

ಈ ಹವ್ಯಾಸಿ ರಂಗ ಕಲಾವಿದರನ್ನೂ ಮತ್ತು ಅವರ ಮನಸ್ಸನ್ನೂ ಕಟ್ಟಿ ಇಟ್ಟುಕೊಳ್ಳುವುದು ಬಹಳ ಕಷ್ಟದ ವಿಷಯ. ನಾವು ತಂಡದಲ್ಲಿ ಇಪ್ಪತೆರಡು ಜನ ಕಲಾವಿದರಿದ್ದೆವು; ನಮ್ಮ trax ಚಾಲಕರು ಗಣೇಶ ಮತ್ತು ಸೋಮುವನ್ನು ಸೇರಿ. ನಮಗೆ ಬೇಡ್ಕಣಿ ಶನೇಶ್ವರ ಜಾತ್ರೆಯ ದಿನ ನಮ್ಮ ಸಣ್ಣಾಟ ನಿಕ್ಕಿಯಾಗಿತ್ತು. ಅಂದು ಅದು ನಮ್ಮ ತಂಡಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಆಟ. ಹಾಗಾಗಿ ನಾನು ಒಂದು ತಂಡದ ಉನ್ನತಿಯ ದೃಷ್ಟಿಯಿಂದ ಒಪ್ಪಿಕೊಂಡೆ.ಎಲ್ಲರಿಗೂ ಫೋನ್ ಮಾಡಿ ತಿಳಿಸಿದಾಗ ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಅಂದೇ ಶನೇಶ್ವರ ಬಯಲಾಟ ಆಡಬೇಕೆಂದು ಕುಗ್ವೆ ಊರಿನಲ್ಲಿ ನಿರ್ಧಾರವಾಗಿತ್ತು. ಹಾಗಾಗಿ ಆ ದಿನ ಬರಲು ಸಾಧ್ಯವಿಲ್ಲ ಎಂದು ನನ್ನ ಊರಿನ ಗೆಳೆಯರು ತಾಲೀಮಿಗೆ ಬರುವುದನ್ನು ನಿಲ್ಲಿಸಿಬಿಟ್ಟರು; ಅದು ಒಬ್ಬರಲ್ಲ ಎಂಟು ಜನ ಕಲಾವಿದರು. ಅಷ್ಟೊಂದು ಜನ ಇಲ್ಲದೆ ನಾಟಕ ಮಾಡುವುದು ಕಷ್ಟ ಎಂದರು ನಮ್ಮ ದೇವೇಂದ್ರರು. ಅಷ್ಟರೊಳಗೆ ಈಶ್ವರ ನಾಯ್ಕರು ಅಲ್ಲೇ ಇದ್ದವರು ಬಂದು ” ಏನು ವಿಷಯ ಕೇಳಿದರು. ನಾನು ವಿಷಯ ವಿವರಿಸಿದೆ. ಅವರು ” ಮಾಡಿಯೇ ಬಿಡೋಣ ” ಎಂದರು. ಅವರಿಗೆ , ಈ ಕಲಾವಿದರು ಸರಿಯಾಗಿ ತಾಲೀಮಿಗೆ ಬರದಿರುವುದು, ಏನೇನೋ ಕಾರಣ ಹೇಳಿ ತಪ್ಪಿಸಿಕೊಳ್ಳುವುದು ನೋಡಿ ರೇಜಿಗೆಯಾಗಿಹೋಗಿತ್ತು. ನಾಯ್ಕರು ,ದೇವೇಂದ್ರರ ಜೊತೆಗೆ ಮಾತನಾಡುತ್ತಿದ್ದಾಗ , ನನಗೆ ಎಂಟು ಜನರನ್ನು ಪರ್ಯಾಯ ವಾಗಿ ಹುಡುಕುವುದೇ ಆಲೋಚನೆ ಇತ್ತು. ನನಗೆ ಸಿಟ್ಟು ಬಹಳ ನೆತ್ತಿಗೆ ಏರಿತ್ತು. ನಾನು , ದೇವೇಂದ್ರರಿಗೆ ಅಂದೆ ” ನೋಡಿ ಸರ್ , ನನಗಂತು ಹಟವಿದೆ, ಯಾರೂ ಬರದಿದ್ದರೂ ಅಡ್ಡಿಯಿಲ್ಲ, ನೀವು ಮತ್ತು ನಾಯ್ಕರು ಇದ್ದೀರಲ್ಲಾ ” ಎಂದು ಹೇಳುವ ಹೊತ್ತಿಗೆ ಕೊಲ್ಲೂರಯ್ಯನವರು ಬಂದರು. ಅವರು ನಮ್ಮ ಹಿಮ್ಮೇಳದ ಗಾಯಕರು. ನಾನು ಹೇಳಿದೆ “ಸರ್ ಈಗ ಎಷ್ಟು ಜನ ಉಳಿದುಕೊಂಡಿದ್ದಾರೋ ಅಷ್ಟೆ ಜನ ಇಟ್ಟುಕೊಂಡು ಆಟ ಮಾಡೋಣ ; ನನಗೆ ಬೇರೆಯದೇ ಆಲೋಚನೆ ಇದೆ ಎಂದೆ.

“ಮನಸ್ಸು ಬಹಳ ಗಟ್ಡಿಯಾಗುತ್ತಾ ಹೋಯಿತು. ಆಗ “ಎಂತ ಮಾಡೋಣ ಮಾರಾಯ್ರ ಎಂದರು” ದೇವೇಂದ್ರರು. ನಾನಂದೆ ” ಮುಖ್ಯ ವಾಗಿ ಬಾಳ್ಯಾ ಇಲ್ಲ, ಆ ಪಾತ್ರವನ್ನು ನೀವೇ ಮಾಡಿ ಸರ್” ಎಂದೆ. ಅವರು ನನ್ನ ಗಂಭೀರತೆಯನ್ನು ಬಹಳ ಬೇಗ ಗ್ರಹಿಸುತ್ತಾರೆ. ನಾನು” ಪೂಜಾರಿ ಪಾತ್ರಕ್ಕೆ ಒಬ್ಬ ಸೂಕ್ತ ವ್ಯಕ್ತಿಯನ್ನು ನಿಲ್ಲಿಸುತ್ತೇನೆ. ಇನ್ನು ಬಸವಂತನ ಪಾತ್ರ ಗವಿಯಪ್ಪ ಮಾಸ್ಟರ್ ರ ಹತ್ತಿರ ಮಾಡಿಸೋಣ. ಮಾರ್ವಾಡಿ ಪಾತ್ರವನ್ನು ಮೈಲಪ್ಪನವರ ಹತ್ತಿರ ಮಾಡಿಸೋಣ ; ಹೇಗೂ ಅವರಿಗೆ ಬ್ಯಾಗಾರಿ ಪಾತ್ರಕ್ಕೂ ಮಾರ್ವಾಡಿ ಪಾತ್ರಕ್ಕೂ ಮದ್ಯ ಸಮಯ ಸಿಗುತ್ತದೆ. ” ಎಂದೆ. ಆಗ ದೇವೇಂದ್ರರು ( ನಮ್ಮ ಸಣ್ಣಾಟದ ನಿರ್ದೇಶಕರು) ” ನಾನು ಬಾಳ್ಯಾ ನ ಪಾತ್ರ ಮಾಡುತ್ತೇನೆ” ಎಂದರು.
” ಹಾಗಿದ್ದರೆ ಉಳಿದ ವ್ಯವಸ್ಥೆ ಮಾಡುತ್ತೇನೆ” ಎಂದು ಪೋನಾಯಿಸಿ ನಿಕ್ಕಿ ಮಾಡಿಕೊಂಡೆ. ಪಾರವ್ವನ ಪಾತ್ರದವನು ” ಆದರೆ ಬರ್ತೀನಣ್ಣ, ಇಲ್ಲ ಅಂದರೆ ಬರಲ್ಲ.” ಅಂದ ನಾನು ” ನನಗೆ ರಾತ್ರಿ ಹತ್ತು ಗಂಟೆಯ ಒಳಗೆ ತಿಳಿಸಬೇಕು, ಇಲ್ಲವೆಂದರೆ ನಿನ್ನ ಮನೆಯ ಕದ ತಟ್ಟುತ್ತೇನೆ ” ಎಂದೆ. ಅವನು ಐದೇ ನಿಮಿಷದಲ್ಲಿ ವಾಪಾಸು ಪೋನು ಮಾಡಿದ,” ನಾನು ಬರ್ತೇನೆ” ಅಂದ. ಮುಖ್ಯವಾಗಿ ಸಂಗ್ಯಾನ ಪಾತ್ರ ಮಾಡುವವರು ಬೇಕಿತ್ತು. ನಾವು ವಾರದಿಂದ ಭೀಮನಕೊಣೆಯ ನಾರಾಯಣ ಸ್ವಾಮಿಗೆ ತಾಲೀಮು ಕೊಡುತ್ತಿದ್ದೆವು. ಇನ್ನು ಮೂರು ಜನ ಬೇಕಿತ್ತು. ನಾಯಕರಿಗೆ ಹೇಳಿದೆ ” “ನೀವು ಮತ್ತು ಕೊಲ್ಲೂರಯ್ಯನವರು ಇಬ್ಬರೇ ಸಾಕು ಹಿಮ್ಮೇಳ ನಿಭಾಸೋಣ” ಎಂದೆ.ಹೆಣ್ಣು ದ್ವನಿಗೆ ನನ್ನ ಹೆಂಡತಿ ಬರಲು ಒಪ್ಪಿಕೊಂಡಳು. ಇಷ್ಟಾದರೂ ನನಗೆ ಸಮಸ್ಯೆ ಕಾಡುತ್ತಲೇ ಇತ್ತು.ಮನೆಯಲ್ಲಿ ಹೆಂಡತಿ ಮತ್ತು ಮಗ ” ನೀವು ಸರಿಯಾಗಿ ಏಳು ಗಂಟೆಗೆ ಶುರುಮಾಡುವುದಾದರೆ ಬರುತ್ತೇವೆ ಇಲ್ಲವೆಂದರೆ ಬರುವುದಿಲ್ಲ” ಎಂದು ನನಗೆ ಇನ್ನೂ ಹೊಸ ಉದ್ವೇಗವನ್ನು ಸೃಷ್ಟಿ ಮಾಡಿದರು. ಹೀಗೆ ಯೇ ಆಗಬೇಕೆಂದು ಎಂದು ಕರಾರು ಪತ್ರದಲ್ಲಿ ಬರೆದುಕೊಡುವಂತೆ ತಾಕೀತು ಮಾಡಿದರು. ನನ್ನ ಹಟ ಸುಮ್ಮನಿರಲಿಲ್ಲ; ಯಾರೂ ಇಲ್ಲದಿದ್ದರೆ ಶ್ರೀಕೃಷ್ಣ ಪಾರಿಜಾತದ ರೀತಿ ‘ ಮೇಳದವರೇ ಪಾತ್ರಗಳನ್ನು ರಂಗದ ಮೇಲೆಯೇ ಪಾತ್ರಗಳನ್ನು ಬದಲು ಮಾಡಿ ಹಾಡುವುದು ಮತ್ತು ಕತೆಯನ್ನು ನಿರೂಪಿಸುವುದು ಎಂದು ತೀರ್ಮಾನಿಸಿಬಿಟ್ಟಿದ್ದೆ. ಅದಕ್ಕಾಗಿ ಒಂದು ನಿಮಿಷದಲ್ಲಿ ಮೀಸೆಯನ್ನು ಬೋಳಿಸುವ ಹರಿತವಾದ blade ಕೂಡಾ ಇಟ್ಟುಕೊಂಡಿದ್ದೆ. ಅಂದು ಅದು ನನ್ನ ಕೊನೆಯ ನಿರ್ಧಾರವಾಗಿತ್ತು. ನಾಟಕದ ದಿನ ಇನ್ನೊಂದು ಸಂಕಷ್ಟ ಎದುರಾಯಿತು.
ಪಾರವ್ವನ ಪಾತ್ರ ಮಾಡುವ ನಾಗರಾಜ ಬರಲೇ ಇಲ್ಲ. ನಾವು ಏಳುಗಂಟೆಗೇ ಆಟ ಪ್ರಾರಂಭಿಸಬೇಕಿತ್ತು. ಗಂಟೆ ಎಂಟಾದರೂ ಅವನು ನಾಪತ್ತೆ. ದೇವಸ್ಥಾನದ ಕಮಿಟಿಯವರು ನಮಗೆ ಬಯ್ಯತೊಡಗಿದರು. ಯಾರು ನಿಮ್ಮ ನಾಯಕ ಎಂದರು. ಎಲ್ಲರೂ ನನ್ನ ಕಡೆ ಬೆರಳು ತೋರಿಸಿದರು. ಸಾಕಷ್ಟು ಉಗಿಸಿಕೊಂಡೆ ಅಂತೂ ಅವನು ಬಂದ ಎಂಬ ಸುದ್ಧಿ ಸಿಕ್ಕಿತು. ನಾನು ಶುರು ಮಾಡಿಯೇ ಬಿಟ್ಟೆ. ಆದರೆ ಅಂದು ನಮ್ಮ ಸಣ್ಣಾಟವನ್ನು ಮೂರು ಸಾವಿರ ಜನ ನೋಡಿದರು. ಮುಕ್ತ ರಂಗ ಭೂಮಿಯಲ್ಲಿ ಒಂದೇ ಹ್ಯಾಲೋಜಿನ್ ಬೆಳಕಿನಲ್ಲಿ ಆಟ ಯಶಸ್ವಿಯಾಯಿತು. ನಾನು ಪಾರಿಜಾತ ತರುವದು ತಪ್ಪಿತು. ಹೇಳಿದ ಕಲಾವಿದರು ಬಂದಿದ್ದರು. ಸಾಕಷ್ಟು ತಪ್ಪುಗಳ ನಡುವೆ ಇದೂ ಒಂದು ತಾಲೀಮು ಎನ್ನುವಂತೆ ಆಡಿದೆವು. ಬಹಳ ಒತ್ತಡ ದಲ್ಲಿದ್ದ ನನಗೆ ಬಾಯಿ ಒಣಗುತ್ತಿತ್ತು. ಕ್ರಮೇಣ ನಾಲಗೆ ಸರಿ ಹೋಯ್ತು. ಅಂದಿನ ಪಾತ್ರವರ್ಗದಲ್ಲಿಭಾಗವತ: ಜಯರಾಮ್ ಕೆ.ಹೆಚ್.ಹಿಮ್ಮೇಳ: ಈಶ್ವರ ನಾಯ್ಕರು ಕುಗ್ವೆ,ಕೊಲ್ಲೂರಯ್ಯನವರು ಹಳೆ ಇಕ್ಕೇರಿ, ಮತ್ತು ಶ್ರೀಮತಿ ಉಷಾರಾಣಿ.ಸಂಗ್ಯಾ: ನಾರಾಯಣ ಸ್ವಾಮಿ, ಭೀಮನಕೋಣೆಬಾಳ್ಯಾ: ದೇವೇಂದ್ರ ಬೆಳೆಯೂರುಈರ್ಯ: ಪರಶುರಾಮ್ , ಸೂರನಗದ್ದೆ,ಇರಪಕ್ಷಿ: ಹೂವಪ್ಪ ಮಾಸ್ಟರ್ಬಸವಂತ: ಗವಿಯಪ್ಪ ಮಾಸ್ಟರ್ಗಂಗಾ: ಶ್ರೀಮತಿ ಗೀತಾ ಈಶ್ವರ್ಪಾರವ್ವ: ನಾಗರಾಜ ಹಳ್ಳಿಕೇವಿಬ್ಯಾಗಾರಿ/ಮಾರ್ವಾಡಿ: ಮೈಲಪ್ಪ ಕಂಬಳಿಕೊಪ್ಪಸೂತ್ರದಾರ/ಆಳು/ ಹಾರ್ಮೋನಿಯಂ: ಸಂವತ್ಸರಪೂಜಾರಿ: ಗಣಪತಿ ಪುರಪ್ಪೇಮನೆತಬಲ: ನಾಗಾರಾಜ್ ಸಾಗರ.ಬೇಡ್ಕಣಿಯಲ್ಲಿ ಆದ ಸಣ್ಣಾಟವನ್ನು ಒಮ್ಮೆ ಗಮನಿಸಿ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
