ಮೋಸ ಹೋದ ಮನುಷ್ಯ ಬಂಗಾರಪ್ಪ -ವಡ್ಡರ್ಸೆ

ಇಂದು ಸಾರೆಕೊಪ್ಪ ಬಂಗಾರಪ್ಪನವರ ಪುಣ್ಯಸ್ಮರಣೆಯ ದಿನ.ವಡ್ಡರ್ಸೆಯವರು ‘ನಮ್ಮವರು’ ಅಂಕಣದಲ್ಲಿ ಬಿಡಿಸಿದ್ದ ಎಸ್. ಬಂಗಾರಪ್ಪನವರ ಈ ವ್ಯಕ್ತಿಚಿತ್ರ ದೊಡ್ಡ ಪ್ರಮಾಣದಲ್ಲಿ ಪರ-ವಿರೋಧದ ಚರ್ಚೆಗೀಡಾಗಿತ್ತು.

ಮೋಸ ಹೋದ ಮನುಷ್ಯ’-ಬಂಗಾರಪ್ಪ- ವ್ಯಕ್ತಿಯ ಹುಟ್ಟಿನಿಂದ ಸಾಮಾಜಿಕ ಅಂತಸ್ತು ಗೊತ್ತಾಗುವ ಹಾಗೂ ಬೆಳವಣಿಗೆಯ ಅವಕಾಶಕ್ಕೆ ಬೇಲಿ ನಿರ್ಮಾಣವಾಗುವ ಭಾರತೀಯ ಸಮಾಜದಲ್ಲಿ ಕೆಳ ಅಂತಸ್ತಿನಲ್ಲಿ ಹುಟ್ಟುವ ವ್ಯಕ್ತಿಗೆ ತನ್ನ ಹುಟ್ಟೇ ಒಂದು ಹೊರಲಾಗದ ಹೊರೆಯಾಗುತ್ತದೆ. ಈ ಹೊರೆಯನ್ನು ಹೊತ್ತೇ ಆತ ಜೀವನ ಯಾತ್ರೆ ಮುಗಿಸಬೇಕಾಗುತ್ತದೆ. ಈ ಮಹಾ ಯಾತನೆಯನ್ನು ಬದುಕಿನುದ್ದಕ್ಕೂ ಅನುಭವಿಸಿ ಮುದುಡಿದ ಮನಸ್ಸು, ಬಾಡಿದ ಪ್ರತಿಭೆ ಹಾಗೂ ಬಾಗಿದ ಬೆನ್ನಿನಲ್ಲಿ ನೆಲ ಹಿಡಿದು ನರಳಿ ಅಸುನೀಗಬೇಕಾಗುತ್ತದೆ.ಅನಾದಿ ಕಾಲದಿಂದ ಭಾರತವನ್ನು ಬಾಧಿಸುತ್ತ ಬಂದಿರುವ ಜಾಡ್ಯವಿದು. ವ್ಯಕ್ತಿಯ ಬೆಳವಣಿಗೆಗೆ ಅಥವಾ ಮುನ್ನಡೆಗೆ ಆತನ ಸಾಮಾಜಿಕ ಅಂತಸ್ತು ಆತಂಕಕಾರಿಯಾಗಬಾರದೆಂಬ ಮಾನವೀಯ ಮೌಲ್ಯವನ್ನು ಅಂಗೀಕರಿಸಿದ ಆಧುನಿಕ ಭಾರತದಲ್ಲೂ ಈ ಜಾಡ್ಯ ಉಳಿದುಕೊಂಡು ಬಂದಿದೆ.

ವಿದ್ಯೆಯ ಮೂಲವಾದ ಮಾನಸಿಕ ವಿಕಸನ ಆಗದಷ್ಟು ಗಾಢವಾಗಿ ಈ ಜಾಡ್ಯ ನಮ್ಮ ನಡುವೆ ನಿಂತಿದೆ.ಇದೊಂದು ಜಾಡ್ಯವೆಂಬುದನ್ನು ನಾವು ಉಪಚಾರಕ್ಕಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಆಚರಣೆಯಲ್ಲಿ ಹುಟ್ಟಿನಿಂದ ಬಂದ ಅಂತಸ್ತಿಗೆ ಅಂಟಿಕೊಂಡು ಕೆಳ ಅಂತಸ್ತಿನವರನ್ನು ಕಳಪೆಯಾಗಿ ಕಂಡು ಅವರನ್ನು ತುಳಿದು ಪಾತಾಳಕ್ಕೆ ಅಟ್ಟುವ ನೀಚಕಾಯಕದಲ್ಲಿ ‘ವಾಮನ’ರಾಗುತ್ತೇವೆ. ಸಾಮಾಜಿಕ ದುರ್ಬಲರ ಬಗ್ಗೆ ಅನುಕಂಪ ತೋರಿಸುವ ಕಪಟ ನಾಟಕ ಆಡುತ್ತೇವೆ. ಅವರಿಗೆ ಆಶ್ರಯ ನೀಡುವ ಉದಾರಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡು ಮೋಸದ ಜಾಲ ಸೃಷ್ಟಿಸುತ್ತೇವೆ. ಆದರೆ ಎಂತಹ ಪರಿಸ್ಥಿತಿಯಲ್ಲೂ ದುರ್ಬಲ ಜನಾಂಗಕ್ಕೆ ಸೇರಿದ ಉತ್ತಮನನ್ನು ತಮ್ಮ ಸಮಾನನೆಂದು ಕಾಣುವ ಮಾನವೀಯ ಗುಣ ಭಾರತೀಯ ಸಮಾಜದಲ್ಲಿ ಎಂದೂ ಮೈದಳೆದಿಲ್ಲ.ಶೂದ್ರನೆಂಬ ಒಂದೇ ಕಾರಣಕ್ಕಾಗಿ ಅದಮ್ಯ ಪ್ರತಿಭೆಯ ಪ್ರತಿಮೆಯಂತಿದ್ದ ಏಕಲವ್ಯನ ಬೆರಳು ಕತ್ತರಿಸಿದ ಭಾರತೀಯ ಪರಂಪರೆ ಶೂದ್ರ ಸಮೂಹದ ಕೊರಳು ಕತ್ತರಿಸುವ ಕಾಯಕದಲ್ಲೇ ಮಲಿನವಾಗಿ ಬಂದಿದೆ.

ಎಲ್ಲ ಜನ ವರ್ಗಗಳನ್ನೂ ಆವರಿಸಿ ಉಳಿದು ಬಂದಿರುವ ಈ ಮಾನಸಿಕ ಮಾಲಿನ್ಯವೇ ಭಾರತವನ್ನು ಬಾಧಿಸುತ್ತಿರುವ ಮಹಾಶಾಪವೆಂಬುದರ ಪ್ರಜ್ಞೆ ನಮಗಾಗದಿರುವುದೇ ದುರಂತ.ಸಾಮಾಜಿಕವಾಗಿ ಕೆಳ ಅಂತಸ್ತಿನ ಒಬ್ಬ ವ್ಯಕ್ತಿಗೆ ಪ್ರತಿಷ್ಠಿತರ ಸಾಲಿನಲ್ಲಿ ಸಮನಾಗಿ ನಿಲ್ಲುವ ಮನಸ್ಸು ಬಿಚ್ಚಿ ಮಾತನಾಡುವ ಹಕ್ಕನ್ನು ಮನ್ನಿಸಲು ನಾವಿನ್ನೂ ಸಿದ್ಧರಾಗಿಲ್ಲ. ಎಲ್ಲರಂತೆ ತಲೆ ಎತ್ತಿ ತಿರುಗುವ ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ವರ್ಗದ ವ್ಯಕ್ತಿ ಅಪರಾಧಿಯಾಗಿ ಕಾಣುತ್ತಾನೆ. ಆತನ ಪೂರ್ವಿಕರನ್ನು ಪಶುಗಳಂತೆ ನಡೆಸಿಕೊಂಡ ಸಾಮಾಜಿಕ ವ್ಯವಸ್ಥೆ ಸಭ್ಯತೆಯ ಸೋಗಿನಲ್ಲಿ ಆತನ ಮೇಲೆ ಅಪವಾದದ ಗೂಬೆಕೂರಿಸುತ್ತದೆ. ಇಂತಹ ಶಾಪಗ್ರಸ್ತ ಸಾಮಾಜಿಕ ವ್ಯವಸ್ಥೆಯ ಕೈಯಲ್ಲಿ ಈಗ ಸಮೂಹ ಮಾಧ್ಯಮವೂ ಸಿಕ್ಕಿದೆ. ಇಪ್ಪತ್ತನೆಯ ಶತಮಾನದ ‘ಪಾಶುಪತಾಸ್ತ್ರ’ ಎನ್ನಿಸಿಕೊಂಡಿರುವ ಪತ್ರಿಕಾ ಮಾಧ್ಯಮ ಸಾಮಾಜಿಕ ಪ್ರಭುಗಳ ಸೇವೆಯನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ.ಈ ದೇಶದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಶೂದ್ರ ಶಕ್ತಿಯನ್ನು ವಿಕೃತಗೊಳಿಸುವ ಅಕೃತ್ಯ ಪತ್ರಿಕಾ ಮಾಧ್ಯಮ ಸೊಗಸಾಗಿ ಮಾಡಿಕೊಂಡು ಬಂದಿದೆ. ಬಾಯಿ ಬಲವುಳ್ಳ ವ್ಯವಸ್ಥೆಯ ಪ್ರಭುಗಳು ಮತ್ತು ಪತ್ರಿಕಾ ಮಾಧ್ಯಮದ ದಾಳಿಗೀಡಾದ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಈ ದೇಶದಲ್ಲಿದೆ.ಸಾಮಾಜಿಕ ವ್ಯವಸ್ಥೆಗೆ ಸಲ್ಲದ ಸಮಾಜವಾದಿ ನಾಯಕ ಗೋಪಾಲ ಗೌಡರಿಗೂ ಇದೇ ಆಗಿತ್ತು. ನಾಳಿನ ರಾಜಕೀಯವನ್ನು ಇಂದು ಕಾಣುವ ಕಣ್ಣಿದ್ದ ದೇವರಾಜ ಅರಸು ಅವರೂ ವ್ಯಕ್ತಿತ್ವ ವಿಕೃತಿಯ ಪತ್ರಿಕಾ ತಂತ್ರದಲ್ಲಿ ತತ್ತರಿಸಿದ್ದರು.ಕನ್ನಡ ನಾಡಿನ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ವ್ಯವಸ್ಥೆಯ ಪ್ರತಿಷ್ಠೆಗೆ ಸವಾಲು ಹಾಕುವ ಸಾಮಥ್ರ್ಯ ತೋರಿಸಿದ ಎಸ್ ಬಂಗಾರಪ್ಪ ಈಗ ‘ಪತ್ರಿಕಾ ಪಿಶಾಚಿಗಳ’ ಪೀಡೆಗೆ ಈಡಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸಮಾಜದಲ್ಲಿ ಬಾಯಿ ಬಲವುಳ್ಳ ಜನವರ್ಗ ‘ಈ ಮುಗ್ಧ ಮನುಷ್ಯನ ಮೇಲೆ ನಿಂದೆಯ ಮಳೆ ಸುರಿಸುತ್ತಲೇ ಬಂದಿದೆ. ಪತ್ರಿಕೆಗಳು ಅವರ ಮೇಲೆ ಅಪವಾದದ ಗೂಬೆ ಕೂರಿಸಿಕೊಂಡೇ ಬಂದಿವೆ. 1983ರ ಚುನಾವಣೆಯಲ್ಲಿ ಕಾಂಗೈ ಪಕ್ಷವನ್ನು ಸೋಲಿಸಿ ಜನತಾರಂಗದ ಸರಕಾರ ಸ್ಥಾಪನೆಗೆ ದಾರಿಮಾಡಲು ಶ್ರಮಿಸಿದ್ದೇ ಈ ವ್ಯಕ್ತಿಯ ಅಪರಾಧವಾಯಿತು. ಇಂತಹ ಅಪವಾದಗಳು-ನಿಂದೆಗಳ ಹೊರೆ ಹೊತ್ತೂ ಈ ವ್ಯಕ್ತಿ ಇಂದು ಸೆಟೆದುನಿಲ್ಲುವ ರಾಜಕೀಯ ಕಸುವು ಉಳಿಸಿಕೊಂಡಿದ್ದಾರೆ. ಈ ಕಾರಣದಿಂದ ಬಂಗಾರಪ್ಪನವರೀಗ ಹತ್ತಿರದಿಂದ ಕಾಣಬೇಕಾದ ವ್ಯಕ್ತಿಯಾಗಿ ನಮ್ಮ ಮುಂದೆ ನಿಂತಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಎಂಬ ಹಳ್ಳಿಯ ಗೇಣಿದಾರ ರೈತ ಕಲ್ಲಪ್ಪನವರ ಮಗ ಬಂಗಾರಪ್ಪ. ಆಗಿನ ದಿನಗಳಲ್ಲಿ ಅಕ್ಷರಸ್ಥರು ಅತಿ ವಿರಳವಾಗಿದ್ದ ಈಡಿಗ (ಬಿಲ್ಲವ) ಸಮಾಜದಲ್ಲಿ ಕಲ್ಲಪ್ಪ ಓದು ಬರಹ ಬಲ್ಲವರಲ್ಲಿ ಒಬ್ಬರಾಗಿದ್ದರು. ಆದರೂ ಇವರಿಗೆ ಗೇಣಿದಾರನ ಕಾರ್ಪಣ್ಯಗಳಿಂದ ಮುಕ್ತಿ ಸಿಗಲಿಲ್ಲ. ಬದುಕು ಬಡತನದ ಕುಲುಮೆಯಲ್ಲಿ ಬೆಂದರೂ ಕಲ್ಲಪ್ಪನವರ ಒಬ್ಬನೇ ಮಗ ಬಂಗಾರಪ್ಪ ಸ್ವಾಭಿಮಾನಿಯಾಗಿ-ಮೇಲೇರುವ ಬಯಕೆಯನ್ನು ಮೈಗೂಡಿಸಿಕೊಂಡು ಬೆಳೆದರು. 1950ರ ದಶಕದಲ್ಲಿ ದಿ. ಗೋಪಾಲಗೌಡರ ಮುಂದಾಳ್ತನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಗೇಣಿದಾರರ ಹೋರಾಟಕ್ಕೆ ಮೈಗೊಟ್ಟ ಯುವಕರಲ್ಲಿ ಬಂಗಾರಪ್ಪ ಒಬ್ಬರು.

ಈ ಹೋರಾಟ ಇವರ ವ್ಯಕ್ತಿತ್ವಕ್ಕೆ ಒಂದು ಹೊಸ ಕಳೆಕೊಟ್ಟಿತು.ಬೆಂಗಳೂರಿನಲ್ಲಿರುವ ಈಡಿಗ ಸಮಾಜದ ಉಚಿತ ವಿದ್ಯಾರ್ಥಿ ನಿಲಯದಲ್ಲಿದ್ದು ಕಲಿತು ಪದವಿ ಪಡೆದ ಬಂಗಾರಪ್ಪ ವಕೀಲರಾದರು. ಚಿಕ್ಕಂದಿನಿಂದಲೂ ಇವರು ನೇರ ನಡೆನುಡಿಗೆ ಪರಿಚಿತರಾಗಿದ್ದರು. ಈ ಗುಣವೇ ಅವರಿಗೆ ವಕೀಲ ವೃತ್ತಿಯಲ್ಲಿ ನೆಲೆ ಒದಗಿಸಿತು.ಸಮಾಜವಾದಿ ಚಳವಳಿಯ ಸಹಭಾಗಿತ್ವದಿಂದ ಅವರಲ್ಲಿ ಸಾರ್ವಜನಿಕ ಜೀವನ ಪ್ರವೇಶದ ಮಿಡಿತವುಂಟಾಯಿತು. 1967ರಲ್ಲಿ ಮೊದಲ ಬಾರಿಗೆ ಸೊರಬ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದರು.ಅಂದಿನವರೆಗೆ ಪ್ರತಿಷ್ಠಿತ ವರ್ಗದ ಗುತ್ತಿಗೆಯಾಗಿದ್ದ ಈ ಸ್ಥಾನವನ್ನು ಈಡಿಗ ಸಮಾಜದ ಬಂಗಾರಪ್ಪ ಸೆಳೆದುಕೊಂಡರು. 1967ರಲ್ಲಿ ವಿಧಾನಸಭೆಯ ಒಬ್ಬ ಯುವ ಸದಸ್ಯನಾಗಿ ಬಂಗಾರಪ್ಪ ವಹಿಸಿದ ಪಾತ್ರ ತುಂಬಾ ಪ್ರಭಾವಿಯಾಗಿತ್ತು. ಸಂಸದೀಯ ನಡೆವಳಿಕೆಯ ಎಲ್ಲೆ ಕಟ್ಟುಗಳಲ್ಲಿ ಅವರು ಕ್ರಾಂತಿಕಾರಿ ವಿಚಾರಗಳ ಪ್ರತಿಪಾದನೆ ಮಾಡಿ ಎಲ್ಲರ ಗಮನ ಸೆಳೆದರು. ಮತ್ತೆ ನಡೆದ ಎರಡು ಚುನಾವಣೆಗಳಲ್ಲೂ ಬಂಗಾರಪ್ಪ ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡರು. ಕ್ಷೇತ್ರದ ಜನರ ಸುಖ ದುಃಖದಲ್ಲಿ ಸಹಭಾಗಿಯಾಗಿ ಅವರ ಬದುಕಿನಲ್ಲಿ ಪೂರ್ಣವಾಗಿ ಬೆರೆಯುವ ಬುದ್ಧಿ ಬಂಗಾರಪ್ಪನವರ ರಾಜಕೀಯ ವ್ಯಕ್ತಿತ್ವವನ್ನು ಬೆಳೆಸಿತು.ರಾಜಕೀಯ ಜೀವನದಲ್ಲಿ ಜಾಣತನವನ್ನು ಒಲ್ಲದ ನಿಷ್ಠುರವಾದಿ ಬಂಗಾರಪ್ಪನವರು 1976ರಲ್ಲಿ ದಿ. ದೇವರಾಜ ಅರಸು ಪ್ರಭಾವಕ್ಕೊಳಗಾದರು. ಅರಸು ಅದಾಗಲೇ ಜಾರಿಗೆ ತಂದಿದ್ದ ಭೂಸುಧಾರಣೆ ಶಾಸನ ಇವರ ರಾಜಕೀಯ ಸ್ನೇಹಕ್ಕೊಂದು ಸೇತುವೆಯಾಯಿತು. 1978ರಲ್ಲಿ ಬಂಗಾರಪ್ಪ ಅರಸು ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾದರು. ಈ ಅವಧಿಯಲ್ಲಿ ಅವರು ಕೆಲಸ ನಿರ್ವಹಿಸಿದ ರೀತಿಯಿಂದ ಜನಸಾಮಾನ್ಯರ ಮೆಚ್ಚಿಕೆ ಗಳಿಸಿದರು. ಸಮರ್ಥ ಆಡಳಿತಗಾರನಾಗಿ ಅವರು ಎದ್ದು ಕಂಡರು. ಜನೋಪಕಾರಿಯಾದ ಕೆಲಸಗಳನ್ನು ಮಾಡಿಸುವುದರಲ್ಲಿ ಅವರು ತೋರಿಸಿದ ದಕ್ಷತೆ ಅಪೂರ್ವವಾದುದು.ರಾಜ್ಯದ ರಾಜಕಾರಣಿಗಳ ಸಮೂಹದಲ್ಲಿ ಬಂಗಾರಪ್ಪನವರಷ್ಟು ಆಡಳಿತ ಸಾಮಥ್ರ್ಯವುಳ್ಳವರು ಅನೇಕರಿರಲಾರರು.

1978ರಲ್ಲಿ ಇಂದಿರಾ ಗಾಂಧಿಯವರು ಅರಸು ಅವರನ್ನು ಅಧಿಕಾರದಿಂದ ಅಲುಗಿಸಲು ಹೂಡಿದ ತಂತ್ರದಲ್ಲಿ ಬಂಗಾರಪ್ಪನವರನ್ನು ಬಳಸಿಕೊಂಡರು. 1980ರ ಲೋಕಸಭಾ ಚುನಾವಣೆಯಲ್ಲಿ ಅರಸು ಕಾಂಗ್ರೆಸ್ ವಿರುದ್ಧ ಸೆಣಸಾಟದಲ್ಲಿ ಇಂದಿರಾ ಕಾಂಗ್ರೆಸ್ಸಿಗೆ ಹಿಂದುಳಿದ ವರ್ಗಗಳ ರಾಜಕೀಯ ಆಕಾಂಕ್ಷೆಯ ಸಂಕೇತವಾಗಿದ್ದ ಬಂಗಾರಪ್ಪ ಬಹಳ ಉಪಕಾರಿಯಾದರು.ಆದರೆ ಅರಸು ಸಂಪುಟ ಉರುಳಿ ಕಾಂಗೈ ಸರಕಾರ ಸ್ಥಾಪನೆಯ ಅವಕಾಶ ಬಂದಾಗ ಅವರಿಗೆ ಗುಂಡೂ ರಾವ್ ಹತ್ತಿರದ ಬಂಧುವಾದರು. ರಾಜಕೀಯ ಹಿನ್ನೆಲೆಯಾಗಲೀ-ಮುನ್ನೋಟವಾಗಲೀ ಇಲ್ಲದ ಗುಂಡೂವಾರ್ ಸಂಪುಟದಲ್ಲಿ ಬಂಗಾರಪ್ಪನವರಿಗೆ ಹೆಚ್ಚು ಕಾಲ ಉಳಿಯಲಾಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಅವರಿಗೆ ಇರಲಾಗಲಿಲ್ಲ. ಆಗ ಅರಸು ನಿಧನರಾಗಿದ್ದರು. ಅವರು ಸ್ಥಾಪಿಸಿದ ಕರ್ನಾಟಕ ಕ್ರಾಂತಿರಂಗವಿತ್ತು. ಗುಂಡೂರಾವ್ ಹಾವಳಿಯಲ್ಲಿ ಕಾಂಗೈ ಪಕ್ಷದ ಕಳೆಗುಂದಿತ್ತು.1983ರ ವಿಧಾನಸಭೆ ಚುನಾವಣೆ ಹತ್ತಿರಬಂತು. ಪಕ್ಷಾಂತರದ ಪಿಡುಗಿನಲ್ಲಿ ಬಸವಳಿದು ಬಿದ್ದಿದ್ದ ಜನತಾ ಪಕ್ಷಕ್ಕೆ ಚುನಾವಣಾ ಕಣಕ್ಕಿಳಿಯಲೊಂದು ವೇದಿಕೆ ಬೇಕಿತ್ತು. ಅರಸು ನೆನಹುಗಳ ನೆರಳಲ್ಲಿ ಬಂಗಾರಪ್ಪ ಪ್ರವೇಶದಿಂದ ಚೇತನಗೊಂಡ ಕರ್ನಾಟಕ ಕ್ರಾಂತಿರಂಗ ಜನತಾ ನಾಯಕರ ಕಣ್ಣಿಗೆ ಆಕರ್ಷಕ ರಂಗವಾಗಿ ಗೋಚರಿಸಿತು.

ಕಾಂಗೈ ಪಕ್ಷವನ್ನು ಸೋಲಿಸಲು ಜನತಾ ಮತ್ತು ಕ್ರಾಂತಿರಂಗದ ಕೂಡುವಿಕೆಯಿಂದ ಜನತಾರಂಗ ರೂಪುಗೊಂಡಿತು.ಈ ಜನತಾರಂಗಕ್ಕೆ ‘ನೀವೇ ನಾಯಕರು’ ಎಂದು ಎಲ್ಲರೂ ಹೇಳಿದರು. ಜನತಾ ಅಧ್ಯಕ್ಷ ಚಂದ್ರಶೇಖರ್ ಅವರೂ ‘ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ನೀವು ಪ್ರವಾಸ ಮಾಡಬೇಕು. ಜನತಾ ರಂಗ ಗೆದ್ದರೆ ನೀವೇ ನಾಯಕರು ಎಂಬ ಸಂದೇಶ ಎಲ್ಲ ಮತದಾರರಿಗೂ ಮುಟ್ಟಬೇಕು’ ಎಂದರು.ಅನ್ಯರನ್ನು ನಂಬಿಸಿ ಮೋಸ ಮಾಡುವ ಸ್ವಭಾವ ಬಂಗಾರಪ್ಪನವರದಲ್ಲ. ರಾಜಕೀಯದಲ್ಲಿ ಇರಲೇಬೇಕೆಂದು ಎಲ್ಲರೂ ಹೇಳುತ್ತಿರುವ ಕಪಟಾಚಾರ ಈ ವ್ಯಕ್ತಿಗೆ ಗೊತ್ತಿಲ್ಲ. ದೆಹಲಿಯಲ್ಲಿರುವವರು-ಬೆಂಗಳೂರಿನಲ್ಲಿ ಸೇರಿದವರು ಎಲ್ಲರೂ ‘ನೀವೇ ನಾಯಕರು’ ಎಂದರು. ಹೌದೆಂದು ನಂಬಿದರು ಈ ‘ಹುಂಬ’.ಚುನಾವಣಾ ಪ್ರಚಾರಕ್ಕೆ ಸೊಂಟಕಟ್ಟಿದರು. ಸುಮಾರು 30 ದಿನಗಳ ಅವಧಿಯಲ್ಲಿ 210 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾಂಗೈ ವಿರುದ್ಧ ಅಲೆ ಎಬ್ಬಿಸಿದರು. 1971ರಿಂದ ಕಾಂಗೈಗೆ ಅಂಟಿಕೊಂಡಿದ್ದ ದುರ್ಬಲ ವರ್ಗದಲ್ಲಿ ಒಂದು ಭಾಗವನ್ನು ಸೆಳೆದು ಜನತಾರಂಗದ ಬುಟ್ಟಿಗೆ ಹಾಕಿದರು. ಜನತಾ ರಂಗದ ಎಲ್ಲ ಅಭ್ಯರ್ಥಿಗಳೂ ಬಂಗಾರಪ್ಪನವರ ಭಾವಚಿತ್ರವನ್ನು ಎದೆಗೆ ಅಂಟಿಸಿಕೊಂಡು ದುರ್ಬಲರ ಮತಯಾಚನೆ ಮಾಡಿದರು.‘ಬಂಗಾರಪ್ಪನವರೇ ನೀವು ಒಂದು ಕ್ಷಣವಾದರೂ ನಮ್ಮೂರಿನ ಜನರಿಗೆ ಮುಖ ತೋರಿಸಬೇಕು’ ಎಂದು ಜನತಾರಂಗದ ಅಭ್ಯರ್ಥಿಗಳೆಲ್ಲಾ ಅಂಗಲಾಚಿದವರೇ, ತಮ್ಮ ಸ್ವಂತ ಕ್ಷೇತ್ರಕ್ಕೆ ಒಂದು ದಿನವೂ ಹೋಗದೆ ಜನತಾರಂಗದ ವಿಜಯಕ್ಕೆ ದುಡಿದ ಈ ವ್ಯಕ್ತಿ ಬೆಂಗಳೂರು ಸೇರುವುದರೊಳಗೆ ಪರಿಸ್ಥಿತಿ ಬದಲಾಗಿತ್ತು. ಇವರ ಹೆಸರು ಹೇಳಿ ಗೆದ್ದು ಬಂದ ಅನೇಕ ಮಂದಿ ಶಾಸಕರಿಗೆ ಇವರ ಗುರುತೇ ಸಿಗಲಿಲ್ಲ. ಅಂದಿನವರೆಗೆ ಯಾರಿಗೂ ವಿಳಾಸ ಗೊತ್ತಿಲ್ಲದ ನಾಯಕರೊಬ್ಬರು ಕಾದಿದ್ದರು.ಇವರ ತಂದೆ ಕಲ್ಲಪ್ಪ ಕಷ್ಟಪಟ್ಟು ಬೆಳೆದ ಬತ್ತವನ್ನು ದನಿ ಕಟಾವುಮಾಡಿಕೊಂಡು ಹೋಗುತ್ತಿದ್ದರಂತೆ. ಅದು ಅಂದಿನ ಕಾಲ. ಈಗ ಕಾಲ ಬದಲಾದರೂ ವ್ಯವಸ್ಥೆ ಬದಲಾಗಿಲ್ಲ. ಆ ಕಲ್ಲಪ್ಪನ ಮಗ ಬಂಗಾರಪ್ಪ ಗೆಲ್ಲಿಸಿದ ಜನತಾರಂಗಕ್ಕೆ ನಾಯಕರೊಬ್ಬರು ಕಾದು ಕುಳಿತಿದ್ದರು. ಇಷ್ಟಾದರೂ ಈ ದುರ್ಬಲ ವರ್ಗದ ನಾಯಕನಿಗೆ ಸಿಕ್ಕಿದ್ದು ಅಪವಾದ-ನಿಂದೆ. ‘ಮುಖ್ಯಮಂತ್ರಿ ಆಗಬೇಕೆಂದು ಹಟತೊಟ್ಟರು. ಉಪಮುಖ್ಯಮಂತ್ರಿ ಸ್ಥಾನ ಕೊಡ್ತೇವೆ ಅಂದರೂ ಬೇಡವೆಂದರು’ ಎಂಬ ಆಪಾದನೆ. ಇದನ್ನು ತುತ್ತೂರಿ ಊದಲು ಉತ್ಸುಕರಾದ ಪತ್ರಕರ್ತರ ಸಮೂಹವೇ ಇತ್ತು.ವ್ಯವಸ್ಥೆ ನಡೆಸಿದ ಈ ಸತತ ಧಾಳಿಯಲ್ಲಿ ಬೇರೆ ಯಾರಾಗಿದ್ದರೂ ದೃತಿಗೆಟ್ಟು ಮೂಲೆ ಹಿಡಿಯುತ್ತಿದ್ದರು. ಬಂಗಾರಪ್ಪ ಸೆಟೆದು ನಿಲ್ಲುವ ಚೈತನ್ಯವನ್ನು ಉಳಿಸಿಕೊಂಡಿದ್ದಾರೆ. ಈಗ ಮತ್ತೆ ಕಾಂಗೈ ಸೇರಿ ಅದನ್ನು ಗೆಲ್ಲಿಸಲು ಹೊರಟ್ಟಿದ್ದಾರೆ. ಅಲ್ಲಿಯೂ ಅವರ ಜನಪ್ರಿಯತೆಯನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವವರ ಹಿಂಡಿದೆ. ನಾಳೆಯೂ ಅವರನ್ನು ಕಾಂಗೈ ಕೂಟ ನಂಬಿಸಿ ವಂಚಿಸುವ ಸಾಧ್ಯತೆ ಇದೆ. 23-12-1984 (-ವಡ್ಡರ್ಸೆ ರಘುರಾಮ ಶೆಟ್ಟಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *