ಒಂದು ದಿನ

ಒಂದು ದಿನ
(ಕತೆ-ಡಾ.ಎಚ್.ಎಸ್.ಅನುಪಮಾ)
ಬೆಳಗಾದ ಮೇಲೆ ಸವಿತಳ ಅಪ್ಪಅಬ್ಬೆ ಒಳಬಂದರು. ‘ನಿಮ್ ಪರ್ಯತ್ನ ಎಲ್ಲ ಮಾಡಿದೀರಂತೆ. ನಮದೇ ನಸೀಬ ಚಲೋ ಇಲ್ದ ಹಿಂಗಾತು, ಏನ್ಮಾಡಾಕಾತದೆ’ ಎಂದು ಅವಳಪ್ಪ ಚೀಲವೊಂದನ್ನು ಟೇಬಲ್ ಮೇಲಿಟ್ಟರು.
ಅದರ ತುಂಬ ಹೀರೆ, ಬೆಂಡೆ, ಮಗೆಸೌತೆ ಇತ್ಯಾದಿ ತಾಜಾ ತರಕಾರಿಗಳು, ಜೇನುತುಪ್ಪದ ಬಾಟಲಿ, ಮೇಲೆ ಅಬ್ಬಲಿಗೆ ದಂಡೆ ಕಂಡವು. ಬಾಣಂತಿಯರ ವಾರ್ಡಿನಲ್ಲಿ ಮಗುವಿರದೆ ಮಲಗಿದ ಅವರ ಮಗಳ ಕೆಂಪೇರಿದ ಕಣ್ಣು ನೆನಪಾಗಿ
‘ಇದನ್ಯಾಕೆ ತಂದ್ರಿ?’ ಎಂದೆ. ‘ನಾಳೆ ಚೌತಿ ಹಬ್ಬಲ, ಇರ್ಲಿ, ಫಲಾವಳಿಗೆ’ ಎಂದರು.
ಅವಳಮ್ಮ ನಿನ್ನೆಯಾದರೂ ಇಲ್ಲಿದ್ದಿದ್ದರೆ ಸವಿತಳ ಅತ್ತೆಯ ಹತ್ತಿರ ಜಗಳವಾಡಿ ಸಿಸೇರಿಯನ್‍ಗೆ ಒಪ್ಪಿಸುತ್ತಿದ್ದಳೇನೋ ಅನಿಸಿತು.
ಏನಾದರೇನು, ಯಾರಿದ್ದರೇನು, ಬರುವ ದಾರಿಗೆ ನೂರು ಅಡೆತಡೆ; ಬಂದಮೇಲೆ ಸಾವಿರ. ಬದುಕೆಂದರೆ ಇದೇಯೇ?
ಇವತ್ತು ಕೋರ್ಟಿನ ಸಮನ್ಸ್ ಇದೆ, ಆದರೆ ಹೋಗಲು ಸಾಧ್ಯವಿಲ್ಲ. ಅದರ ಜೊತೆಗೆ ತಾಲೂಕಾ ಪಂಚಾಯ್ತಿ ಮೀಟಿಂಗ್ ಕೂಡಾ ಇದೆ. ತಕರಾರು ಅರ್ಜಿಗಳಿವೆ, ಬಂದ್ಬಿಡಿ ಎಂದು ಎಸಿ ಮತ್ತೆಮತ್ತೆ ಹೇಳಿದ್ದಾರೆ, ತಪ್ಪಿಸುವಂತಿಲ್ಲ.
ಸರ್ಕಾರಿ ಆಸ್ಪತ್ರೆಗೆ ಫೋನ್ ಮಾಡಿದರೆ ಯಾರೂ ಎತ್ತುವುದಿಲ್ಲ; ಕೇಸುಗಳನ್ನೆಲ್ಲ ದೊಡ್ಡಾಸ್ಪತ್ರೆಗೆ ರೆಫರ್ ಮಾಡುತ್ತಾರೆ; ರಕ್ತದ ಬ್ಯಾಂಕ್ ಆಸ್ಪತ್ರೆಯಲ್ಲಿ ಇಟ್ಟಿಲ್ಲ, ಔಷಧಿ ಹೊರಗೆ ಬರೆದುಕೊಡ್ತಾರೆ ಇತ್ಯಾದಿ ತಕರಾರು. ಹೆರಿಗೆ, ಓಪಿಡಿ, ಓಟಿ ಎಲ್ಲ ಒಟ್ಟೊಟ್ಟಿಗೆ ಬಂದರೆ ಇರುವ ಮೂರೂ ಮತ್ತೊಂದು ಸಿಬ್ಬಂದಿ ಏನಕ್ಕೂ ಸಾಲದು. ಒಬ್ಬ ಡಾಕ್ಟರರನ್ನು ಕೊಂದ ಈ ಕೋಮುಗಲಭೆಯ ಊರಿಗೆ ಬರುವ ಸಿಬ್ಬಂದಿ ಒಂದು ಕಾಲು ಹೊರಗಿಟ್ಟೇ ಬರುತ್ತಾರೆ. ಹೀಗಿರುತ್ತ ರಕ್ತದ ಬ್ಯಾಂಕ್ ನಿಭಾಯಿಸಲು, ಫೋನ್ ಎತ್ತಲು ಎಕ್ಸಟ್ರಾ ಸ್ಟಾಫ್ ಬೇಡವೇ?
ಇದನ್ನೆಲ್ಲ ಎಷ್ಟೋ ಸಲ ಹೇಳಿಯಾಗಿದೆ, ಆದರೂ ಹೇಳಿದ್ದೇ ಹೇಳಿಬರಬೇಕು. ಅವರೂ ಕೇಳಿದ್ದೇ ಮತ್ತೆ ಕೇಳುತ್ತಾರೆ. ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲವೇ, ಅದಕ್ಕೇ ಹೀಗೆ.
ಎಸಿ ಆಫೀಸಿಗೆ ಹೋಗುತ್ತ ಇಷ್ಟು ರಗಳೆ ಅನಿಸುವುದಾದರೆ ಸರ್ಕಾರಿ ಕೆಲಸದ ಹಂಗಿನಲ್ಲಿ, ಅದರಲ್ಲೂ ತಾಲೂಕು ಆಸ್ಪತ್ರೆಯ ಅಡ್ಮಿನಿಸ್ಟ್ರೇಷನ್ ಎಂಬ ಜ್ವಾಲಾಮುಖಿಯ ಬಾಯೊಳಗೆ ಯಾಕಿದ್ದೇನೆ ಎಂಬ ಪ್ರಶ್ನೆ ಸುಳಿಯತೊಡಗಿತು. ಸರ್ಕಾರದ ಋಣ ತೀರಿಸಲೆಂದೇ? ಬಡವರ ಸೇವೆ ಮಾಡುತ್ತಿರುವೆನೆಂಬ ಅಹಂ ಪೋಷಣೆಗೇ? ಸ್ವಂತ ನರ್ಸಿಂಗ್ ಹೋಂ ಕಟ್ಟಲು ಸಾಧ್ಯವಾಗಲಿಲ್ಲವೆಂದೇ?
ಸಲಾಮು ಹೊಡೆವ ಸಿಬ್ಬಂದಿ, ರೋಗಿಗಳು, ಪೊಲೀಸರು ಹುಟ್ಟಿಸುವ ಅಧಿಕಾರದ ಭ್ರಮೆಗೇ? ಕೋರ್ಟು, ಕಚೇರಿ ತಿರುಗುತ್ತ ಇಲ್ಲದ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲೆಂದೇ? ಗಂಟೆ ಹತ್ತಾದರೂ ಇನ್ನೂ ಆಫೀಸಿಗೆ ಎಸಿ ಬಂದಿಲ್ಲ. ಈ ಪೀಕ್ ಅವರ್‍ನಲ್ಲಿ ಇಲ್ಲಿ ಯಾಕೆ ಕೂರಬೇಕು? ಅವರ ಸೆಕ್ರೆಟರಿಗೆ ಹೇಳಿ ಎದ್ದು ಹೊರಟೆ. ಆಸ್ಪತ್ರೆಯಲ್ಲಿ ಕೈಕಾಲಿಡಲು ಜಾಗವಿಲ್ಲದಷ್ಟು ಜನ.

ಚೇಂಬರಿನ ಒಳಬರುತ್ತಿರುವಾಗ ನನ್ನ ಯೋಚನಾ ಲಹರಿಯನ್ನು ‘ನಮಸ್ಕಾರ ಮೇಡಂ’ ತುಂಡರಿಸಿತು. ಅಟೆಂಡರ್ ಹನುಮಂತಯ್ಯನ ಹೆಂಡತಿ ಪಾರ್ವತಮ್ಮ. ಬೈತಲೆ ಮೇಲೆ, ಹುಬ್ಬಿನ ನಡುವೆ ಕೆಂಪು ಪುಡಿ ಕುಂಕುಮವಿಟ್ಟು, ಮೈತುಂಬ ಸೆರಗು ಹೊದ್ದ ಧಡೂತಿ ದೇಹದ ಪಾರ್ವತಮ್ಮ ಅಲ್ಲೇ ಅಷ್ಟು ದೂರ ನಿಂತಳು.
‘ಏನ್ ಪಾರ್ವತಮ್ಮ, ನಾವು ಹನ್ಮಂತ ಹನ್ಮಂತ ಅಂತ ಜಪ ಮಾಡ್ತಾ ಇದ್ರೆ ಪಾರ್ವತಿ ಪ್ರತ್ಯಕ್ಷ ಆಗಿದ್ದು ಹೇಗೆ?’

‘ಇನ್ನೇನಿಲ್ಲ ಮೇಡಂ, ನಂಗೊತ್ತೇ ಇರ್ಲಿಲ್ಲ. ಮನ್ನೆ ಇವ್ರು ಕುಡದು ಕೂಗಾಡದಾಗ್ಲೆ ಗೊತ್ತಾಗಿದ್ದು, ಅವರಿಲ್ಲಿ ಹೆಣ ಕೊಯ್ಯೋ ಭಂಗಿ ಕೆಲ್ಸ ಮಾಡ್ತಿದಾರೆ ಅಂತ. ನನಗವತ್ಲಿಂದ ನಿದ್ದೆ ಇಲ್ಲ ಮೇಡಂ..’
‘ಅದರಲ್ಲೇನಿದೆ ಪಾರ್ವತಮ್ಮ?’
‘ಅದೆಲ್ಲ ನಿಮಗ್ಗೊತ್ತಾಗಲ್ಲ ಮೇಡಂ. ನಮ್ ಕಡೆ ಜನ ಇಲ್ಲಿ ಮುನ್ಸಿಪಾಲ್ಟೀಲಿ, ಆಫೀಸ್ನಲ್ಲಿ ಅಂತ ಎಲ್ಲ ಕಡೆ ಇದಾರೆ. ಅವ್ರಗೇನಾರ
ಇವ್ರು ಹೆಣ ಕುಯ್ಯೋ ಕೆಲ್ಸ ಮಾಡ್ತಿದಾರೆ ಅಂತ ತಿಳದ್ರೆ ಮುಗೀತು, ನಮ್ಮನೆಗೆ ಯಾರೂ ಬರಲ್ಲ, ಹನಿ ನೀರೂ ಕುಡಿಯಲ್ಲ. ನಾಕು ಹೆಣ್ಮಕ್ಕಳ ಮದುವೆ ಮಾಡಬೇಕ್ ಮೇಡಂ ನಾವು.’

‘ಅದಕ್ಕೂ ಇದಕ್ಕೂ ಏನ್ ಸಂಬಂಧ ಪಾರ್ವತಮ್ಮ?’

‘ಸಂಬಂಧ ಇದೆ ಮೇಡಂ. ನಂ ಜಾತಿ ಜನ ತೊಳಬಳಿಯೋ ಕೆಲ್ಸ ಮಾಡ್ತಾರೆ ಹೊರ್ತ ಹೆಣ ಕೊಯ್ಯೋ ಕೆಲ್ಸ ಮಾಡಲ್ಲ. ಅದ್ನ ಮಾಡೋ ಜಾತಿನೇ ಬೇರೆ. ಕುಲಕ್ಕೊಂದು ಕಸುಬು ಅಂತಿರುತ್ತಲ್ಲವ್ರ?
ನೀವು ದಯವಿಟ್ಟು ಬೇರೆ ಯೇನಾರ ಯವಸ್ಥೆ ಮಾಡ್ಕಳಿ. ಇಷ್ಟ್ ದಿನ ಯಾರು ಮಾಡ್ತಿದ್ರೋ ಅವರತ್ರನೇ ಮಾಡುಸ್ಕಳಿ.’

‘ಹನುಮಂತ ಹ್ಞೂಂ ಅಂದಿದ್ದಕ್ಕೇ ಟ್ರೈನಿಂಗ್ ಕಳಸಲಿಕ್ಕೆ ರೆಡಿ ಮಾಡಿದ್ದು. ಈ ಜಾತಿಗೆ ಇದೇ ಕೆಲ್ಸ ಅಂತ ಈಗ್ಲೂ ನಂಬಕಂಡ್ರೆ ಹೆಂಗೆ ಪಾರ್ವತಮ್ಮ?’
‘ಈಗ್ಲೂ ಅದಂಗೆನೇ ಇದೆ ಮೇಡಂ. ಉತ್ತಮರ ಕೆಲ್ಸ ಮಾಡಕ್ಕೆ ಯಾರ್ಗೇನೂ ಬೇಜಾರಿಲ್ಲ, ಆದ್ರೆ ಜಾತಿ ಕಸುಬಿಗಿಂತ್ಲು ಕೀಳು ಕೆಲ್ಸಕ್ ಯಾರಾದ್ರೂ ಹೋಯ್ತಾರಾ ಮೇಡಂ? ಡಾಕ್ಟ್ರಾಗಲಿಕ್ಕೆ ಯಾವ್ದೆ ಜಾತಿಯಾದ್ರೂ ಸೈ, ಕುಶಿನೆ. ಅದೇ ಕಕ್ಕಸ್ ತೊಳೆಯಕ್ಕೆ ಮೇಲ್ಜಾತಿಯೋರು ಹೋಯ್ತಾರಾ? ನಿಮ್ಮಾಸ್ಪತ್ರೇಲೆ ನೋಡಿ. ನಮ್ಮನೆಯೋರು ಒಟಿ, ಎಲ್‍ಟಿ, ಲ್ಯಾಬು ಎಲ್ಲ ತೊಳೀತಾರೆ. ಆದ್ರೆ ಅವ್ರು ಆಯುಧಪೂಜೆ ಮಾಡ್ತಾರಾ? ಮುಟ್ಬೇಡ, ನೀ ದೂರವಿರು ಹನಮಂತಯ್ಯ, ಓಟೀಲಿ ಕೇಸು ಫೇಲಾಗಿ ರಕ್ತ ಹರುದ್ಬಿಟ್ರೆ ಅಂತ ಸಿಸ್ಟರೇ ಯೇಳ್ತಾರಂತೆ. ಹೊರಗಿಂದ ಭಟ್ರೇ ಬಂದು ಪೂಜೆ ಮಾಡ್ತರೆ. ನಾನಂದಿದ್ದು ತಪ್ಪಾದ್ರೆ ವಟ್ಟೆಗಾಕ್ಕಳಿ, ಆದ್ರೆ ಹಸಕಂಡೋರ ಕಸ್ಟನೇ ಬೇರೆ. ಅಜೀರ್ಣ ಆದೋರ ಕಸ್ಟನೇ ಬೇರೆ ಮೇಡಂ. ನಿಂ ಪಾದ ಎಲ್ಲಿದಾವೆ ತೋರ್ಸಿ, ನಮ್ಮನೆಯೋರ್ಗೆ ಹೆಣ ಕುಯ್ಯೊ ಕೆಲ್ಸ ಮಾತ್ರ ವೈಸಬೇಡಿ. ಗಂಡಸರಿಗೆ ಇವೆಲ್ಲ ಅರ್ಥಾಗಲ್ಲ. ಸುಮ್ನಿದ್ದು ಬಿಡ್ತಾರೆ. ಅದ್ಕೆ ನಾನೇ ಯೇಳ್ಬರ್ತಿನಿ ಅಂತ ಇವತ್ ಬಂದೆ.’

ನನ್ನ ಮುಖ ನೋಡದೇ ಮಾತನಾಡುತ್ತಿದ್ದ ಅವಳ ಕಂಠ ಹೇಳಹೇಳುತ್ತ ಗಡುಸಾಯಿತು. ನಾ ಕುಳಿತ ಕುರ್ಚಿ ಗೋಡೆಯಾಯಿತು, ನಮ್ಮಿಬ್ಬರ ನಡುವೆ ಸಾವಿರಾರು ಮೈಲಿ ದೂರ ಹುಟ್ಟಿಕೊಂಡಿತು. ಪಾರ್ವತಮ್ಮ ಮಾತ್ರವಲ್ಲ, ಯಾರನ್ನೂ ಮುಟ್ಟದಂತೆ ಸುತ್ತ ಗೋಡೆಗಳು ಬೆಳೆಯತೊಡಗಿದವು. ಈ ದೂರ ದಾಟಬಲ್ಲ, ಗೋಡೆ ಒಡೆಯಬಲ್ಲ ದೊಡ್ಡ ರೆಕ್ಕೆ, ರಟ್ಟೆ ನನಗೆ ಮೂಡುವುದು ಯಾವಾಗ? ಹೇಗೆ? ಸರ್ಕಾರಿ ಕೆಲಸದಲ್ಲಿರುವಷ್ಟು ದಿನ ಅದು ಸಾಧ್ಯವಾದೀತೇ?

ಸವಿತಳ ಅಪ್ಪ ಇಟ್ಟುಹೋದ ತರಕಾರಿ ಚೀಲ ಪಾರ್ವತಮ್ಮನಿಗೆ ಕೊಡಲು ಹೋದೆ. ‘ಬರ್ತಿನ್ ಮೇಡಂ, ಬಾಳಾ ಪೇಶೆಂಟ್ ಅವ್ರೆ. ನಿಮ್ಗೆ ತೊಂದ್ರೆಯಾಯ್ತೆನೋ’ ಎಂದವಳೇ ಸೆರಗೆಳೆದುಕೊಳ್ಳುತ್ತ ಚೀಲ ಮುಟ್ಟದೇ ಹೊರಟು ಹೋದಳು.


ಮಧ್ಯಾಹ್ನ ಎರಡು ಗಂಟೆ. ಸೂಸನ್ ಸಿಸ್ಟರ್ ತಂದುಕೊಟ್ಟ ಇಶೋಣ ಮೀನಿನ ಫ್ರೈ, ಸಾರು ಊಟ ಮಾಡುವಾಗಲೂ ಕಣ್ಣು ಮಾರ್ಚುರಿ ಕಡೆಗೇ ತಿರುಗುತ್ತಿದೆ. ಕಟ್ಟೆಮೇಲೆ ಮಲಗಿದ ದೇಹದಿಂದ ಚೂಪಾಗಿ ಮೇಲೆದ್ದು ಸೆಟೆದ ಮೊಲೆಗಳು ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಬೆಳಿಗ್ಗೆಯೇ ಅವಳ ಬಾಯಿಯ ಒಳಹೊರಗೆ ಇರುವೆ ಸುಳಿಯುತ್ತಿದ್ದವು. ಬೇಗ ಪಿಎಂ ಮುಗಿಸಬೇಕು. ಆದರೆ ಹೇಗೆ?

ಇದುವರೆಗೆ ಪೋಸ್ಟ್ ಮಾರ್ಟಂ ಬಂದಾಗ ನಾರಾಯಣನನ್ನು ಕರೆಸುತ್ತಿದ್ದೆವು. ಬಂದರು ಇಲಾಖೆ ಆಸ್ಪತ್ರೆಯಲ್ಲಿದ್ದು ನಿವೃತ್ತನಾದವ ಅದು ಹೇಗೋ ಪೋಸ್ಟ್‍ಮಾರ್ಟಂ ಕಲಿತಿದ್ದ. ಇಡೀ ತಾಲೂಕಿನಲ್ಲಿ ಪೋಸ್ಟ್‍ಮಾರ್ಟಂ ಮಾಡುವವ ಆತನೊಬ್ಬನೇ. ಯಾವ ಆಸ್ಪತ್ರೆಯ ಕ್ಲಾಸ್ ಫೋರ್ ಸ್ಟಾಫೂ ಹೆಣ ಕೊಯಿದು ಹೊಲೆಯಲು ಸಿದ್ಧರಿರಲಿಲ್ಲ. ಮಾಡಲೇಬೇಕೆಂದು ಯಾರನ್ನೂ ಒತ್ತಾಯಿಸುವಂತೆಯೂ ಇಲ್ಲ. ಎಂದೇ ನಮ್ಮ ಡಿಪಾರ್ಟ್‍ಮೆಂಟ್ ಸ್ಟಾಫ್ ಅಲ್ಲದ ನಾರಾಯಣನಿಗೆ ಎಲ್ಲಿಲ್ಲದ ಡಿಮ್ಯಾಂಡು ಬಂದುಬಿಟ್ಟಿತು. ಅವ ಕೇಳಿದಷ್ಟು ದುಡ್ಡು ಕೊಡಬೇಕು. ಮೊದಲೇ ಐದುನೂರು ಇಟ್ಟು ಮಾತನಾಡಬೇಕು. ಮುಗಿದ ನಂತರ ಒಂದು ಸಾವಿರ ಕೊಡಬೇಕು. ಇದು ನಮ್ಮ ಪಾವತಿ. ಅದಲ್ಲದೆ ಶವದ ವಾರಸುದಾರರ ಕಡೆಯಿಂದ ಸಾಧ್ಯವಾದಷ್ಟು ಕಿತ್ತೆಳೆದು ಕೊನೆಯ ಹೊಲಿಗೆ ಹಾಕುತ್ತಿದ್ದ. ಅವನ ಕೈಲಿ ಏಗಿಏಗಿ ಬೇಸರ ಬಂದು ಅಂತೂಇಂತೂ ನಮ್ಮ ಅಟೆಂಡರ್ ಹನುಮಂತನನ್ನು ಪೋಸ್ಟ್‍ಮಾರ್ಟಂಗೆ ತಯಾರು ಮಾಡಿ ಮುಂದಿನ ತಿಂಗಳು ಟ್ರೈನಿಂಗಿಗೆ ಹಾಕಿಸಿದ್ದೆವು. ಇನ್ನು ಹನುಮಂತ ಮಾಡುವುದಿಲ್ಲ ಎಂದರೆ ಮತ್ತೆ ನಾರಾಯಣನ ಕೈಕಾಲು ಹಿಡಿದು ಮರ್ಜಿ ಕಾಯಬೇಕು.
ಯಾಕೋ ಸಂದುಮೂಲೆಗಳನ್ನೆಲ್ಲ ಬೇಸರ ಆವರಿಸಿದಂತಾಯಿತು.

ಬಹುಮುಖಿ
ಆಯ್.ಕೆ. ಸುಂಗೋಳಿಮನೆ
ಸುತ್ತಮುತ್ತ ಅಡಿಕೆ ತೋಟ,ಎಲ್ಲೆಲ್ಲೂ ಬೆಟ್ಟ ಬಸ್ ಹೋಗದ ಕುಗ್ರಾಮ, ಅಲ್ಲಿ ಒಂದು ಮನೆ ವಿದ್ಯಾವಂತರ ಕುಟುಂಬ, ವೃತ್ತಿ ಕೃಷಿ, ಹವ್ಯಾಸ ನಾಟಕ,ಮೂರ್ತಿತಯಾರಿ, ರಾಜಕಾರಣ ಇತ್ಯಾದಿ…..
ಇಷ್ಟು ಹೇಳಿದರೆ ಸುಂಗೋಳಿಮನೆ ಆಯ್.ಕೆ.ನಾಯ್ಕರನ್ನು ಪರಿಚಯಿಸಿದಂತೆ. ಆದರೆ, ಅವರು ಅರ್ಥವಾಗಬೇಕೆಂದರೆ ಅವರ ಕಲಾಜೀವನ ಪರಿಚಯವಾಗಬೇಕು. ಮೂರ್ನಾಲ್ಕುಮಕ್ಕಳ ತುಂಬು ಕುಟುಂಬದ ಹಿರಿಯಣ್ಣ ಈಶ್ವರ, ಪ್ರಾಥಮಿಕ ಶಾಲೆಯಲ್ಲಿ ರಾಮನಮೂರ್ತಿ
ಮಾಡಲು ಹೋಗಿ ಭಿಕ್ಷಾಂದೇಹಿ ರಾಮನನ್ನು ಮೂಡಿಸಿದ್ದರಂತೆ! ಆಗ ನಕ್ಕ ಸ್ನೇಹಿತರು, ಸಂಬಂಧಿಗಳಿಗೆ ತಾನೇನು ಎಂದು ತೋರಿಸಬೇಕೆಂದು ಮಣ್ಣಿನ ಮೂರ್ತಿ ತಯಾರಿಸತೊಡಗಿದರಂತೆ. ಶಿಕ್ಷಕರೊಬ್ಬರು ಈ ಬಾಲಕ ಈಶ್ವರನ ಆಸಕ್ತಿ ಗಮನಿಸಿ ಸರಸ್ವತಿ ಮೂರ್ತಿ ತಯಾರಿಸುವ ಜವಾಬ್ಧಾರಿ ವಹಿಸಿದರಂತೆ. ಅದು ಪಕ್ಕಾ ಆದ ಮೇಲೆ ಗಣಪತಿ ಮೂರ್ತಿ ಮಾಡಿ ಸೈ ಎನಿಸಿಕೊಂಡ ಈಶ್ವರ ಮುಂದೆ ಕಲೆಯಿಂದ ಕಲಾವಿದರಾಗಲು ನೀನಾಸಂ ಸೇರಿದರು. ನಂತರ ರಂಗಸೌಗಂಧ ಇತ್ಯಾದಿ ಓಡಾಟ, ಒಡನಾಟ. ಜೊತೆಗೆ ರಾಜಕೀಯ, ಧಾರ್ಮಿಕ,ಸಾಮಾಜಿಕ ಇತ್ಯಾದಿ….ಕೆಲಸ.
ಇಷ್ಟೆಲ್ಲವನ್ನೂ ಮಾಡುತಿದ್ದವರು ಸುಂಗೋಳಿಮನೆಯ ಈಶ್ವರ ನಾಯ್ಕ ಆಯ್.ಕೆ.ಸುಂಗೋಳಿಮನೆ ಎಂದು ಪರಿಚಿತರಾಗಿರುವ ಇವರ ಬಗ್ಗೆ ಅನೇಕರಿಗೆ ಪರಿಚಯವಿರಲು ಕಾರಣ ಇವರ ರಾಜಕೀಯ, ಸಾಮಾಜಿಕ, ರಂಗಭೂಮಿಯ ಸೇವೆ. ಆದರೆ ಇವುಗಳಿಗಿಂತ ಹೆಚ್ಚು ಇವರ ಶೃದ್ಧೆ, ಕಲಾವಂತಿಕೆ ಕಾಣುವುದು ಮೂರ್ತಿ ರಚನೆ ಮತ್ತು ಕೃಷಿ ಕೆಲಸದಲ್ಲಿ. ವೃತ್ತಿಯಿಂದ ಕೃಷಿಕರಾಗಿರುವ ಆಯ್.ಕೆ. ಪೃವೃತ್ತಿಯಿಂದ ಮಣ್ಣಿನಮೂರ್ತಿ ನಿರ್ಮಾಪಕರು, ಪ್ರತಿವರ್ಷ 50 ಕ್ಕೂ ಹೆಚ್ಚು ನಾನಾ ಮಣ್ಣಿನ ಮೂರ್ತಿ ಮಾಡುವ ಇವರು ಮಾಡುವ ಗಣಪತಿ ವಿಗೃಹಗಳಿಗೆ ಬೇಡಿಕೆ ಹೆಚ್ಚು.
ಕುಟುಂಬ, ಸ್ನೇಹಿತರು ಮಕ್ಕಳ ಸಹಕಾರದಿಂದ ಮೂರ್ತಿ ತಯಾರಕರಾಗಿ ಹೆಸರುವಾಸಿಯಾಗಿರುವ ಇವರ ಗಣಪತಿ ಮೂರ್ತಿಗಳಿಗೆ ತಾಲೂಕಿನಾದ್ಯಂತ ಬೇಡಿಕೆ. ಹೀಗೆ ಕಲಾವಿದ ಚಿತ್ರ, ಮೂರ್ತಿ, ನಾಟಕ, ಸಮಾಜಸೇವೆ, ಸೇರಿದಂತೆ ನಾನಾಮಜಲುಗಳಲ್ಲಿ ಗುರುತಿಸಿಕೊಂಡರೂ ಅವರ ಬದ್ಧತೆ,ಸಾಮಾಜಿಕ ಕಾಳಜಿ, ಪಕ್ಷ, ಸೈದ್ಧಾಂತಿಕ ನಿಷ್ಠೆಗಳಿಗೆ ಅವರಿಗೆ ಅವರೇ ಸಾಟಿ.
ಗ್ರಾಮೀಣ ಜೀವನದ ತುಂಬು ಅವಿಭಕ್ತ ಕುಟುಂಬದ ಬಹುಮುಖಿ ಪ್ರತಿಭೆಯಾಗಿರುವ ಈಶ್ವರ ನಾಯ್ಕ ಸಂಗೋಳಿಮನೆ ಎಲ್ಲಾ ಪ್ರತಿಭೆ,ಸಾಮಥ್ರ್ಯಗಳಿದ್ದೂ ಎಲೆಮರೆಯ ಕಾಯಿ. ಸಮಾಜ, ಸಂಘಟನೆಗಳು ಅವರ ಬಹುಮುಖಿ ಬದುಕಿಗೆ ಗೌರವಿಸದಿದ್ದರೆ ಅನ್ಯಾಯ ಮಾಡಿದಂತೆಯೇ ಸರಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *