![](https://i0.wp.com/samajamukhi.net/wp-content/uploads/2020/07/shantaram-s-2.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಉತ್ತರ ಕನ್ನಡ ಜಿಲ್ಲೆಯಿಂದ ಮೊಟ್ಟಮೊದಲಿಗೆ ನೇರವಾಗಿ ಸರ್ಕಾರದಿಂದ ವಿಧಾನ ಪರಿಷತ್ ಗೆ ವಿಶಿಷ್ಟ ಸೇವಾ ಕ್ಷೇತ್ರದಿಂದ ಆಯ್ಕೆಯಾದ ಶಾಂತಾರಾಮ ಸಿದ್ದಿ ಇಂದಿನ ರಾಜ್ಯದ ಹೀರೋ ಜೊತೆಗೆ ದೇಶದ ಹೀರೋ ಎಂದರೂ ಅತಿಶಯೋಕ್ತಿಯಲ್ಲ.
ಉ.ಕ. ಯಲ್ಲಾಪುರದ ಹಿತ್ಲಳ್ಳಿ ಪುರಲಿಮನೆಯ ಶಾಂತರಾಮ ಸಿದ್ದಿ ಯಲ್ಲಾಪುರ, ಕಾರವಾರಗಳಲ್ಲಿ ಕಲಿತು ಸಿದ್ದಿ ಸಮೂದಾಯದ ಮೊದಲ ಪದವೀಧರನಾಗಿದ್ದು ಪವಾಡ, ನಂತರ ವನವಾಸಿ ಕಲ್ಯಾಣ ಸಂಘದಲ್ಲಿ ಪ್ರವೇಶ ಪಡೆದು ತಾಳ್ಮೆ, ಸಂಯಮದಿಂದ ಎರಡುದಶಕಗಳ ಕಾಲ ಕಳೆದದ್ದು, ಅಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು ಮತ್ತೊಂ ದು ಅಚ್ಚರಿ. ಇಂಥ ಅಚ್ಚರಿ, ಪವಾಡಗಳ ಮೂಲಕ ಹೆಸರು ಮಾಡಿದ್ದ ಶಾಂತರಾಮಸಿದ್ದಿ ರಾಜ್ಯ ವಿಧಾನಪರಿಷತ್ ಗೆ ಸರ್ಕಾರದಿಂದ ನಾಮನಿಧೇಶನವಾಗುತ್ತಾರೆ ಎಂದರೆ ಅದೂ ದೊಡ್ಡ ಅಚ್ಚರಿಯೇ. ಆದರೆ ಅನೇಕ ಪವಾಡಗಳಂತೆ ಶಾಂತರಾಮ ಸಿದ್ದಿ ವಿಧಾನಪರಿಷತ್ ನಾಮನಿರ್ಧೇಶಿತ ಸದಸ್ಯನಾಗಿ ಆ ಸ್ಥಾನಕ್ಕೆ ಗೌರವ ತಂದರು ಎನ್ನುವ ಸತ್ಯವನ್ನೂ ಎಲ್ಲರೂ ಒಪ್ಪಬೇಕು.
ಅಸೀಮ ಪ್ರತಿಭಾವಂತರು, ಲಾಬಿ ಮಾಡುವ ಜನರಿಗೆ ಮೀಸಲು ಎನ್ನಬಹುದಾಗಿದ್ದ ಸರ್ಕಾರದ ವಿ.ಪ. ನಾಮನಿರ್ಧೇಶನ ಶಾಂತರಾಮ ಸಿದ್ದಿಯವರ ಆಯ್ಕೆಯಿಂದ ಇವೆರಡು ಅಂಶಗಳನ್ನು ಬಿಟ್ಟು ಕೋಟಾ, ಸಹಜತೆ,ಪ್ರಾಮಾಣಿಕತೆಗೂ ಗೌರವ ದೊರೆಯಬಹುದೆನ್ನುವುದಕ್ಕೆ ನಿದರ್ಶನ. ಇವರ ಆಯ್ಕೆಯ ಬಗ್ಗೆ ಇಡೀ ರಾಜ್ಯವೇ ಸಂತಸ ಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಂತೂ ಪಕ್ಷ, ಸಿದ್ದಾಂತ ಜಾತಿ-ಧರ್ಮ ಭೇದ ಮರೆತು ಶಾಂತರಾಮ ಸಿದ್ದಿಯವರ ಆಯ್ಕೆಗೆ ಜೈ ಎಂದಿದೆ. ಈ ಆಯ್ಕೆಯ ಹಿಂದೆ ಸೂಪರ್ ಸಿ.ಎಂ. ಬಿ.ಎಲ್. ಸಂತೋಷರ ಸಂಪರ್ಕ, ಸಂಬಂಧ ಕೆಲಸಮಾಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಬಿ.ಜೆ.ಪಿ.ಯಿಂದ ಇಂಥ ಆಯ್ಕೆಗಳಾದಾಗ ಬಹಿರಂಗ ವಿರೋಧಗಳ ಜೊತೆಗೆ ಪರೋಕ್ಷ ಪ್ರತಿರೋಧಗಳು ವ್ಯಾಪಕವಾಗಿದ್ದವು. ಆದರೆ ಪಕ್ಷದ ಒಳ-ಹೊರಗಿನವರು, ಸಂಘ, ಸಮೂದಾಯ, ಗುಂಪುಗಳ್ಯಾವೂ ತಕರಾರು ಎತ್ತದಂಥ ಯೋಗ್ಯ ಆಯ್ಕೆ ಮಾಡಿದ ಸರ್ಕಾರ,ಸರ್ಕಾರದ ಹೊರಗಿನ ವ್ಯಕ್ತಿಗಳಿಗೆ ಈ ಗೌರವದ ಅಭಿನಂದನೆ ಸಲ್ಲಬೇಕು.
ನಿನ್ನೆ ಗುರುವಾರ ಎಚ್.ವಿಶ್ವನಾಥ, ಯೋಗೇಶ್ವರ, ಸಾಬಣ್ಣ, ಶೆಟ್ಟಿ ಜೊತೆ ಸಿದ್ದಿ ಹೆಸರು ವಿ.ಪ. ಸದಸ್ಯತ್ವಕ್ಕೆ ಪ್ರಕಟವಾದಾಗ ಹೆಚ್ಚು ಬೆರಗುಗೊಳಿಸಿದ್ದೇ ಈ ಶಾಂತರಾಮ ಸಿದ್ದಿ ಹೆಸರು. ಈ ಬಗ್ಗೆ ಯಲ್ಲಾಪುರದ ಸಾಹಿತಿ ಬೀರಣ್ಣ ನಾಯಕ ಮೊಗಟಾ ಪತ್ರಿಕೆಯೊಂದರಲ್ಲಿ ಕೆಲವು ದಿವಸಗಳ ಹಿಂದೆ ಸೂಚ್ಯವಾಗಿ ಬರೆದಿದ್ದರು. ನಂತರ ನಿನ್ನೆ ಅವರ ಆಯ್ಕೆಯ ಸುದ್ದಿ ಪ್ರಕಟವಾಯಿತು. ಈ ಹಿನ್ನೆಲೆಯಲ್ಲಿ ಇಂದು ಬೀರಣ್ಣ ನಾಯಕರ ಮನೆಗೆ ಭೇಟಿ ನೀಡಿದ ಶಾಂತರಾಮ ಸಿದ್ದಿ ಬೀರಣ್ಣರಿಂದ ಸನ್ಮಾನ ಸ್ವೀಕರಿಸಿ ಅವರಿಗೂ ಸನ್ಮಾನಿಸಿ ತೆರಳಿದ್ದಾರೆ.
![](https://i0.wp.com/samajamukhi.net/wp-content/uploads/2020/07/shantaram-s-2.jpg?resize=760%2C467&ssl=1)
![](https://i0.wp.com/samajamukhi.net/wp-content/uploads/2020/07/s-siddi3.jpg?resize=760%2C355&ssl=1)
![](https://i0.wp.com/samajamukhi.net/wp-content/uploads/2020/07/shantaram-siddi-1.jpg?resize=660%2C459&ssl=1)
ಬುಡಕಟ್ಟು ಸಮೂದಾಯದ ಶಾಂತರಾಮ ಸಿದ್ದಿ ವೈದಿಕ ವಿಚಾರಗಳನ್ನು ಪ್ರತಿಪಾದಿಸಿ ಸೇವೆ ಸಲ್ಲಿಸಿದ ಬುಡಕಟ್ಟು ವ್ಯಕ್ತಿ. ಅವರನ್ನು ವಿ.ಪ.ಕ್ಕೆ ನಾಮನಿರ್ದೇಶನ ಮಾಡುವ ಮೂಲಕ ಬಿ.ಜೆ.ಪಿ.ಮತ್ತು ಸಂಘ ಪರಿವಾರಗಳು ತಮ್ಮ ಮೇಲಿದ್ದ ಲಾಗಾಯ್ತಿನ ಆರೋಪಕ್ಕೆ ಉತ್ತರ ಕೊಟ್ಟಂತಾಗಿದೆ. ಶಾಂತರಾಮ ಸಿದ್ದಿಯವರನ್ನು ಅಭಿನಂದಿಸಿದ, ಅವರ ಆಯ್ಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ ಅಸಂಖ್ಯ ಜನರು ಸತ್ಯ, ಪ್ರಾಮಾಣಿಕತೆ,ಉತ್ತರದಾಯಿತನವನ್ನು ಮೆಚ್ಚಿದ್ದಾರೆ. ಈ ಗೌರವಗಳಿಗೆ ಅರ್ಹರಿರುವ ಶಾಂತರಾಮ ಸಿದ್ದಿ ತನ್ನ ಸರಳತೆಯ ಮಧ್ಯೆ ಇಂದು ಸಾಮಾಜಿಕ ಜಾಲತಾಣದ ಹೀರೋ, ಮಾಧ್ಯಮಗಳ ಹೀರೋ ಆಗಿ ಮಿಂಚಿದ್ದಾರೆ.
ಆದರೆ ಈ ಗೌರವ, ಪ್ರಚಾರಕ್ಕಿಂತ ಹೆಚ್ಚು ತಮ್ಮ ನಾಯಕನ ಬದ್ಧತೆ, ಪ್ರಾಮಾಣಿಕ ಕಾಳಜಿಯನ್ನು ಅಸ್ಪೃ ಶ್ಯ ಜನರು ನಿರೀಕ್ಷಿಸುತ್ತಾರೆ ಎನ್ನುವ ಸೂಕ್ಷ್ಮ ಜ್ಞತೆ ಅವರ ನಾಯಕನಿಗೆ ಇರಬೇಕು. ಯಾವುದೇ ಕೋನಗಳಿಂದ ಶಾಂತರಾಮ ಸಿದ್ದಿ ಆಯ್ಕೆ ಸೂಕ್ತ, ಸರಿ ಎನ್ನುವ ಜನರು ಹೌದೌದು ಎನ್ನುವಂಥ ನಡವ ಳಿಕೆ ಅವರಿಂದ ಅಪೇಕ್ಷಣೀಯ. ರಾಜ್ಯದಲ್ಲಿ ಮೊಟ್ಟ ಮೊದಲಿಗೆ ವಿಧಾನಸೌಧ ಪ್ರವೇಶಿಸಿದ ಶಾಂತರಾಮ ಸಿದ್ದಿ ಮೊಟ್ಟ ಮೊದಲಿಗೆ ಅವರ ಸಮೂದಾಯದಿಂದ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಹೀರೋ ಆಗಿರುವುದು ಭಾರತದ ಜನ ಇಲ್ಲಿಯ ವನವಾಸಿಗಳು, ಬುಡಕಟ್ಟುಗಳನ್ನು ನಮ್ಮವರೆಂದು ಭಾವಿಸುವ ದೃಷ್ಟಾಂತ ಕೂಡಾ. ಇಂಥ ಗುರುತರ ಜವಾಬ್ಧಾರಿ ಅವರ ಕೆಲಸ, ನಡವಳಿಕೆಯ ಮೂಲಕ ಸಮಾಜಮುಖಿಯಾಗಿ ಪ್ರತಿಬಿಂಬಿಸಬೇಕಿದೆ ಅಷ್ಟೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)