![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಉಪ ಚುನಾವಣೆಗಳಲ್ಲಿ ಜಾತಿ ಮುಖ್ಯವಾಗುವುದಿಲ್ಲ, ನಾನು ಜಾತಿಯನ್ನು ನಂಬುವುದಿಲ್ಲ: ಡಿ ಕೆ ಶಿವಕುಮಾರ್
ಕಳೆದ ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಮೇಲೆ ನಡೆದ ಮೊದಲ ಉಪ ಚುನಾವಣೆಯಲ್ಲಿ ಆರ್ ಆರ್ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿತು. ಒಕ್ಕಲಿಗ ಸಮುದಾಯದ ಮುಖಂಡರಾಗಿ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂದು ಡಿಕೆ ಶಿವಕುಮಾರ್ ನಂಬಿದ್ದರು. ಆದರೆ ಫಲಿತಾಂಶ ವಿರುದ್ಧವಾಯಿತು.
![ಡಿ ಕೆ ಶಿವಕುಮಾರ್ D K Shivakumar](https://i0.wp.com/media.kannadaprabha.com/uploads/user/imagelibrary/2020/11/29/w900X450/dks1.jpg?w=760&ssl=1)
ಬೆಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಮೇಲೆ ನಡೆದ ಮೊದಲ ಉಪ ಚುನಾವಣೆಯಲ್ಲಿ ಆರ್ ಆರ್ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿತು. ಒಕ್ಕಲಿಗ ಸಮುದಾಯದ ಮುಖಂಡರಾಗಿ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂದು ಡಿಕೆ ಶಿವಕುಮಾರ್ ನಂಬಿದ್ದರು. ಆದರೆ ಫಲಿತಾಂಶ ವಿರುದ್ಧವಾಯಿತು.
ಇನ್ನು ಸದ್ಯದಲ್ಲಿಯೇ ಮಸ್ಕಿ ಮತ್ತು ಬಸವಕಲ್ಯಾಣ ಉತ್ತರ ಕರ್ನಾಟಕ ಜಿಲ್ಲೆಗಳ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು ಅಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಾಗಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಲಿಂಗಾಯತ ಗುಂಪಿಗೆ ಒಬಿಸಿ ಮಾನ್ಯತೆ ನೀಡುವ ಬಗ್ಗೆ ಕೂಡ ಯೋಚಿಸುತ್ತಿದ್ದಾರೆ. ಸಹಜವಾಗಿ ಲಿಂಗಾಯತ ಸಮುದಾಯವನ್ನು ಒಲಿಸಲು ಬಿಜೆಪಿಗೆ ಇದು ಸಹಾಯವಾಗುತ್ತದೆ. ಕಾಂಗ್ರೆಸ್ ಗೆ ಈ ಬಾರಿ ಕೂಡ ಉಪ ಚುನಾವಣೆ ಗೆಲ್ಲುವುದು ಕಷ್ಟವಿದೆ, ಅನೇಕ ಸವಾಲುಗಳಿವೆ.
ಹಾಗಾದರೆ ಕಾಂಗ್ರೆಸ್ ಯಾವ ರೀತಿ ಸಿದ್ದತೆ ಮಾಡಿಕೊಳ್ಳುತ್ತಿದೆ, ಅದರ ಕಾರ್ಯತಂತ್ರವೇನು ಎಂಬುದರ ಬಗ್ಗೆ ನ್ಯೂ ಸಂಡೆ ಎಕ್ಸ್ ಪ್ರೆಸ್ ಮಾತನಾಡಿಸಿದಾಗ ಡಿ ಕೆ ಶಿವಕುಮಾರ್ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಸಿಎಂ ಯಡಿಯೂರಪ್ಪ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿ ಅದಕ್ಕೆ ಒಬಿಸಿ ಮಾನ್ಯತೆ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?
-ವೈಯಕ್ತಿಕವಾಗಿ ನಾನು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಈ ವಿಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಕಾಂಗ್ರೆಸ್ ನಾಳೆ ಸಭೆ ನಡೆಸುತ್ತಿದ್ದು ಪಕ್ಷದಲ್ಲಿ ಸಾಮೂಹಿಕವಾಗಿ ಚರ್ಚೆ ಮಾಡಿ ಪ್ರತಿಕ್ರಿಯಿಸುತ್ತೇವೆ.
ಒಕ್ಕಲಿಗರು ಹೆಚ್ಚಾಗಿರುವ ಆರ್ ಆರ್ ನಗರ, ಶಿರಾ ಎರಡೂ ಕ್ಷೇತ್ರಗಳಲ್ಲಿ ನೀವು ಸೋತಿದ್ದೀರಲ್ಲವೇ?
ಶಿರಾದಲ್ಲಿ ಸುಮಾರು ಶೇಕಡಾ 40ರಷ್ಟು ಒಕ್ಕಲಿಗರು ಮತ್ತು ಆರ್ ಆರ್ ನಗರದಲ್ಲಿ ಶೇಕಡಾ 25ರಷ್ಟು ಒಕ್ಕಲಿಗರಿದ್ದಾರೆ.ಚುನಾವಣೆಗಳಲ್ಲಿ ಜಾತಿ ಪ್ರಮುಖ ವಿಷಯವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಈ ಸೋಲಿನ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಂಡಿದ್ದು, ನಾಳೆಯ ಸಭೆಯಲ್ಲಿ ಕೂಡ ಚರ್ಚಿಸುತ್ತೇವೆ.
2018ರಲ್ಲಿ ಮಸ್ಕಿ ಮತ್ತು ಬಸವಕಲ್ಯಾಣ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. 55 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿಯ ಉಪ ಚುನಾವಣೆಯಲ್ಲಿ ಕೂಡ ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆಯೇ?
ಜಾತಿ ಲೆಕ್ಕಾಚಾರ ಈ ಉಪ ಚುನಾವಣೆಗಳಲ್ಲಿ ಕೂಡ ಕೆಲಸ ಮಾಡುವುದಿಲ್ಲ. ನನಗೆ ಜಾತಿ ಬಗ್ಗೆ ನಂಬಿಕೆಯಿಲ್ಲ. ಪಕ್ಷದ ತತ್ವಗಳು, ಕಾರ್ಯಕ್ರಮಗಳು, ಅಭ್ಯರ್ಥಿಗಳು ಹಾಗೂ ಇನ್ನಿತರ ಕಾರಣಗಳು ಮುಖ್ಯವಾಗುತ್ತದೆ. ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
ಕಳೆದ 10 ವರ್ಷಗಳಲ್ಲಿ ಕೆಪಿಸಿಸಿ ಮರುರಚನೆಯಾಗಿಲ್ಲ, ನೀವು ಅದನ್ನು ಮರು ರಚನೆ ಮಾಡುತ್ತೀರಾ?
ಮಾರ್ಚ್ ತಿಂಗಳಲ್ಲಿ ನಾನು ಅಧಿಕಾರ ವಹಿಸಿಕೊಂಡ ಮೇಲೆ ಕೊರೋನಾ ಬಂತು. ರಾಜ್ಯದ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟು ಪಕ್ಷದ ಕಾರ್ಯಕರ್ತರನ್ನು ಮತ್ತು ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ವಾಸ್ತವ ಸಂಗತಿಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ. ನನಗೆ ಸೂಕ್ಷ್ಮ ಸಂಗತಿಗಳು ಗೊತ್ತಾದ ನಂತರ ಕೆಪಿಸಿಸಿ ಮರುರಚನೆ ಬಗ್ಗೆ ನೋಡುತ್ತೇನೆ.
ಬ್ರಾಂಡ್ ಕನ್ಸಲ್ಟೆಂಟ್ ಮತ್ತು ಮ್ಯಾನೇಜರ್ ಗಳನ್ನು ಕರ್ನಾಟಕದಲ್ಲಿ ಸಹಾಯಕ್ಕೆ ನೇಮಿಸಿಕೊಳ್ಳುವ ಬಗ್ಗೆ ಮಾತುಕತೆಗಳು ಕೇಳಿಬರುತ್ತಿವೆ. ಏನು ಹೇಳುತ್ತೀರಿ?
-ಇಂದು ಹಲವು ವಿಷಯಗಳ ಕುರಿತು ಚರ್ಚಿಸಲು ಬ್ರಾಂಡ್ ಕನ್ಸಲ್ಟೆಂಟ್ ಮತ್ತು ತಜ್ಞರು ಸಿಗುತ್ತಾರೆ. ಅವರು ಎಂತಹ ಧಿರಿಸು ಧರಿಸಬೇಕು, ಪಕ್ಷವನ್ನು ಹೇಗೆ ಸಂಘಟಿಸಬೇಕು, ಕಾರ್ಯಕ್ರಮಗಳಿಗೆ ಯಾವ ರೀತಿ ಆದ್ಯತೆ ನೀಡಬೇಕು ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾರೆ. ಅವರು ಈವೆಂಟ್ ಮ್ಯಾನೇಜರ್ ಗಳ ರೀತಿ. ಪಕ್ಷದಲ್ಲಿ ಅಂತಹ ಸಲಹೆಗಳು ಕೇಳಿಬಂದರೆ ನಾನು ಮುಕ್ತವಾಗಿದ್ದೇನೆ.
ತಳಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ, ಗ್ರಾಮ ಪಂಚಾಯತ್ ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಯಾವ ರೀತಿ ಸಿದ್ದವಾಗುತ್ತಿದೆ?
ಪಕ್ಷದಲ್ಲಿ ಒಬ್ಬ ನಾಯಕ ಎನಿಸಿಕೊಳ್ಳಲು ಗ್ರಾಮ ಪಂಚಾಯತ್ ಚುನಾವಣೆಗಳಿಂದಲೇ ಆರಂಭಿಸಬೇಕು. ನಾನು ಕೆಲಸ ಆರಂಭಿಸಿದ್ದು ಉತ್ತರ ಕನ್ನಡದಲ್ಲಿ ಈಗ ಇದ್ದೇನೆ, ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸದಲ್ಲಿದ್ದೇನೆ.
(kpc)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)