

ನೀರು ಮತ್ತು ಅಭಯಾರಣ್ಯ ಎಲ್ಲೆಲ್ಲೂ ಶರಾವತಿ
ಮಲೆನಾಡು ಮತ್ತು ಕರಾವಳಿಯ ಜೀವಜಲದ ಕೊಂಡಿಯಾದ ಶರಾವತಿ ಈಗ ಎಲ್ಲೆಡೆ ಚರ್ಚೆಯ ವಿಷಯ.
ಶಿವಮೊಗ್ಗ ಅರಣ್ಯ ವೃತ್ತದ ಶರಾವತಿ ಅರಣ್ಯಕ್ಕೆ ಶರಾವತಿ ಅಭಯಾರಣ್ಯ ಎಂದು ಹೆಸರು. ಈ ಅಭಯಾರಣ್ಯದ ವ್ಯಾಪ್ತಿ ಮೊದಲು ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿತ್ತು. ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿದ್ದ ಉತ್ತರ ಕನ್ನಡದ ನಾಗವಲ್ಲಿ ಸೇರಿದಂತೆ ಅನೇಕ ದಟ್ಟಾರಣ್ಯ ಪ್ರದೇಶ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿರಲಿಲ್ಲ.
ಇದೇ ಗಡಿಯ ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶ ಅಭಯಾರಣ್ಯಕ್ಕೆ ಸೇರಿದ ವ್ಯಾಪ್ತಿಯ ಅರಲಗೋಡಿನಲ್ಲೇ ಎರಡು ಡಜನ್ ಜನ ಮಂಗನಕಾಯಿಲೆಗೆ ತುತ್ತಾಗಿದ್ದು. ಇದೇ ಪ್ರದೇಶಕ್ಕೆ ಹೊಂದಿಕೊಂಡ ಸಿದ್ಧಾಪುರ ತಾಲೂಕಿನ ಕೆಲವೆಡೆ ಜನ ಪ್ರಾಣಿಗಳಿಗಿಂತ ಕೀಳಾಗಿ ಹುಳುಗಳಂತೆ ಸತ್ತಿದ್ದಾರೆ.
ಆಗ ಕೂಡಾ ಸರ್ಕಾರ, ಶರಾವತಿ ಅಭಯಾರಣ್ಯ, ರಾಜ್ಯ ವನ್ಯಜೀವಿಮಂಡಳಿ ಚಕಾರ ಎತ್ತಲಿಲ್ಲ.
ಯಾಕೆಂದರೆ, ಸರ್ಕಾರ ಮತ್ತು ಅಭಯಾರಣ್ಯ, ವನ್ಯಜೀವಿ ಕಾನೂನುಗಳು ವನ್ಯಮೃಗ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತವೆಯೆ ಹೊರತು ಅಲ್ಲಿನ ಮನುಷ್ಯರ ಬಗ್ಗೆಯಲ್ಲ.
ಈ ಅನುಭವಗಳಿಂದ ಪಾಠಕಲಿತಿರುವ ಉತ್ತರ ಕನ್ನಡದ ಜನತೆ ತಮ್ಮ ಕೆನರಾ ಅರಣ್ಯ ವೃತ್ತದ 30 ಸಾವಿರ ಹೆಕ್ಟೆರ್ ಅರಣ್ಯ ಪ್ರದೇಶವನ್ನು ಅನಾಮತ್ತಾಗಿ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ತರುವುದು ಬೇಡ ಎನ್ನುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 60 ರಷ್ಟು ಅರಣ್ಯ, 70% ಅರಣ್ಯಭೂಮಿ ಇದೆ. ಈ ಅರಣ್ಯ ಭೂಮಿಯನ್ನು ಜಿಲ್ಲೆಯ ಜನರಿಗೆ ಸಾಗುವಳಿಗೆ ಕೊಡಿ ಎಂದು 1980 ರ ದಶಕಕ್ಕಿಂತ ಮೊದಲಿನಿಂದಲೂ ಡಾ.ದಿನಕರ ದೇಸಾಯಿ ನೇತೃತ್ವ, ಕಾಲದಿಂದಲೂ ಹಕ್ಕೊತ್ತಾಯದ ಬೇಡಿಕೆ ಜೀವಂತವಾಗಿದೆ.
ಆದರೆ, ಆಳುವ ದೊರೆಗಳಿಗೆ ಪ್ರಭುತ್ವಕ್ಕೆ ಅದು ಕೇಳುತ್ತಿಲ್ಲ.
ಈಗ ಈ ಅರಣ್ಯಭೂಮಿಯನ್ನೇ ಶರಾವತಿ ಅಭಯಾರಣ್ಯಕ್ಕೆ ನೀಡಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿಸಿ ಎಂದು ಅಧಿಕಾರಿಗಳು ಶರಾ ಬರೆದು ಬಿಟ್ಟಿದ್ದಾರೆ.
ಈ ಬೆಳವಣಿಗೆ ಈಗಿನ ಲೋಕಸಭೆ ಚುನಾವಣೆ ಸಮಯದಲ್ಲಿ ನಡೆದು ಈಗ ಆದೇಶವೂ ಆಗಿದೆ. ಇದರ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಲಾಗಾಯ್ತಿನ ಅರಣ್ಯವಾಸಿಗಳಾದ ನಮ್ಮ ಕಾಡನ್ನು ಅಭಯಾರಣ್ಯ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟು ನಾವು ನಾಡು ಸೇರಲು ಸಾಧ್ಯವಿಲ್ಲ. ಎಂದಿದ್ದಾರೆ.
ವಿಚಿತ್ರವೆಂದರೆ, ಈ ಬಗ್ಗೆ ಶಿರಸಿ ಶಾಸಕರು, ಉತ್ತರ ಕನ್ನಡ ಸಂಸದರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತುಟಿಪಿಟಿಕ್ಕೆಂದಿಲ್ಲ. ಕ್ಷೇತ್ರದ ಜನತೆ ಬವಣೆಯಲ್ಲಿದ್ದರೆ ಈ ಜನಪ್ರತಿನಿಧಿಗಳು ಪಿಟೀಲು ಬಾರಿಸುತ್ತಿರುವಂತೆ ಭಾಸವಾದರೆ ಅದಕ್ಕೆ ಹೊಣೆ ಈ ಜನಪ್ರತಿನಿಧಿಗಳನ್ನು ಆಯ್ಕೆಮಾಡಿದ ಮತದಾರಲ್ಲವೆ?.
ಶರಾವತಿ ನೀರು-
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನವಸತಿ ಸೇರಿದ ಅರಣ್ಯ ಪ್ರದೇಶವನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಮಾಡಲು ಸರ್ಕಾರ ಮುಂದಾಗಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿಯ ನೀರನ್ನು ಬೆಂಗಳೂರಿಗೆ ಸಾಗಿಸುವ ಹೊಸ ಯೋಜನೆಗೆ ಸರ್ಕಾರ ಮುಂದಾಗಿದೆ. ಸಾಗರದಿಂದ ಶರಾವತಿ ನೀರನ್ನು ಬೆಂಗಳೂರಿಗೆ ನೀಡುವ ಯೋಜನೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದೆ.
ನಾ.ಡಿಸೋಜಾ, ಪ್ರಸನ್ನ, ಚಾರ್ವಾಕ ರಾಘವೇಂದ್ರ, ಹರ್ಷಕುಗ್ವೆ ಸೇರಿದ ತಂಡ ಶನಿವಾರ ಸಾಗರದಲ್ಲಿ ಮತ್ತು ಸೋಮವಾರ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ಕರೆದು ಸಮಾಲೋಚನೆ ಮಾಡಿ ಜುಲೈನಲ್ಲಿ ಶಿವಮೊಗ್ಗ ಬಂದ್ಗೂ ಕರೆ ನೀಡಿದೆ.
ಬೆಂಗಳೂರು ಸೇರಿದ ಇಡೀ ರಾಜ್ಯ, ದೇಶ, ಜಗತ್ತಿಗೇ ನೀರು ಬೇಕು. ಆದರೆ, ಸಹಜ ಜೀವವೈವಿಧ್ಯ, ಪ್ರಾಕೃತಿಕ ಅನುಕೂಲಕ್ಕೆ ಸೆಡ್ಡು ಹೊಡೆದು ಬೃಹತ್ ಯೋಜನೆಗಳ ಮೂಲಕ ಜನ, ಪರಿಸರಕ್ಕೆ ತೊಂದರೆ ಮಾಡುವ ಬದಲು ಮಳೆ ಕೊಯ್ಲು, ಲವಣಯುಕ್ತ ನೀರಿನ ಶುದ್ಧೀಕರಣಗಳ ಮೂಲಕ ಈ ಅಗತ್ಯ ಪೂರೈಸಿಕೊಳ್ಳಬಹುದಲ್ಲವೆ? ಎನ್ನುವ ಸಲಹೆ ವ್ಯಕ್ತವಾಗಿದೆ.
ಉತ್ತರ ಕನ್ನಡ ಶಿವಮೊಗ್ಗಗಳಲ್ಲಿ ಅಲ್ಲಿಯ ನೀರು, ಪರಿಸರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅನಾವೃಷ್ಟಿ, ಅತಿವೃಷ್ಟಿಗಳೆಲ್ಲಾ ಆಗುತ್ತಿವೆ. ಈ ನೀರು ಕನಿಷ್ಟ ಉತ್ತರ ಕನ್ನಡ ಶಿವಮೊಗ್ಗಗಳಲ್ಲಿ ಸದ್ಬಳಕೆ ಯಾದರೆ ಈ ಜಿಲ್ಲೆಗಳ ಬವಣೆ ನೀಗುತ್ತದೆ.
ಆದರೆ ಸರ್ಕಾರ ಈ ಜಿಲ್ಲೆಗಳು ಇಲ್ಲಿಯ ಜೀವವೈವಿಧ್ಯಗಳ ಮಹತ್ವ ಪರಿಗಣಿಸದೆ ಶರಾವತಿ, ವರದಾ, ಕಾಳಿ ನದಿಗಳ ನೀರಿನ ಸದ್ಬಳಕೆಯಿಂದ ಈ ಜಿಲ್ಲೆಗಳ ಜನಜೀವನ ಸುಧಾರಿಸದೆ, ಬೆಂಗಳೂರಿನ ಜನರ ನೀರಿಗಾಗಿ ಇಲ್ಲಿಯ ಜನರ ನಾಳೆಗಳಿಗೆ ಕಂಟಕವಾಗುತ್ತಿದೆ.
ಈ ಹಿನ್ನೆಲೆಗಳಲ್ಲಿ ಸಾರ್ವಜನಿಕರ ಹೋರಾಟ, ಪ್ರತಿಭಟನೆಗಳು ಎರಡೂ ಜಿಲ್ಲೆಗಳಲ್ಲಿ ನಡೆದಿವೆ. ಈ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಜನಪ್ರತಿನಿಧಿಗಳು ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಉತ್ತರ ಕನ್ನಡದ ಪ್ರಮುಖ ರಾಜಕಾರಣಿಗಳು, ಜನಪ್ರತಿನಿಧಿಗಳು ನಿದ್ದೆಹೋದಂತಿದ್ದಾರೆ. ಎರಡು ಜಿಲ್ಲೆಗಳ ಲಕ್ಷಾಂತರ ಜನ ಹೋರಾಟ, ಪ್ರತಿಭಟನೆ ಎನ್ನುತಿದ್ದರೆ, ಕೆಲವು ರಾಜಕಾರಣಿಗಳು ಏನೂ ಆಗಿಲ್ಲದಂತಿರುವುದು ಏನು ಸೂಚಿಸುತ್ತಿದೆ?


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
