![](https://i0.wp.com/samajamukhi.net/wp-content/uploads/2021/01/30.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಅಪರಾಧಿಗೆ ಶಿಕ್ಷೆ, ಪೊಲೀಸರಿಗೆ ಬಹುಮಾನ-
ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದ ರಾಮನಗರ ನಿವಾಸಿ ರವರ ಮಗಳಾದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹಲವು ಬಾರಿ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಬಗ್ಗೆ ದಿನಾಂಕ : 13-12-2014 ರಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾ ನಂ 196/2014 U/S 4,6,8,10,12 ಪೋಕ್ಸೋ ಕಾಯ್ದೆ,ಹಾಗೂ 376(2),354(A) IPC ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಶ್ರೀ. ಆರ್ ಎಲ್ ಗಣಪತಿ ಸಿಪಿಐ ಶಿರಸಿ ವೃತ್ತ, ಆರೋಪಿತ ನಾಗರಾಜ್ ಪೂಜಾರಿ ತಂದೆ ಈಶ್ವರ ಪೂಜಾರಿ ಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡು ದೋಷಾರೋಪಣಾ ಪತ್ರವನ್ನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ರವರಿಗೆ ಸಲ್ಲಿಸಿದ್ದರು.ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ(ಉ.ಕ.) ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು ಪ್ರಕರಣದ ವಿಚಾರಣೆ ಕೈಗೊಂಡು ದಿನಾಂಕ : 28-01-2021 ರಂದು ಆರೋಪಿತನಾದ ನಾಗರಾಜ್ ಈಶ್ವರ ಪೂಜಾರಿ ಗೆ 11 ವರ್ಷ ಜೈಲುಶಿಕ್ಷೆ ಹಾಗೂ 20,000/- ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಅಭಿಯೋಜಕರಾದ ಶುಭಾಷ್ ಖೈರನ್ ರವರು ವಾದವನ್ನು ಮಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಕಾರಣ ಶಿವ ಪ್ರಕಾಶ್ ದೇವರಾಜು ಜಿಲ್ಲಾ ಪೊಲೀಸ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ರವರು ಸದ್ರಿಯವರನ್ನು ಅಭಿನಂದಿಸಿದ್ದಾರೆ. ತನಿಖಾಧಿಕಾರಿ ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಕೋರ್ಟ್ ಕರ್ತವ್ಯ ಸಿಬ್ಬಂದಿ ಮಾರುತಿ ಎಸ್ ಮಾಳಗಿ ರವರಿಗೆ ಬಹುಮಾನ ಘೋಷಿಸಿರುತ್ತಾರೆ.
ದಿ.ನಿಂಗಪ್ಪ ಜೋಗಿ ಸ್ಮರಣಾರ್ಥ ಗುರುವಂದನಾ ಸಂಗೀತ ಕಾರ್ಯಕ್ರಮ
ಸಿದ್ದಾಪುರ:
ರವಿವಾರದಂದು ಹೊಸೂರಿನ ದಿ.ನಿಂಗಪ್ಪ ಜೋಗಿ ನಿವಾಸದ ಆವರಣದಲ್ಲಿ ರಾತ್ರೆ 8 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ಅಹೋರಾತ್ರಿ ಗುರುವಂದನಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಶ್ರೀ ಸುಖದೇವನಾಥಜೀ ಜೋಗಿ ಮಠ ಚಂದ್ರಗುತ್ತಿ, ಶ್ರೀ ಶ್ರೀ ನಿರ್ವತ್ರಿನಾಥ್ಜೀ ಜೋಗಿ ಮಠ ರಾಣೆಬೆನ್ನೂರು ದಿವ್ಯ ಸಾನಿಧ್ಯವಹಿಸಿದ್ದರು. ಅತಿಥಿಗಳಾಗಿ ಖ್ಯಾತ ವಯೋಲಿನ್ ವಾದಕರಾದ ಆನೇಕಲ್ ಬೆಂಗಳೂರುನವರಾದ ಮಂಜುನಾಥಾಚಾರಿ ಹಾಗೂ ಪ್ರಸಿದ್ಧ ಶಹನಾಯಿ ವಾದಕರಾದ ರಾಮಣ್ಣ ಭಜಂತ್ರಿ ಆನವಟ್ಟಿ ಆಗಮಿಸಿದ್ದರು. ಅಧ್ಯಕ್ಷವಹಿಸಿದ್ದ ಎಂ.ಜಿ.ಸಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ವಿಠ್ಠಲ ಆರ್.ಭಂಡಾರಿ ಮಾತನಾಡಿ ಸಾಮಾನ್ಯವಾಗಿ ಸರ್ಕಾರದಿಂದ ಹಣಬಂದರೆ ಅಥವಾ ಯಾರಾದರೂ ಪ್ರಾಯೋಜಕರಾಗಿ ಕಾರ್ಯಕ್ರಮ ಮಾಡುತ್ತಿರುವ ಕಾಲಘಟ್ಟದೊಳಗಡೆ ಸ್ವತಂತ್ರವಾಗಿ ತಮ್ಮ ಮನೆಯ ಅಂಗಳದಲ್ಲಿ ಹಿರಿಯ ಜಾನಪದ ಕಲಾವಿದರಾದ ದಿ.ನಿಂಗಪ್ಪ ಜೋಗಿ ಅವರ 3ನೇ ಪುಣ್ಯ ಸ್ಮರಣಾರ್ಥ ನಡೆಸುತ್ತಿರುವ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಇವತ್ತು ಅನೇಕ ಕಡೆ ಕಾರ್ಯಕ್ರಮಗಳು ನಡೆಯುತ್ತೆ. ಸಾವಿರಾರು ಜನ ಸೇರ್ತಾರೆ ಆದರೆ ಅಲ್ಲೂ ಕೂಡಾ ಒಂದು ಪ್ರದರ್ಶನ ಶೋ ಇರುತ್ತೆ. ಮನೆಯ ಅಂಗಳದಲ್ಲಿ ಒಂದು ಆತ್ಮೀಯತೆ ಇರುತ್ತೆ. ಹಾಗಾಗಿ ಈ ಕಾರ್ಯಕ್ರಮ ಎಲ್ಲರಿಗೂ ಖುಷಿ ಕೊಡುವಂತಹದ್ದು. ಕಲೆ ಯಾವತ್ತೂ ಜೀವಂತವಾಗಿರುತ್ತಿದ್ದು ಮಾನವೀಯತೆಯ ಮೂಲವಾಗಿರುತ್ತದೆ ಎಂದು ಹೇಳಿದರು,
ವೇದಿಕೆಯಲ್ಲಿ ಜೋಗಿ ಸಮಾಜದ ಅಧ್ಯಕ್ಷರಾದ ಅಶೋಕ ಎನ್. ಜೋಗಿ ಉಪಸ್ಥಿತರಿದ್ದರು. ಗಾಯಕ ನಾಗರಾಜ ಎನ್.ಜೋಗಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ತಬಲಾವಾದಕ ವೆಂಕಟೇಶ ಬೋಡಕೆ ವಂದಿಸಿದರು. ನಂತರ ಶಹನಾಯಿ, ವಯೋಲಿನ್, ಗಾಯನ, ತಬಲಾ, ಕೊಳಲು, ಸೆಕ್ಸೋಪೋನ್, ಹಾರ್ಮೋನಿಯಂ, ಕೀಬೋರ್ಡ, ರಿದಮ್ಪ್ಯಾಡ್ ವಾದ್ಯಗಳನ್ನು ನುಡಿಸುವ ಮುಖಾಂತರ ಅಪೂರ್ವ ಕಾರ್ಯಕ್ರಮ ನಡೆಯಿತು.ಶಿವಪ್ಪ ಜೋಗಿ, ನಾಗರಾಜ ಜೋಗಿ ಇವರ ಜೋಗಿ ಜನಪದ ಕಲೆಯ ವಿಶೇಷವಾಗಿತ್ತು. ಒಟ್ಟು 30 ಜನ ಖ್ಯಾತ ಕಲಾವಿದರು ಭಾಗವಹಿಸಿದ್ದರು.ಹಾಗೂ ಈ ಸಂದರ್ಭದಲ್ಲಿ ಗಾಯಕ ರಮೇಶ ಹೊಸಳ್ಳಿ, ಗಾಯಕಿ ಪುಷ್ಪಾ ನಾಯ್ಕ ಹೊಸೂರ, ಅಸ್ಲಂ ಶೇಖ್, ವಾಸು ನಾಯ್ಕ ಗೋಳಗೋಡ, ಟಿ.ಕೆ.ಎಂ. ಆಜಾದ್ ಮೊದಲಾದವರು ಉಪಸ್ಥಿತರಿದ್ದರು.
ಸಿದ್ದಾಪುರ
ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ಥಿಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ತಂದೆ-ತಾಯಿಯರ ಜವಾಬ್ದಾರಿ ಆಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಇದ್ದರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಹೇಳಿದರು.
ತಾಲೂಕಿನ ಹಲಸಗಾರಿನ ಜಲನಾಗದೇವತಾ ದೇವಸ್ಥಾನದ 4ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮತ್ತೋರ್ವ ಸನ್ಮಾನಿತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಮಾತನಾಡಿದರು.
ವರದರಾಜ ಸ್ವಾಮೀಜಿ ತರಳಿ ಕಾರ್ಯಕ್ರಮ ಉದ್ಘಾಟಿಸಿದರು.
ಚಿದಾನಂದ ಎ. ನಾಯ್ಕ ಹಲ್ಸಗಾರ ಅಧ್ಯಕ್ಷತೆವಹಿಸಿದ್ದರು.ಮಂಜುನಾಥ ವಿ.ನಾಯ್ಕ, ಅಶೋಕ ಎಂ.ನಾಯ್ಕ ಹಳಿಯಾಳ, ಲಕ್ಷ್ಮಣ ಆರ್.ನಾಯ್ಕ ಹಲ್ಸಗಾರ,ಜಿ.ಬಿ.ನಾಯ್ಕ ಹಲ್ಸಗಾರ, ಗಜಾನನ ನಾಯ್ಕ ಮಾಗಣಿ,ಜಯರಾಮ ಕೆ.ನಾಯ್ಕ, ಜಗದೀಶ ನಾಯ್ಕ , ಅಣ್ಣಪ್ಪ ನಾಯ್ಕ, ಮೋಹನ ನಾಯ್ಕ ಇತರರಿದ್ದರು.
ಇದೇ ಸಂದರ್ಭದಲ್ಲಿ ಯುವಕಲಾವಿದ ಯುವರಾಜ್ ನಾಯ್ಕ ಹಳಿಯಾಳ ಅವರನ್ನು ಅಭಿನಂದಿಸಲಾಯಿತು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.ನಂತರ ಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘ ಬೇಡ್ಕಣಿ ಇವರಿಂದ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಸಿದ್ದಾಪುರ
ತಾಲೂಕಿನ ಹವ್ಯಕ ಬಳಗದವರು ಕಡಕೇರಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ದಾಪುರದ ನಿಸರ್ಗ ಪ್ರೆಂಡ್ಸ್ ಪ್ರಥಮ ಹಾಗೂ ಸಂತೆಗುಳಿಯ ಎಂಸಿಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಜ.23ರಿಂದ 26ರವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗದಿಂದ ಹವ್ಯಕ ಬಳಗದ 33ತಂಡಗಳು ಭಾಗವಹಿದ್ದವು.
ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ನಿಸರ್ಗ ಪ್ರೆಂಡ್ಸ್ ತಂಡದ ಪ್ರವೀಣ ಹೆಗಡೆ, ಉತ್ತಮ ಬ್ಯಾಟ್ಸಮನ್ ಪ್ರಶಸ್ತಿಯನ್ನು ಅನೀಷ್ ಎಂಸಿಸಿ ಸಂತೆಗುಳಿ,ಉತ್ತಮ ಬೌಲರ್ ಪ್ರಶಸ್ತಿಯನ್ನು ವಂಡರ್ ಬಾಯ್ಸ್ ತಂಡದ ವೆಂಕಿ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಹ್ಯಾವ್ಕ್ರಿಕ್ ತಂಡದ ಚಂದನ ಹಾಗೂ ಉತ್ತಮ ಕೀಪರ್ ಪ್ರಶಸ್ತಿಯನ್ನು ನಿಸರ್ಗ ಪ್ರೆಂಡ್ಸ್ತಂಡದ ವಿನಯ್ ಆಲಳ್ಳಿ ತಮ್ಮದಾಗಿಸಿಕೊಂಡಿದ್ದಾರೆ.
ಬಹುಮಾನ ವಿತರಣೆ: ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹಾಗೂ ಶ್ರೇಯಸ್ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ಕೆ.ಶ್ರೀಧರ ವೈದ್ಯ ಬಹುಮಾನ ವಿತರಿಸಿದರು. ಬಿದ್ರಕಾನ ಗ್ರಾಪಂ ಸದಸ್ಯ ಜಯಂತ ಹೆಗಡೆ ಕಲ್ಲಾರೆಮನೆ,ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ, ಪರಮೇಶ್ವರಯ್ಯ ಕಾನಳ್ಳಿಮಠ ಮತ್ತಿತರರಿದ್ದರು.
ಪ್ರಸನ್ನ ಹೆಗಡೆ, ಚಂದನ ಶಾಸ್ತ್ರಿ, ಅಕ್ಷರ ಹೆಗಡೆ, ವಿನಯ್ ಭಟ್ಟ, ವಿನಯ್ ಆಲಳ್ಳಿ, ಗೌತಮ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
![](https://i0.wp.com/samajamukhi.net/wp-content/uploads/2021/01/30.jpg?resize=410%2C295&ssl=1)
![](https://i0.wp.com/samajamukhi.net/wp-content/uploads/2021/01/SDP-291.jpg?resize=760%2C760&ssl=1)
![](https://i0.wp.com/samajamukhi.net/wp-content/uploads/2021/01/25-sdp-012.jpg?resize=760%2C540&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)