

ಪಟಾಕಿ ಸದ್ದಿಲ್ಲದ ದೀಪಾವಳಿ ನಡುವೆ ಸಂಭ್ರಮದಿಂದ ಬಿಂಗಿ ಆಚರಣೆ.
ಸಿದ್ದಾಪುರ: ದೀಪಾವಳಿ ಹಬ್ಬವೆಂದರೆ ದೀಪಗಳ ಹಬ್ಬ. ಅಂತೆಯೇ ಜನಪದ ಕಲೆಗಳಲ್ಲೊಂದಾದ ಬಿಂಗಿಪದಕ್ಕೂ ಕೂಡ ಅಷ್ಟೇ ಪ್ರಾಧಾನ್ಯತೆ ಇದೆ. ಮಲೆನಾಡಿನ ಕೆಲವು ಗ್ರಾಮಗಳಲ್ಲಿ ಈಗಲೂ ಕೂಡ ಬಿಂಗಿ ಹಾಡುವಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲೆ, ಹಣ್ಣಡಿಕೆ, ಸಿಂಗಾರ, ಪಚ್ಚತೆನೆಗಳಿಂದ ಸಿಂಗರಿಸಿದ ವಿಶೇಷವಾದ ಬಿಂಗಿ ದೀಪವನ್ನು ಹಿಡಿದು ರಾತ್ರಿಯಿಂದ ಬೆಳಗಿನ ತನಕ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಬಿಂಗಿ ಪದಗಳನ್ನು ಹಾಡಿ ಜನರ ಮನತಣಿಸುತ್ತಾರೆ. ಬಲವಿಂದ್ರನ ಹಾಡು, ಗೋವಿನ ಹಾಡು, ಬಸವನ ಹಾಡು, ಎತ್ತಿಗೆ ಬಾಸಿಂಗ ಕಟ್ಟುವ ಹಾಡು ಮುಂತಾದ ಹಾಡುಗಳನ್ನು ಸೊಗಸಾಗಿ ಹಾಡಲಾಗುತ್ತದೆ.
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕಿಲಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶೇಷ ಬಿಂಗಿ ಹಾಡುವಿಕೆಯನ್ನು ಆಚರಿಸಲಾಯಿತು. ರಾತ್ರಿಯಿಡೀ ನಿದ್ದೆಗೆಟ್ಟು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಹಿರಿಯರಿಂದ ಬಳುವಳಿಯಾಗಿ ಬಂದ ಈ ಕಲೆಯನ್ನು ಇಲ್ಲಿಯ ಯುವಕರು ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಈ ಕಲೆಯು ಹೀಗೆ ಮುಂದುವರಿಯಲಿ ಹಾಗೂ ಬಿಂಗಿಪದವನ್ನು ಉಳಿಸಿ ಬೆಳೆಸೋಣ ಎಂದು ಆಶಿಸೋಣ.
ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಕರೆ
ಸಿದ್ದಾಪುರ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯ ಡಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನ ಉದ್ಯೋಗ ನೀಡುವುದಾಗಿದೆ. ಇದರಡಿಯಲ್ಲಿ 260 ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶಗಳಿವೆ. .ಈ ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಒಂಬುಡ್ಸ್ಮನ್ ಆರ್.ಜಿ.ನಾಯಕ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿ ಮಾರಿಕಾಂಬಾ ಸಭಾಭವನದಲ್ಲಿ ಮನುವಿಕಾಸ ಸಂಸ್ಥೆ ಹಾಗೂ ಈಡಲ್ ಗಿವ್ ಫೌಂಡೇಶನ್ ಸಹಯೋಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಶ್ರಮಿಕ ಕುಟುಂಬಗಳಿಗೆ ಸಲಕರಣೆಗಳನ್ನು (ಗುದ್ದಲಿ,ಪಿಕಾಸಿ, ಬುಟ್ಟಿ)ವಿತರಿಸಿ ಮಾತನಾಡಿದರು. ಆಹಾರ ಭದ್ರತೆಯೊಂದಿಗೆ ಉದ್ಯೋಗವನ್ನು ನೀಡುವುದು ಕಾಯದೆಯ ಮುಖ್ಯ ಉದ್ದೇಶವಾಗಿದೆ.ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾಗಿದ್ದು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇದರ ಅನುಷ್ಠಾನದಲ್ಲಿ ಮನುವಿಕಾಸ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಫೇವಾರ್ಡ ಯು.ಕೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮುದಾಯದ ಕಾಮಗಾರಿಗಳ ಜೊತೆಯಲ್ಲಿ ಅನೇಕ ವೈಯಕ್ತಿಕ ಕಾಮಗಾರಿಗಳನ್ನು ಮಾಡುವುದಕ್ಕೆ ಅವಕಾಶಗಳಿವೆ. ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಾಗಿದೆ. ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಇಲ್ಲದವರಿಗೆ ಈ ಯೋಜನೆ ಬದುಕಿಗೆ ಭರವಸೆಯನ್ನು ತುಂಬಿದೆ. ಅನೇಕರು ಕೆಲಸಗಳನ್ನು ಮಾಡಿ ಜೀವನದ ನಿರ್ವಹಣೆಯನ್ನು ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.ಸಂಸ್ಥೆಯು ಇದಕ್ಕೆ ಪೂರಕವಾದ ಅಗತ್ಯ ಸಹಕಾರವನ್ನು ನೀಡಿ ನೆರವಾಗಿದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧಕರಾದ ನಾಗರಾಜ ಹೆಗಡೆ, ಸ್ಥಳೀಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಗ್ರಾಮ ಪಂಚಾಯತ ನಿಕಟಪೂರ್ವ ಉಪಾಧ್ಯಕ್ಷ ಕೆ.ಆರ್.ವಿನಾಯಕ(ಬಾಬು ನಾಯ್ಕ), ಪಿಡಿಓ ಸುಬ್ರಹ್ಮಣ್ಯ ಹೆಗಡೆ ಮನುವಿಕಾ ಸಂಸ್ಥೆಯ ಸಿ.ಓಓ ಸಂಜೀವ ಕುಲಕರ್ಣಿ ಮಾತನಾಡಿದರು.
ಮನುವಿಕಾಸ ಸಂಸ್ಥೆಯ ಅಶ್ವತ ನಾಯ್ಕ ಸ್ವಾಗತಿಸಿದರು,ನಿರ್ದೇಶಕ ಗಣಪತಿ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಪವನ ಬೊಮ್ಮನಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪುನಿತ ನಾಯ್ಕ ವಂದಿಸಿದರು.
RKMS Martial Arts Uttarakannada ಸಂಸ್ಥೆ ವತಿಯಿಂದ ಶಿರಸಿಯ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಉ.ಕ. ಜಿಲ್ಲೆಯ ಹೆಮ್ಮೆಯ *ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ಕಾಮನ್ವೆಲ್ತ್ ಗೇಮ್ಸ್ ಜಾವೆಲಿನ್ ತ್ರೋ ವಿನ್ನರ್ ಹಾಗೂ ಪ್ರಸ್ತುತ ಸ್ಪೋರ್ಟ್ಸ್ ಕೋಚ್ ಆದಂತಹ ಕಾಶೀನಾಥ್ ನಾಯ್ಕ್ ಬೆಂಗಳೆ ರಿಗೆ ಉತ್ತರ ಕನ್ನಡ ಕರಾಟೆ ಶಿಕ್ಷಕರಾದ ಆನಂದ ಕ್ರಷ್ಣ ನಾಯ್ಕ ಮತ್ತು ಕರಾಟೆ ವಿದ್ಯಾರ್ಥಿಗಳು ಹಾಗೂ ಶಿರಸಿ ಯ ಪ್ರಶಾಂತ, ರವೀಂದ್ರ ನಾಯ್ಕ ಮತ್ತು ಶಿರಸಿ ತಾಲೂಕಿನ ನಾಗರಿಕರು ಸೇರಿ ಸನ್ಮಾನಿಸಿದರು.



