೆ ನಿಮ್ಮಲ್ಲಿಗೆ ಬಂದಾಗ ಕೊಟ್ಟುಬಿಡಿ” ಎಂದರಂತೆ.
ಇಂಥವು ನಮ್ಮ ಪ್ರಜ್ಞೆಯನ್ನು ಕಟ್ಟುವ, ಕಟ್ಟಬೇಕಾದ ಮಿನುಗುಗಳು.
ಇಂಥದೇ ಮಿನುಗುಗಳನ್ನು ಆಂಜಿ ಸೂಡಿ ಕಟ್ಟಿ ಹಿಡಿದು ಇತಿಹಾಸವನ್ನು, ಭವ್ಯ ಭವಿತವ್ಯವನ್ನು ಕಟ್ಟಲು ಹೊರಟವರು ಅದೆಷ್ಟು ಮಂದಿ! ಇಂಥದೇ ಅನ್ನದ ಬೀಜಗಳನ್ನು, ಋತದ ಬೀಜಗಳನ್ನು, ಋಣದ ಬೀಜಗಳನ್ನು, ಬೆಳಕಿನ ಬೀಜಗಳನ್ನು, ಈ ನೆಲದ ತುಂಬ ಬಿತ್ತಲು ಹೊರಟವರು ಅದೆಷ್ಟು ಮಂದಿ!
ದಿನಕರ ದೇಸಾಯಿ, ಪಿಕಳೆ-ನಾಡಕರ್ಣಿ-ಕಾಯ್ಕಿಣಿ ಮಾಸ್ತರರು, ಡಾ.ಕುಸುಮಾ ಸೊರಬ…ಎಲಾ! ಸೋತುಬಿಟ್ಟರೇ!?
ಅದಕ್ಕೆಂದೇ, ಶ್ರೀ ರಾಮಮೂರ್ತಿಯವರ ಈ ಹೊತ್ತಿಗೆ ತೀರಾ ತುರ್ತಿನದು.
ಪುಸ್ತಕದ ತುಂಬ ಇಂತಹದೇ ಬೆಳಕಿನ ಬೀಜಗಳು. ಮೋಡಮಂಜುಧೂಳು ಕವಿದರೆ ಮಾಯವಾಗುವ ಬಿಂದುಗಳು. ಊದಿದರೆ ಹಾರಿಹೋಗುವ ಧೂಳಿನಷ್ಟು ಪುಟ್ಟದಾದ ಆಲದ ಬೀಜಗಳು.
ಈ ಅನ್ನ-ಋಣ-ಬೆಳಕಿನ ಬೀಜಗಳನು ಬಿತ್ತಬೇಕಾದ ನೆಲ ಜೆಸಿಬಿ ಹಿಡಿದ ಜನನಾಯಕರ ಪಾಲಾಗಿದೆ. ಅಂದು ಈ ಬೀಜಗಳನ್ನು ಬಿತ್ತಿ ಸ್ವಾಭಿಮಾನದ ಬೆಳೆ ಬೆಳೆದ ಆ ಧೀಮಂತರ ಜತೆ ಹೆಜ್ಜೆ ಹಾಕಿದವರು ಇಂದು ಬಿತ್ತಿದರೆ ಬೆಳೆಯದ ಪೊಟ್ಟು ಮೊನ್ಸಾಂಟೋ ಬೀಜ ಮಾರುತ್ತಿರುವ ದಲ್ಲಾಳಿಗಳ ಹಿಂದಿದ್ದಾರೆ.
ಆ ಧೀಮಂತರೆಲ್ಲ ಒಂದೊಮ್ಮೆ ಜನನಾಯಕರಾಗಿದ್ದರು ಎಂದರೆ ಈಗ ನಂಬಲಾಗದು. ಬೆಳಕಿನ ಬೀಜಗಳೆಲ್ಲ ಜೆಸಿಬಿಯ ಧೂಳಿನಲ್ಲಿ ಮ್ಲಾನವಾಗಿವೆ; ಇತಿಹಾಸ ನಿರ್ಮಿಸುತ್ತಿರುವ ಪುಂಡರ ಕಾಲಕಸವಾಗಿಬಿಟ್ಟಿವೆ. ಈ ಸಂಧಿಗ್ಧ, ನಿರಾಶಾದಾಯಕ ಸನ್ನಿವೇಶದಲ್ಲಿ ಈ ಹತಭಾಗ್ಯ ಬೀಜಗಳನ್ನು ಆಧರಿಸುವ ಧೈರ್ಯ ತೋರಿದ ಶ್ರೀ ರಾಮಮೂರ್ತಿಯವರುಅಭಿನಂದನಾರ್ಹರು.
“ನನ್ನ ಬಾಳಿಗೆ ಮುಖ್ಯರೆಂದುಕೊಂಡವರು ಅಪ್ರಸಿದ್ಧರು. ಹೆಸರೇಕೆ? ಅವರ ವಿಚಾರ ಸಾಕು” ಎಂಬ ಶ್ರೀ ರಾಮಮೂರ್ತಿಯವರ ಲಜ್ಜೆ-ವಿನಯದೊಂದಿಗೆ ನನಗೆ ಸಹಮತವಿಲ್ಲ.
ಬಾಳ್ವೆಯ ಬೆಳಕನ್ನು ಮೈದುಂಬಿಕೊಂಡು ದೊಡ್ಡ ಬಾಳನ್ನು ಬಾಳಿದವರ ಹೆಸರನ್ನು ಹೇಳಲು ಹಿಂಜರಿಕೆಯೇಕೆ? ಅವು ಖಂಡಿತ ಅಪ್ರಸ್ತುತವಲ್ಲ. ಅಪ್ರಸಿದ್ಧರಿರಲಿ, ಅಲ್ಪರಲ್ಲವಲ್ಲ?! ಪ್ರಸಿದ್ಧರು ಅವರ ಪಾಡಿಗೆ ಇತಿಹಾಸವನ್ನು ಕಟ್ಟಲಿಬಿಡಿ. ಮಣ್ಣಿನಡಿ ಹೂತುಹೋಗಿ ಅದೊಂದು ದಿನ ಫಳಾರನೆ ಬೆಳಕ ಮೊಳಕೆಯನ್ನು ಸಿಡಿಸಿ ನಿಃಶೇಷವಾಗಿಹೋಗಿ ಪ್ರಜ್ಞೆ-ಸಂಸ್ಕøತಿ-ಪರಂಪರೆಗಳನ್ನು ಕಟ್ಟುವ ಈ ಇವರು ನಮ್ಮಂತಹ ಚಿಕ್ಕವರಿಗೆ ಮುಖ್ಯರೂ, ಪ್ರಸ್ತುತರೂ ಆಗುತ್ತಾರೆ.ಇನ್ನೊಂದು ಕಾರಣವೆಂದರೆ ಸತ್ಯ, ಮೌಲ್ಯ, ಆದರ್ಶಗಳು ತಂತಾನೆ ಮೈದುಂಬಿ ನಿಲ್ಲಲಾರವು. ದೇಹಕ್ಕೆ ಅಸ್ಥಿಪಂಜರ ಬೇಕಾದಂತೆ ಇವುಗಳಿಗೊಂದು ವ್ಯಕ್ತಿ, ಒಂದು ಹೆಸರು, ಒಂದು ವಿಳಾಸ, ಒಂದು ಘಟನೆ ಬೇಕು. ಕಾರಂತರ ಬಾಳ್ವೆಯೆ ಬೆಳಕು ಒಂದು ಮಹೋನ್ನತ ಕೃತಿ ನಿಜ; ಆದರೆ ನಮಗೆ ಜೀವನದರ್ಶನ ಕಾಣಿಸುವುದು ರಕ್ತಮಾಂಸ ತುಂಬಿದ ಮರಳಿ ಮಣ್ಣಿಗೆಯಲ್ಲಿ.
ಈ ಎಲ್ಲ ವ್ಯಕ್ತಿಚಿತ್ರಗಳಲ್ಲಿ ಶ್ರೀನಾಯಕರು ಪ್ರಜ್ಞಾಪೂರ್ವಕ ವಾಗಿಯೋ,ಅಪ್ರಜ್ಞಾಪೂರ್ವಕವಾಗಿಯೋ ಒಂದು ಗಮನಾರ್ಹ ಸಂಗತಿಯನ್ನು ಕಂಡಿದ್ದಾರೆ ಮತ್ತು ಕಾಣಿಸಿದ್ದಾರೆ. ಹೆಚ್ಚಿನೆಲ್ಲ ಚಿತ್ರಗಳಲ್ಲಿ ಅದುಸಹಜವಾಗಿ, ಹೃದ್ಯವಾಗಿ ಮೂಡಿಬಂದಿದೆ ಕೂಡಾ. ಅದೆಂದರೆ, ಈ ಎಲ್ಲ ಅಜ್ಞಾತ-ಅನಾಮಿಕ
-ಅಪ್ರಸಿದ್ಧ ವ್ಯಕ್ತಿಗಳು ಹೊಮ್ಮಿಸಿದ ಬೆಳಕಿಗೆ, ಕಾಣಿಸಿದ ಜೀವನದರ್ಶನಕ್ಕೆ ದೇವರು, ಮತಪಂಥ, ಪವಿತ್ರಗ್ರಂಥ, ಶಾಸ್ತ್ರಗ್ರಂಥ, ಆತ್ಮ-ಪರಮಾತ್ಮ-ಆಧ್ಯಾತ್ಮ ಇತ್ಯಾದಿಗಳ, ಹಾಗೆಯೇ ಇವಕ್ಕೆ ಸಮಾನಾಂತರವಾಗಿ, ಸಾಹಿತ್ಯ, ವಿಮರ್ಶೆ, ತತ್ವಜ್ಞಾನ, ಜ್ಞಾನಾರ್ಜನೆ, ವಿಚಾರವಾದ, ಪ್ರಗತಿಪರಧೋರಣೆ, ವೈಜ್ಞಾನಿಕ ಮನೋಭಾವ, ಸಾಧನೆ ಇತ್ಯಾದಿಗಳ ಹಂಗಿಲ್ಲ.
ಅವು ತೀರಾ ಸಹಜ ಮತ್ತು ಅಪ್ಪಟ ಲೌಕಿಕ. ಅದು ನಿಷ್ಕಳಂಕ ಬಾಳ್ವೆಯ ಬೆಳಕು. ಅದು ‘ಅಂಬರ ಗುಬ್ಬಿ’ ನೆಲದಲ್ಲಿ ಗೂಡು ಕಟ್ಟುವ ಬಗೆ.
ಶ್ರೀ ರಾಮಮೂರ್ತಿ ನಾಯಕರ ಈ ಹೊತ್ತಿಗೆ ‘ಶ್ರೇಷ್ಠ ಸಾಹಿತ್ಯಕೃತಿ ಎನ್ನಿಸಿಕೊಳ್ಳುತ್ತದೆ,’ ‘ಕೀರ್ತಿ ಪಡೆಯುತ್ತದೆ, ಪಡೆಯಬೇಕು, ಪಡೆಯಲು ಅರ್ಹ’, ಪ್ರಶಸ್ತಿ ಗೆಲ್ಲುತ್ತದೆ’ ಎಂಬಿತ್ಯಾದಿ ಹೇಳಲು ನಾನು ವಿಮರ್ಶಕನಲ್ಲ, ಸಂಘಟಕನಲ್ಲ.
ಆ ಮಾತು ಅಪ್ರಸ್ತುತ ಕೂಡಾ. ಅದು ತಂತಾನೆ ಆಗಲಿ, ಸಂತೋಷ. ರಾಮಮೂರ್ತಿಯವರ ಯತ್ನವನ್ನು ಕಂಡು ಮೋಹಿತರಾಗಿ ಇನ್ನು ಕೆಲಮಂದಿಯಾದರೂ ನಮ್ಮ ಸುತ್ತಮುತ್ತ ಅನಾಥವಾಗಿ ಬಿದ್ದಿರುವ ಇಂತಹ ಬೆಳಕಿನ ಬೀಜಗಳನ್ನು ಅರಸಿ, ಆರಿಸಿ, ಎತ್ತಿಹಿಡಿದರೆ; ಮತ್ತೆ ಹಲವು ಮಂದಿ ಕಣ್ತೆರೆದು ಈ ಬೆಳಕ ಕುಡಿದರೆ ಅದೇ ಸಾರ್ಥಕ. ಅದರಲ್ಲಿ ಧನ್ಯತೆಯನ್ನು ಕಾಣುವ ಹೃದಯವಂತಿಕೆ ಶ್ರೀ ನಾಯಕರಿಗೆ ಇದೆ ಎಂಬ ವಿಶ್ವಾಸ ನನಗಿದೆ ನಮಸ್ಕಾರ
ಹನೆಹಳ್ಳಿ -ದೇವು ಹನೆಹಳ್ಳಿ
25-11-2013 ಆಕಾಶವಾಣಿ, ಕಾರವಾರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *