ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ವಿಧಾನ ಪರಿಷತ್ತಿನಲ್ಲಿ 2021-22ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯ ಮೇಲೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಗೊಂದಲದ ವಿಷಯವಿದೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು, ಆದರೆ ಈಗ ಉಳ್ಳವರಿಗೆ ಮೀಸಲಾತಿ ಕೊಡುವ ಪ್ರಯತ್ನ ನಡೆಯುತ್ತಿದೆ. ಸರಿ ಸಮಾನವಾಗಿ ಮೀಸಲಾತಿ ಬೇಕು, ಮಲ್ಲಿಕಾರ್ಜುನ ಖರ್ಗೆ ಮಗ ದೇವಸ್ಥಾನದ ಒಳಗೆ ಹೋಗಲಾಗುತ್ತದೆಯಾ? ಸಿದ್ದರಾಮಯ್ಯ, ಈಶ್ವರಪ್ಪ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶವಿದೆಯೇ? ಎಂದು ಪ್ರಶ್ನಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೆ ಮೀಸಲಾತಿ ನೀಡಬೇಕು. ಆದರೆ ಏಕಾಏಕಿ ಎಲ್ಲ ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿರುವುದು ಆರ್ಎಸ್ಎಸ್ನ ಷಡ್ಯಂತ್ರ ಎಂದು ದೂರಿದರು.
ಮೀಸಲಾತಿ ಹೋರಾಟದ ಹಿಂದೆ ಸಂಘಪರಿವಾರದ ಕೈವಾಡವಿದೆ. ಮೀಸಲಾತಿಯನ್ನು ರದ್ದು ಮಾಡುವ ಉದ್ದೇಶದಿಂದ ಎಲ್ಲ ಸಮುದಾಯಗಳಿಗೂ ಮೀಸಲಾತಿ ಬೇಕು ಎನ್ನುವ ಆಗ್ರಹವನ್ನು ಮುಂದಿಟ್ಟಿದೆ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು, ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಾನು ಮಾಡಬೇಕಾದ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದು ಹೇಳಿದ್ದರು ಎಂದರು.
ಅದಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್, ಇದು ನಾಗಪುರ ವಿಶ್ವವಿದ್ಯಾಲಯದ ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದೀರಿ ಅಷ್ಟೆ. ಆರ್ಎಸ್ಎಸ್ ಯಾವಾಗಲೂ ಮೀಸಲಾತಿ ವಿರೋಧಿ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಎಲ್ಲ ಸಮುದಾಯಗಳಿಂದ ಮೀಸಲಾತಿ ವಿಷಯ ಕೇಳಿ ಬರುತ್ತಿದೆ. ಇದರ ಹಿಂದೆ ಆರ್ಎಸ್ಎಸ್ ದೊಡ್ಡ ಷಡ್ಯಂತ್ರವಿದೆ ಎಂದರು. (kpc)