![](https://i0.wp.com/samajamukhi.net/wp-content/uploads/2020/07/2-samajamukhi-mh.jpg?resize=272%2C272&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
samajamukhi.net ನ್ಯೂಸ್ ಬೆಬ್ಸೈಟ್ ಅಥವಾ ಸುದ್ದಿ ಪೋರ್ಟಲ್ ಆಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸಿ ಜನಮ್ಮಣೆ ಗಳಿಸಿದೆ. ಈಗ ನಮ್ಮ ಸಮೂಹದಲ್ಲಿ ಸಮಾಜಮುಖಿ ಯುಟ್ಯೂಬ್ ಚಾನೆಲ್ ಗಳು, ಅಂತರ್ಜಾಲ ಆಧಾರಿತ ಘಟಕಗಳಿವೆ. ಸಮಾಜಮುಖಿ ಸಮೂಹ ಸಮಾಜದ ನಾನಾ ಕ್ಷೇತ್ರ,ಆಯಾಮಗಳ ಬಗ್ಗೆ ಮೊದಲಿನಿಂದಲೂ ವಿಶಾಲಮನೋಭಾವ ವಿಶಾಲದೃಷ್ಟಿಕೋನದಿಂದ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕನಸಿನ ಹಬ್ಬ ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಉಳಿದಂತೆ ನಮ್ಮ ಕೆಲಸ,ಯೋಜನೆಗಳು ಈಗಲೂ ಜೀವಂತವಾಗಿವೆ.
ಈ ಮಧ್ಯೆ ಸಮಾಜಮುಖಿ ಈ ವರ್ಷದಿಂದ ಪ್ರತಿಬಾರಿ ಡಿಸೆಂಬರ್ ನಲ್ಲಿ ವರ್ಷದ ವ್ಯಕ್ತಿ ಆಯ್ಕೆ ಮಾಡುವ ಹೊಸ ಪರಿಪಾಠ ಪ್ರಾರಂಭಿಸಿದೆ. ಈ ವರ್ಷದ ವ್ಯಕ್ತಿಗೆ ನಮ್ಮ ಕೊಡುಗೆ ಸಧ್ಯಕ್ಕೆ ಆಯ್ಕೆ,ಪ್ರಚಾರ ಮತ್ತು ಪ್ರಶಂಸೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ವರ್ಷದ ವ್ಯಕ್ತಿ ವಿಶೇಶ ವೈಶಿಷ್ಟ್ಯ ಅನನ್ಯತೆ ಬಗ್ಗೆ ಚರ್ಚಿಸೋಣ ಜೊತೆಗೆ ಕನಸಿನ ಹಬ್ಬದ ಬಗ್ಗೆ ಕೂಡಾ.
ಕುತೂಹಲಕ್ಕೆ ಸಮಾಜಮುಖಿ ವರ್ಷದ ವ್ಯಕ್ತಿ ಯಾರು ಎಂದು ನೀವೂ ಯೋಚಿಸಬಹುದು, ಮುಂದಿನ ದಿನಗಳಲ್ಲಿ ಈ ಆಯ್ಕೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಆದರೆ ಈ ವರ್ಷ ನಮ್ಮ ವರ್ಷದ ವ್ಯಕ್ತಿ ಮಾದರಿ ಹೀಗಿದ್ದರೆ ಚೆನ್ನ ಎಂದು ನಾವು ರಾಘವೇಂದ್ರ ರಾಜ್ ಕುಮಾರ್ ರನ್ನು ಆಯ್ಕೆ ಮಾಡಿದ್ದೇವೆ ಈ ಆಯ್ಕೆ ಯಾಕೆಂದರೆ….
ನಾವೆಲ್ಲಾ ಒಪ್ಪುವಂತೆ ಡಾ. ರಾಜ್ ಕುಮಾರ ಕನ್ನಡದ ಮಾದರಿಯಾಗಿ ಒಂದು ವ್ಯಕ್ತಿತ್ವವನ್ನು ಕಟ್ಟಿಕೊಟ್ಟವರು. ರಾಜ್ ಕುಮಾರ ಸಿನೆಮಾ ನೋಡಿ ರೈತ, ಶಿಕ್ಷಕ, ಪೊಲೀಸ್, ಅರಣ್ಯಾಧಿಕಾರಿ,ಉಪನ್ಯಾಸಕ, ಮಾದರಿ ಅಣ್ಣ,ಅಪ್ಪ ಆದವರೆಷ್ಟೋ ಲೆಕ್ಕವಿಲ್ಲ. ಇದನ್ನು ಮೀರುವಂತೆ ರಾಜಕುಮಾರ್ ರಿಗೆ ಯಾರೂ ಸರಿಸಾಟಿಯಲ್ಲ ಎನ್ನುವ ಕಾಲದಲ್ಲಿ ಜನಮಾನಸ ಗೆದ್ದ ನಿಜ ನಾಯಕ ಪುನೀತ್ ಅಪ್ಪು.
ಒಬ್ಬ ಎಳೆ ಸೆಲಿಬ್ರಿಟಿ ಮಾಡಬಹುದಾದ ಸಮಾಜಮುಖಿ ಕೆಲಸಗಳ ಸಾಧ್ಯತೆ, ಸಾಫಲ್ಯಗಳನ್ನು ವಿಸ್ತರಿಸಿದವರು ಪುನೀತ್ ರಾಜ್ ಕುಮಾರ.
ಅವರಣ್ಣ 55 ರ ಹರೆಯದಲ್ಲೂ ನಿರ್ಮಾಪಕರ ನೆಚ್ಚಿನ ನಟ ಎನ್ನುವುದಕ್ಕೆ ಅವರದ್ದೇ ಆದ ವಿಶೇಷಗಳಿವೆ. ಇರಲಿ ಶಿವರಾಜ್ ರಾಜ್ ಕುಮಾರ, ಪುನೀತ್ ಎತ್ತರಕ್ಕೆ ಏರಿಲ್ಲ ಎಂದರೆ ಅವರ ಅನನ್ಯತೆಗೆ ಧಕ್ಕೆಯೇನೂ ಅಲ್ಲ. ಭಟ್ ರಾಘವೇಂದ್ರ ರಾಜ್ಕುಮಾರ ಇದ್ದಾರಲ್ಲ. ಅವರೊಬ್ಬ ಅಸಾಮಾನ್ಯ ಮನುಷ್ಯ.
ರಾಜ್ ಕುಟುಂಬದ ಇನ್ನೊಬ್ಬ ರಾಜ್ ಕುಮಾರ್ ರೀತಿ ಇರುವ ರಾಘವೇಂದ್ರ ರಾಜ್ ಕುಮಾರ ನಟ, ಹಾಡುಗಾರ,ವ್ಯವಸ್ಥಾಪಕ. ನಟನಾಗಿ ರಾಘವೇಂದ್ರ ರಾಜ್ ಕುಮಾರ ಯಶಸ್ವಿಯಲ್ಲ, ಹಾಡುಗಾರನಾಗಿ ಪ್ರಸಿದ್ಧನಲ್ಲ ಆದರೆ ಅವರ ನಡವಳಿಕೆ, ಬದುಕಿನ ರೀತಿ ಇದೆಯಲ್ಲ ಅದಕ್ಕೆ ಅಪ್ಪು ಪುನೀತ್ ಅಷ್ಟೇ ಯಾಕೆ ರಾಜ್ ಕುಮಾರ ಕೂಡಾ ಸ್ಫರ್ಧಿಯಲ್ಲ.
ಶ್ರೀಮಂತ ಮನೆತನದ ರಾಘವೇಂದ್ರ ರಾಜ್ ಕುಮಾರ ಸಾಮಾನ್ಯ ಕುಟುಂಬದ ಹುಡುಗಿಯನ್ನು ಮದುವೆಯಾದರು. ಕೆಲವುಕಾಲದ ಸಿನೆಮಾ ಸಹವಾಸದ ನಂತರ ಅನಾರೋಗ್ಯಕ್ಕೆ ತುತ್ತಾದರು. ಆದರೆ ಬದುಕಿನುದ್ದಕ್ಕೂ ಅವರದು ಸಮತಾಭಾವ,ಸಹಜಭಾವ. ಸ್ನೇಹಜೀವ.
ಪನೀತ್ ಅಕಾಲಿಕ ಸಾವಿನ ಮೊದಲು ಕೂಡಾ ರಾಘವೇಂದ್ರ ರಾಜ್ ಕುಮಾರ್ ವ್ಯಕ್ತಿತ್ವಕ್ಕೆ ಮಾರುಹೋದವರಿದ್ದಾರೆ. ಆದರೆ ರಾಘವೇಂದ್ರ ರಾಜ್ ಕುಮಾರ ಪನೀತ್ ಸಾವಿನ ಅವಧಿ ಅದರ ನಂತರದ ಸಮಯದಲ್ಲಿ ಪ್ರದರ್ಶಿಸಿದ ಪ್ರಬುದ್ಧತೆ ಇದೆಯಲ್ಲ ಅದರಲ್ಲಿ ಅವರು ನಿಜಕ್ಕೂ ಕನ್ನಡದ ಕೋಟಿಗೊಬ್ಬನಾಗಿ ಹೊರಹೊಮ್ಮಿದರು.
ಪುನೀತ್ ಸಾವಿನ ದಿನ ಅಭಿಮಾನಿಗಳು, ಜನಸಾಮಾನ್ಯರಿಗೆ ಮನವಿ ಮಾಡಿದ ರಾಘವೇಂದ್ರ ರಾಜ್ ಕುಮಾರ್ ಅಪ್ಪು ನಮ್ಮ ಕೈತಪ್ಪಿ ಹೋಗಿಬಿಟ್ಟಿದ್ದಾನೆ ಅವನಿಗೆ ನೋವಾಗದಂತೆ ನಡೆದುಕೊಂಡು ನಮಗೆ ನೆರವಾಗಿ ಎಂದು ಪ್ರಬುದ್ಧನಾಗಿ ಕೇಳಿಕೊಂಡ ಒಂದೇ ಕೋರಿಕೆ ಕನ್ನಡಿಗರನ್ನು ಮೆದುಗೊಳಿಸಿಬಿಟ್ಟಿತು. ಆನಂತರ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ರಾಘವೇಂದ್ರ ರಾಜ್ ಕುಮಾರ ನಡೆದುಕೊಂಡ ರೀತಿ ಇದೆಯಲ್ಲ ಅದು ಜಾಗತಿಕ ಮಾದರಿ. ನೋವು ನುಂಗಿ ಅನ್ಯರ ಒಳಿತು ಬಯಸಿ ರಾಘವೇಂದ್ರ ರಾಜ್ ಕುಮಾರ ಮಾಡಿದ ಮನವಿಯ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿ ದವರು ಕೋಟ್ಯಂತರ ಜನ.
ಪರದೆ ಮೇಲೆ, ಪರದೆ ಹಿಂದೆ, ಸಾರ್ವಜನಿಕರ ಎದುರು, ತೆರೆಯ ಮರೆಯಲ್ಲಿ ಕೂಡಾ ನಿಜ ನಾಯಕ ರಾಘವೇಂದ್ರ ರಾಜ್ ಕುಮಾರ. ಪ್ರತಿವರ್ಷ ಸಮಾಜಮುಖಿ ಸಮೂಹ ಆಯ್ಕೆ ಮಾಡುವ ಸಮಾಜಮುಖಿ ವರ್ಷದ ವ್ಯಕ್ತಿ 2021 ರಾಘವೇಂದ್ರ ರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ ಮಾದರಿಯ ವ್ಯಕ್ತಿಗಳು ಮಾತ್ರ ಸಮಾಜಮುಖಿ ವಾರ್ಷಿಕ ಆಯ್ಕೆಗೆ ಅರ್ಹರು. ಅವರ ವ್ಯಕ್ತಿತ್ವ, ನಡವಳಿಕೆ ಪ್ರಶಂಸಿಸುತ್ತಾ 2021ರ ಸಮಾಜಮುಖಿ ವರ್ಷದ ವ್ಯಕ್ತಿಯನ್ನಾಗಿ ರಾಘವೇಂದ್ರ ರಾಜ್ ಕುಮಾರರನ್ನು ಆಯ್ಕೆ ಮಾಡಲು ನಮಗೂ ಕೂಡಾ ಹೆಮ್ಮೆ, ಖುಷಿ. ಅವರಿಗೆ ನಮ್ಮ ಹೃತ್ಪೂರ್ವಕ ವಂದನೆ, ಅಭಿನಂದನೆ.
ಈಗ ಉಳಿದ ಮಾತೆಂದರೆ ನೀವು ಆಯ್ಕೆ ಮಾಡುವವರಾಗಿದ್ದರೆ ರಾಘವೇಂದ್ರ ರಾಜ್ ಕುಮಾರ್ ಬಿಟ್ಟು ಬೇರೆ ಹೆಸರು ನಿಮ್ಮ ಮನದಲ್ಲಿದೆಯೆ? ಹಾಗಿದ್ದರೆ 8277517164 ಸಂಖ್ಯೆಗೆ ಕರೆಮಾಡಿ ಅಥವಾ ಮೆಸೇಜ್ ಮೂಲಕ ನಿಮ್ಮ ಆಯ್ಕೆ ದಾಖಲಿಸಿ, ನಿಮ್ಮ ಆಯ್ಕೆ, ಅಭಿಪ್ರಾಯಗಳಿಗೂ ಗೌರವ, ಮನ್ನಣೆ ಇದೆ. ಸಂ.(-ಕನ್ನೇಶ್ವರ ನಾಯ್ಕ ಕೋಲಶಿರ್ಸಿ)
‘ಅಪ್ಪು ಬಳಿ ಕೋಟ್ಯಂತರ ರೂಪಾಯಿ ಇತ್ತು, ಬಂಗಲೆಯಿತ್ತು, ದುಬಾರಿ ಕಾರುಗಳಿದ್ದವು, ಎಲ್ಲವೂ ಇತ್ತು, ಆದರೆ 5 ನಿಮಿಷ ಹೆಚ್ಚು ಸಮಯವಿರಲಿಲ್ಲ’: ರಾಘಣ್ಣ ಭಾವುಕ
ಅಪ್ಪು ಹುಟ್ಟಿದ ವರ್ಷ ನಮ್ಮ ಕುಟುಂಬಕ್ಕೆ ಎಲ್ಲಾ ಭಾಗ್ಯ ಒದಗಿಬಂತು. ಅಪ್ಪಾಜಿ ಡಾ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಬಂತು. ನಮ್ಮ ಪೂರ್ಣಿಮಾ ಎಂಟರ್ ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಹೌಸ್ ಆರಂಭ ಮಾಡಿದೆವು.
![ರಾಘವೇಂದ್ರ ರಾಜ್ ಕುಮಾರ್ Raghavendra Rajkumar](https://i0.wp.com/media.kannadaprabha.com/uploads/user/imagelibrary/2021/11/29/w900X450/R.jpg?w=760&ssl=1)
ಬೆಂಗಳೂರು: ಅಪ್ಪು ಹುಟ್ಟಿದ ವರ್ಷ ನಮ್ಮ ಕುಟುಂಬಕ್ಕೆ ಎಲ್ಲಾ ಭಾಗ್ಯ ಒದಗಿಬಂತು. ಅಪ್ಪಾಜಿ ಡಾ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಬಂತು. ನಮ್ಮ ಪೂರ್ಣಿಮಾ ಎಂಟರ್ ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಹೌಸ್ ಆರಂಭ ಮಾಡಿದೆವು.
ತಂದೆಯವರು ಈಗಿರುವ ಮನೆಯ ಎಸ್ಟೇಟ್ ಖರೀದಿಸಿದರು. ಹೀಗೆ ಅಪ್ಪು ಹುಟ್ಟಿದ ನಂತರ ಎಲ್ಲವೂ ಒಳ್ಳೆಯದಾಗುತ್ತಾ ಹೋಯಿತು.
ಅಪ್ಪು ಕೂಡ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಾ ಹೋದನು, ಚಿಕ್ಕ ಮಗುವಾಗಿದ್ದಾಗಲೇ ಅಭಿಯಿಸಿದನು, ಹಾಡಿದನು, ಪ್ರಶಸ್ತಿ ಪಡೆದುಕೊಂಡನು, ಮ್ಯಾರಥಾನ್ ಓಡಬೇಕಾದವನು 100 ಮೀಟರ್ ರೇಸ್ ನಲ್ಲಿ ಓಡಿ ಪ್ರಯಾಣವನ್ನು ಮುಗಿಸಿಬಿಟ್ಟ ಹೀಗೆ ಹೇಳಿ ಭಾವುಕರಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್.
ಕನ್ನಡ ಕಿರುತೆರೆ ಕಲಾವಿದರ ಅಸೋಸಿಯೇಷನ್ ನಗರದಲ್ಲಿ ನಿನ್ನೆ ಅಪ್ಪು ಅಮರ ಸ್ಮರಣಾ ಗೌರವಾರ್ಥ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ತಮ್ಮ ತಮ್ಮನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು.
ನನ್ನ ತಮ್ಮ 50 ವರ್ಷದಲ್ಲಿ ಮಾಡಬೇಕಾಗಿದ್ದನ್ನು 25 ವರ್ಷದಲ್ಲಿ ಮಾಡಿದ್ದ, ಅವನು ನಮ್ಮನ್ನು ಬಿಟ್ಟು ಹೋಗುತ್ತಿಲ್ಲ, ಮತ್ತೆ ಮತ್ತೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವ ಕೆಲಸ ಮಾಡಿ ಮುಗಿಸಿಬಿಟ್ಟು ಹೋಗಿದ್ದಾನೆ, ನಾವು ಒಂದೇ ತಾಯಿಯ ಗರ್ಭದಲ್ಲಿ ಹುಟ್ಟಿದ್ದರೂ ನನಗೆ ಅವನ ಗುಣ ಬರಲಿಲ್ಲ, ಕುಟುಂಬಕ್ಕೂ ಗೊತ್ತಾಗದಂತೆ ದಾನಧರ್ಮ ಮಾಡುತ್ತಿದ್ದನೆಂದರೆ ಅಂತಹ ಗುಣಕ್ಕೆ ಏನು ಹೇಳಬೇಕು ಹೇಳಿ, ಅವನು ಅಪ್ಪನಾಗಿ ನಮ್ಮನ್ನು ಬಿಟ್ಟುಹೋದ ಎಂದು ಭಾವುಕರಾದರು ರಾಘಣ್ಣ.
ಅಪ್ಪುವಿನ ಹೆಸರಲ್ಲಿ ಇಂದು ಹತ್ತಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ರಸ್ತೆಗಳಿಗೆ ಹೆಸರಿಡುತ್ತಾರೆ, ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ಗೌರವ ತೋರಿಸುತ್ತಿದ್ದಾರೆ, ಇವ್ಯಾವುದೂ ಮತ್ತೆ ಅಪ್ಪುವನ್ನು ಜೀವಂತವಾಗಿ ತರುವುದಿಲ್ಲ, ಆದರೆ ಆತನ ಮೇಲೆ ಗೌರವ, ಪ್ರೀತಿಯಿಟ್ಟು ಎಲ್ಲರೂ ಮಾಡುತ್ತಿದ್ದಾರೆ, ಇವನ್ನೆಲ್ಲ ನೋಡಿದಾಗ ಕುಟುಂಬದವರಾದ ನಮಗೆ ಮಾತೇ ಬರುತ್ತಿಲ್ಲ ಎಂದರು.
ಅಪ್ಪುವಿನ ಕೊನೆಯ ದಿನವನ್ನು ನೆನೆದ ರಾಘಣ್ಣ: ನನಗೆ ದಿನವೂ ಕಾಡುತ್ತಿರುವ ಪ್ರಶ್ನೆಯೊಂದೇ ಎಂದ ರಾಘವೇಂದ್ರ ರಾಜ್ ಕುಮಾರ್, ಅಂದು ಅಪ್ಪುಗೆ ಏನು ಕಡಿಮೆಯಾಗಿತ್ತು ಹೇಳಿ, ಕೋಟ್ಯಂತರ ರೂಪಾಯಿ ಹಣವಿತ್ತು, ಬಂಗಲೆಯಿತ್ತು, ಐಷಾರಾಮಿ ಐದಾರು ಕಾರುಗಳಿದ್ದವು, ಜನರಿದ್ದರು, ಆದರೆ 46 ವರ್ಷದ ಜೊತೆಗೆ ಇನ್ನೊಂದು 5 ನಿಮಿಷ ಸಮಯವನ್ನು ದೇವರು ಹೆಚ್ಚು ಆತನಿಗೆ ಕೊಡುತ್ತಿದ್ದರೆ ಬದುಕುತ್ತಿದ್ದನೇನೋ?
ಆಂಬ್ಯುಲೆನ್ಸ್ ಗೆ ಡಿಜಿಟಲ್ ಬೋರ್ಡ್ : ಇಲ್ಲಿ ಯಾರನ್ನು ದೂರುವುದು, ಯಾರಲ್ಲಿ ಹೇಳಿಕೊಳ್ಳುವುದು, ಪಕ್ಕದ ಮನೆಯಲ್ಲಿ ನಾನಿದ್ದೆ. ವೈದ್ಯರಲ್ಲಿ ತಪಾಸಣೆ ಮಾಡಿಸಿ ವಿಕ್ರಂ ಆಸ್ಪತ್ರೆಗೆ ಹೋಗಬೇಕೆಂದಾಗ ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಕರೆಸಿದರೆ ತಡವಾಗುತ್ತದೆ ಎಂದು ನಮ್ಮದೇ ಕಾರಲ್ಲಿ ಕರೆದುಕೊಂಡು ಹೋದೆವು. ವಿಪರೀತ ಟ್ರಾಫಿಕ್. ಒಂದು ಕಾರಣದಿಂದ ಅಪ್ಪು ಜೀವ ಹೋಗಿದೆ. ಅಂದರೆ ಒಂದು ಬಲವಾದ ಕಾರಣದಿಂದ ಅವನು ಬಿಟ್ಟು ಹೋಗಿದ್ದಾನೆ. ಈಗ ನಾವು ಸರಿಹೋಗಬೇಕು. ಆಂಬ್ಯುಲೆನ್ಸ್ ಗೆ ಡಿಜಿಟಲ್ ಬೋರ್ಡ್ ಬರಬೇಕು. ಆಂಬ್ಯುಲೆನ್ಸ್ ಯಾವ ಆಸ್ಪತ್ರೆಗೆ ಹೋಗುತ್ತಿದೆ ಎಂದು ತೋರಿಸಬೇಕು. ಆಗ ಟ್ರಾಫಿಕ್ ಪೊಲೀಸ್ ಬೇರೆಯವರಿಗೆ ಸಂಚಾರವನ್ನು ತೆರವು ಮಾಡಿಕೊಡಬೇಕು. ಅಂತಹ ವ್ಯವಸ್ಥೆ ಮಾಡಿಕೊಟ್ಟರೆ ಅನೇಕ ಜೀವವನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.
4 ನಿಮಿಷ ಬೇಗನೆ ಆಸ್ಪತ್ರೆಗೆ ಅಂದು ಅಪ್ಪು ತಲುಪುತ್ತಿದ್ದರೆ ಬದುಕುತ್ತಿದ್ದನೇನೋ, ಆಸ್ಪತ್ರೆಗೆ ಹೋಗುವ ರಸ್ತೆಗಳು ಅಗಲೀಕರಣವಾಗಬೇಕು, ಇಲ್ಲಿ ನಾನು ಸರ್ಕಾರದವರನ್ನು ದೂರುತ್ತಿಲ್ಲ, ನಮಗೇ ಜನರು ಮೊದಲು ಬದಲಾವಣೆಯಾಗಬೇಕು. ನಮ್ಮಲ್ಲಿ ಬದಲಾವಣೆ ಬಂದರೆ ನಂತರ ವ್ಯವಸ್ಥೆ ತನ್ನಿಂತಾನೇ ಬದಲಾಗುತ್ತದೆ ಎಂದರು.
ನೂರು ವರ್ಷ ಹಂದಿಯಾಗಿ ಬದುಕುವುದಕ್ಕಿಂತ ನಂದಿಯಾಗಿ ಹತ್ತು ವರ್ಷ ಬದುಕಬೇಕು ಎಂದು ತೋರಿಸಿಬಿಟ್ಟು ನನ್ನ ತಮ್ಮ ಹೊರಟುಹೋಗಿದ್ದಾನೆ ಎಂದರು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)