![](https://i0.wp.com/samajamukhi.net/wp-content/uploads/2020/05/narayanguru.jpg?resize=236%2C265&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಾಮಾಜಿಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.
![](https://i0.wp.com/samajamukhi.net/wp-content/uploads/2020/05/narayanguru.jpg?resize=236%2C265&ssl=1)
![](https://i0.wp.com/samajamukhi.net/wp-content/uploads/2020/05/IMG-20200526-WA0015.jpg?resize=643%2C523&ssl=1)
೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು.
ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇಡೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯಿಸು ತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ’ ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು.
ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು.
ಈಗಲೂ ಅಷ್ಪೃಶ್ಯತೆ ಅನ್ನೋದು ಕಡಿಮೆ ಆಗಿಲ್ಲ. ಅಷ್ಪೃಶ್ಯತೆ ಜೊತೆಗೆ ಕೋಮುವಾದವು ಹೆಚ್ಚಾಗಿದೆ. ಆದರೆ ಈ ಕೋಮುವಾದವನ್ನು ತಳಸಮುದಾಯದವರಾದ ನಮ್ಮ ಈಡಿಗ ಸಮಾಜದ ಯುವಕರ ತಲೆಗೂ ತುಂಬಲಾಗುತ್ತಿದೆ ಹಾಗೂ ವ್ಯವಸ್ಥಿತವಾಗಿ ಅವರ ಕೋಮುವಾದಕ್ಕೆ ನಮ್ಮ ಯುವಕರೇ ಆಹಾರವಾಗುತ್ತಿರುವುದು ದುಃಖದ ವಿಷಯ.
ನಾರಾಯಣಗುರು ಪಾಲಿಸಿದ ತತ್ವದ ವಿರುದ್ಧ ದಿಕ್ಕಿನಲ್ಲಿ ನಮ್ಮ ಯುವಕರು ಸಾಗುತ್ತಿರುವುದು ಸಮಾಜಕ್ಕೆ ಮತ್ತು ನಮ್ಮ ಸಮಾಜದ ದೈವೀ ಸ್ವರೂಪಿಯಾದ ನಾರಾಯಣಗುರುಗಳಿಗೆ ನಾವು ಎಸಗುತ್ತಿರುವ ದ್ರೋಹ ಎಂದು ಹೇಳಬಹುದು..
ಈ ವೈದಿಕ ಮನಸ್ಥಿತಿಯವರು ನಮ್ಮನ್ನು ಶತಮಾನಗಳಿಂದ ಶೋಷಣೆ ಮಾಡುತ್ತ, ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಂಡಿರುತ್ತಾರೆ. ಅಂಥಹ ವೈದಿಕರ ವಿರುದ್ಧ ಸೆಟೆದು ನಿಂತು ಸಮಾಜದ ಅಭ್ಯುದಯಕ್ಕಾಗಿ ಹೋರಾಟ ಮಾಡಿದ ಗುರುಗಳ ತತ್ವಾದರ್ಶಗಳನ್ನ ನಾವು ಪಾಲಿಸಬೇಕೆ ಹೊರತು ವೈದಿಕರ ಪಿತೂರಿಗೆ ನಾವು ಬಲಿಯಾಗಿ ನಮ್ಮದಲ್ಲದ ಸಿದ್ದಾಂತವನ್ನು ಮೈಗೂಡಿಸಿಕೊಳ್ಳಬಾರದು.
ರಾಷ್ಟ್ರೀಯತೆ ಮತ್ತು ಹಿಂದುತ್ವ ಎನ್ನುವ ಹೆಸರಿನಲ್ಲಿ ನಮ್ಮನ್ನು ಈ ವೈದಿಕರು ಬಳಸಿಕೊಳ್ಳುತ್ತಿದ್ದಾರೆ. ಅವರ ಕುತಂತ್ರಕ್ಕೆ ನಾವು ಬಲಿಯಾಗುತ್ತಿದ್ದೇವೆ, ಅವರಿಗೆ ನಾವೇ ದೊಡ್ಡ ಅಸ್ತ್ರವಾಗಿದ್ದೇವೆ. ನಮ್ಮನ್ನು ಬಳಸಿಕೊಂಡು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಕುತಂತ್ರಗಳಿಗೆ ನಾವು ಬಲಿಯಾಗದೆ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ..
– ಲೋಹಿತ್ ನಾಯ್ಕ ಈರಗೊಪ್ಪ (ಬೆಂಗಳೂರು)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)