![](https://i0.wp.com/samajamukhi.net/wp-content/uploads/2019/11/IMG_20180805_180548.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ದಾಪುರ;ಸೆ.02- ಇಂದು ನಾವು ಬಹುತೇಕ ಯಾವುದೇ ಆಫೀಸಿಗೆ ಹೋದರೂ ಅಲ್ಲಿ ನಮ್ಮನ್ನು ಯಾರೂ ಗಮನಿಸುವುದಿಲ್ಲ. ವಯಸ್ಸಾದವರಿಗೂ ಏನಾಗಬೇಕೆಂದು ಕೇಳಿ ಸಹಕರಿಸುವುದಿಲ್ಲ. ಆದರೆ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯಗಳಲ್ಲಿಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ. ನಿಗಮದಿಂದ ನಮಗೆ ಎಷ್ಟೇ ಹಣ ಮರಳಿ ಬರುವುದಿದ್ದರೂ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನ್ಯಾಯಯುತವಾಗಿ ದೊರೆಯುವಂತೆ ಮಾಡುತ್ತಾರೆ ಎಂದು ವಯೋವೃದ್ಧ ನಿವೃತ್ತ ಶಿಕ್ಷಕ ಈರಾ ಕನ್ನಾ ನಾಯ್ಕ ಶಿರಳಗಿ ಹೇಳಿದ್ದಾರೆ.
ಅವರು ಭಾರತೀಯ ಜೀವವಿಮಾ ನಿಗಮದ ಸ್ಥಳೀಯ ಸಂಪರ್ಕ ಶಾಖೆಯಲ್ಲಿ ನಿಗಮದ 63 ನೇ ವಾರ್ಷಿಕೋತ್ಸವವನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ತನ್ನ ಕೈ ಜೋಡಿಸುತ್ತಿರುವ ಎಲ್ಐಸಿ ಸಂಸ್ಥೆಯು ಸೂರ್ಯಚಂದ್ರರಿರುವವರೆಗೂ ಬೆಳಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪರ್ಕ ಶಾಖೆಯ ಶಾಖಾಧಿಕಾರಿ ರಘುಕುಲೇಂದ್ರ ಎಸ್.ಆರ್. ಎಲ್ಐಸಿ ಇಂದು ಪ್ರಪಂಚದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ತನ್ನಲ್ಲಿಯ ಹೆಚ್ಚಿನ ಹಣವನ್ನು ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ತೊಡಗಿಸುತ್ತಿದೆಯಲ್ಲದೆ, ಪ್ರತಿವರ್ಷವೂ ಕೇಂದ್ರಕ್ಕೆ ಸಹಸ್ರಾರು ಕೋಟಿ ರೂ.ಗಳ ತನ್ನ ಲಾಭಾಂಶವನ್ನು ನೀಡುತ್ತಾ ಬಂದಿದೆ. ಕಳೆದ ತಿಂಗಳ ಕೊನೆಯಲ್ಲಿ ಜೀವನ ಶಾಂತಿ ಪಾಲಿಸಿಯ ಮೂಲಕ ನಿಗಮವು 50 ಸಾವಿರ ಕೋಟಿ ರೂ.ಗಳಿಗೂ ಮೀರಿ ಪ್ರಥಮ ಪ್ರೀಮಿಯಂ ಆದಾಯಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಸಿದ್ದಾಪುರ ಸಂಪರ್ಕ ಶಾಖೆ ಸಹ ಉತ್ತಮ ಪ್ರಗತಿ ತೋರಿದ್ದು ವಿಭಾಗದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ನಿಗಮದ 63 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮೆಲ್ಲಾ ಗ್ರಾಹಕರಿಗೂ ಸುಖ ಸಮೃದ್ಧಿ ದೊರೆಯಲೆಂದು ಪ್ರಾರ್ಥಿಸುತ್ತೇವೆ ಎಂದರು. ಅಭಿವೃದ್ಧಿ ಅಧಿಕಾರಿ ಎಸ್.ಜಿ.ಶಾನಭಾಗ, ಸಿಬ್ಬಂದಿ ಭರತ ಶಹಾ, ಹಿರಿಕಿರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಭಿವೃದ್ಧಿ ಅಧಿಕಾರಿ ದೀಪಕ ಹೆಗಡೆ ವಂದನಾರ್ಪಣೆ ಮಾಡಿದರು.
![](https://i0.wp.com/samajamukhi.net/wp-content/uploads/2019/09/1sdp02.jpg?fit=1024%2C576)
![](https://i0.wp.com/samajamukhi.net/wp-content/uploads/2019/09/IMG-20190901-WA0006.jpg?fit=1008%2C1024)
![](https://i0.wp.com/samajamukhi.net/wp-content/uploads/2019/10/Kannesh_7-1.jpg?resize=312%2C524&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)