![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ದೇವರಕಾಡಿನ ಗಾಂಜಾಗ್ಯಾಂಗ್!.
…..ಆ ಬೇಲಿ ಆಚೆ ಜಿಗಿದುಬಿಟ್ಟರೆ ಯಾರು ಕಂಡರೂ ಅವರನ್ನು ಪ್ರಶ್ನಿಸುವಂತಿಲ್ಲ . ಸ್ವಾತಂತ್ರ್ಯದ ಸೀಮಾರೇಖೆ ಅವರ ಎದುರಿನಲ್ಲಿತ್ತು. ಅದನ್ನು ದಾಟಿ ನಿಂತರೆ ಜೀವನವೇ ಉಳಿದಂತೆ ಎಂದುಕೊಂಡು ಬೇಲಿ ದಾಟಲು ಎದ್ದು ನಿಲ್ಲುವ ಪ್ರಯತ್ನ ಮಾಡಿದರು. ಅವರ ಗ್ರಹಚಾರಕ್ಕೆ ಬೆನ್ನು ನೆಟ್ಟಗೆ ಮಾಡಲಾಗುತ್ತಿರಲಿಲ್ಲ. ಎಷ್ಟೋಹೊತ್ತಿನ ತನಕ ಬೆನ್ನು, ಕಾಲುಗಳನ್ನು ಅಡ್ಡಾದಿಡ್ಡಿ ಬಾಗಿಸಿಕೊಂಡು ಅಡಗಿದ್ದ ಅವರಿಗೆ ಈಗ ನೆಟ್ಟಗೆ ನಿಲ್ಲುವ ಅಂದರೂ ಸಾಧ್ಯವಾಗುತ್ತಿರಲಿಲ್ಲ. ಇಡೀ ಶರೀರವೇ ಸೊಟ್ಟಗಾಗಿ ನೇರ ಮಾಡುವ ಅಂದರೆ ಯಮಯಾತನೆಯಾಗುತ್ತದೆ.
ಹೇಗೋ ಒದ್ದಾಡಿ, ಅರೆಬರೆ ದೇಹವನ್ನು ಬಗ್ಗಿಸಿಕೊಂಡು ಬೇಲಿ ನುಸಿದು ಆಚೆ ಬಂದದ್ದೇ “ಉಸ್ಸಪ್ಪಾ” ಎಂದು ಗಟ್ಟಿ ಉಸಿರು ಬಿಟ್ಟ ಗಿರಿಧರ, ಶೇಷಾಚಲನಿಗೆ ಹೋದ ಜೀವ ಬಂದಂತಾಗಿತ್ತು. ತಮ್ಮ ಜೊತೆಗೆ ಬಂದಿದ್ದವರು ಖಂಡಿತವಾಗಿ ಇಲ್ಲಿಂದ ಪರಾರಿಯಾಗಿರಬಹುದು ಎಂದುಕೊಂಡು ಅತ್ತಿತ್ತ ಅವರಿಗಾಗಿ ಹುಡುಕಾಡುತ್ತಿದ್ದಂತೇ ಅಲ್ಲೇಲ್ಲೋ ಪೊದೆಯೊಳಗೆ ಅಡಗಿ ಕೂತವರು ಹೊರಗೆ ಬಂದು ಇವರಿಬ್ಬರ ತಾಪತ್ರಯವನ್ನು ಕಂಡು ಹಲ್ಲು ಕಿಸಿದು ನಕ್ಕಿದ್ದರು.
“ಇನ್ನೂ ತಡ ಮಾಡುತ್ತ ಕೂತರೆ ಕತ್ತಲೆಯಾಗತ್ತೆ, ನಿಮಗೇನು, ನಡು ದಾರಿಯಲ್ಲಾದರೂ ಕೈ ಬಿಟ್ಟು ಎಸ್ಕೇಪ್ ಆಗ್ತೀರಾ” ಎಂದು ಗಿರಿಧರ ಅಷ್ಟು ಹೊತ್ತಿನ ತನಕ ತಡೆಹಿಡಿದುಕೊಂಡಿದ್ದ ಸಿಟ್ಟನ್ನು ವ್ಯಕ್ತಪಡಿಸಿದ್ದ.
ಅಷ್ಟು ಹೇಳಿದ್ದೇ ಅವರಿಬ್ಬರೂ ತಡಾಬಡಿಸಿ ಹೊರಟೇಬಿಟ್ಟಿದ್ದರು. ಅವರು ಕೈ ತಪ್ಪಿದರೆ ಕಾಡೇ ಗತಿ ಎಂದು ಗಿರಿಧರ,óಶೇಷಾಚಲ ಇಬ್ಬರೂ ಅವರ ಹಿಂದೆ ಸೊಟ್ಟಗಾದ ಶರೀರವನ್ನು ನೆಟ್ಟಗೆ ಮಾಡಿಕೊಳ್ಳುತ್ತ ಹಿಂಬಾಲಿಸಿದರು. ಬರುವಾಗಿನ ದಾರಿಯಲ್ಲೇ ವಾಪಸ್ಸು ಹೋಗುವುದು ಹೇಗೆ ಎಂದು ಯೋಚಿಸಿದ ಗಿರಿಧರ ಅವರಲ್ಲಿ ಕೇಳಿದಾಗ
“ ಇಲ್ಲಿಗೆ ಹತ್ತಿರದ ದಾರಿನೇ ಬೇರೆ ಇದೆ, ಅದರಲ್ಲೇ ಈಗ ಹೋಗ್ತಿರೋದು. ಆಗ ಯಾರಾದ್ರೂ ಕಂಡ್ರೆ ಎಂದು ಆ ದಾರಿಯಲ್ಲಿ ಸುತ್ತು ಹಾಕಿ ಬಂದೆವು” ಎನ್ನುವ ಉತ್ತರ ಅವರಲ್ಲಿ ಒಬ್ಬನಿಂದ ಬಂತು.
ಅಂತೂ,ಇಂತೂ ಅಸ್ಪಷ್ಟವಾದ ಹಾದಿಯಲ್ಲಿ ಒದ್ದಾಡುತ್ತ ಮೋಟರ್ ಬೈಕ್ ಇಟ್ಟಿದ್ದ ವೈರ್ಲೆಸ್ ಗುಡ್ಡದ ಬುಡಕ್ಕೆ ಬರುವಷ್ಟರಲ್ಲಿ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಕತ್ತಲಾಗಿತ್ತು. ಆ ಗುಡ್ಡದ ಮೇಲಿದ್ದ ಟವರ್ನ ತುದಿಯಲ್ಲಿದ್ದ ಕೆಂಪು ದೀಪ ಮಾತ್ರ ಆ ಕಡುಗತ್ತಲೆ ಸಾಮ್ರಾಜ್ಯದಲ್ಲಿ ಹೊಳೆಯುತ್ತಿತ್ತು.
ಅಲ್ಲಿಗೆ ಬಂದು ತಲುಪುತಿದ್ದಂತೇ ಬೈಕ್ ಚಾಲೂ ಮಾಡಿದ ಗಿರಿಧರನ ಬಳಿ ಅವರಲ್ಲೊಬ್ಬ
“ಈ ಸುದ್ದಿ ಪೇಪರ್ನಾಗೆ ಯಾವಾಗ ಬರುತ್ತದೆ?” ಎಂದು ಕೇಳಿದ್ದ.
ಅಷ್ಟೊತ್ತಿಗಾಗಲೇ ಇನ್ನೆಂದೂ ಇಂಥ ತನಿಖಾ ವರದಿಯ ಸಹವಾಸಕ್ಕೆ ಬರಬಾರದೆನ್ನುವ ತೀರ್ಮಾನಕ್ಕೆ ಬಂದು ತನ್ನ ಸೈರಣೆಯನ್ನು ಕಳೆದುಕೊಂಡಿದ್ದ ಶೇಷಾಚಲ
“ನಿಮ್ಮನ್ನ ಕಳುಹಿಸಿದ ಪುಣ್ಯಾತ್ಮನಿಗೆ ಹೇಳು, ನಾಳೆಯಿಂದ ದಿನಾ ಫೋನ್ ಮಾಡ್ತಿರೋಕೇ ಹೇಳು, ಪೇಪರ್ನಾಗೆ ಬಂದ ದಿನ ಹೇಳ್ತೆವೆ” ಎಂದು ಸುಂಯ್ಗುಡುವ ಉಸಿರಿನಲ್ಲೇ ತೇಕುತ್ತ ಹೇಳಿದ್ದ.
ಅವೆಲ್ಲ ನೆನಪುಗಳೂ ಮನಸ್ಸಿನ್ನಲ್ಲಿ ಸಿನೆಮಾದ ದೃಶ್ಯಗಳಂತೆ ಸರಿದುಹೋಗಿತ್ತು.
ಅದರ ಹಿಂದೆಯೇ ಆಗ ಜೊತೆಗಿದ್ದು, ಕಳೆದ ವರ್ಷ ವೈಟ್ ಜಾಂಡೀಸ್ ಆಗಿ ವಾಸಿಯಾಗದೇ ತೀರಿಕೊಂಡ ಶೇಷಾಚಲನ ನೆನಪೂ ಆಗಿ ಮನಸ್ಸು ಗದ್ಗದಿತವಾಯಿತು.
ಗೋವಿಂದ ಹೆಗಡೆ ಕೇಸ್ ಕೂಡ ಅಂಥ ಎಡಬಟ್ಟುಗಳಿಗೆ ಕಾರಣವಾದರೆ ಏನು ಗತಿ? ಬೇಡ ಎಂದುಕೊಂಡರೂ ಯಾಕೆ ಇಂಥವೇ ನನ್ನನ್ನು ಆಕರ್ಷಿಸುತ್ತವೆ? ಗೋವಿಂದ ಹೆಗಡೆ ಹೇಳಿದ್ದನ್ನು ನಂಬಿಕೊಂಡು ಹೋಗಿ ಅಪಾಯಕ್ಕೆ ಸಿಕ್ಕುಹಾಕಿಕೊಂಡರೆ ರಕ್ಷಿಸುವವರಾದರೂ ಯಾರು? ಎನ್ನುವ ಯೋಚನೆಗಳೆಲ್ಲಾ ಗಿರಿಧರನನ್ನು ಚಿಂತಾಕ್ರಾಂತನಾಗುವಂತೆ ಮಾಡಿದ್ದವು.
ದೇವರ ಕಾಡು ಎನ್ನುವ ಹೆಸರನ್ನು ಅಂಟಿಸಿಕೊಂಡಿದ್ದ ಆ ಊರಿನಲ್ಲಿ ಈಗ ಹುಡುಕಿದರೂ ಒಂದೇ ಒಂದು ದೇವರ ಕಾಡು ಎಂದು ಕರೆಸಿಕೊಳ್ಳುವಂಥ ತೋಪು ಕಾಣಲು ಸಾಧ್ಯವೇ ಇರಲಿಲ್ಲ. ಆ ಊರಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಸಂದರ್ಶಿಸಲು ಹೋಗಿದ್ದಾಗ ಶತಮಾನದಂಚಿಗೆ ಬಂದು ತಲುಪಿದ ಆ ಮುದುಕರು ದೇವರ ಕಾಡಿನ ಐತಿಹ್ಯದ ಕುರಿತು ತಾಸುಗಟ್ಟಲೇ ಹೇಳಿದ್ದರು.
ಒಂದು ಕಾಲದಲ್ಲಿ ದೂರ ದೂರದಲ್ಲಿರುವ ಮನೆಗಳ ಆ ಊರನ್ನೆಲ್ಲ ಕಾಡು ಕವಿದುಕೊಂಡಿತ್ತು. ಮನೆಯಂಚಿಗೆ ಬಂದು ಆವರಿಸಿಕೊಳ್ಳುತ್ತಿದ್ದ ಕಾಡಿನಲ್ಲಿದ್ದ ಹುಲಿ, ಜಿಂಕೆ ಮುಂತಾಗಿ ಹಲವು ಕಾಡುಪ್ರಾಣಿಗಳು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಂತೆ ಸಾಮಾನ್ಯವಾಗಿದ್ದವು. ಎತ್ತರದ ಗುಡ್ಡವೊಂದರ ಇಳಿಜಾರಿನ ಸುತ್ತಲಿನ ಅಂಚುಗಳಲ್ಲಿದ್ದ ಮನೆಗಳೆಲ್ಲ ಜನಸಂಖ್ಯೆ ಹೆಚ್ಚಿದಂತೆ ಹತ್ತಾರು ಮನೆಗಳ ಊರಾದವು. ಅಂಥ ನಾಲ್ಕಾರು ಪುಟ್ಟ ಊರುಗಳೆಲ್ಲ ಕ್ರಮೇಣ ವಿಸ್ತರಿಸುತ್ತ ಒಂದಕ್ಕೊಂದು ಸೇರಿಕೊಂಡು ಈಗ ಪಟ್ಟಣವೆಂದು ಕರೆಸಿಕೊಳ್ಳುವ ಸ್ವರೂಪ ಪಡೆದಿತ್ತು. ದಟ್ಟವಾಗಿದ್ದ ಕಾಡು ನೋಡ ನೋಡುತ್ತಿದ್ದಂತೇ ದೂರ ಸರಿಯತೊಡಗಿತ್ತು. ಅತ್ತ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೂ ಆಗಿ ಉಳಿಯದ ದೇವರ ಕಾಡು ಮರಗಳಿಲ್ಲದಿದ್ದರೂ ಹೆಸರನ್ನು ಮಾತ್ರ ಉಳಿಸಿಕೊಂಡಿತ್ತು.
ಮಲೆನಾಡಿನ ಎಲ್ಲ ಊರುಗಳಂತೇ ಅಲ್ಲಿಯೂ ಸ್ಥಳೀಯರಿಗಿಂತ ಹೊರ ಊರಿನವರೇ ಅಧಿಪತ್ಯ ಸ್ಥಾಪಿಸಿದ್ದರು. ಅಲ್ಲಿನ ಹವೆ, ವಾತಾವರಣ, ಎಲ್ಲಕ್ಕಿಂತ ಹೆಚ್ಚಾಗಿ ಕಡಿಮೆ ಖರ್ಚಿನಲ್ಲಿ ಬದುಕುವ ಅವಕಾಶದಿಂದಾಗಿ ಒಮ್ಮೆ ಈ ಊರಿಗೆ ಕಾಲಿಟ್ಟವರು ಇಲ್ಲಿಂದ ಹೋಗಲು ಮನಸ್ಸು ಮಾಡುತ್ತಿರಲಿಲ್ಲ.
ಹಿಂದೆ ಅಲ್ಲಿ ಬಲಾಡ್ಯವಾಗಿದ್ದ ಶ್ವೇತಪುರದ ರಾಜರನ್ನು ಹದ್ದುಬಸ್ತಿನಲ್ಲಿಡಲು ಅನುಕೂಲವಾಗುತ್ತದೆ ಎನ್ನುವ ಕಾರಣದಿಂದ ಬ್ರಿಟಿಷರು ಈ ಊರಿನಲ್ಲಿ ಕಚೇರಿ ಹಾಗೂ ಸಣ್ಣ ಪೊಲೀಸ್ ಚೌಕಿಯನ್ನು ತೆರೆದಿದ್ದರಂತೆ. ನಂತರದಲ್ಲಿ ದೇವರಕಾಡನ್ನು ತಾಲೂಕು ಕೇಂದ್ರ ಮಾಡಿದ್ದರೂ ಅದು ತನ್ನ ಹಳೆಯ ಗುಣ, ಸ್ವರೂಪವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿಯೇ ಇರಲಿಲ್ಲವೇನೋ?
ದೇವರ ಕಾಡಿನ ಎಲ್ಲ ರಸ್ತೆಗಳ ಬದಿಯುದ್ದಕ್ಕೂ ಸಾಲು ಸಾಲಾಗಿ ನೆಟ್ಟು ಬೆಳೆಸಿದ್ದ ದೂಪ, ಹೊನ್ನೆ, ಬೀಟೆ, ಆಲದ ಮರಗಳೆಲ್ಲ ಒಂದು ಕಾಲಕ್ಕೆ ಆ ಸುತ್ತಮುತ್ತಲೆಲ್ಲ ಪ್ರಸಿದ್ಧವಾಗಿತ್ತಂತೆ.
ಹೊಸ ಕಾಲದ ಜನಕ್ಕೆ ಅವೆಲ್ಲ ಪಿರಿಪಿರಿಯಂತೆನ್ನಿಸಿತ್ತೋ ಏನೋ? ಏನೇನೋ ಮಸಲತ್ತು ಮಾಡಿ, ರಾತ್ರಿ ಬೆಳಗಾಗುವುದರೊಳಗೆ ಅದರ ಬುಡ ಬಿಡಿಸಿ ಕಿತ್ತೋ, ಮರಗಳ ತೊಗಟೆ ಸುಲಿದು, ಒಣಗಿದ ನಂತರ ಬೆಂಕಿ ಇಟ್ಟೋ ಅವನ್ನೆಲ್ಲ ನಿರ್ನಾಮ ಮಾಡಿದ್ದರು.
ಆ ಮರಗಳಿದ್ದ ಜಾಗದಲ್ಲಿ ಪುಟ್ಟ ಅಂಗಡಿಗಳು ಸ್ಥಾಪಿತವಾಗಿ ಯಾವ್ಯಾವುದೋ ದಂಧೆಗಳಲ್ಲಿ ತೊಡಗಿಕೊಂಡಿದ್ದವು. ಆ ಊರಿನಲ್ಲಿ ಯಾರೇ ಆಗಲಿ ಮಾತೆತ್ತಿದರೆ ಕ್ಷುಲ್ಲಕ ರಾಜಕಾರಣದ ಬಗ್ಗೆಯೋ, ಮಠಾಧಿಪತಿಗಳ ಅಬ್ಬರದ ಕಾರ್ಯಕ್ರಮದ ಬಗ್ಗೆಯೋ ಮಾತನಾಡುತ್ತಿದ್ದರೇ ಹೊರತು ಜನಸಾಮಾನ್ಯನ ಬದುಕಿಗೆ ಅಗತ್ಯವಾದ ವಿಷಯದ ಕುರಿತು ಚಕಾರವೆತ್ತುತ್ತಲೇ ಇರಲಿಲ್ಲ.
ದೇವರ ಕಾಡು ಎನ್ನುವ ಆ ಊರು ಒಂದು ರೀತಿಯಲ್ಲಿ ಜಡವಾಗಿ, ಉಸಿರೆಳೆಯುತ್ತ ಬದುಕುತ್ತಿತ್ತು. ಅನಿವಾರ್ಯವಾಗಿ ಬದುಕುತ್ತಿದ್ದ ಗಿರಿಧರನಿಗೆ ಬೇಡವೆಂದರೂ ಆ ಊರನ್ನು ಬಿಡಲು ಸಾಧ್ಯವಿರಲಿಲ್ಲ. ಹಿಂದೆ ಯಾವಾಗಲೋ ಜನಜಂಗುಳಿಯಿಲ್ಲದ, ಇನ್ನೊಬ್ಬರ ಮಾತಿಗೆ ಮಾನ್ಯತೆ ಕೊಟ್ಟು ಬದುಕುತ್ತಿದ್ದ ಜನಗಳು ಇದ್ದಿರಬಹುದಾದ ಆ ಊರು ಈಗ ಬಿಡುಬೀಸಾದ, ಯಾವ ಅಂಕೆಯಿಲ್ಲದ ಮನಸ್ಥಿತಿಯನ್ನು ಪಡೆದುಕೊಂಡಿದ್ದರ ಕಾರಣವನ್ನು ಹುಡುಕಲು ಗಿರಿಧರ ಪರದಾಡುತ್ತಿದ್ದ.
ವಾಸ್ತವಿಕವಾಗಿ ಗಿರಿಧರ ಆ ಊರಿನವನೇ ಅಲ್ಲವಾಗಿದ್ದ. ಆತ ಎಲ್ಲಿಂದ ಬಂದನೋ? ಅವನ ತಂದೆ, ತಾಯಿ ಯಾರೋ? ನೆಂಟರು, ಬಂಧು ಬಳಗ ಇದೆಯೋ, ಇಲ್ಲವೋ ದೇವರ ಕಾಡಿನ ಒಬ್ಬರಿಗೂ ಗೊತ್ತಿರಲಿಲ್ಲ. ಪತ್ರಿಕೆಯೊಂದರ ವರದಿಗಾರನಾಗಿ ಆ ಊರಿಗೆ ಬಂದ ಗಿರಿಧರ ಆ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಪುಟ್ಟ ರೂಮೊಂದರಲ್ಲಿ ಒಂಟಿಯಾಗಿ ಇರುತ್ತಿದ್ದ ಆತನ ಬಗ್ಗೆ ಕುತೂಹಲಪಟ್ಟ ಹಲವರು ಅವನ ಕುಲ,ಗೋತ್ರ ತಿಳಿದುಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಆತನಿಂದ ಏನೂ ಅರಿತುಕೊಳ್ಳಲಾಗಿರಲಿಲ್ಲ.
ಹಲವು ತಿಂಗಳುಗಳ ಕಾಲ ಗಿರಿಧರನ ಕುರಿತಾಗಿ ಅನುಮಾನ, ಕುತೂಹಲಗಳೆಲ್ಲ ಬೆರೆತ ದೃಷ್ಟಿಯಿಂದ ನೋಡಿದ ದೇವರ ಕಾಡಿನ ಜನ ನಿಧಾನಕ್ಕೆ ಅದನ್ನೆಲ್ಲ ಮರೆತು ಬಿಟ್ಟಿದ್ದರು. ಅಕಸ್ಮಾತ್ ಹೊಸಬರ್ಯಾರಾದರೂ ಗಿರಿಧರ ಎಲ್ಲಿಯವನು? ಅಂತ ಪ್ರಶ್ನಿಸಿದರೂ ‘ ಇಲ್ಲೆಲ್ಲೋ ಯಾವುದೋ ಊರಿನವನು’ ಎಂದು ಹೇಳುವಷ್ಟರ ಮಟ್ಟಿಗೆ ಆತನನ್ನು ತಮ್ಮೊಳಗೆ ಒಬ್ಬನನ್ನಾಗಿಸಿಕೊಂಡಿದ್ದರು.
ಈ ಊರಿಗೆ ಕಾಲಿಟ್ಟ ದಿನದಿಂದಲೂ ತನಗೆ ಹಿಂದಿನ ಜೀವನವೊಂದಿತ್ತು ಎನ್ನುವುದನ್ನು ಮರೆತವನಂತೇ ಗಿರಿಧರ ಬದುಕಿದ್ದ. ಅವನನ್ನು ಹುಡುಕಿಕೊಂಡು ಈವರೆಗೂ ಯಾರೂ ಬಂದಿರಲಿಲ್ಲ. ಸ್ವಕೀಯರನ್ನು ಕಾಣಬೇಕೆಂದು ಈತನೂ ಎಲ್ಲಿಗೂ ಹೋಗಿರಲಿಲ್ಲ. ಯಾವುದೋ ಗ್ರಹದಿಂದ ಉದುರಿಬಿದ್ದವನಂತೆ ದೇವರ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಗಿರಿಧರ ಈ ಕಾರಣದಿಂದ ಆಗೀಗ ಕೆಲವರಲ್ಲಾದರೂ ತಲೆಬಿಸಿ ಹುಟ್ಟಿಸುತ್ತಿದ್ದ. ಸಿಡುಕು, ಒಂಟಿತನಗಳ ಜೊತೆಗೆ ಅವನಲ್ಲಿದ್ದ ಪ್ರಾಮಾಣಿಕತೆ, ನಿಷ್ಠುರತೆಗಳು ಆ ಊರಿನವರಲ್ಲಿ ಮೆಚ್ಚುಗೆಯನ್ನು, ಭಯವನ್ನೂ ಹುಟ್ಟಿಸಿತ್ತು. .. (.. ಓದಿ ಗಾಂಜಾಗ್ಯಾಂಗ್) (ಗಾಂಜಾಗ್ಯಾಂಗ್ ಕಾದಂಬರಿಯಿಂದ- ಕಾದಂಬರಿಕಾರ ಗಂಗಾಧರ ಕೊಳಗಿ)
![](https://i0.wp.com/samajamukhi.net/wp-content/uploads/2019/06/0fe9d044-9079-495a-8526-dca9bb8a2310-768x325.jpg?resize=368%2C225&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)