ಬರದವರ_ಔದಾರ್ಯ

ಓಣ್ಯಾಗ ನನ್ನಗೂಡ ಕೂಡಿ ಓದಾಕ ಸಹಪಾಠಿಗಳು ಸಿಗದಿದ್ದರೂ, ಕರ್ಕೊಂಡಾಡೊ ಸಂಗಾತಿಗಳಿಗೇನೂ ಕಮ್ಮಿ ಇರಲಿಲ್ಲ. ಸಾಲಿ ಅಂದ್ರೆ ಏನಂತಾನೆ ಗೊತ್ತಿರದ ಆ ಹನಮಂತನಿಗೆ ದನಕಾಯುವುದೊಂದೇ ಕಾಯಕವಾಗಿತ್ತು. ಸಾಲಿಸೂಟಿಬಿಟ್ರಸಾಕು, ಎಮ್ಮಿ ಬಿಟ್ಕೊಂಡು ಹನಮಂತನಗೂಡ ನಾನೂ ಹೊಂಟಬಿಡತಿದ್ಯಾ, ಸಾಲಿಗ್ಹೋಗೊ ಹುಡ್ಗಂತಾ ಹನಮಂತನಿಗೆ ಅದೆಂತಹದ್ದೊ ಒಂತರ ಪ್ರೀತಿಯಿತ್ತು ನನ್ನಮ್ಯಾಗ. ಎಂಥಾ ಪ್ರೀತಿ ಅಂದ್ರ, ದನಕಾಯಾಕ ಹೋದಾಗ, ಮುಳ್ಳಕಂಟಿಯೊಳಗಿನ ಸಿಟಿಜೇನ ಬಿಡಿಸ್ಕೊಂಡ ಬಂದವ್ನೆ ಮೊದ್ಲು ನಂಗ ತಿನಸತಿದ್ದ, ಕಲ್ಲಹೊಡೆದು ಬಾರಿಹಣ್ಣು ಕೆಡುವಿ ಕೊಡತಿದ್ದ, ಯಾರದೊ ಹೊಲ್ದಾಗ ಹಸಿಶೇಂಗಾ ಕಿತ್ಕೊಂಡು ತರ್ತಿದ್ದ ಒಟ್ಟಾರೆ ಹಣ್ಣು ಕಾಯಿ ಜೇನು ಏನೇಲ್ಲಾ ತಿಂದು ಹೊಟ್ಟಿ ತುಂಬಿಹೋಗತಿತ್ತು, ಇಬ್ರು ಕಟ್ಕೊಂಡಹೋದ ಬುತ್ತಿ ಎಷ್ಟೋ ಸಾರಿ ತಿನ್ದೆ ಹಂಗೇ ಇರತಿತ್ತು.

ಅದೊಂದದಿನ ದನಮೇಸ್ಕೊಂಡು ಮನಿಕಡೆ ಹೊಳ್ಳಸ್ಕೊಂಡು ಬರುವಾಗ, ಅಡ್ಡಹಳ್ಳದ ಹತ್ತಿರ ದನ ನೀರಕುಡ್ದು ಮಲ್ಕೊಂಡುವು. ಹಳ್ಳದ ದಂಡಿಮ್ಯಾಗ ಇಬ್ರೂ ಗುಂಡಾ ಆಡಾಕ ಸುರು ಹಚ್ಕೊಂಡಿವಿ, ಸ್ವಲ್ಪಹೊತ್ತ ಆಡಿದಮ್ಯಾಗ ದನ ಎದ್ದಹೊಂಟುವು, ನಾವೂ ಗಡಬಡಿಸಿ ಗುಂಡಾ ಬಕ್ಕನದಾಗ ಹಾಕ್ಕೊಂಡು ಹೊಂಟವಿ. ಆಮ್ಯಾಲೆ ನಾನೊಂಚೂರು ಕಾಲಮಡಿಯಾಕಂತ ದಾರಿಮಗ್ಲ ನಿಂತಕೊಂಡ್ಯಾ. ನಿಂತಕೆಲ್ಸ್ ಮುಗಸ್ಕೊಂಡು ಹೊಂಡುವಷ್ಟರಾಗ, ಹನುಮಂತ ದನಜೊತೆ ಚೂರ ಮುಂದಾಗಿದ್ದ. ಒಬ್ಬ ಅಪರಿಚಿತ ವ್ಯಕ್ತಿ ನನ್ನ ಕೈಯಾನ ಬುತ್ತಿನೋಡಿ “ಯಪ್ಪಾ ಒಂದರೊಟ್ಟಿ ಕೊಡ್ರಿ ಹಸಿವಾಗೈತಿ” ಅಂದ. ನಾನು ಅವನ ಮಾತು ಕೇಳಿಯೂ ಕೇಳದವನ್ಹಂಗ ಅವಸರಮಾಡಿ ಓಡಿ ಹನಮಂತನ ಕೂಡಿಕೊಂಡೆ.

ಯಾಕೋ ಏನೋ ಗೊತ್ತಿಲ್ಲ ರೊಟ್ಟಿ ಕೊಟ್ಟಬರಬೇಕಿತ್ತೇನೊ ಅಂತಾ ಮನಸ್ಸು ಅಳ್ಳಹುರದ್ಹಂಗ ಹುರಿಯಾಕ್ಹತ್ತು. ತಡಿಲಾರ್ದ ಹನಮಂತನ ಕೇಳಿದ್ಯಾ ‘ಅಲ್ಯಾರೋ ಒಬ್ಬವ ನಂಗ ರೊಟ್ಟಿ ಕೊಡು ಅಂತ ಕೇಳ್ದ, ನಾನು ಕೊಡ್ಲಿಲ್ಲಾ, ನೀನಾದ್ರ ಕೊಡತಿದ್ಯಾ? “ಕೊಡತಿದ್ಯಾ” ಅಂದ. ಹನಮಂತ ಕೊಡ್ತಿನಂತ ಅಂದಮ್ಯಾಗಂತೂ ಇನ್ನೂ ಹೆಚ್ಚ ತಳಮಳ ಸುರುವಾತು. ಅಲ್ಲಾ ದನಕಾಯೊ ಹುಡ್ಗನಿಗಿರುವಷ್ಟು ತಿಳುವಳಿಕಿನೂ ನಂಗ ಬರಲಿಲ್ಲಲ್ಲ ಅಂತಾ ಮನಿ ಮುಟ್ಟುವರೆಗೂ ಹೊಟ್ಯಾಗ ಸಂಕ್ಟಾತು. ದಂದಾಕ್ಯಾಗ ದನ ಕಟ್ಟಿದವನೇ, ಜೀವದ ಅಜ್ಜಿ ಮುಂದ ನಡೆದ ವಿಷ್ಯ ಅಷ್ಟೂ ಹೇಳ್ದೆ, ಅಜ್ಜಿನೂ ಕೊಟ್ಟಬರ್ಬೇಕಿಲ್ಲ ಬೇವರ್ಸಿ ಅಂತ ಬೈದ್ಲು. ಸಂಜೆ ಉಂಡಕೂಳು ರುಚಿ ಹತ್ತಲಿಲ್ಲ, ರಾತ್ರಿಯಿಡೀ ನಿದ್ದಿ ಬರಲಿಲ್ಲ. ಮರುದಿನ ಸಾಲಿಗೆ ಹೊಂಟಾಗ, ನಿನ್ನೆ ನೋಡಿದ ಆ ವ್ಯಕ್ತಿ ದಾರ್ಯಾಗೆಲ್ಲ್ಯಾರ ಕಾಣ್ತನಂತ ಕಣ್ಣಾಗ ಕಣ್ಣಿಟ್ಟು ಹುಡಕಾಕ ಹತ್ತಿದ್ಯಾ, ಅಕಸ್ಮಾತು ಕಂಡ್ರ ಮನಿಗಿ ಕರ್ಕೊಂಡ್ಹೋಗಿ, ಅವನ ಕೈಯಾಗ ನಾಕರೊಟ್ಟಿ ಇಟ್ಟು ಮನ್ಸ ಹಗರ ಮಾಡ್ಕೊಬೇಕಂತ ಎಷ್ಟ ತಡಕಾಡಿದ್ರೂ ಕೊನಿಗೂ ಅಂವ ಸಿಗಲೇ ಇಲ್ಲ.

ಇವತ್ತಿಗೂ ಹಸಿವೆಯಿಂದ ಬಳಲುವವರು ಕಂಡ್ರೆ, ಮನೆಯ ಮುಂದೆ ತುತ್ತು ಅನ್ನಕ್ಕಾಗಿ ಯಾರಾದರೂ ಅಂಗಲಾಚಿದರೆ ಅವನೇ ನೆನಪಾಗುತ್ತಾನೆ. ನನ್ನೊಳಗೆ ಹೆಪ್ಪುಗಟ್ಟಿರುವ ಆ ರೊಟ್ಟಿಕೊಡದ ತಪ್ಪು, ದನಕಾಯೊ ಹನಮಂತನೊಳಗಿನ ಅಂತಃಕರಣ, ‘ಕೊಟ್ಟಬರಬೆಕಿಲ್ಲ ಬೇವರ್ಸಿ’ ಅಂತಾ ಬೈದ ಅಜ್ಜಿಯ ಮಾತು ಹೆಜ್ಜೆಹೆಜ್ಜೆಗೂ ಕಾಡುತ್ತಿವೆ, (ಅಜ್ಜಿಯೂ ಸಹ ಅನಕ್ಷರಸ್ಥಳೆ). ಒಟ್ಟಾರೆ ಮಾಡುವ ತಪ್ಪುಗಳು, ಓದು ಬರಹ ಬರದವರ ಔದಾರ್ಯ ದಿನದಿನವೂ ಕಾಡುತ್ತಿವೆ. ಅಂದು ಒಂದರೊಟ್ಟಿ ಕೊಡದ ನಿರ್ದಯಿ ನಾನು, ಇಂದು ನಾಕಮಕ್ಕಳೆದಿರು ನಿಂತು ಅವರ ನೆತ್ತಿಯ ಹಸಿವನ್ನು ನೀಗಿಸುತ್ತಿರುವೆ. ಆದರೆ ಅಂದೇ ಎದೆಯ ತುಂಬ ಪ್ರೀತಿ ಕರುಣೆ ತುಂಬಿಕೊಂಡಿದ್ದ ಆ ಹನಮಂತ ಏನಾದ್ರೂ ನನ್ನಜಾಗಾದಾಗ ನಿಂತಿದ್ದರೆ, ನನಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಮಕ್ಕಳ ಹಸಿವು ನೀಗಿಸುತ್ತಿದ್ದನಲ್ಲವೆ? ಆತ್ಮಸಾಕ್ಷಿಯ ಈ ಪ್ರಶ್ನೆಗೆ ನನ್ನೊಳಗೆ ಉತ್ತರವಿಲ್ಲ.

-ಕೆ.ಬಿ.ವೀರಲಿಂಗನಗೌಡ್ರ.

(ಪ್ರಾಯಶಃ ಮೂರು ಅಥವಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *