
ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ
ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22 ರ ವರೆಗೆ ಮೂರ್ನಾಲ್ಕು ತಂಡಗಳಲ್ಲಿ ಸಮೀಕ್ಷೆ ನಡೆಸಿವೆ. ಇಂದುಕೂಡಾ ಈ ಸಮೀಕ್ಷಾ ತಂಡದ ಮೂರ್ನಾಲ್ಕು ಗುಂಪುಗಳು ಪ್ರತ್ಯೇಕವಾಗಿ ತಾಲೂಕಿನ ನಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದವು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರೊಂದಿಗೆ ತಾಲೂಕಿನ ಕೃಷಿಕ್ಷೇತ್ರಗಳಾದ ಭತ್ತದ ಗದ್ದೆ ಮತ್ತು ತೋಟಗಾರಿಕಾ ಕ್ಷೇತ್ರಗಳನ್ನು ಸಂದರ್ಶಿಸಿದರು.
ಕಾಳಪ್ಪ ನೇತೃತ್ವದ ತಂಡ ನೆಜ್ಜೂರು. ಕಾವಂಚೂರು, ಕಲ್ಯಾಣಪುರ, ಕಲ್ಲೂರು ಸೇರಿದಂತೆ ಕೆಲವೆಡೆ ಸಮೀಕ್ಷೆ ನಡೆಸಿತು. ಈ ಭಾಗದ ಬಹುತೇಕ ಕಡೆ ಭತ್ತದ ಬೆಳೆಗೆ ತೊಂದರೆಯಾಗಿದೆ. ಕೆಲವೆಡೆ ಎರಡು, ಮೂರನೇ ಬಾರಿ ಕೂಡಾ ನಾಟಿ ಮಾಡಿದ್ದಾರೆ.ತಾಲೂಕಿನ ದೊಡ್ಡ ಭತ್ತದ ಕ್ಷೇತ್ರ ನೆಜ್ಜೂರು ಬೈಲ್ ನಲ್ಲಿ ಹೊಳೆಯ ಪಕ್ಕದ ಭತ್ತದ ಗದ್ದೆ ಬೆಳೆಗಳೆಲ್ಲಾ ತೊಳೆದು ಹೋಗಿವೆ. ಹೊಸಳ್ಳಿಯಲ್ಲಿ ತೋಟದ ಬೆಳೆಗಳಾದ ಅಡಿಕೆ ಕೊಳೆಯಿಂದ ಉದುರಿದ್ದರೆ, ಕಾಳುಮೆಣಸು ಕೊಳೆಯಿಂದ ಸತ್ತಿರುವ ದೃಶ್ಯ ಗಮನ ಸೆಳೆಯಿತು. ಅಕ್ಕುಂಜಿ,ಗೋಳಗೋಡು,ಕಲ್ಯಾಣಪುರ ಸೇರಿದಂತೆ ಹಲವೆಡೆ ಭತ್ತದ ಗದ್ದೆಗಳು ಕೆಸರುತುಂಬಿಕೊಂಡು ವ್ಯವಸಾಯ, ಬೆಳೆಗೆ ಯೋಗ್ಯವಲ್ಲದಂತಾಗಿರುವವಾಸ್ತವ ಕಂಡುಬಂತು. ಮುಳುಗಿದ್ದ ಬೆಳೆ, ಭತ್ತದ ಕ್ಷೇತ್ರಗಳೆಲ್ಲಾ ಮೇಲ್ನೋಟಕ್ಕೆ ಹಸಿರುಸೂಸುವಂತೆ ಕಂಡರೂ ಬುಡದಲ್ಲಿ ಬಂತು ಕೂತಿರುವ ಕೆಸರು ಬೆಳೆಗಿಂತ ಕಳೆಗೆ ಅನುಕೂಲಮಾಡಿಕೊಡುವ ಸಾಧ್ಯತೆಯನ್ನು ಪ್ರತಿಬಿಂಬಿಸಿತು.
ಸಮೀಕ್ಷಾ ಕಾರ್ಯದಲ್ಲಿದ್ದ ಅಧಿಕಾರಿಗಳು ಎಲ್ಲಾ ರೈತರೂ ತಮ್ಮ ಬೆಳೆಹಾನಿ ಬಗ್ಗೆ ಆಯಾ ಗ್ರಾಮಪಂಚಾಯತ್ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಶೀಘ್ರ ಅರ್ಜಿ ನೀಡಲು ವಿನಂತಿಸಿದರು. ತಾಲೂಕಿನ ಐದುಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಬಹುತೇಕ ಕಡೆ ಪ್ರತಿಶತ 75 ಹಾನಿಯಾಗಿದ್ದರೆ, ಕೆಲವೆಡೆ 50% ಮತ್ತೂ ಕೆಲವೆಡೆ 100% ಹಾನಿಯಾಗಿರುವ ವರದಿ ಇದೆ. ತಾಲೂಕಿನಲ್ಲಿ ಅಡಿಕೆ, ಬಾಳೆ, ಶುಂಠಿ ಮತ್ತು ಕಾಳುಮೆಣಸು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳೂ ಹಾನಿಗೊಳಗಾಗಿವೆ.



