![](https://i0.wp.com/samajamukhi.net/wp-content/uploads/2021/09/k-p-ravi.jpg?resize=640%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ-
ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು*- ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ ಮುಂಚೂಣಿ ನಾಯಕರಾಗಿ ಹೋರಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಅಪ್ಪಟ ಗ್ರಾಮೀಣ ನಾಟಿ ವೈದ್ಯರು. ಅವರ ಮಗ ಗೋಪಾಲ ನಾಯ್ಕರ ಬದುಕು ಅದಕ್ಕೆ ಹೊರತಾಗಿರಲಿಲ್ಲ.ಕೃಷಿ ಕುಟುಂಬದಲ್ಲಿ ಜನಿಸಿ ಬಾಲ್ಯದಿಂದಲೇ ತಂದೆ ತೋರಿದ ದಾರಿಯಲ್ಲಿ ಸಾಗುತ್ತಾ ಐವತ್ನಾಲ್ಕು ವಸಂತಗಳನ್ನು ಪೂರೈಸಿದವರು. ತಮ್ಮ ದುಡಿಮೆಯ ಕೆಲವು ಭಾಗವಾಗಿ ಪ್ರತಿವರ್ಷ ಮೂವತ್ತರಿಂದ,ನಾಲ್ವತ್ತು ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಬೆನ್ನುಕೊಟ್ಟು, ಬೆನ್ನು ತಟ್ಟಿ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದಾರ ಗುಣಹೊಂದಿರುವ ಗೋಪಾಲ ನಾಯ್ಕರು ಸಿದ್ದಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಹಳ್ಳಿಬೈಲ್ ನಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
![](https://i0.wp.com/samajamukhi.net/wp-content/uploads/2021/09/k-p-ravi.jpg?resize=328%2C656&ssl=1)
![](https://i0.wp.com/samajamukhi.net/wp-content/uploads/2021/07/add-spoorti.jpg?resize=509%2C720&ssl=1)
![](https://i0.wp.com/samajamukhi.net/wp-content/uploads/2021/09/IMG_20210904_164937.jpg?resize=612%2C1024&ssl=1)
ಹರಿಶ್ಚಂದ್ರ ಕಾವ್ಯದ *ಕಲಿಕಾ ಕಿರುಚಿತ್ರ* ರಚಿಸಿ ನಾಡಿನ ವಿದ್ಯಾರ್ಥಿಗಳಿಗೆ ಕಾವ್ಯದ ರುಚಿ ಉಣಿಸಿ ಕಲಾತ್ಮಕ ಬದುಕಿನತ್ತ ಹೆಜ್ಜೆ ಹಾಕಲು ಕಲಿಸಿದ ಸಾಧಕ ಗೋಪಾಲ ನಾಯ್ಕರು ಸತತ ಐದು ಬಾರಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿದವರು. ಸ್ವತ: ನಾಟಕ ಕಲಾವಿದರು, ಕೃತಿ ರಚನಾಕಾರರು, ಬಹುಮುಖ ಪ್ರತಿಭಾ ಸಂಪನ್ನರು *ಪೌರ್ಣಿಮಾ ಸಾಹಿತ್ಯ ವೇದಿಕೆ* ವಾಟ್ಸಪ್ ಗ್ರೂಪ್ ರಚಿಸಿ ನಾಡಿನ ಹಿರಿಯ ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಿ ಶಿಕ್ಷಕರ ಪ್ರತಿಭೆಗೆ ಅವಕಾಶ ಕಲ್ಪಿಸಿದ ಕ್ರಿಯಾಶೀಲ ಶಿಕ್ಷಕರು. ಜಿಲ್ಲಾ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಚಿಣ್ಣರ ಅಂಗಳ ಮತ್ತು ಚಿನ್ನರ ಮೇಳದ ಯಜಮಾನರಾಗಿ ದುಡಿದು ಇಲಾಖೆಯ ಘನತೆ-ಗೌರವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಅಪ್ಪಟ ಗ್ರಾಮೀಣ ಪ್ರತಿಭಾವಂತರಾದ ಗೋಪಾಲ ನಾಯ್ಕರು ೧೯೬೭ ರಲ್ಲಿ ತಂದೆ ಕೆರಿಯಪ್ಪ ನಾಯ್ಕ, ತಾಯಿ ದೇವಮ್ಮ ನವರಿಗೆ ೬ನೇ ಮಗನಾಗಿ ಜನಿಸಿದರು. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ,ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎಡ್ ಪದವಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೧೯೯೦ ರಲ್ಲಿ ಹಾನಗಲ್ ತಾಲೂಕಿನ ಕಾಮನ ಹಳ್ಳಿಯಲ್ಲಿ ಸೇವೆ ಪ್ರಾರಂಭಿಸಿ, ೨೦೦೯ ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ತಮ್ಮ ಸೇವೆಯ ಮೊದಲ ಹೆಜ್ಜೆ ಗುರುತಿಸಿದರು.
ಮೊದಲು ಆಳಾಗುವುದನ್ನು ಕಲಿ, ಆಗ ನಾಯಕನ ಅರ್ಹತೆ ಬರುತ್ತದೆ.ಒಂದು ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರ ಮೂಲಕ ಶ್ರೇಷ್ಠ ಪ್ರತಿಫಲ ದೊರೆಯಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರವರ ಮಾತಿನಂತೆ, ಪ್ರತಿಯೊಂದು ಕೆಲಸವನ್ನು ಶಿಸ್ತಿನಿಂದ ನಿಭಾಯಿಸುವ, ಹೊಣೆಯರಿತು ನಡೆಯುವ ಗೋಪಾಲ ನಾಯ್ಕರು ಕಾಮನಹಳ್ಳಿಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ,ನಂತರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ,೨೦೦೩ ರಂದು ಸಿದ್ದಾಪುರದ ಅರೆಂದೂರು ಶಾಲೆಯಲ್ಲಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿ, ೨೦೧೪ ರಿಂದ ಸರಕಾರಿ ಪ್ರೌಢಶಾಲೆ ಹಳ್ಳಿಬೈಲ್ ಗೆ ಬಡ್ತಿ ಹೊಂದಿದರು. ಸುಮಾರು ೨೪ ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿಯೂ, ಏಳು ವರ್ಷಗಳ ಕಾಲ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಗುರುಗಳಾಗಿದ್ದಾರೆ.
ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕೈಯಾಡಿಸಿ ಸಾಹಿತ್ಯ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ರಾಜ್ಯ ಮಟ್ಟದ ಕವಿಗೋಷ್ಠಿ, ಉಪನ್ಯಾಸ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುತ್ತ ಸಂಘಟಕರಾಗಿಯೂ ಹೆಸರು ಮಾಡಿರುತ್ತಾರೆ.
ತಾರಾ ಮಂಡಲದ ಚಿತ್ರದುರ್ಗ ವಿಜ್ಞಾನ ಮತ್ತು ಮಾನವೀಯತೆ ಸಂಸ್ಥೆಯವರು ರಾಷ್ಟ್ರ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ನೀಡುವ ಸಾವಿತ್ರಿಬಾಯಿ ಫುಲೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಹಸಿರು ಶಾಲೆ ಪ್ರಶಸ್ತಿ, ಕಲಿಕಾ ಆಂದೋಲನ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಕ್ಕೆ ಭಾಜನರಾದ ಇವರು ತಮ್ಮ ವೃತ್ತಿಯ ಘನತೆ ಗೌರವ ಹೆಚ್ಚಿಸಿದ ಕ್ರಿಯಾಶೀಲ ಶಿಕ್ಷಕರು. ಸುಮಾರು ಆರು ವರ್ಷಗಳ ಕಾಲ ಎಸ್.ಎಸ್.ಎಲ್. ಸಿ. ಪರೀಕ್ಷೆಯ ಭಾಷಾ ವಿಷಯದಲ್ಲಿ ಶೇಕಡಾ ನೂರರಷ್ಟು ಸಾಧನೆ ಮಾಡಿರುವುದಕ್ಕಾಗಿ ಆಯುಕ್ತರಿಂದ ಪ್ರಸಂಶೆಗೆ ಒಳಗಾಗಿರುತ್ತಾರೆ. ಇಲಾಖೆ ನೀಡಿದ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರಾದ ಗೋಪಾಲ ನಾಯ್ಕರವರು ಶಿಕ್ಷಕ ವೃತ್ತಿ ಬದುಕಿನ ಮೌನ ಸಾಧಕರು. ತನ್ನ ವೃತ್ತಿ ಬಗೆಗಿನ ಕರ್ತವ್ಯ ಪ್ರಜ್ಞೆಯಿಂದ ಹಾಗೂ ತಾನು ತನ್ನದು ಎನ್ನುವ ಸ್ವಾರ್ಥದ ಪರಿದಿಯಿಂದಾಚೆ ಸರಿದು ಸಮಾಜಮುಖಿ ಕಾರ್ಯಗಳತ್ತ ತುಡಿಯುವ ಕ್ರಿಯಾಶೀಲ ಇಂತಹ ಆದಶ೯ ಶಿಕ್ಷಕರನ್ನು ಇಲಾಖೆ ಗುರುತಿಸಿ ಗೌರವಿಸಬೇಕಾದ ಅಗತ್ಯತೆ ಇದೆ.
*ಹೋರಾಟದಲ್ಲಿ ನಿಜವಾದ ಗೆಲುವು, ಹೋರಾಡಿ ಹೋರಾಡಿ ಸೋತರು ಚೆಲುವು* ದಿನಕರ ದೇಸಾಯಿಯವರು ನಂಬಿದ ಬದುಕಿನ ಹಾಗೆ, ಎಲೆಮರೆಯ ಕಾಯಿಯಂತೆ ತನ್ನ ವೃತ್ತಿ ಬದುಕನ್ನು ಪ್ರೀತಿಸುತ್ತಾ, ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಾ,ಮಾದರಿಯ ಗುರುವಾಗಿ ಶಿಷ್ಯವೃಂದಕ್ಕೆ ತನ್ನ ಜ್ಞಾನ ಸುಧೆ ಹರಿಸುತ್ತಾ, ಹಸಿರು ವನ ನಿರ್ಮಿಸಲೆಂದು ಶಿಕ್ಷಕ ದಿನಾಚರಣೆಯ ಶುಭಾಶಯಗಳೊಂದಿಗೆ ಹಾರೈಸುತ್ತೇವೆ.
-ಪಿ.ಆರ್.ನಾಯ್ಕ*
*ಸ.ಹಿ.ಪ್ರಾ.ಶಾಲೆ ಹೊನ್ನಾವರ*
ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರ ಮುಕುಟಕ್ಕೆ ಜಿಲ್ಲಾ ಪ್ರಶಸ್ತಿ ಗರಿ
ಸ.ಮಾ.ಹಿ..ಪ್ರಾ.ಶಾಲೆ ಬೇಡ್ಕಣಿ, ಸಿದ್ದಾಪುರ ಶಿರಸಿ ಶೈಕ್ಷಣಿಕ ಜಿಲ್ಲೆ (ಉ.ಕ.) ಇಲ್ಲಿ ಸಹ ಶಿಕ್ಷಕರಾಗಿರುವ ಕೆ.ಪಿ. ರವಿ ಸಿದ್ದಾಪುರ ತಾಲೂಕಿನಲ್ಲಷ್ಟೇ ಅಲ್ಲದೇ ಉತ್ತರಕನ್ನಡ ಜಿಲ್ಲೇಯಲ್ಲೇ ಸಾಕಷ್ಟು ಶಿಕ್ಷಕರಿಗೆ ಚಿರಪರಿಚಿತರು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ಪರಮೇಶ್ವರ ಎಚ್ ನಾಯ್ಕ ಮತ್ತು ಶ್ರೀಮತಿ ಕಾಮಾಕ್ಷಿ ನಾಯ್ಕ ಇವರ ಕುಟುಂಬ ನಾಲ್ಕನೇ ಪುತ್ರರಾಗಿದ್ದು ತಂದೆಯವರೂ ಸಹ ಶಿಕ್ಷಕರಾಗಿದ್ದರಿಂದ ತಮ್ಮ ಎಲ್ಲ ಮಕ್ಕಳನ್ನೂ ಇವರು ಶಿಕ್ಷಕರನ್ನಾರಾಗಿಯೇ ಮಾಡಿ ಸಂತೃಪ್ತ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ದಿನಾಂಕ : 02-11-1999 ರಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಮೊದಲ ಸೇವೆಯನ್ನು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರ್ಜಗಿಯಲ್ಲಿ , ಪ್ರಾರಂಭಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಘಟ್ಟಿಕೈ , ಸ.ಕಿ.ಪ್ರಾ.ಶಾಲೆ ಹೊಸಮಂಜು ಇಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ದಿನಾಂಕ 15-07-2014 ರಂದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೇಡ್ಕಣಿಗೆ ವರ್ಗಾವಣೆ ಹೊಂದಿ ಶಾಲೆಯ ಸರ್ವತೋಮುಖ ಪ್ರಗತಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಇಲ್ಲಿಯ ಸೇವೆ ಅವರಿಗೆ ಇಂದು ಜಿಲ್ಲಾ ಪ್ರಶಸ್ತಿಯನ್ನು ತಂದು ಕೊಟ್ಟಿದೆ ಎನ್ನಬಹುದು.
ಪ್ರತಿ ವರ್ಷ ಮಕ್ಕಳ ಸಂತೆ , ಮಾತೆಯರ ಮೇಳ , ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು ಸಹೋದ್ಯೋಗಿ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿಯವರ ಮತ್ತು ಊರ ದಾನಿಗಳ ಸಂಪೂರ್ಣ ಸಹಕಾರ ಪಡೆದು ಶಾಲೆಯನ್ನು ನಿಜವಾಗಿಯೂ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ಪಾಠ ಬೋಧನೆಯ ಜೊತೆ ಕ್ರೀಡೆಯಲ್ಲೂ ತರಬೇತಿ ನೀಡಿದ್ದು ಕಬಡ್ಡಿ ತಂಡವನ್ನು ಎರಡು ಸಲ ವಿಭಾಗ ಮಟ್ಟದ ವರೆಗೆ ಕರೆದೊಯ್ದಿರುತ್ತಾರೆ. ಶಾಲೆಯ ವಿದ್ಯಾರ್ಥಿಗಳು ಓಟದ ಸ್ಪರ್ಧೆ , ಗುಂಡು ಮತ್ತು ಚಕ್ರ ಮತ್ತು ಚೆಸ್ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿರುವುದರಲ್ಲಿ ಇವರ ಮಾರ್ಗದರ್ಶನವೂ ಇದೆ
ದಿನಾಂಕ 01-02-2018 ರಿಂದ ಶಾಲೆಯ ಮುಖ್ಯಾಧ್ಯಾಪಕರ ನಿವೃತ್ತಿಯ ನಂತರ ಕ್ಷೇತ್ರಶಿಕ್ಷಣಾಧಿಕಾರಿಗಳ ಆದೇಶದಂತೆ ಪ್ರಭಾರೆ ಮುಖ್ಯಾಧ್ಯಾಪಕರಾಗಿ ಎರಡೂ ವರೆ ವರ್ಷ ಕೆಲಸ ಮಾಡಿದ್ದು ಪ್ರಾರಂಭದ ವರ್ಷದಲ್ಲೇ ಶಾಲೆಯ ನೂರಾ ಹತ್ತು ವರ್ಷದ ಮಕ್ಕಳ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಿ ಇಲಾಖೆಯ ಮೇಲಾಧಿಕಾರಿಗಳ ಮೆಚ್ಚುಗೆ ಪಡೆದಿದ್ದು ವಿಶೇಷವಾಗಿದೆ. ದಾನಿಗಳನ್ನು ಹುಡುಕಿ ಶಾಲೆಯ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಪ್ರತಿ ಸೋಮವಾರ ಪಾಯಸ ವಿತರಿಸಿರುತ್ತಾರೆ. ದಾನಿಗಳಾದ ಶ್ರೀ ವಿನಾಯಕ ಹರ್ಗಿ ಮತ್ತು ಶ್ರೀಮತಿ ಲಲಿತಾ ಹರ್ಗಿ ಇವರ ಸಹಾಯದಿಂದ ಎರಡು ಟಿ.ವಿ.ಗಳನ್ನು ಅಳವಡಿಸಿ ಸ್ಮಾರ್ಟ ಕ್ಲಾಸ್ ಅಳವಡಿಸಿರುತ್ತಾರೆ. ಶ್ರೀ ಅಣ್ಣಪ್ಪ ಮಂಜುನಾಥ ನಾಯ್ಕ ಎಂಬ ಹಳೆ ವಿದ್ಯಾರ್ಥಿಯಿಂದ ಸುಮಾರು 15,000 ರೂಪಾಯಿ ಮೌಲ್ಯದ ಬ್ಯಾಂಡಸೆಟ್ನ್ನು ಶಾಲೆಗೆ ದೇಣಿಗೆಯಾಗಿ ಪಡೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. .
2018-19 ರಲ್ಲಿ ಶಾಲೆಯನ್ನು ವಿಮಾ ಶಾಲೆ ಮಾಡಿದ್ದು ಭಾರತೀಯ ಜೀವ ವಿಮಾ ನಿಗಮದಿಂದ 15,000 ರೂ. ಪ್ರೋತ್ಸಾಹದಾಯಕ ಹಣ ಬಡೆದು ಶಾಲೆಯ ಅಭಿವೃದ್ಧಿಗೆ ಬಳಸಲಾಗಿದೆ.
2019-20 ನೇ ಸಾಲಿನಲ್ಲಿ ಮಕ್ಕಳ ಕೈತೋಟವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿ ಮಕ್ಕಳಿಂದ ವಿವಿಧ ತರಕಾರಿ ಬೆಳೆದು ಅದನ್ನು ಮಕ್ಕಳ ನಿತ್ಯದ ಮಧ್ಯಾಹ್ನದ ಊಟಕ್ಕೆ ಬಳಸಿಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ. ಶಾಲೆಯ ಅಂಗಳಕ್ಕೆ ದಾನಿಗಳ ನೆರವಿನಿಂದ ಪಾಟೀಕಲ್ಲು ಹಾಕಿಸಿ ಮಕ್ಕಳಿಗೆ ಪ್ರಾರ್ಥನೆ , ಯೋಗಾಸನ ಇತ್ಯಾದಿ ಚಟುವಟಿಕೆಗೆ ಸುಸಜ್ಜಿತಗೊಳಿಸಲಾಗಿದೆ. ಇದೇ ವರ್ಷ ಶ್ರೀ ಜಿ.ಕೆ.ಹರ್ಗಿಯವರು ತಮ್ಮ ಪಿತ್ರಾರ್ಜಿತ ತೋಟದ ಆದಾಯದಲ್ಲಿ ಪ್ರತಿ ವರ್ಷ 15,000 ರೂ. ಮಕ್ಕಳ ಬಿಸಿ ಊಟಕ್ಕೆ ನೀಡುತ್ತೇನೆ ಹಾಗೂ ಇದು ತನ್ನ ಜೀವಿತ ಅವಧಿಯ ನಂತರವೂ ಮುಂದುವರೆಯುತ್ತದೆ ಎಂದು ದಾನಪತ್ರ ನೀಡುರುವುದು ಒಂದು ವಿಶೇಷವಾಗಿದೆ.
2019-20 ರ ಇನ್ಸಪೈಯರ್ ಅವಾರ್ಡ ಸ್ಪರ್ಧೆಯಲ್ಲಿ ಕು|| ಶರಧಿ ಪ ಹೆಗಡೆ ಎಂಬ ವಿದ್ಯಾರ್ಥಿಯು ಇವರ ಮಾರ್ಗದರ್ಶನದಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡು ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಸಿರುತ್ತಾನೆ. ಕೋವಿಡ್ 19 ಸಂದರ್ಭದಲ್ಲಿ ಶಾಲೆಗಳು ನಡೆಯದಿದ್ದಾಗ ತಮ್ಮನ್ನು ಸಮಾಜ ಸೇವೆಯ ಕೆಲಸ & ಇಲಾಖೆಯ ಇತರ ಕೆಲಸ ಮತ್ತು ಶಾಲೆಯಲ್ಲಿರುವ ಮಕ್ಕಳು ಕೂಡ್ರುವ ಡೆಸ್ಕ & ಬೆಂಚ್ ಗಳಿಗೆ ಮತ್ತು ಕಪಾಟುಗಳಿಗೆ ಸಹೋದ್ಯೋಗಿಗಳ ಜೊತೆಗೂಡಿ ಸುಂದರವಾಗಿ ಬಣ್ಣ ಹಚ್ಚಿ ಸಾರ್ವಜನಿಕರ , ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಈ ವಿಷಯ ಕೆಲಸವು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದನ್ನು ನೋಡಿ ಮಕ್ಕಳ ಹಕ್ಕುಗಳ ಆಯೋಗದವರು ಶಿಕ್ಷಕರ ಕೆಲಸವನ್ನು ಪ್ರಶಂಸಿಸಿ ಅಭಿನಂದನಾ ಪತ್ರವನ್ನೂ ಸಹ ನೀಡಿರುತ್ತಾರೆ.
ಹೀಗೆ ಇವರ ಸುದೀರ್ಘ 22 ವರ್ಷಗಳ ಸೇವೆಯಲ್ಲಿ ಶಾಲೆಯ ಸಹ ಶಿಕ್ಷಕನಾಗಿ , ಮುಖ್ಯಾಧ್ಯಾಪಕರ ಜವಬ್ಧಾರಿಯನ್ನು ವಹಿಸಿಕೊಂಡು , ಮಕ್ಕಳಿಗೆ ಪಾಠಬೋಧನೆ , ಮೌಲ್ಯ ಶಿಕ್ಷಣ , ಕ್ರೀಡೆ , ಶಿಸ್ತು ಮೂಢಿಸಿ ಅವರ ಬದುಕಿಗೆ ದಾರಿದೀಪವಾಗಿರುತ್ತಾರೆ. ಅಲ್ಲದೇ ಶಾಲೆಯ ಪ್ರಗತಿಗೆ ಸದಾ ಶೃಮಿಸಿರುತ್ತಾರೆ ಹಾಗೂ ಶೃಮಿಸುತ್ತಲೇ ಇದ್ದಾರೆ.
ಇವರ ಈ ಎಲ್ಲಾ ನನ್ನ ಸೇವೆಯನ್ನು ಪರಿಗಣಿಸಿ ಪ್ರಾಥಮಿಕ ಶಾಲಾ ಜಿಲ್ಲಾ ಪ್ರಶಸ್ತಿಯನ್ನು ನೀಡಿರುವುದು ಅರ್ಥ ಪೂರ್ಣವಾಗಿದೆ.
ಸಿದ್ದಾಪುರ ತಾಲೂಕಿನ ಬಿಳಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ರಾಸು ಅಭಿವೃದ್ಧಿ ನಿಧಿಯ ಶೇ.50ರಷ್ಟು ಅನುದಾನದಲ್ಲಿ ಸಂಘದ 20ಜನ ಸದಸ್ಯರಿಗೆ ‘ಕೌ’ ಮ್ಯಾಟ್ನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ವಿಜಯಕುಮಾರ್ ಭಟ್ಟ, ಉಪಾಧ್ಯಕ್ಷ ರವಿಲೋಚನ ಮಡಗಾಂವಕರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ದಯಾನಂದ ಚಿನಿವಾರ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿ ನಾಗರಾಜ ನಾಯ್ಕ ಇದ್ದರು.
ತಾಲೂಕಿನ ದೇವಾಸ ಸಕಿಪ್ರಾ ಶಾಲೆಯಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ದತ್ತಾತ್ರಯ ಭಾಗವತ ಅವರನ್ನು ಶಾಲಾ ಎಸ್ಡಿಎಂಸಿ ಸದಸ್ಯರು ಹಾಗೂ ಊರವರು ಸನ್ಮಾನಿಸಿದರು. ರಾಘವೇಂದ್ರ ನಾಯ್ಕ, ಈರಾ ಜಿ.ನಾಯ್ಕ, ಗಣಪತಿ ನಾಯ್ಕ, ರವಿ ನಾಯ್ಕ, ಅಶೋಕ ನಾಯ್ಕ, ಮಂಜುನಾಥ ನಾಯ್ಕ ಇತರರಿದ್ದರು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)