

ಮಲೆನಾಡಿನಲ್ಲಿ ಮೇಸ್ಟ್ರಾಗಿದ್ದ ಆರ್.ವಿ.ಭಂಡಾರಿಯವರು ತಣ್ಣಗಿರದೆ, ಸದಾ ಸಮಾನತೆಗಾಗಿ ತಲ್ಲಣಿಸಿದವರು. ಬಂಡಾಯವೆಂಬ ಬಂಡಿಯ ನೊಗಹೊತ್ತು, ಬೂದಿಮುಚ್ಚಿದ ಕೆಂಡದಂತಿರುವ ಮೌಢ್ಯಗಳ ಮುಖವಾಡ ಕಳಚಲು, ಸಮಾಜಮುಖಿಯಾಗಿ ದುಡಿದು ಹಣ್ಣಾಗಿ ಮಣ್ಣಾದವರು. ಇಂದು ಭೌತಿಕವಾಗಿ ಆರ್.ವಿಯವರು ನಮ್ಮೊಂದಿಗಿರದಿದ್ದರೂ, ಅವರ ಚಿಂತನೆಗಳನ್ನು ‘ಸಹಯಾನ’ ಸಂಸ್ಥೆ ಕಲೆ, ಸಾಹಿತ್ಯ, ಸಂವಾದ, ಕಮ್ಮಟ, ಗೋಷ್ಠಿ, ನಾಟಕ, ನೃತ್ಯ, ಉಪನ್ಯಾಸ, ಕರಪತ್ರ, ಪುಸ್ತಕ ಹೀಗೆ ಹಲವು ರೀತಿಯಲ್ಲಿ ಆರ್.ವಿಯವರ ಆಶಯಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ವರ್ಗ ವರ್ಣ ವೈಷಮ್ಯಗಳೆಲ್ಲವ ಅಳಿಸಿ, ಎಳೆಯರೆದೆಯಲಿ ಪ್ರೀತಿಯ ಬೀಜ ಬಿತ್ತಿ, ಬಹುತ್ವದ ಬೆಳೆ ಬೆಳೆಯಬೆಕೆಂಬ ಆರ್.ವಿಯವರ ಕನಸಿನಂತೆ, ಸಹಯಾನ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಸಾಹಿತ್ಯೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ನಾಡಿನ ಪ್ರಗತಿಪರ ಚಿಂತಕರು, ನ್ಯಾಯಮೂರ್ತಿಗಳು, ಸಾಹಿತಿಗಳು, ಕವಿಗಳು, ಹೋರಾಟಗಾರರು, ಕಲಾವಿದರು ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡಿರುವುದನ್ನು ಅವಲೋಕಿಸಿದಾಗ ‘ಸಹಯಾನ’ದ ಒಲವು ನಿಲುವು ಗಟ್ಟಿತನ ಎಲ್ಲವೂ ಅರ್ಥವಾಗುತ್ತವೆ.
ಇಂದು ಬಹುಪಾಲು ಸಾಹಿತ್ಯೋತ್ಸವಗಳು ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿರುವುದು ಗೊತ್ತಿರುವ ವಿಚಾರ, ಆದರೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಿಂದ ಹನ್ನೊಂದು ಕಿ.ಮಿ ದೂರದಲ್ಲಿರುವ ಕೆರೆಕೋಣ ಅನ್ನೊ ಪುಟ್ಟ ಹಳ್ಳಿಯ ತೋಟದ ಮನೆಯಲಿ, ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಸಹಯಾನ ಸಾಹಿತ್ಯೋತ್ಸವ ನಡೆಯಲಿದೆ. ನಗರಮುಖಿಯಾಗುತ್ತಿರುವ ಹೊಸತಲೆಮಾರನ್ನು ಸಾಹಿತ್ಯದ ಮೂಲಕವೇ ನೆಲಮುಖಿಯಾಗಿ ಆಲೋಚನೆಗೆಹಚ್ಚುವ ಇಂಥ ಉತ್ಸವಗಳ ಸಂಖ್ಯೆ ಹೆಚ್ಚಬೇಕಿದೆ.
ಈ ಸಾರಿಯ ಸಾಹಿತ್ಯೋತ್ಸವ ಸಿನಿಮಾ ಕುರಿತು ನಡೆಯುತ್ತಿರುವುದು ವಿಶೇಷ. ಸಧ್ಯದ ಸಾಮಾಜಿಕ ಸಂಕಟ, ಬಿಕ್ಕಟ್ಟು, ಪ್ರಭುತ್ವ ಪರೋಕ್ಷವಾಗಿ ಒಳಸುಳಿಗೆ ತಳ್ಳುತ್ತಿರುವುದು, ಹೆಚ್ಚುತ್ತಿರುವ ಬೃಷ್ಟಾಚಾರ, ನಿರುದ್ಯೋಗ, ವೈರಸ್ ಮುಂತಾದ ಸಂದಿಗ್ಧ ಸ್ಥಿತಿಯಲ್ಲಿ ಸಿನಿಮಾ ಜಗತ್ತಿನ ಜವಬ್ದಾರಿ ಹೆಗಿದೆ? ಹೆಗಿರಬೇಕಿತ್ತು? ವರ್ತಮಾನದ ತಲ್ಲಣಗಳಿಗೆ ಚಿತ್ರರಂಗ ಮುಖಾಮುಖಿಯಾಗುತ್ತಿದೆಯೇ? ಹೊಸತಲೆಮಾರಿನ ನಿರೀಕ್ಷೆ, ನಿರುತ್ಸಾಹ ಎಲ್ಲ ಒಳಹೊರ ಮಗ್ಗುಲಗಳ ಕುರಿತು ಒಂದುದಿನ ಚಿಂತನ ಮಂಥನ ಸಂವಾದ ಮತ್ತು ಆಯ್ದ ಚಿತ್ರಗಳ ವೀಕ್ಷಣೆ ನಡೆಯಲಿದೆ.
ಒಟ್ಟಾರೆ ಆರ್.ವಿ ಭಂಡಾರಿಯವರ ಸದಾಶಯದಂತೆ ‘ಸಹಯಾನ ಸಂಸ್ಥೆ’ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಸೃಜನಶೀಲವಾಗಿ, ಜನಪರವಾಗಿ, ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ ಮೌನ ಚಳವಳಿಯನ್ನು ಹುಟ್ಟುಹಾಕಿದೆ. ಸಂಸ್ಥೆ ಈ ಸಾರಿ ದಶಮಾನೋತ್ಸವದ ನೆನಪಿನಲೆಯಲ್ಲಿ ಸಿನಿಮಾ ಸಾಹಿತ್ಯೋತ್ಸವ ನಡೆಸುತ್ತಿರುವುದು ಖುಷಿಯ ಸಂಗತಿ. ಬರಗೂರು ರಾಮಚಂದ್ರಪ್ಪ, ವಿಷ್ಣು ನಾಯ್ಕ, ಶಾಂತರಾಮ ನಾಯಕ ಹಿಚ್ಕಡ, ಮಾಸ್ತಿಗೌಡ ಮುಂತಾದವರೇ ಸಹಯಾನದ ರಥ ಎಳೆಯುತ್ತಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ವಿಠ್ಠಲ ಭಂಡಾರಿ ನೆನೆಯುತ್ತಾರೆ.
-ಕೆ.ಬಿ.ವೀರಲಿಂಗನಗೌಡ್ರ.
ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099 (09 ಫೆಬ್ರುವರಿ 2020ರಂದು ಕೆರೆಕೋಣದಲ್ಲಿ ನಡೆಯುವ ಸಾಹಿತ್ಯೋತ್ಸವ ನಿಮಿತ್ತ ಈ ಲೇಖನ)

ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿಶಾಲೆಗಳಲ್ಲಿ ಕಲಿಯಲು ಆದೇಶವಾಗಬೇಕು
ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಇಂಗ್ಲೀಷ್ ಒಂದು ಭಾಷೆಯಾಗಿ ಕಲಿಕಾಪಠ್ಯವಾಗಬೇಕೆ ಹೊರತು ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದರಿಂದ ಮಕ್ಕಳು ತ್ರಿಶಂಕು ಸ್ಥಿತಿಗೆ ತಲುಪಿದಂತಾಗುತ್ತದೆ. ಈ ಬಗ್ಗೆ ಪಾಲಕರು ಸಹಕರಿಸಬೇಕು ಎಂದು ಬಂಡಾಯ ಸಾಹಿತಿ ಮತ್ತು ಪಂಪ ಪ್ರಶಸ್ತಿ ಪುರಸ್ಕøತ ಕವಿ ಡಾ.ಸಿದ್ಧಲಿಂಗಯ್ಯ ಹೇಳಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
