![](https://i0.wp.com/samajamukhi.net/wp-content/uploads/2019/09/KBV-Photo.jpg?resize=128%2C166&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಂಕ್ಷಿಪ್ತ ಪರಿಚಯ
ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದ ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಪ್ರಮುಖ ಪತ್ರಿಕೆಗಳಲ್ಲಿ ಕತೆ, ಕವಿತೆ, ಲೇಖನಗಳು ಪ್ರಕಟಗೊಂಡಿವೆ. ‘ಅರಿವಿನ ಹರಿಗೋಲು’ ಪ್ರಕಟಿತ ಕವನ ಸಂಕಲನ.
ತನುಮನ ತಣಿಸುವ ತಲ್ಲಣಗಳು
ಹೊರಗಡೆ ಸೋನೆ ಮಳೆ ಎಡಬಿಡದೆ ಹುಯ್ಯುತ್ತಿದ್ದರೂ ಎದೆಯೊಳಗೆ ಕುದಿಯುವ ಕೌತುಕಗಳು ತಣ್ಣನೆಯ ಸುಖಕೆ ಕೊಳ್ಳಿ ಇಕ್ಕಿದ್ದವು. ಮನದ ತಾಕಲಾಟವನು ತಾಳಲಾಗದೆ ತಂಗಾಳಿಯಂತಿದ್ದ ಗೆಳತಿಯ ಅಂಗಳದಲ್ಲಿ ಅದೊಂದು ದಿನ ಎಳೆಎಳೆಯಾಗಿ ಅಂತರಂಗವ ಹರವಿಕೊಂಡು ನಿರಾಳವಾದೆ, ಭಾರವಾದ ಹೃದಯ ಹಗುರವಾದಂತಾಯಿತು. ಆದರೆ ಮರುದಿನ ನನ್ನೆಲ್ಲಾ ಪಿಸುಮಾತುಗಳು ಬಣ್ಣ ಹಚ್ಚಿಕೊಂಡು ಊರತುಂಬ ಗರಿಗರಿಯಾಗಿ ಹರಿದಾಡಿದವು. ಬಾಯಿಂದ ಬಾಯಿಗೆ ಬದಲಾಗುತ್ತಾ ಹರಿದಾಡಿದವುಗಳೆಲ್ಲಾ ನಮ್ಮನ್ನೆ ಕಚ್ಚುವ ಹಾವುಗಳಂತಾದದ್ದು ಬಹುದೊಡ್ಡ ದುರಂತ.
ತಂಗಾಳಿಯಂತೆ ಸುಳಿದಾಡುತ್ತಿದ್ದ ಗೆಳತಿ ಅದೇಕೊ ಇದ್ದಕ್ಕಿದ್ದಂತೆ ಬಿರುಗಾಳಿಯಾಗಿ ಪಲ್ಲವಿಸಿ ನಮ್ಮ ಬದುಕನ್ನು ಚಲ್ಲಾಪಿಲ್ಲಿಯಾಗಿಸಿದಳು. ತುಂಬಾ ರಭಸವಾಗಿ ಬೀಸುವ ಆ ಗಾಳಿಯ ಹೊಡೆತಕ್ಕೆ ಮನೆಯ ಹೆಂಚುಗಳು ಹಾರಿಹೋದವು, ಅಂಗಳದಲ್ಲಿದ್ದ ಮರದ ರೆಂಬೆಯೂ ಮುರಿದು ಬಿತ್ತು, ಮುರಿದ ರೆಂಬೆಯ ಗೂಡೊಳಗಿದ್ದ ಹಕ್ಕಿಮರಿಗಳು ಕೆಳಗೆ ಸಿಕ್ಕು ಅನ್ಯಾಯವಾಗಿ ಅಸುನೀಗಿದವು. ಒಂದು ಅಥರ್Àದಲ್ಲಿ ನಮ್ಮ ಬದುಕು ಕೂಡಾ ಆ ಹಕ್ಕಿಮರಿಗಳಂತೆಯೇ ಆಗಿತ್ತು. ಈ ಘಟನೆ ಸಂಭವಿಸಿದ ಮೇಲೆಯೇ ನಾಸ್ತಿಕ ಭಾವ ನನ್ನೊಳಗೆ ಉಲ್ಬಣಿಸಿತು
ಪ್ರಾಯಶಃ ಗೆಳತಿಗೆ ತನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಕೇಳುವ ನೈತಿಕತೆ ಅವಳಿಗಿಲ್ಲ, ಕ್ಷಮಿಸುವ ಸ್ಥಿತಿಯಲ್ಲಿ ನಾವೂ ಇಲ್ಲ. ಅಸಲಿಗೆ ಅವಳಿರುವ ಊರೊಳಗೆ ಸಧ್ಯ ನಾವೇ ಇಲ್ಲ. ಇದೆಲ್ಲಾ ಗತಿಸಿ ವರ್ಷ ಉರುಳಿತ್ತು, ಗೆಳತಿ ಅದೊಂದು ದಿನ ನಾವಿರುವ ಪರಊರಿನ ಮುಖ್ಯರಸ್ತೆಯಲಿ ಕಾಣಿಸಿಕೊಂಡಳು! ಅವಳ ನೆರಳು ಕೂಡಾ ನನಗೆ ಸೋಕದಿರಲೆಂದು ತಲೆಯ ಮೇಲಿನ ಛತ್ರಿಯನ್ನು ಕೊಂಚ ಭಾಗಿಸಿಕೊಂಡು ನಡೆದು ನಿಟ್ಟುಸಿರುಬಿಟ್ಟೆ. ಪಕ್ಕದಲ್ಲಿಯೇ ಹಾವೊಂದು ಹರಿದು ಹೋದ ಅನುಭವವಾಯಿತು.
ನಂಬಿಕೆಗೆ ದ್ರೋಹವಾದ ನಂತರ ನನಗೆ ಅದೇನಾಯ್ತೋ.. ಏನೋ ಗೊತ್ತಿಲ್ಲ ಗೋವುಗಳೆಲ್ಲಾ ವ್ಯಾಘ್ರಗಳಂತೆ, ನಾಯಿಗಳು ಗುಳ್ಳೆನರಿಯಂತೆ, ಶತ್ರುಗಳು ಮಿತ್ರರಂತೆ, ಮಿತ್ರರು ಶತ್ರುಗಳಂತೆ, ಕೇಸರಿ ಕೆಂಪಂತೆ, ಕೆಂಪು ಕೇಸರಿಯಂತೆ ಹೀಗೆ ಹಲವುಗಳೆಲ್ಲಾ ಅದಲು ಬದಲಾಗುತ್ತಾ ಹೊಸ ಹೊಸ ಹೊಳುಹುಗಳನ್ನು ನನ್ನೊಳಗೆ ಹುರಿಗೊಳಿಸಿದವು. ಮೂಲಭೂತವಾದಿಗಳು ‘ಕಾಮಾಲೆ’ ಕಣ್ಣುಳ್ಳವನೆಂದು ಕರೆಯುತ್ತಿರಬಹುದು, ಕೋಮುವಾದಿಗಳು ‘ಕುರುಡ’ನೆಂದು ಜರಿಯುತ್ತಿರಬಹುದು ಆದರೆ ನನ್ನಂತರಂಗ ಹೇಳುತ್ತಿದೆ ‘ದೃಷ್ಠಿಕೋನ ಸರಿಯಾಗಿಯೇ ಇದೆ’ ಮುನ್ನುಗ್ಗು ಎಂದು.
ನಿನ್ನೆಯ ದಿನ ಮಕ್ಕಳೆದಿರು ನನ್ನ ಅನುಭವವನ್ನು ಹೀಗೆ ಹಂಚಿಕೊಂಡೆ ‘ಮುದ್ದು ಮಕ್ಕಳೆ, ನನ್ನನ್ನೂ ಸೇರಿ ಹಲವರು ಹೇಳುವುದನ್ನೆಲ್ಲಾ ಸತ್ಯವೆಂದು ತಕ್ಷಣಕ್ಕೆ ನಂಬಬೇಡಿ. ಪ್ರತಿ ಹೇಳಿಕೆಗಳನ್ನು ಪ್ರಶ್ನಿಸಬೇಕು, ಪ್ರಶ್ನಿಸುವುದರಿಂದಲೇ ಪರಿಶುದ್ಧ ಸತ್ಯದ ಮುಖಗಳು ಅನಾವರಣಗೊಳ್ಳುತ್ತವೆ. ನೀವು ಪ್ರಶ್ನಿಸದಿದ್ದರೆ ಸತ್ಯದ ವಾಸ್ತವ ಗೊತ್ತಾಗದೆ, ಸತ್ಯದ ವಿವಿಧ ರೂಪಗಳು ಗೊತ್ತಾಗುತ್ತವೆ. ತನ್ನಿಮಿತ್ಯ ಸತ್ಯ ಅರಿಯಲು ಪ್ರಶ್ನಿಸುವ, ತರ್ಕಿಸುವ, ಆಲೋಚಿಸುವ ಪ್ರಯತ್ನ ಈ ಕ್ಷಣದಿಂದಲೇ ರೂಢಿ ಮಾಡಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಮಾತಿನಲ್ಲಿಯೇ ಮೋಡಿ ಮಾಡಿ ಮತ;ಹಿತ ಏನೆಲ್ಲವನು ಕಿತ್ತುಕೊಂಡವರಿದ್ದಾರೆ ಈ ಜಗದಲಿ. ಒಳ್ಳೆಯವರೆಂದು ತಿಳಿದು ಗೆಳೆಯ, ಗೆಳತಿ, ಸಂಗಾತಿಗಳ ಬಳಿ ನಿಮ್ಮೊಳಗೆ ಗುಟ್ಟಾಗಿರುವ ಗೌಪ್ಯಗಳನ್ನೆಲ್ಲಾ ಬಿಚ್ಚಿಡಬೇಡಿ, ಒಂದಿಷ್ಟು ಬಚ್ಚಿಟ್ಟುಕೊಳ್ಳಿರಿ. ಹೀಗೆ ಬಚ್ಚಿಟ್ಟುಕೊಂಡ ಬೆಚ್ಚನೆಯ ನೆನಪುಗಳನ್ನು ಹೆಸರು, ಸ್ಥಳ ಬದಲಾಯಿಸಿ ಪದ ಪ್ರಾಸಗಳೊಂದಿಗೆ ರಸವತ್ತಾಗಿ ಕ(ವಿ)ತೆಯ ರೂಪದಲ್ಲಿ ಬರೆದಿಡಿ. ಒಂದಿಲ್ಲಾ ಒಂದುದಿನ ಈ ಲೋಕದೆದಿರು ನಿಮ್ಮ ತಲ್ಲಣಗಳೆ ತೆರೆದುಕೊಂಡು ತನುಮನವ ತಣಿಸಲಿವೆ.’
-ಕೆ.ಬಿ.ವೀರಲಿಂಗನಗೌಡ್ರ. ಸಿದ್ದಾಪುರ.
ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆ, ಸಿದ್ದಾಪುರ-581355. ಉತ್ತರಕನ್ನಡ ಜಿಲ್ಲೆ. ದೂ-9448186099
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)