ರೈತ ಚಳವಳಿ : ಒಂದು ಟಿಪ್ಪಣಿ – & ದಯವಿಟ್ಟು ರೈತರ ನೋವನ್ನು ಅರ್ಥ ಮಾಡಿಕೊಳ್ಳಿ

——————————-ದೇಶದ ರಾಜಧಾನಿಯ ವಿವಿಧ ಗಡಿ ಭಾಗಗಳಲ್ಲಿ ಲಕ್ಷಾಂತರು ರೈತರು ಚಳುವಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚಳವಳಿಯ ಬಗ್ಗೆ ಪ್ರಾಥಮಿಕ ತಿಳಿವಳಿಕೆಯನ್ನು ನೀಡುವುದು ಈ ಟಿಪ್ಪಣಿಯ ಉದ್ದೇಶ. ಕೃಷಿ ಸುಧಾರಣೆ: ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಕೃಷಿ ಪದ್ಧತಿಯು ಸಾಧಿಸಿದ ಪ್ರಗತಿಯನ್ನು ನಮ್ಮ ದೇಶದ ಸಾಂಪ್ರದಾಯಕ, ಕೃಷಿ ಪದ್ಧತಿಯೊಡನೆ ಹೋಲಿಸಿ ನೋಡಿದಾಗ, ನಮ್ಮ ಕೃಷಿ ಪದ್ಧತಿಯಲ್ಲಿ ಸುಧಾರಣೆ ಅಗತ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ೧೯೯೦ರ ದಶಕದಲ್ಲಿ ಜ್ಯಾರಿಗೆ ಬಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳು ಅನ್ನದಾತನ ಬದುಕಲ್ಲಿ ಬದಲಾವಣೆಗಳನ್ನು ತರಲಿವೆ ಎಂದು ಈಗಿನಂತೆಯೇ ಆಗಲೂ ಹೇಳಲಾಗಿತ್ತು. ಆದರೆ ಅಂತಹ ಬದಲಾವಣೆಗಳೇನೂ ಸಂಭವಿಸಲಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಸರಕಾರವೇ ನೀಡಿದ ಅಂಕಿ ಅಂಶಗಳ ಪ್ರಕಾರ ೧೯೯೫ರಿಂದ ೨೦೧೯ರ ನಡುವೆ ಒಟ್ಟು ೨೯೬೪೩೮ ರೈತರು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸರಕಾರದ ಲೆಕ್ಕಕ್ಕೆ ಸಿಗದ ಸಾವುಗಳು ಇದಕ್ಕಿಂತಲೂ ಹೆಚ್ಚಿರುತ್ತವೆ. ರೈತರು ದಿಕ್ಕೆಟ್ಟಿದ್ದಾರೆ, ತಮ್ಮ ಜಮೀನನ್ನು ಕಳೆದುಕೊಂಡಿದ್ದಾರೆ. ಇದರ ಪರಿಣಾಮವೋ ಎಂಬಂತೆ ೨೦೧೪ರಿಂದ ರೈತ ಹೋರಾಟಗಳು ಶೇಕಡಾ ೭೦೦ ರಷ್ಟು ಹೆಚ್ಚಿವೆ. ಈಗ ನಡೆಯುತ್ತಿರುವುದು ಅವುಗಳ ಮುಂದುವರಿಕೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೃಷಿ ಸುಧಾರಣೆಯನ್ನು ಹೇಗೆ ಮಾಡಬೇಕೆಂಬುದು ಬಹಳ ಮುಖ್ಯ ಪ್ರಶ್ನೆ. ಈ ಕುರಿತು ೨೦೦೬ರಷ್ಟು ಹಿಂದೆಯೇ ಸ್ವಾಮಿನಾಥನ್‌ ವರದಿ ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಭೂಮಿಯ ಹಂಚಿಕೆ, ನೀರಾವರಿ, ರೈತರ ಭೂಮಿಯ ಮಾರಾಟ ಇತ್ಯಾದಿ ವಿಷಯಗಳ ಕುರಿತು ಅತ್ಯಂತ ಉಪಯುಕ್ತವಾದ ಸಲಹೆಗಳಿದ್ದುವು. ಆದರೆ ಆ ಮೇಲೆ ಅಧಿಕಾರಕ್ಕೆ ಬಂದ ಯುಪಿಎ ಮತ್ತು ಎನ್‌ಡಿಯೆ ಸರಕಾರಗಳು ಸ್ವಾಮಿನಾಥನ್‌ ವರದಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಯಾಕೆ ಪರಿಗಣಿಸುವುದಿಲ್ಲ ಎಂದು ಹೇಳಲೂ ಇಲ್ಲ, ನಾವು ಕೇಳಲೂ ಇಲ್ಲ.

ಮೂರು ಹೊಸ ಕಾಯ್ದೆಗಳು : ಕೃಷಿ ವಿಷಯದ ಪ್ರಶ್ನೆಗಳ ಗಹನತೆಯನ್ನು ಅರ್ಥಮಾಡಿಕೊಳ್ಳದ ಪ್ರಸ್ತುತ ಸರಕಾರವು ಜನರೆಲ್ಲ ಕೊರೋನಾ ಭಯದಿಂದ ತತ್ತರಿಸುತ್ತಿರುವಾಗ, ಲೋಕ ಸಭೆ, ರಾಜ್ಯ ಸಭೆಗಳಲ್ಲಿ ವಿಸ್ತೃತ ಚರ್ಚೆಯನ್ನೂ ಮಾಡದೆ, ಈಗ ವಿವಾದಾಸ್ಪದವಾಗಿರುವ ಮೂರು ಕಾಯ್ದೆಗಳನ್ನು ತರಾತುರಿಯಿಂದ ( ೨೦೨೦ರ ಸಪ್ಟಂಬರ ತಿಂಗಳ ೨೦ರಂದು) ಅಂಗೀಕರಿಸಿತು. ಈ ಮೂರು ಕಾಯ್ದೆಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಬಹುದು-

೧. ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ ೨೦೨೦: ಇದರ ಪ್ರಕಾರ, ಎಪಿಎಂಸಿ-ನಿಯಂತ್ರಿತ ಮಂಡಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಮೇಲ್ನೋಟಕ್ಕೆ ಇದು ಮುಕ್ತ ವ್ಯವಸ್ಥೆಯಂತೆ ಕಂಡರೂ ನಿಧಾನವಾಗಿ ಅದು ಎಪಿಎಂಸಿಗಳನ್ನು ಸ್ಥಗಿತಗೊಳಿಸುತ್ತದೆ. ಜೊತೆಗೆ ಸರಕಾರವು ಈಗ ನೀಡುತ್ತಿರುವ ಅನೇಕ ಬಗೆಯ ಸಬ್ಸಿಡಿಗಳನ್ನು ನಿಧಾನವಾಗಿ ಕೊನೆಗೊಳಿಸುತ್ತದೆ. ಕೃಷಿಯು ಸರಕಾರದ ಕೈ ತಪ್ಪಿದ ತಕ್ಷಣ ಖಾಸಗಿಯವರು ರೈತರೊಡನೆ ಆಟವಾಡಲು ಸುರು ಮಾಡುತ್ತಾರೆ. ಈ ಆಟಕ್ಕೆ ಕೊನೆಯೇ ಇರುವುದಿಲ್ಲ. ನಮ್ಮ ದೇಶದಲ್ಲಿ ಇನ್ನೂ ೬೮.೮ ಶೇಕಡಾ ಜನರು ( ಸುಮಾರು ೮೦ ಕೋಟಿ) ಬಡತನದ ರೇಖೆಯಿಂದ ಕೆಳಗಿರುವಾಗ ಸರಕಾರವು ಇಂತಹ ಜವಾಬ್ದಾರಿಗಳಿಂದ ತನ್ನನ್ನು ಈಗಲೇ ಮುಕ್ತಗೊಳಿಸಿಕೊಂಡರೆ ಇನ್ನಷ್ಟು ಅಪಾಯಗಳು ಸಂಭವಿಸುತ್ತವೆ.

೨. ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ, ೨೦೨೦: ಇದನ್ನು ʼಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯದ ಸುಗ್ರೀವಾಜ್ಞೆʼ ಎಂದು ಕರೆಯಬಹುದು. ಈ ಕಾಯ್ದೆಯ ಪ್ರಕಾರ, ಆರ್ಥಿಕ ಏಜೆಂಟರು ಯಾವುದೇ ಕಾನೂನು ಕ್ರಮದ ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಬಹುದು. ಒಬ್ಬ ರೈತನಿಗೆ ಏನಾದರೂ ಅನ್ಯಾಯವಾದರೆ, ಆತ ನ್ಯಾಯಾಲಯಕ್ಕೆ ಹೋಗುವಂತಿಲ್ಲ, ಬದಲು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳಬೇಕು. ಒಂದು ಕಾಯ್ದೆಯನ್ನು ಹೀಗೆ ನ್ಯಾಯಾಂಗ ವ್ಯವಸ್ಥೆಯಿಂದಲೇ ಹೊರಗಿಟ್ಟಿರುವುದು ಇದುವೇ ಪ್ರಥಮ. ಇಂಥಲ್ಲಿ ದಾಸ್ತಾನುಗಾರರು ಕೃತಕ ಅಭಾವ ಸೃಷ್ಟಿಸಿ, ಬೆಲೆ ಏರಿಕೆ ಮಾಡಿದರೆ ಸರಕಾರವೂ ಸೇರಿದಂತೆ ಯಾರಿಗೂ ಏನೂ ಮಾಡಲಾಗದು. ದಾಸ್ತಾನುಗಾರರು ದೇಶದ ಹಲವು ಕಡೆಗಳಲ್ಲಿ ನೀರುಳ್ಳಿಯ ಕೃತಕ ಅಭಾವ ಸೃಷ್ಟಿಸಿ ಕಿಲೋ ಒಂದಕ್ಕೆ ೩೦೦ ರೂಪಾಯಿ ವಸೂಲಿ ಮಾಡುವಾಗ ಯಾವ ಸರಕಾರಗಳಿಗೂ ಏನೂ ಮಾಡಲಾಗಲಿಲ್ಲ. ನಾಳೆ ಅಕ್ಕಿ, ಗೋಧಿ, ಎಣ್ಣೆ, ಬೇಳೆಗಳಿಗೆ ಹೀಗಾಗುವ ಸಾಧ್ಯತೆಗಳು ನಮ್ಮ ಕಣ್ಣ ಮುಂದೆಯೇ ನಿಂತಿವೆ. ಅಗತ್ಯ ವಸ್ತು ಬೆಲೆ ನಿಯಂತ್ರಣ ಇಲ್ಲವಾಗುವುದರಿಂದ ರೈತರೂ ಸೇರಿದಂತೆ ಎಲ್ಲರೂ ವಿಪರೀತ ಬೆಲೆ ಏರಿಕೆಗೆ ಬಲಿಯಾಗಬೇಕಾಗುತ್ತದೆ.

೩. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ ೨೦೨೦: ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯೆಂದು ಹೇಳಲಾಗುತ್ತಿದೆ. ಈ ಕಾಯ್ದೆಯು ಕಾರ್ಪೋರೇಟ್‌ ಕಂಪೆನಿಗಳು ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸಿಕೊಡುತ್ತದೆ. ಇದರ ಪ್ರಕಾರ ಆರೋಗ್ಯಕರ ಸಂಭಾವನೆಗೆ ಪ್ರತಿಯಾಗಿ ಕಂಪೆನಿಯು ಬಯಸಿದ್ದನ್ನು ಉತ್ಪಾದಿಸಲು ಕಂಪನಿಯೊಂದಿಗೆ ರೈತರು ಲಿಖಿತ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಸಹಿಯು ರೈತನ ಭೂಮಿಯ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ, ಬದಲು ಬೆಳೆಯ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಪರೋಕ್ಷವಾಗಿ ತಮ್ಮದೇ ಜಮೀನಿಗೆ ರೈತರು ತಾವೇ ಕೂಲಿಯಾಳುಗಳಾಗುತ್ತಾರೆ. ಕ್ಷಿಪ್ರವಾಗಿ ಹಣ ಮಾಡುವ ಕಲೆಯಲ್ಲಿ ನುರಿತರಾಗಿರುವ ಕಾರ್ಪೊರೇಟ್‌ ಕಂಪೆನಿಗಳು, ಹೆಚ್ಚು ಉತ್ಪಾದಿಸಲು ಬಗೆ ಬಗೆಯ ರಾಸಾಯನಿಕಗಳನ್ನು ಬಳಸಿ, ಭೂಮಿಯನ್ನು ಬಂಜರುಗೊಳಿಸುತ್ತವೆ. ಪಂಜಾಬ್‌, ಹರಿಯಾಣಗಳಲ್ಲಿ ಈಗ ಆದದ್ದು ಇದುವೇ. ಇದರಿಂದ ಅಲ್ಲಿಯ ರೈತರು ಎಚ್ಚೆ ತ್ತಿದ್ದಾರೆ, ಆದರೆ ಉಳಿದವರಿಗೆ ಅಪಾಯದ ಅರಿವಿದ್ದಂತಿಲ್ಲ.

ಇತರ ಸಮಸ್ಯೆಗಳು: ಕಾಯ್ದೆಗಳ ಈ ಸಮಸ್ಯೆಗಳೊಂದಿಗೆ ಇನ್ನಷ್ಟು ಪ್ರಶ್ನೆಗಳೂ ಸೇರಿಕೊಂಡು ಈಗ ಸಂಕೀರ್ಣವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಬಹಳ ಮುಖ್ಯವಾದದ್ದೆಂದರೆ, ಸಂವಿಧಾನದ ಪ್ರಕಾರ ಕೃಷಿಯು ರಾಜ್ಯ ಸರಕಾರದ ಆಧೀನದಲ್ಲಿ ಬರುತ್ತದೆ. ಅದು ಸರಿ ಕೂಡಾ ಹೌದು. ಏಕೆಂದರೆ ರಾಜ್ಯ ಸರಕಾರಗಳಿಗೆ ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಭೂಮಿಯ ಗುಣ, ಬೆಳೆಗಳು, ನೀರಾವರಿ, ಬೇಸಾಯದ ಕ್ರಮಗಳು, ರೈತರ ನಂಬುಗೆಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಇರುತ್ತದೆ. ಹೀಗಿರುವಾಗ, ಕೇಂದ್ರ ಸರಕಾರವು ಏಕಾ ಏಕಿ ಕೃಷಿ ಕಾಯ್ದೆಗಳನ್ನು ತಾನು ಚಾಲ್ತಿಗೆ ತಂದದ್ದು ಸಂವಿಧಾನ ವಿರೋಧೀ ನಡೆಯಾಗುತ್ತದೆ. ಈ ಕುರಿತ ಕೇಸೊಂದು ಸುಪ್ರೀಂ ಕೋರ್ಟಲ್ಲಿ ದಾಖಲಾಗಿದೆ. ಆದರೆ ಸುಪ್ರೀಂ ಕೋರ್ಟು ಅದನ್ನು ಆದ್ಯತೆಯ ಮೇಲೆ ಚರ್ಚೆಗೆ ತೆಗೆದುಕೊಳ್ಳದ್ದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಸರಕಾರವು ಇದೇ ರೀತಿ ವಿದ್ಯುತ್‌ ಕಾಯ್ದೆಯಲ್ಲಿಯೂ ಬದಲಾವಣೆ ತಂದಿದೆ.

ಸಂವಿಧಾನದ ಪ್ರಕಾರ ವಿದ್ಯುತ್‌, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ನಿರ್ವಹಿಸಬೇಕಾದ ಕನ್ಕರೆಂಟ್‌ ಪಟ್ಟಿಯಲ್ಲಿ ಬರುತ್ತದೆ. ಆದರೆ ಕೇಂದ್ರ ಸರಕಾರ ಇದನ್ನು ಪರಿಗಣಿಸದೆ, ಏಕಾ ಏಕಿ ತಾನೇ ನಿರ್ಧಾರ ತೆಗೆದುಕೊಂಡಿರುವುದೂ ಸಂವಿಧಾನ ಬಾಹೀ ರ ಕ್ರಮವಾಗಿದೆ. ಕೇಂದ್ರೀಕರಣ: ದೇಶದ ಅತಿ ಮುಖ್ಯ ಸಂಗತಿಗಳೆಲ್ಲ ಹೀಗೆ ಕೇಂದ್ರ ಸರಕಾರದ ಕೈ ಕೆಳಗೆ ಬಂದರೆ ಖಾಸಗಿಯವರ ಕೆಲಸ ಸುಲಭವಾಗುತ್ತದೆ. ಅವರಿಗೆ ಈಗ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಆಗಬೇಕಿಲ್ಲ. ಬದಲು ಒಂದು ಕೇಂದ್ರದ ಮೂಲಕ ಇಡೀ ದೇಶವನ್ನೇ ಆಕ್ರಮಿಸಿಕೊಳ್ಳಬಹುದು. ಸಾಮಾಜಿಕ ನ್ಯಾಯಕ್ಕಾಗಿ ಇನ್ನೂ ಹಪಹಪಿಸುತ್ತಿರುವ ಭಾರತದಂಥ ದೇಶದಲ್ಲಿ ಇಂಥ ಬೆಳವಣಿಗೆಗಳು ಬಡತನವನ್ನು ಇನ್ನಷ್ಟು ಹೆಚ್ಚು ಮಾಡಿ ಆಳದಲ್ಲಿ ದೇಶವನ್ನು ದುರ್ಬಲಗೊಳಿಸುತ್ತದೆ.

ಕೊನೆಮಾತು: ಇವತ್ತು ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿಯು ಅತ್ಯಂತ ಮಹತ್ವದ ಘಟನೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧಗಳನ್ನು (ಫೆಡರಲ್‌ ರಚನೆ) ಪರಿಶೀಲಿಸಲು ಒತ್ತಾಯಿಸಿದೆ. ಕೃಷಿಭೂಮಿಯ ಖಾಸಗೀಕರಣವು ಭಾರತದಂಥ ಅಭಿವೃದ್ಧಿ ಶೀಲ ದೇಶದಲ್ಲಿ ಉಂಟು ಮಾಡಬಹುದಾದ ಅನಾಹುತಗಳ ಬಗ್ಗೆ ಎಲ್ಲೆಡೆಯೂ ಚರ್ಚೆ ನಡೆಯುತ್ತಿದೆ. ತತ್ಕಾಲೀನ ರಾಜಕೀಯ ಲಾಭಗಳನ್ನು ಬದಿಗಿರಿಸಿ ಎಲ್ಲರೂ ಈ ಕುರಿತು ಯೋಚಿಸಿದರೆ ಬಹಳ ಪ್ರಯೋಜನವಿದೆ. ಇದು ಸಾಧ್ಯವಾಗಲು, ಸರಕಾರವು ಈಗ ಗಡಿಬಿಡಿಯಿಂದ ಜ್ಯಾರಿಗೆ ತಂದ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಅಭಿವೃದ್ಧಿಯ ಕುರಿತು ಚರ್ಚಿಸಲೆಂದೇ ವಿಶೇಷ ಪಾರ್ಲಿಮೆಂಟ್‌ ಅಧಿವೇಶನವನ್ನು ಕರೆಯಬೇಕು. ಅದಕ್ಕೂ ಮುನ್ನ ರೈತರೊಂದಿಗೆ, ಕೃಷಿ ತಜ್ಞರೊಂದಿಗೆ, ರಾಜ್ಯ ಸರಕಾರಗಳೊಂದಿಗೆ ಕೇಂದ್ರವು ಮುಕ್ತವಾದ ಚರ್ಚೆಯನ್ನು ನಡೆಸಬೇಕು. ಸ್ವಾಮಿನಾಥನ್‌ ವರದಿ ಯಾಕೆ ಬೇಡವೆಂದು ಜನರಿಗೆ ಹೇಳಬೇಕು.

– ಪುರುಷೋತ್ತಮ ಬಿಳಿಮಲೆ

ದಯವಿಟ್ಟು ರೈತರ ನೋವನ್ನು ಅರ್ಥ ಮಾಡಿಕೊಳ್ಳಿ, ಸರ್ವಾಧಿಕಾರಿಗಳಂತೆ ವರ್ತಿಸಬೇಡಿ’: ಕೇಂದ್ರಕ್ಕೆ ವಿಪಕ್ಷಗಳ ತರಾಟೆ!

ರೈತರ ಪ್ರತಿಭಟನೆ ವಿಚಾರವನ್ನು ನಿಭಾಯಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Delhi police hang net at Tikri border in New Delhi on Thursday.

ನವದೆಹಲಿ: ರೈತರ ಪ್ರತಿಭಟನೆ ವಿಚಾರವನ್ನು ನಿಭಾಯಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದ ಸಚಿವರುಗಳು ತಮ್ಮ ಪಾಡಿಗೆ ತಾವಿದ್ದಾರೆ, ರೈತರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಹೇರಲಾಗುತ್ತಿದ್ದು, ಶತ್ರುಗಳಂತೆ ಕಾಣಲಾಗುತ್ತಿದೆ. ಕಂದಕಗಳನ್ನು ನಿರ್ಮಿಸಿ ಬೇಲಿಗಳನ್ನು ಹಾಕುವುದು, ತಡೆಗೋಡೆ ನಿರ್ಮಿಸುವುದು ಎಷ್ಟು ಸರಿ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಇಂದು ಸದನದಲ್ಲಿ ಮಾತನಾಡಿದ ಆರ್ ಜೆಡಿ ಸಂಸದ ಮನೋಜ್ ಕುಮಾರ್ ಜ್ಹಾ, ರೈತರ ಸಮಸ್ಯೆ ಆಲಿಸುವ ತಾಳ್ಮೆಯನ್ನು ಸರ್ಕಾರ ಕಳೆದುಕೊಂಡಿದೆ, ಸರ್ವಾಧಿಕಾರಿಯಂತೆ ವರ್ತಿಸುತ್ತೀರಿ, ಸರ್ಕಾರ ವಿರುದ್ಧ ಟೀಕೆ ಮಾಡಿದರೆ ದೇಶ ವಿರೋಧ ಎಂದು ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.

ರೈತರ ಸಮಸ್ಯೆಗಳನ್ನು, ನೋವನ್ನು ಅರ್ಥ ಮಾಡಿಕೊಳ್ಳಿ ಎಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಈ ನಡುಗುವ ಚಳಿಯಲ್ಲಿ ನೀವು ಪ್ರತಿಭಟನಾ ರೈತರಿಗೆ ನೀರು ಪೂರೈಕೆ ಮಾಡುವುದನ್ನು, ಶೌಚಾಲಯ ವ್ಯವಸ್ಥೆಯನ್ನು ನಿಲ್ಲಿಸಿದ್ದೀರಿ, ಕಂದಕ ರಚಿಸಿ, ಮುಳ್ಳು ತಂತಿಗಳನ್ನು ನಿರ್ಮಿಸಿ ಬ್ಯಾರಿಕೇಡ್ ಗಳನ್ನು ಹಾಕಿದ್ದೀರಿ. ಭಾರತದೊಳಗೆ ನುಗ್ಗಿದ ನೆರೆ ದೇಶದವರಿಗೆ ಸಹ ಇಂತಹ ಕಠಿಣ ನಿಲುವು ತೋರಿಸಿದ್ದು ಈ ಹಿಂದೆ ಕೇಳಿಲ್ಲ ಕೂಡ ಎಂದರು.

ಇನ್ನು ಪಾಪ್ ಗಾಯಕಿ ರಿಹಾನ್ನ ಟ್ವೀಟ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಮನೋಜ್ ಕುಮಾರ್ ಜ್ಹಾ, ಟ್ವೀಟ್ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಡೆಯಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದು ಎಂದರು.

ಅದಾನಿ ಗ್ರೂಪ್ ನಂತಹ ಖಾಸಗಿ ಉದ್ಯಮಿಗಳು ನಿರ್ಮಿಸಿರುವ ಕೋಲ್ಡ್ ಸ್ಟೋರೇಜ್ ಚೈನ್ ಮತ್ತು ಗೋದಾಮುಗಳನ್ನು ಉಲ್ಲೇಖಿಸಿದ ಅವರು, ನಿಮ್ಮ ಬೆನ್ನೆಲುಬು ರೈತರು. ನೀವು ಗೆದ್ದಿರುವ 303 ಸೀಟುಗಳು ಶೀತ ಸಂಗ್ರಹಾಗಾರ, ಗೋದಾಮುಗಳಿಂದ ಬಂದಿಲ್ಲ, ಬದಲಿಗೆ ಈ ದೇಶದ ರೈತರು, ಬಡವರಿಂದ ಸಿಕ್ಕಿದ್ದು. ನಾವು ನಿಮ್ಮನ್ನು ಬೆಂಬಲಿಸುತ್ತೇವೆ, ಆದರೆ ನಿಮ್ಮ ವಿರುದ್ಧ ಮಾತನಾಡಿದರೆ ಅದು ದೇಶ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ. ದೇಶಭಕ್ತಿ ಇರುವುದು ಬಲ ಪ್ರದರ್ಶನದಲ್ಲಿ ಅಲ್ಲ, ಹೃದಯದಿಂದ ಬರಬೇಕು ಎಂದು ಕವನ ಓದುವ ಮೂಲಕ ವ್ಯಂಗ್ಯವಾಗಿ ಹೇಳಿದರು.

ದೇಶವು ಪೊಲೀಸರು, ತೋಳ್ಬಲ, ಜನ ಗಣ ಮನ ಮತ್ತು ವಂದೇ ಮಾತರಂಗಳಿಂದ ಕೂಡಿಲ್ಲ. ದೇಶವು ಸಂಬಂಧಗಳಿಂದ ಬೆಸೆಯಲ್ಪಟ್ಟಿದೆ ಮತ್ತು ನೀವು ಆ ಸಂಬಂಧಗಳನ್ನು ಮಣ್ಣಾಗಿಸಿದ್ದೀರಿ, ಬಿಹಾರ ರಾಜ್ಯ ಕಾರ್ಮಿಕರನ್ನು ಒದಗಿಸುವ ರಾಜ್ಯವಾಗಿ ಮಾರ್ಪಟ್ಟಿದೆ. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಕೂಡ ಬಿಹಾರ ಮಾದರಿಯಲ್ಲಿ ಆಗಬೇಕೆಂದು ನೀವು ಬಯಸುತ್ತಿದ್ದೀರ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್  ನಾಯಕ ದಿಗ್ವಿಜಯ್ ಸಿಂಗ್, ನೋಟು ಅಮಾನ್ಯೀಕರಣದಿಂದ ಹಿಡಿದು ಸಿಎಎಯವರೆಗೆ ಸರ್ಕಾರದ ತಪ್ಪು ನಿರ್ಧಾರಗಳಾಗಿದ್ದು ದೇಶದ ಜನರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ತಳ್ಳಿದೆ ಎಂದರು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತುಗಳನ್ನು ಉಲ್ಲೇಖಸಿದ ದಿಗ್ವಿಜಯ್ ಸಿಂಗ್, ನೋಟು ಅಮಾನ್ಯೀಕರಣವು ಒಂದು ಮಹತ್ವದ ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಪ್ರಮಾದವಾಗಿದೆ. ದೇಶದಲ್ಲಿ ಸುಮಾರು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು. ಸಣ್ಣ, ಮಧ್ಯಮ ಉದ್ಯಮಗಳು ನಾಶವಾದವು, ಮೋದಿ ಸರ್ಕಾರದ ಭರವಸೆಗಳು ಮತ್ತು ಈಡೇರಿಕೆ ಮಧ್ಯೆ ಭಾರೀ ಅಂತರವಿದೆ ಎಂದು ಟೀಕಿಸಿದರು.

ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು ಸಾಕಷ್ಟು ಅಕ್ರಮ ನಡೆದಿದೆ ಎಂದು ಸಹ ಇಂದು ಸದನದಲ್ಲಿ ಕಾಂಗ್ರೆಸ್ ನಾಯಕರು ಆರೋಪಿಸಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯಸಭೆಯಲ್ಲಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಕಳೆದ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರದ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಪಾತ್ರ, ದುಷ್ಕರ್ಮಿಗಳ ಕೈವಾಡವಿತ್ತೆಂದು ಅನಿಸುತ್ತಿದೆ ಎಂದರು. ಈ ಘಟನೆಯನ್ನು ಎಲ್ಲಾ ಪಕ್ಷಗಳು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *