

ಮಧುರ ತನ್ನ ಎರಡೆರಡು ಕುಟುಂಬಗಳ ಕತೆಯನ್ನು ಒಬ್ಬಳೇ ಹೇಳುತ್ತಾ ಹೋಗುತ್ತಾಳೆ. ಈ ಕತೆ ಹೇಳುತ್ತಾ ಮುಂದೆ ಮಂಡೋದರಿಯಾಗಿ ಲೌಕಿಕಕ್ಕೆ ಪುರಾಣ, ಚರಿತ್ರೆಯ ಕತೆಯ ಹೂಗಳನ್ನು ಪೋಣಿಸುತ್ತಾಳೆ. ಮೇಲ್ನೋಟಕ್ಕೆ ಇದು ಆಧುನಿಕ ಹೆಣ್ಣೊಬ್ಬಳ ಸ್ವಗತ, ಆದರೆ ಸ್ವಗತದಲ್ಲೇ ವರ್ತಮಾನವನ್ನು ಹೇಳುತ್ತಾ ಚರಿತ್ರೆಯೊಳಗೆ ನುಗ್ಗಿ ಮನುಕುಲದ ಇತಿಹಾಸ, ಪುರಾಣ, ವಾಸ್ತವಗಳಲ್ಲೆಲ್ಲಾ ಹೆಣ್ಣು ಬಲಿಪಶುವಾದ್ದನ್ನು ಹೇಳುವಾಗ ವನಿತಾ ರಾಜೇಶ್ ನಮ್ಮನ್ನು ತಮ್ಮದಲ್ಲದ ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತಾರೆ. ಇದು ಮೊದಲ ಕಥಾನಕ.

ಎರಡನೆಯದ್ದೂ ಇಂಥದ್ದೇ ಕಥನ, ಇಲ್ಲಿ ಮಾಧವಿ ತನ್ನ ಒಡಲಿನ ಪ್ರಸವದ ಕತೆಯನ್ನು ಹೇಳುತ್ತಾ ಹೋಗುತ್ತಾಳೆ. ಒಬ್ಬ ರಾಜ ತನ್ನ ಗುರುಗೌರವಕ್ಕಾಗಿ ಮಗಳನ್ನು ಕೊಡುತ್ತಾನೆ. ಮಗಳನ್ನು ಪಡೆದಾತ ಆಕೆಯನ್ನು ಕುದುರೆಕೊಳ್ಳಲು ಜೂಜಿನ ಪಣವಾಗಿ ಬಳಸುತ್ತಾ ಆಕೆಗೆ ನಾಲ್ಕುಮಕ್ಕಳ ನಂತರ ಸ್ವಯಂವರ ಏರ್ಪಡಿಸುತ್ತಾನೆ. ನಾಲ್ಕು ರಾಜರಿಗೆ ಮಕ್ಕಳನ್ನು ಹಡೆದುಕೊಟ್ಟ ರಾಜಕುಮಾರಿ ಕೊನೆಗೆ ಸ್ವಯಂವರವನ್ನು ಬಹಿಷ್ಕರಿಸುತ್ತಾಳೆ.
ಇವೆರಡು ಪ್ರಸಂಗಗಳು, ಕತೆಗಳನ್ನು ಕತೆಗಳೆನ್ನಿ, ಕಾದಂಬರಿಗಳೆನ್ನಿ, ರಂಗಪ್ರಸ್ತುತಿಗಳೆನ್ನಿ ತಿರುಳು ಪುರುಷಪ್ರಧಾನ ವ್ಯವಸ್ಥೆಯ ಬಲಿಪಶುವಾದ ಹೆಣ್ಣು. ಹೆಣ್ಣನ್ನು ಮುಖ್ಯಭೂಮಿಯಲ್ಲಿಟ್ಟುಕೊಂಡ ಸಿದ್ಧವಾದ ಈ ಎರಡು ನಾಟಕಗಳಲ್ಲಿ ಮೊದಲನೆಯದು ಮಧುರ ಮಂಡೋದರಿ ಮೈಸೂರಿನ ರಂಗಬಂಡಿ ಪ್ರಸ್ತುತಪಡಿಸಿದ ಈ ಏಕವ್ಯಕ್ತಿ ನಾಟಕ ಪ್ರಸಂಗದ ನಿರ್ಧೇಶನ ಮತ್ತು ವಿನ್ಯಾಸ ಮಧು ಮಳವಳ್ಳಿಯವರದು. ಅಭಿನಯಿಸಿದ ವನಿತಾ ರಾಜೇಶ್ ಒಂದು ತಾಸಿಗೂ ಅಧಿಕ ಅವಧಿಯುದ್ದಕ್ಕೂ ನಿರರ್ಗಳವಾಗಿ ಸಂಭಾಷಣೆ ಹೇಳತ್ತಾ ಅಭಿನಯಿಸಿದರೂ ದಣಿವು ಕಾಣದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ . ಉಳಿದಂತೆ ಕಥಾಹಂದರ ತಲುಪಿಸುವ ಸಂದೇಶ ಮನುಷ್ಯತ್ವದ ಬುಡ ಮುಟ್ಟುತ್ತದೆ ಎನ್ನುವುದು ಈ ರಂಗಪ್ರಸ್ತುತಿಯ ಹೆಗ್ಗಳಿಕೆ.
ಎರಡನೇ ದಿನದ ರಂಗಪ್ರಸ್ತುತಿ ಮಾಧವಿ, ಬೆಂಗಳೂರಿನ ಕೈವಲ್ಯ ಕಲಾ ಕೇಂದ್ರ ಪ್ರಸ್ತುತಪಡಿಸಿದ ಡಾ. ಶ್ರೀಪಾದ ಭಟ್ ವಿನ್ಯಾಸ ನಿರ್ಧೇಶನದ ನಾಟಕ ಸುಧಾ ಅಡಕುಳರ ಮಾಧವಿ. ಪುರಾಣದ ಕಥಾಹಂದರದ ಈ ರಂಗಪ್ರಸ್ತುತಿಯ ಮುಖ್ಯ ಭೂಮಿಕೆ ಹೆಣ್ಣು. ಮಾಧವಿ ಹಡೆಯುವ ಯಂತ್ರವಾಗಿ ರಾಜಸತ್ತೆಯಲ್ಲಿ ಶೋಷಣೇಗೊಳಪಡುವ ಕಥಾ ಹಂದರ ಹೀಗೂ ಉಂಟೆ…? ಎನ್ನುವ ಉದ್ಘಾರಕ್ಕೆ ಕಾರಣವಾದರೆ ಅದು ಕತೆಯ ಶಕ್ತಿ ಮತ್ತು ಸತ್ವ.
ನಿರ್ಧೇಶಕ ಶ್ರೀಪಾದ ಭಟ್ ಹಲವು ಉಪಮೆಗಳು, ರಂಗಪರಿಕರಗಳೊಂದಿಗೆ ಸಂಗೀತ ಉಪಕರಣಗಳನ್ನು ಜೋಡಿಸಿರುವುದು ವಿಶೇಶ ಪರಿಣಾಮ ಉಂಟುಮಾಡುತ್ತದೆ. ಅಭಿನಯಿಸಿದ ಶರತ್ ಬೋಪಣ್ಣ ಒಂದು ಹೆಜ್ಜೆ ಮುಂದಾದರೆ.. ದಿವ್ಯಶ್ರೀ ನಾಯಕ ದುಪ್ಪಟ್ಟು. ಮೌನದಲ್ಲಿ ಪೊರೆಯುವ ಗರ್ಭದ ಹಿಂದೆ ಇರುವ ಶೋಷಣೆಯ ಯಾತನೆಯನ್ನು ಆಂಗಿಕಾಭಿನಯದಲ್ಲಿ ತೋರಿಸುವಾಗ ಸಾಕ್ಷಾತ್ ಮಾಧವಿಯಾಗುವ ದಿವ್ಯಶ್ರೀ ನಿಜಕ್ಕೂ ಶರೀರ, ಶಾರೀರಗಳ ತಾದ್ಯಾತ್ಮದ ಜುಗಲ್ ಬಂಧಿಯಲ್ಲಿ ಗೆಲ್ಲುತ್ತಾರೆ.
ಈ ಎರಡು ರಂಗಪ್ರಸ್ತುತಿಗಳನ್ನು ನಮ್ಮೂರಿನಲ್ಲಿ ನೋಡುವಂತೆ ಮಾಡಿದ್ದು ಸಿದ್ಧಾಪುರದ ರಂಗಸೌಗಂಧ, ರಂಗಸೌಗಂಧದ ಎರಡು ದಿವಸಗಳ ರಾಜ್ಯಮಟ್ಟದ ನಾಟಕೋತ್ಸವ ಹಲವು ಕೋನಗಳಿಂದ ಹಿತಕರ ಎನಿಸಿದ್ದು ಅವರೊಂದಿಗಿನ ರಂಗಾಸಕ್ತರ ಅಭಿರುಚಿಯಿಂದ ಎಂದರೆ ಕೃತಜ್ಞತೆ ರಂಗಸೌಗಂಧಕ್ಕೂ ತಲುಪಿದಂತೆ. (ಪ್ರೇಕ್ಷಕ ಕನ್ನೇಶ್)




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
