![](https://i0.wp.com/samajamukhi.net/wp-content/uploads/2020/04/KUMARASWAMY.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕೊಟ್ಟ ಕಾಂಗ್ರೆಸ್ ಈ ದೇಶದ ಚುಕ್ಕಾಣಿ ಹಿಡಿದು ಮಾಡಿದ ಕೆಲಸ ಅಪಾರ. ಬ್ರಿಟೀಷರು ಅಖಂಡ ಭಾರತವನ್ನು ಎರಡು ಪಾಲಾಗಿಸಿ ಸ್ಥಳಿಯರಿಗೆ ಬಿಟ್ಟುಕೊಟ್ಟರೆ… ಕೆಲವು ಸಂಸ್ಥಾನಗಳು, ರಾಜಮನೆತನಗಳು,ಕೆಲವು ವಿದೇಶಿಯರು ತಾಂತ್ರಿಕವಾಗಿ ಭಾರತ ಸ್ವತಂತ್ರವಾದ ನಂತರವೂ ಅದೇ ಸ್ಥಿತಿಯಲ್ಲಿ ಮುಂದುವರಿದಿದ್ದರು.
ಮತ್ತೆ ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸಿ, ಸಂವಿಧಾನ ರಚಿಸಿ ಭಾರತದ ಜಾತ್ಯಾತೀತ, ಸಾರ್ವಭೌಮತ್ವ ಸ್ಥಾಪನೆಗೆ ಹಿಡಿದದ್ದು ಕೆಲವುಕಾಲ. ಅಲ್ಲಿ ಸಂವಿಧಾನಬದ್ಧವಾಗಿ ರಾಜರು,ಪ್ರಮುಖರು ಶ್ರೀಮಂತರು ರಕ್ಷಣೆ ಪಡೆದರೆ ಕೆಲವರು ಕಾಲನ ನಿಯಂತ್ರಣದಲ್ಲಿ ಕಳೆದುಕೊಂಡವರು, ಕಳೆದುಹೋದವರೂ ಇದ್ದಾರೆ.
ನಂತರದ 50 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಏಕಸ್ವಾಮ್ಯತ್ವದ ವಿರುದ್ಧ ದೊಡ್ಡ ಜನಾಂದೋಲನ ನಡೆದ ಇತಿಹಾಸವನ್ನುಭಾರತ ಕಂಡಿದೆ. ನಂತರ ಕಾಂಗ್ರೆಸ್ ವಿಫಲತೆ ಜಾಗತೀಕರಣ, ಖಾಸಗೀಕರಣಗಳ ಪ್ರಭಾವದಿಂದ ಬಂದ ಬಿ.ಜೆ.ಪಿ. ಈ ದೇಶದ ಸಂಪತ್ತು, ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ವಹಿಸಿದ್ದು ಇತ್ತೀಚಿನ ವರ್ತಮಾನ. ಈ ಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಮುಖರಾಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಂದ ಅಧಿಕಾರದ ಅವಕಾಶವನ್ನು ಬಳಸಿಕೊಂಡು ಸಚಿವರು, ಪ್ರಧಾನಿಗಳು ಆಗದಿರುವುದು ಈ ಕಾಲದ ವಿಚಿತ್ರವೆ.
ಈಗ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದಲ್ಲಿ ಗಾಂಧಿ ಕುಟುಂಬದ ಅನುಯಾಯಿಗಳು, ಸಾಂಪ್ರದಾಯಿಕ ಮುಖಂಡರು ಎನ್ನುವ ಎರಡು ವಿಭಾಗಗಳಿವೆ. ಬಿ.ಜೆ.ಪಿ.ಯಲ್ಲಿ ಅಡ್ವಾನಿ,ಜಸವಂತ ಸಿಂಗ್, ಯಶವಂತ ಸಿನ್ಹ ರಂಥ ಹಿರಿಯರನ್ನು ಮೂಲೆಗುಂಪು ಮಾಡಿದಂತೆ ಕಾಂಗ್ರೆಸ್ ನಲ್ಲೂ ಮೂಲೆಗುಂಪಾದವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ಬಿ.ಜೆ.ಪಿ. ಯಂತೆ ಅಧಿಕಾರ ಬಂದಾಗ ಕಾಂಗ್ರೆಸ್ ಹಿರಿಯರನ್ನು ಉಪೇಕ್ಷಿಸಿಲ್ಲ ಎನ್ನುವುದು ಕ್ಯಾಡರ್ ಬೇಸ್ಡ್ ಪಕ್ಷ ಎನ್ನುವ ಬಿ.ಜೆ.ಪಿ.ಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ.
ಕಾಂಗ್ರೆಸ್ ರಾಜ್ಯಮಟ್ಟದಲ್ಲಿ ಬಂಗಾರಪ್ಪ,ದೇವರಾಜ್ ಅರಸುರಂಥವರನ್ನೇ ತುಳಿದು ಅರಗಿಸಿಕೊಂಡಿದೆ. ಅದೇ ಪ್ರಯತ್ನ ಮಾಡಲು ಹವಣಿಸುತ್ತಿರುವ ಬಿ.ಜೆ.ಪಿ. ಶಿವಪ್ಪ, ನಾಣಯ್ಯ ರಂಥವರನ್ನು ತುಳಿದು ಈಗ ಯಡಿಯೂರಪ್ಪನವರನ್ನೇ ಆಪೋಶನ ಮಾಡಲು ಸಿದ್ಧವಾಗಿದೆ.
ಕಾಂಗ್ರೆಸ್ ಬಂಗಾರಪ್ಪ, ಸಿದ್ಧರಾಮಯ್ಯ,ಜಾಫರ್ ಷರೀಫ್, ಖರ್ಗೆ, ಕಾಗೋಡು ತಿಮ್ಮಪ್ಪನವರಂಥವರ ಮುಂದೆ ದೇಶಪಾಂಡೆ, ಗುಂಡೂರಾವ್, ದಿನೇಶ್ ಗುಂಡೂರಾವ್ ರಂಥವರಿಗೆ ಮಣೆ ಹಾಕಿ ತನ್ನ ಮೃಧು ಹಿಂದುತ್ವ ಪ್ರತಿಬಿಂಬಿಸಿದೆ. ಇದೇ ವ್ಯವಸ್ಥೆಯಲ್ಲಿ ಸಿದ್ಧರಾಮಯ್ಯ, ಕಾಗೋಡುತಿಮ್ಮಪ್ಪನವರಂಥವರ ಎದುರು ಹರಿಪ್ರಸಾದ್, ಎಚ್.ಕೆ.ಪಾಟೀಲ್ ಸೇರಿದ ಕೆಲವರಿಗೆ ಮಣೆ ಹಾಕಿದೆ. ಕಾಂಗ್ರೆಸ್ ನ ಬ್ರಾಹ್ಮಣ, ಲಿಂಗಾಯತ, ಒ ಕ್ಕಲಿಕ ಪ್ರೇಮದೆದುರು ಕುರುಬರು,ಈಡಿಗರು, ಮುಸ್ಲಿಂರು ಸೇರಿದಂತೆ ಅನೇಕ ಅಹಿಂದ್ ಗಳಿಗೂ ಅನ್ಯಾಯವಾಗಿದೆ.
ಇವರೆಲ್ಲರ ಮಧ್ಯೆ ಹಣ ಉಳ್ಳ ಉಳ್ಳವರು ಅನೇಕ ಕ್ಷೇತ್ರ, ಜಿಲ್ಲೆಗಳಲ್ಲಿ ಅಲ್ಲಿಯ ಬಹುಸಂಖ್ಯಾತರನ್ನು ತುಳಿದಿದ್ದಾರೆ. ಮೃಧುಹಿಂದುತ್ವವಾದಿಗಳು ನಾನಾ ಕ್ಷೇತ್ರ-ಜಿಲ್ಲೆಗಳಲ್ಲಿ ದಪ್ಪವಾದಾಗ ಕಾಂಗ್ರೆಸ್ ರೊಟ್ಟಿ, ತೆಳುವಾದಾಗ ಬಿ.ಜೆ.ಪಿ. ದೋಸೆ ಮಾಡಿದ್ದಿದೆ.
ಈ ಚರಿತ್ರೆ ಬೆನ್ನಿಗಿಟ್ಟುಕೊಂಡು ಸಾಮಾಜಿಕ ನ್ಯಾಯ ಗಾಳಿಗೆ ತೂರಿದರೂ ಈಗಿನ ಬ್ರಾಹ್ಮಣ ತುಷ್ಟೀ ಕರಣದ ಬಿ.ಜೆ.ಪಿ.ಎದುರು ಕಾಂಗ್ರೆಸ್ ಸಾಮಾಜಿಕ ನ್ಯಾಯದ ಬದ್ಧತೆ ಪ್ರಶ್ನಾತೀತ. ಈಗಿನ ಗ್ರಾ.ಪಂ. ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಂತೆ ಸಾಂಪ್ರದಾಯಿಕ ಕಾಂಗ್ರೆಸ್ಸಿಗರು, ಮೃಧು ಹಿಂದುತ್ವವಾದಿಗಳೆದುರು ಬಿ.ಜೆ.ಪಿ.ಯ ಅವಕಾಶವಾದಿಗಳು, ಕಟ್ಟರ್ ಮತಾಂಧರು ಕೇಸರಿ ಧ್ವಜ ಹಾರಿಸುವ ಹುನ್ನಾರದಲ್ಲಿದ್ದಾರೆ. ಪಕ್ಷನಿಷ್ಠೆ, ಸಿದ್ಧಾಂತ ಕ್ಲೀಷೆಯಾಗಿರುವ ಈ ಸಮಯದಲ್ಲಿ ಬೃಷ್ಟರು, ಅವಕಾಶವಾದಿಗಳು ಕುರ್ಚಿ ಮೇಲೆ ಕಣ್ಣಿಟ್ಟು ಕಟಪಿಟಿ ಮಾಡುತಿದ್ದಾರೆ. ಮುಂದಿನ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಚುನಾವಣೆಗಳ ನಿರೀಕ್ಷೆಯಲ್ಲಿ ಪಕ್ಷಗಳು ಕೆಲಸಮಾಡುತ್ತಿವೆಯಾದರೂ ಜನ, ಅಭ್ಯರ್ಥಿಗಳು ಮುಖಂಡರು ಬೃಷ್ಟರಾಗುತ್ತಿರುವುದರಿಂದ ವ್ಯವಸ್ಥೆ ಸುಧಾರಿಸುವುದು ಕಷ್ಟ. ಉತ್ತಮ ಅಭ್ಯರ್ಥಿಗಳ ಆಯ್ಕೆ ಪಂಚಾಯತ್ ಮಟ್ಟದಲ್ಲೇ ಗಗನಕುಸುಮವಾದರೆ ಮುಂದಿನ ಭವಿಷ್ಯದ ಮೇಲೆ ಭರವಸೆ ಇಡುವದ್ಹ್ಯಾಗೆ?
ಅಂದಹಾಗೆ ಬಿ.ಜೆ.ಪಿ.ಯ ಸರ್ವಾಧಿಕಾರಕ್ಕೆ ತಲೆಬಾಗಿರುವ ಜೆ.ಡಿ.ಎಸ್. ಕುಮಾರಸ್ವಾಮಿ ಈಗಿನ ಚುನಾವಣೆಯಲ್ಲೇ ಅಪ್ರಸ್ತುತರಾಗುತ್ತಿರುವುದು ಕರ್ನಾಟಕದಲ್ಲಿ ಪ್ರಾದೇಶಿಕ, ಜಾತ್ಯಾತೀತ ಹಿತಾಸಕ್ತಿಯ ಅಗತ್ಯದ ಹೊಸ ಸಾಧ್ಯತೆಯನ್ನು ಪ್ರತಿಬಿಂಬಿಸಿದೆ. ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಮಾತ್ರ ಪರ್ಯಾಯವಲ್ಲ ಎನ್ನುವ ಸತ್ಯ ಸಾಬೀತುಮಾಡಲೂ ಇದೇ ಸಕಾಲ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)