ಸಾರ್ಸ್ ಮತ್ತು ಕೊರೊನಾ ಸಂದರ್ಭದಲ್ಲಿ ಚೆರ್ನೊಬಿಲ್ (ವಿಶಾಖಪಟ್ಟಣ!) ನೆನಪು

ಇಂದು ಚೆರ್ನೊಬಿಲ್ ದುರ್ಘಟನೆಯ 34ನೇ ಶ್ರಾದ್ಧದ ದಿನ. ಏಪ್ರಿಲ್ 26ರಂದು ಅಲ್ಲಿನ ಪರಮಾಣು ಸ್ಥಾವರ ಸ್ಫೋಟಗೊಂಡು ಅನೇಕ ದೇಶಗಳಿಗೆ ವಿಕಿರಣವನ್ನು ಹಬ್ಬಿಸಿತು. ಅದಾಗಿ 17 ವರ್ಷಗಳ ನಂತರ ಇದೇ ದಿನಗಳಲ್ಲಿ ಬೀಜಿಂಗ್‌ನಲ್ಲಿ ಕೊರೊನಾ-ಸಾರ್ಸ್ ವೈರಾಣು ಎಲ್ಲೆಡೆ ಹಬ್ಬಿತು. ಅದಾಗಿ ಮತ್ತೆ 17 ವರ್ಷಗಳ ನಂತರ ಇದೀಗ ಕೊರೊನಾ-ಕೊವಿಡ್ ವೈರಾಣು ಎಲ್ಲೆಡೆ ಹಬ್ಬಿದೆ. ಪರಸ್ಪರ ಸಂಬಂಧ ಇಲ್ಲದಿದ್ದರೂ ಅನೇಕ ಕೌತುಕಮಯ ಸಾಮ್ಯಗಳನ್ನು ಈ ಮೂರರಲ್ಲೂ ಕಾಣಬಹುದಾಗಿದೆ.

ಕಥಾ ಸಾರಾಂಶ ಹೀಗಿದೆ: 26 ಏಪ್ರಿಲ್ 1986ರ ನಸುಕಿನ 1 ಗಂಟೆಗೆ ಸೋವಿಯತ್ ರಷ್ಯದ ಹೊಚ್ಚಹೊಸ ಪರಮಾಣು ಸ್ಥಾವರದ ತಾಂತ್ರಿಕ ಸಿಬ್ಬಂದಿ ಅಲ್ಲಿನ ಸುರಕ್ಷಾ ವಿಧಿಗಳ ಪರೀಕ್ಷೆ ಮಾಡುತ್ತಿದ್ದರು. ಇಡೀ ಸ್ಥಾವರ ಸ್ಫೋಟಿಸಿ ಧಗಧಗ ಉರಿಯತೊಡಗಿತು. ಬೆಂಕಿಯನ್ನು ಆರಿಸಲೆಂದು ಹೆಲಿಕಾಪ್ಟರ್ ಮೂಲಕ ಮರಳು, ಬೋರಾನ್, ಮಣ್ಣು, ಸಿಮೆಂಟ್ ಏನೆಲ್ಲ ಸುರಿಯಲು ಹೋಗಿ ಅವೂ ಜ್ವಾಲೆಗೆ ತುತ್ತಾದವು. ಮೂರು ದಿನಗಳ ಕಾಲ ರಷ್ಯ ಈ ಅವಘಡದ ಬಗ್ಗೆ ಹೊರ ದೇಶಗಳಿಗೆ ತಿಳಿಸಲೇ ಇಲ್ಲ. ಆದರೆ ವಿಕಿರಣ ಮೇಘ ಯುರೋಪ್ನತ್ತ ಸಾಗಿತು. ಎಲ್ಲೋ ವಿಕಿರಣ ಸೋರಿಕೆ ಆಗಿದೆ ಎಂದು ಸ್ವೀಡನ್ ದೇಶದ ಪರಮಾಣು ಸ್ಥಾವರದಲ್ಲಿ ಅಲಾರ್ಮ್ ಮೊಳಗಿ, ಚೆರ್ನೊಬಿಲ್ ದುರ್ಘಟನೆ ಜಗಜ್ಜಾಹೀರಾಯಿತು.
ಅಷ್ಟರಲ್ಲಾಗಲೇ ಇಲ್ಲಿ ಘನಘೋರ ಸಮರ ಸಾಗಿತ್ತು. ದೂರ ನಿಯಂತ್ರಣದ ಮೂಲಕ ಬೆಂಕಿ ಆರಿಸುವ ವಿಫಲ ಯತ್ನ ನಡೆದೇ ಇತ್ತು. ಸ್ಥಾವರದ ಸಮೀಪದ ಪ್ರೀಪ್ಯಾತ್ ನಗರದ ಹಾಗೂ ಸುತ್ತಲಿನ ಹಳ್ಳಿಗಳ ಮೂರುವರೆ ಲಕ್ಷ ಜನರನ್ನು ಸ್ಥಳಾಂತರದ ಅವಾಂತರ. ಆ ಕೋಲಾಹಲದಲ್ಲಿ ರೈಲು, ಬಸ್, ವಿಮಾನಗಳಿಗೆ ವಿಕಿರಣ ಸೇಂಚನವಾಗುತ್ತಿತ್ತು. ಎಲ್ಲೆಲ್ಲೂ ಮುಖವಾಡಗಳ, ಮೈಗವಚದ ಯೋಧರ ಸೈನ್ಯ. ಗಾಯಾಳುಗಳನ್ನು ಸಾಗಿಸುವ, ಸತ್ತವರ ಸಂಖ್ಯೆಯನ್ನು ಅದುಮಿಡುವ ಹೋರಾಟ; ಅಂತರರಾಷ್ಟ್ರೀಯ ತಜ್ಞರ ಆಗಮನ. ವಿಕಿರಣದ ಪ್ರತಿವಿಷಕ್ಕಾಗಿ ಪರದಾಟ. ಬೆಂಕಿಯ ವಿರುದ್ಧ ಹೋರಾಡಿದ ಅಸಂಖ್ಯ ಮಿಲಿಟರಿ ಟ್ಯಾಂಕ್‌ಗಳ, ಬಾಂಬರ್‌ಗಳ ದಫನ (ಚಿತ್ರ 1).
ಇತ್ತ ಐರೋಪ್ಯ ದೇಶಗಳಲ್ಲಿ ವಿಕಿರಣಪೂರಿತ ಹಾಲುಮೊಸರು, ದವಸಧಾನ್ಯ, ಬಟ್ಟೆಬರೆ ನಾಶ; ಸಾಕುಪ್ರಾಣಿಗಳ, ವನ್ಯಜೀವಿಗಳ ಉಳಿವಿಗೆ ಹೋರಾಟ. ಎಲ್ಲೆಲ್ಲೂ ವಿಕಿರಣ ಪಸರಿಸುವ ಭಯ. ಯಾವ ದೇಶದಲ್ಲಿ ಎಷ್ಟೆಷ್ಟು ಹಾನಿ ಎಂಬುದರ ಸಮೀಕ್ಷೆ. ವಿಕಿರಣ ನಿರೋಧಕ ದ್ರವ್ಯಗಳಿಗಾಗಿ, ಔಷಧಕ್ಕಾಗಿ ತ್ವರಿತ ಹುಡುಕಾಟ.
[ಅದಾಗಲೇ ಶಿಥಿಲವಾಗಿದ್ದ ಸೋವಿಯತ್ ಸಂಘಕ್ಕೆ ಚೆರ್ನೊಬಿಲ್ ಸ್ಫೋಟದ ಆಘಾತವೂ ಸೇರಿದ್ದರಿಂದ ಇಡೀ ರಾಷ್ಟ್ರಸಂಘವೇ ಚೂರುಚೂರಾಯಿತು. ಕಬ್ಬಿಣದ ಪರದೆಯ ಹಿಂದಿನ ಕಮ್ಯೂನಿಸ್ಟ್ ಬಿಗಿ ಆಡಳಿತ ಕೊನೆಗೊಂಡಿತು.]

17 ವರ್ಷಗಳ ನಂತರ ಬೀಜಿಂಗ್‌ನಲ್ಲಿ ಅದೇ ಮಾರ್ಚ್-ಏಪ್ರಿಲ್ ದಿನಗಳಲ್ಲಿ ಕೊರೊನಾ ಸಾರ್ಸ್ ಸೋಂಕುಮಾರಿ ಉದ್ಭೂತವಾಯಿತು. ರೈಲು, ವಿಮಾನಗಳ ಮೂಲಕ ವೈರಾಣು ಪಸರಿಸುವ ಭಯ. ಕೊರೊನಾ ವೈರಾಣು ಸ್ಫೋಟಿಸಿದ ಕೆಲ ದಿನಗಳ ನಂತರ (21ಏಪ್ರಿಲ್ 2003) ಬ್ರಿಟನ್ನಿನ ಗಾರ್ಡಿಯನ್ ಪತ್ರಿಕೆ “ಇದು ಚೀನಾದ ಚೆರ್ನೊಬಿಲ್’’ ಎಂದು ಹೆಡ್‌ಲೈನ್ ಹಾಕಿತು. ವಿಕಿರಣ ಸೋಂಕಿನ ಮಾದರಿಯಲ್ಲೇ ಬೀಜಿಂಗ್‌ನಲ್ಲಿ ಎಲ್ಲೆಡೆ ವೈರಾಣು ಸೋಂಕಿನ ಭಯ. ಎಲ್ಲೆಲ್ಲೂ ಮುಖವಾಡಗಳ ಸಂತೆ. ಇಡೀ ನಗರವೇ ಬಿಕೋ.
ಯುರೋಪ್, ಅಮೆರಿಕದಲ್ಲಿ ವೈರಾಣುವನ್ನು ತಡೆಗಟ್ಟುವ ಸಾಹಸ ಎಲ್ಲೆಲ್ಲೂ. ಒಟ್ಟೂ 72 ದೇಶಗಳು ಕಂಗಾಲು. ವೈರಾಣುತಜ್ಞರಿಗೆ, ರೋಗಪ್ರಸರಣದ ಅಧ್ಯಯನ ಮಾಡುವವರಿಗೆ ಎಲ್ಲಿಲ್ಲದ ಬೇಡಿಕೆ. ಯಾವ ದೇಶದಲ್ಲಿ ಎಷ್ಟೆಷ್ಟು ಹಾನಿ ಎಂಬುದರ ತನಿಖೆ. ಔಷಧ, ವ್ಯಾಕ್ಸೀನ್‌ಗಾಗಿ ತ್ವರಿತ ಶೋಧ. ಥೇಟ್ ಚೆರ್ನೊಬಿಲ್ ಮಾದರಿ.

ಅದಾಗಿ 17 ವರ್ಷಗಳ ನಂತರ ಈಗ ಮತ್ತೆ ಕೊರೊನಾ ಹೊಸ ಅವತಾರದಲ್ಲಿ ಆಸ್ಫೋಟ. ಚರ್ನೊಬಿಲ್ ದಿಗಿಲಿನ ಮಾದರಿಯಲ್ಲಿ ಜಾಗತಿಕ ಸಂಚಲನ. ಕೊರೊನಾ- ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲ ದೇಶಗಳ ಪರದಾಟ. ಔಷಧಕ್ಕಾಗಿ, ತ್ವರಿತ ಶೋಧ. ಎಲ್ಲೆಲ್ಲೂ ಭಯ-ವಿಹ್ವಲತೆಯ ತಾಂಡವ. ಮುಖವಾಡಗಳು ಈಗ ವಿಶ್ವವ್ಯಾಪಿ. ಆರ್ಥಿಕ ಕುಸಿತ, ಉದ್ಯೋಗ ನಷ್ಟ. ಯಾವ ದೇಶದಲ್ಲಿ ಎಷ್ಟೆಷ್ಟು ಹಾನಿ ಎಂಬುದರ ತನಿಖೆ. ಔಷಧ, ವ್ಯಾಕ್ಸೀನ್‌ಗಾಗಿ ತ್ವರಿತ ಶೋಧ. ಥೇಟ್ ಚೆರ್ನೊಬಿಲ್ ಮಾದರಿ.
ಈ ವರ್ಷದ ಚೆರ್ನೊಬಿಲ್ ವಿಶೇಷ ಏನೆಂದರೆ ಅದರ ಸುತ್ತಲಿನ ನಿರ್ಜನ ಕಾಡಿಗೆ ಬೆಂಕಿ ಹೊತ್ತಿಕೊಂಡಿದೆ. ಮರಗಳಿಗೆ, ಮಣ್ಣಿಗೆ ಅಂಟಿಕೊಂಡಿದ್ದ ವಿಕಿರಣ ಕಣಗಳು ಮತ್ತೆ ಹೊಗೆಯಾಗಿ, ಬೂದಿಯಾಗಿ, ಗಾಳಿಯಲ್ಲಿ ಪಸರಿಸುತ್ತಿರುವ ದುಮ್ಮಾನದ ವರದಿಗಳು ಬರುತ್ತಿವೆ (ಚಿತ್ರ 4).
ಈಗ ಒಂದು ಹಿನ್ನೋಟ: ಕೈಗಾದಲ್ಲಿ ಅಣುಸ್ಥಾವರ ಬೇಡವೆಂದು 1985ರಲ್ಲಿ ಚಿಕ್ಕಪುಟ್ಟ ಪ್ರತಿರೋಧ ಒಡ್ಡಿದ್ದ ನಮಗೆ ಚೆರ್ನೊಬಿಲ್ ಸ್ಫೋಟವೇ ಒಂದು ಬೂಸ್ಟರ್ ಡೋಸ್ ಕೊಟ್ಟಂತಾಗಿತ್ತು. ಚಳವಳಿ ಜೋರಾಯಿತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ನಮ್ಮನ್ನು ಐದು ತಂಡಗಳನ್ನು ರಚಿಸಿ ರಾಷ್ಟ್ರದ ಐದು ಪರಮಾಣು ಘಟಕಗಳ ಅಧ್ಯಯನಕ್ಕೆ ಕಳಿಸಿದರು. ನಮ್ಮ ತಂಡ ರಾಜಸ್ತಾನದ ರಾವತ್‌ಭಾಟಾ ಪರಮಾಣು ಸ್ಥಾವರಕ್ಕೆ ಹೋಗಿತ್ತು. ಅಲ್ಲಿನ ನಿರ್ದೇಶಕ ನಾಡಕರ್ಣಿ ಎಂಬವರ ಜೊತೆ ಚೆರ್ನೊಬಿಲ್ ದುರಂತದ ಬಗ್ಗೆ ಚರ್ಚಿಸಿದೆವು. ಅವರು ಆ ದುರಂತಕ್ಕೆ ಕೊಟ್ಟ ಕಾರಣ, ಇಂದಿನ ಇಡೀ ವ್ಯವಸ್ಥೆಯನ್ನು ಪ್ರತಿಬಿಂಬಿಸುವಂತಿತ್ತು.
“ಆ ಯಂತ್ರದ ನಿಯಂತ್ರಣವನ್ನು ಟ್ರೇನಿ ಹುಡುಗರಿಗೆ ಕೊಟ್ಟಿದ್ದರು. ಅವರು ಫುಲ್ ಪವರ್‌ನಲ್ಲಿ ಸ್ಥಾವರವನ್ನು ನಡೆಸುತ್ತ ಸುರಕ್ಷಾ ಪ್ರಯೋಗವನ್ನು ಮಾಡುತ್ತಿದ್ದರು. ಒಂದು ಕಾರನ್ನು ನೀವು ಹೈಸ್ಪೀಡ್‌ನಲ್ಲಿ ನಡುರಾತ್ರಿಯಲ್ಲಿ ಓಡಿಸುತ್ತಿದ್ದೀರಿ ಅಂದುಕೊಳ್ಳಿ. ಅದರ ಸುರಕ್ಷಾ ಪರೀಕ್ಷೆ ಮಾಡಲೆಂದು ನೀವು ಹೆಡ್‌ಲೈಟ್ ಆಫ್ ಮಾಡುತ್ತೀರಿ. ಆಮೇಲೆ ಬ್ರೇಕ್ ಪೆಡಲನ್ನು ಕಿತ್ತು ಹಾಕುತ್ತೀರಿ. ಮೂರನೆಯ ಹಂತದ ಪರೀಕ್ಷೆಗೆಂದು ಸ್ಟೀರಿಂಗ್ ಚಕ್ರವನ್ನು ಕಿತ್ತು ಹಾಕುತ್ತೀರಿ…. ದುರಂತವಲ್ಲದೆ ಇನ್ನೇನಾಗುತ್ತದೆ?”
ಇಡೀ ಪೃಥ್ವಿಯನ್ನು ಸಂಭಾಳಿಸುತ್ತಿರುವ ಮನುಷ್ಯಸಂಕುಲಕ್ಕೆ ಈ ಉದಾಹರಣೆಯನ್ನು ಇಂದು ಲಗತ್ತಿಸಿ ನೋಡಿ. ಅಭಿವೃದ್ಧಿಯ ಉಮೇದಿನಲ್ಲಿ, ಈ ಯಂತ್ರಕ್ಕೆ ಅತಿ ವೇಗದ ಚಾಲನೆಯನ್ನು ಕೊಟ್ಟ ನಾವು ಸುರಕ್ಷೆಯ ಒಂದೊಂದೇ ಘಟಕಗಳನ್ನು ಕಿತ್ತು ಪರೀಕ್ಷೆ ಮಾಡುತ್ತಿದ್ದೇವೆ ತಾನೆ? – ನಾಗೇಶ್ ಹೆಗಡೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *