![](https://i0.wp.com/samajamukhi.net/wp-content/uploads/2020/01/IMG-20191023-WA0037.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಮಾಜಮುಖಿ
ವಿಷನ್ 2020-01
ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ
ಉತ್ತರಕನ್ನಡ ಜಿಲ್ಲೆ ವಿಶಿಷ್ಟ ಪ್ರಕೃತಿ ವೈಶಿಷ್ಟ್ಯತೆಯ ಸುಂದರ ಜಿಲ್ಲೆ, ಈ ಜಿಲ್ಲೆಯ ನದಿಗಳು, ಕಾಡು, ಜಲಪಾತ,ಬುಡಕಟ್ಟು ಜನಜೀವನ,ಪಾಕೃತಿಕ ವಾಣಿಜ್ಯ ಉತ್ಫನ್ನಗಳು ಈ ಜಿಲ್ಲೆಗೆ ವಿಭಿನ್ನ ಅಸ್ಮಿತೆಯನ್ನು ಕೊಟ್ಟಿವೆ.
ಇಂಥ ವೈಶಿಷ್ಟ್ಯಪೂರ್ಣ ಜಿಲ್ಲೆಯಲ್ಲಿ ದಿನಕರ ದೇಸಾಯಿಯವರ ಕಾಲದಿಂದ ಅರಣ್ಯ ಅತಿಕ್ರಮಣದಾರರ ಹೋರಾಟಗಳು ನಡೆದಿವೆ. ಅರಣ್ಯಭೂಮಿ ಸಾಗುವಳಿದಾರರು, ಪಾರಂಪಾರಿಕ ಅರಣ್ಯವಾಸಿಗಳು ಎಂದು ಗುರುತಿಸಬಹುದಾದ ಅನೇಕ ಮೂಲನಿವಾಸಿಗಳು ಇಲ್ಲಿದ್ದಾರೆ. ಈ ಜಿಲ್ಲೆಗೆ ವಲಸೆ ಬಂದ ಮೇಲ್ವರ್ಗಗಳು ಕೆಲವು ಕೆಳವರ್ಗದ ಜಾತಿಗಳೂ ಕೂಡಾ ಭೂಒಡೆತನವನ್ನು ಹೊಂದಿ ಜಮೀನ್ಧಾರರಾದಾಗಲೂ ಈ ಜಿಲ್ಲೆಯ ಬಹುತೇಕ ಮೂಲನಿವಾಸಿಗಳು ಭೂಒಡೆತನ ಹೊಂದಲೇ ಇಲ್ಲ.
ಪ್ರಭುತ್ವದೊಂದಿಗೆ ಸಂಪರ್ಕ, ಸಂಬಂಧ ಹೊಂದಿಲ್ಲದ ಅನೇಕ ಬುಡಕಟ್ಟುಗಳು ಈ ಜಿಲ್ಲೆಯ ಮೂಲನಿವಾಸಿಗಳಾದರೂ ಅವರು ತಮ್ಮ ಪಾರಂಪರಿಕ ಅರಣ್ಯಭೂಮಿ ಸಾಗುವಳಿಯನ್ನೇ ನೆಚ್ಚಿಕೊಂಡರೆ ವಿನ: ಭೂಮಾಲಿಕರಾಗಲೇ ಇಲ್ಲ.
ಕೆನರಾ ಸಂಸದರಾಗಿದ್ದ ಡಾ. ದಿನಕರ ದೇಸಾಯಿ 1970-80 ರ ದಶಕದಲ್ಲಿ 25 ಸಾವಿರ ಅರಣ್ಯಸಾಗುವಳಿದಾರರ ಕುಟುಂಬಗಳು ಎಂದು ಗುರುತಿಸಿದ್ದ ಅರಣ್ಯ ಅತಿಕ್ರಮಿತ ಉತ್ತರ ಕನ್ನಡ ಜಿಲ್ಲೆಯ ಪಾರಂಪರಿಕ ಅರಣ್ಯವಾಸಿಗಳು ಈಗ ಲಕ್ಷ ದಾಟಿದ್ದಾರೆ. ಸಂಖ್ಯೆ ಲಕ್ಷ ದಾಟಿದ್ದರೂ ಅವರು ಅತಿಕ್ರಮಿಸಿದ ಅರಣ್ಯದ ಪ್ರಮಾಣ ಹೆಚ್ಚಾಗಿಲ್ಲ. ಇಂಥ ಮೂಲನಿವಾಸಿ ಅರಣ್ಯ ಸಾಗುವಳಿದಾರರ ಪರವಾಗಿ ಹಿಂದೆ ಡಾ.ದಿನಕರ ದೇಸಾಯಿ ಪ್ರಾರಂಭಿಸಿದ್ದ ಹೋರಾಟವನ್ನು ಇತ್ತೀಚಿನ 30-40 ವರ್ಷಗಳಿಂದ ಶಿರಸಿಯ ಎ.ರವೀಂದ್ರ ಮುನ್ನಡೆಸುತಿದ್ದಾರೆ.
ಈ ಬಹುಸಂಖ್ಯಾತ ಅರಣ್ಯ ಸಾಗುವಳಿದಾರರ ಪರವಾಗಿ ಕಾಲುಶತಮಾನದಿಂದ ಉತ್ತರಕನ್ನಡ ಜಿಲ್ಲೆಯನ್ನಾಳಿದ ಮೇಲ್ವರ್ಗದವರು, ಕೆಳವರ್ಗದವರು ಯಾರೂ ಸರ್ಕಾರಿ ಯಂತ್ರದ ಜೊತೆಗೆ ಇವರ ಹಕ್ಕಿಗಾಗಿ ಹೋರಾಡಿದ ಕುರುಹೂ ಸಿಗುವುದಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಧರ್ಮ,ಅಲ್ಫಸಂಖ್ಯಾತ,ಬಹುಸಂಖ್ಯಾತ ಅಂಶಗಳು ಕೆಲಸಮಾಡುತ್ತಿರುವುದು ಬಿಟ್ಟರೆ ಜಿಲ್ಲೆಯ ಬಹುಸಂಖ್ಯಾತ ಅರಣ್ಯ ಸಾಗುವಳಿದಾರರಿಗೆ ಭೂಮಾಲಿಕತ್ವ, ಜಿಲ್ಲೆಯ ಬುಡಕಟ್ಟುಗಳಿಗೆ ಸರ್ಕಾರಿ ಪರಿಶಿಷ್ಟ ವರ್ಗ, ಪಂಗಡಗಳ ಸ್ಥಾನಮಾನಗಳನ್ನು ಕೊಡಿಸುವ ದಿಸೆಯಲ್ಲಿ ಆದ ಪ್ರಯತ್ನಗಳು ಕಡಿಮೆ.
ಜಿಲ್ಲೆಯ ಮೇಲ್ವರ್ಗದ ಜನ ವ್ಯಾಪಾರ, ಕೃಷಿ, ತೋಟಗಾರಿಕೆ, ಕೃಷಿ ಅನುಕೂಲಗಳನ್ನು ಪಡೆದು ಅವು ರಾಷ್ಟ್ರೀಯತೆ, ಧರ್ಮ, ಜಾತಿಗಳ ವಿಂಗಡನೆಗಳ ಮೂಲಕ ರಾಜಕೀಯ, ಸಾಮಾಜಿಕ, ಸರ್ಕಾರಿ, ಸಾಂಸ್ಕøತಿಕ ಲಾಭ ಪಡೆಯುತ್ತಿವೆ.
ಈ ಮೇಲ್ವರ್ಗಕ್ಕಿಂತ ಹೆಚ್ಚಿರುವ ಬಹುಸಂಖ್ಯೆಯ ಜಿಲ್ಲೆಯ ಮೂಲನಿವಾಸಿ ಶ್ರಮಜೀವಿಗಳಿಗೆ ಭೂಮಾಲಿಕತ್ವವಿಲ್ಲ, ರಾಜಕೀಯ ನಾಯಕತ್ವ, ಪ್ರಾತಿನಿಧಿತ್ವಗಳಿಲ್ಲ. ಜಿಲ್ಲೆಯ ಬಹುಸಂಖ್ಯಾತ ಹಿಂದುಳಿದವರು, ಬುಡಕಟ್ಟು ಪರಿಶಿಷ್ಟ ಜಾತಿ-ವರ್ಗಗಳಿಗೆ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ಪ್ರಾತಿನಿಧಿತ್ವಗಳಿಲ್ಲ. ಈ ಇಲ್ಲಗಳನ್ನು ಹಾಗೆಯೇ ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಆಳುವ ಮೇಲ್ವರ್ಗ ಜಿಲ್ಲೆಯ ಬಹುಸಂಖ್ಯಾತ ಮೀನುಗಾರರು, ಪರಿಶಿಷ್ಟ ವರ್ಗಗಳು, ಅರಣ್ಯ ಅತಿಕ್ರಮಿತ ಬಹುತೇಕ ಹಿಂದುಳಿದ ವರ್ಗಗಳು ಸೇರಿದಂತೆ ಬಹುತೇಕ ಎಲ್ಲಾ ದಮನಿತರನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾಲಾಳುಗಳನ್ನಾಗಿ ಬಳಸಿಕೊಂಡಿದ್ದೇ ಹೆಚ್ಚು.
ಕೆಲವು ಅವಧಿಗಳಿಗೆ ಉತ್ತರ ಕನ್ನಡ, ಕೆನರಾ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತಿದ್ದ ದೇವರಾಯ ನಾಯ್ಕ, ಬಿ.ವಿ.ನಾಯಕ, ಮಾರ್ಗರೇಟ್ ಆಳ್ವ ರಿಗೆ ಜಿಲ್ಲೆಯ ಬಹುಸಂಖ್ಯಾತ ದುರ್ಬಲ ವರ್ಗಗಳ ಬಗ್ಗೆ ಕಾಳಜಿ ಇದ್ದರೂ ಅವರ ಕಾಲದ ಮೃಧು ಹಿಂದುತ್ದ ಕಾಂಗ್ರೆಸ್ ನಾಯಕತ್ವ ಇದಕ್ಕೆ ಸ್ಫಂದಿಸಿದಂತಿಲ್ಲ. ಹೀಗೆ ಮುಕ್ಕಾಲು ಶತಮಾನ ಪ್ರಭುತ್ವದ ಉದ್ದೇಶಿತ ಕುರುಡು, ಜಾಣ ಕುರುಡು ಬಹುಅಂಶ ಉಪೇಕ್ಷೆ, ಉಡಾಫೆಗಳಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಿಂದುಳಿದಿರುವಂತೆ, ಜಿಲ್ಲೆಯ ಬಹುಸಂಖ್ಯಾತ ಅಹಿಂದ್ ವರ್ಗ ಹಿಂದುಳಿದಿದೆ. ಈ ಹಿಂದುಳಿದಿರುವಿಕೆಗೆ ಮೂಲಕಾರಣ ಬಹುಸಂಖ್ಯಾತರ ಪರ ರಾಜಕೀಯ, ಸಾಮಾಜಿಕ ಹಿತಾಸಕ್ತಿ ಇಲ್ಲದೆ ಉಪೇಕ್ಷಿಸಲ್ಫಟ್ಟಿರುವುದು. ಭೂಮಾಲಿಕತ್ವವಿಲ್ಲದ ಅಸಂಖ್ಯ ಕುಟುಂಬಗಳು ಮನೆ, ಕೃಷಿ ಜಮೀನು ಇದ್ದರೂ ನಿರಾಶ್ರಿತರಂತಿದ್ದಾರೆ. ಕೃಷಿ-ತೋಟಗಾರಿಕೆ ಜಮೀನು ಹೊಂದಿದ ಹಿಂದುಳಿದ ವರ್ಗದ ಜನರು ಸರ್ಕಾರಿ ಅನುಕೂಲ ಪಡೆಯಲಾಗದೆ ಗೋಳಾಟದಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ಕಳೆದ 2019 ಉತ್ತರ ಕನ್ನಡ ಜಿಲ್ಲೆಗೆ, ಜಿಲ್ಲೆಯ ಬಹುಸಂಖ್ಯಾತರಿಗೆ ಏನಾದರೂ ಅನುಕೂಲ ಮಾಡಿದೆಯಾ ಎಂದರೆ ಉತ್ತರ ನಿರಾಶಾದಾಯಕ. ಕಳೆದ ದಶಕದಲ್ಲಿ ಬಹುಸಂಖ್ಯಾತ ದೇಶೀ ಮೂಲನಿವಾಸಿಗಳ ನೆನಪು, ಮೂಲ, ಭವಿಷ್ಯ ಮರೆಸುವಂತೆ ಮತೀಯವಾದಿ ರಾಜಕಾರಣ ಮೆರೆದಿದೆ.
![](https://i0.wp.com/samajamukhi.net/wp-content/uploads/2020/01/IMG-20191024-WA0003.jpg?resize=420%2C419&ssl=1)
![](https://i0.wp.com/samajamukhi.net/wp-content/uploads/2020/01/svn.jpg?fit=760%2C727&ssl=1)
![](https://i0.wp.com/samajamukhi.net/wp-content/uploads/2020/01/unnamed.jpg?resize=303%2C6004&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)