ಸರ್ಕಾರ ಜಾರಿಗೆ ತಂದಿರುವ ಸಿ&ಆರ್ (ವೃಂದ ಮತ್ತು ನೇಮಕಾತಿ ನಿಯಮ) ನಿಯಮ ಸೇರಿದಂತೆ ಕೆಲವು ನಿಯಮಗಳು ಅವಿವೇಕದಿಂದ ಕೂಡಿದ ಅಮಾನವೀಯ ಕಾನೂನುಗಳು . ಸರ್ಕಾರ ಕಾರ್ಪೋರೆಟ್ ಕಂಪನಿಗಳ ಪ್ರಭಾವಕ್ಕೊಳಗಾಗಿ ಮಾಡಿದ ಕಾನೂನುಗಳು ಇವು. ಇವುಗಳನ್ನು ರದ್ದು ಮಾಡಿ, ತಕ್ಷಣದಲ್ಲಿ ಶಿಕ್ಷಕರ ಬೇಡಿಕೆಗಳನ್ನು ಈಡೆರಿಸಬೇಕು ಎಂಬಿತ್ಯಾದಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ಜುಲೈ 9 ರಂದು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿ ಶಿರಸಿಯ ಡಿಡಿಪಿಐ ಕಛೇರಿ ಎದುರಿಗೆ ಬೃಹತ್ ರ್ಯಾಲಿಯ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ ತಿಳಿಸಿದ್ದಾರೆ.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾಯಿಸಿ (ಸಿ&ಆರ್) ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು,ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕು.
6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ 10, 15,20,25,30 ವರ್ಷದ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಉಪನಿರ್ದೇಶಕರ ಹುದ್ದೆಯ ವರೆಗೂ ಬಡ್ತಿ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಎಲ್ಲಾ ಶಿಕ್ಷಕರನ್ನು ಸೇರಿಸಿ ಬೃಹತ್ ರ್ಯಾಲಿಯ ಮೂಲಕ ಹಕ್ಕೊತ್ತಾಯ ಮಾಡಲಾಗುವುದು.
ಈ ಪ್ರತಿಭಟನಾ ರ್ಯಾಲಿಗೆ ತಾಲೂಕಿನ ಎಲ್ಲಾ ಶಿಕ್ಷಕರು ಭಾಗವಹಿಸುವಂತೆ ತಿಳಿಸಿದ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ ಅಂಬಿಗ, ಖಜಾಂಜಿ ಉಮೇಶ ನಾಯ್ಕ. ನಾಗರಾಜ ಮಡಿವಾಳ, ಪರಶುರಾಮ ನಾಯ್ಕ, ಸತೀಶ ಹೆಗಡೆ, ಜಿ.ಆರ್.ಹೆಗಡೆ, ಗಣೇಶ ಪೂಜಾರಿ, ಕದೀರ್ ಬೇಗ್, ಪಿ.ಜಿ.ನಾಯ್ಕ, ಪ್ರಕಾಶ ಬಿ, ಎನ್.ಜಿ.ನಾಯ್ಕ, ಕೆ.ಪಿ.ರವಿ, ಗಣೇಶ ಕೆ.ಟಿ, ಪ್ರಕಾಶ ಎಂ.ವಿ, ಆರ್.ಪಿ.ಶಾಸ್ತ್ರಿ ಉಪಸ್ಥಿತರಿದ್ದರು.
ಸ.ಪ್ರ.ದ.ಕಾಲೇಜಿಗೆ ಸುಮಂಗಲಾ ಪ್ರಥಮ
ಕರ್ನಾಟಕ ವಿಶ್ವವಿದ್ಯಾಲಯದ 2018-19 ನೇ ಸಾಲಿನಲ್ಲಿ ನಡೆದ ಅಂತಿಮ ವರ್ಷದ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ, ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೇ 86% ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಕುಳಿತ 150 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದು, ಕು.ಸುಮಂಗಲ ಎಂ.ನಾಯ್ಕ ಶೇ 97%, ಕು.ಅನಿತ ಕೆ. ಶೆಟ್ ಶೇ 94% ಹಾಗೂ ಕು.ಸುದರ್ಶನ್ ಎಂ. ನಾಯ್ಕ ಶೇ 92% ಅಂಕಗಳಿಸಿ ಕಾಲೇಜಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆÉದಿದ್ದಾರೆ.