

ಶಿರಸಿಯಲ್ಲಿ ಉಪನ್ಯಾಸಕರಾಗಿರುವ ಅಂಕೋಲಾದ ಉಮೇಶ್ ನಾಯ್ಕ ಬರೆದ ನಾಲ್ಕನೇ ಕ್ಲಾಸು ಓದಿದವನು ಹೊತ್ತಿಗೆ ಓದತೊಡಗಿದರೆ ಫಕೀರಸುಬ್ಬನ ಮನೆತನ ಆ ಕುಟುಂಬದ ಧಾರ್ಮಿಕ ಸಮನ್ವಯ, ಪ್ರಗತಿಪರತೆ ವೈಚಾರಿಕತೆಗಳೆಲ್ಲಾ ಅರಿವಿಗೆ ಬರುತ್ತಾ ಸಾಗುತ್ತವೆ.
ಇಷ್ಟು ಸಾಮಾಜಿಕ ಮೌಲ್ಯದ, ಸಮಕಾಲೀನ ಸಮಾಜಮುಖಿ ಪುಸ್ತಕ ಪ್ರಕಟಿಸಿದರ್ಯಾರು? ಎಂದು ಒಂದೇಒಂದು ಪ್ರಶ್ನೆ ಉದ್ಭವಿಸಿದರೂ ಸಾಕು. ನಿಮ್ಮ ಶೋಧನೆ ವಿಠ್ಠಲ ಭಂಡಾರಿ, ಮಾಧವಿಭಂಡಾರಿ, ಆರ್.ವಿ.ಭಂಡಾರಿ ಅವರ ಬಂಡಾಯ ಪ್ರಕಾಶನ, ಸಹಯಾನ, ಸಮೂದಾಯ ಬೇಸಿಗೆಶಿಬಿರ, ರಂಗಚಟುವಟಿಕೆ ಎಲ್ಲವೂ ಹೂವಿನ ಪಕಳೆಗಳಂತೆ ಬಿಚ್ಚಿಕೊಳ್ಳುತ್ತವೆ.



ಸದಾಶಯ,ಸಾಮಾಜಿಕ ಕಾಳಜಿ, ಚಿಂತನೆಗಳು ತೀರಾ ವೈಯಕ್ತಿಕವಾದರೂ ಆ ಲಕ್ಷಣಗಳ ಹಿಂದೆ ಅವರ ಜೀನ್ಸ್ ಕೆಲಸಮಾಡಿರುವ ಅನೇಕ ದಾಖಲೆಗಳು ನಮ್ಮ ಬಳಿ ಇವೆ. ಆರ್.ವಿ.ಭಂಡಾರಿ ಶೋಷಿತ ಕುಲದವರಾಗಿ ವಿದ್ಯೆ,ವಿನಯದ ಸಂಪನ್ನತೆಯಿಂದ ಜಾತ್ಯಾತೀತರಾಗಿ ದುಡಿದವರು. ಅವರ ಕಾಳಜಿ, ಜೀವಂತಿಕೆ, ಚಟುವಟಿಕೆಗಳನ್ನು ಇಡೀ ರಾಜ್ಯವೇ ಕಂಡಿದೆ. ಇಂಥ ಆರ್.ವಿ.ಭಂಡಾರಿಯವರ ಮಗನಾಗಿದ್ದ ವಿಠ್ಠಲ್ ಕನ್ನಡ ಸ್ನಾತಕೋತ್ತರ ಓದಿದ ಸಾಮಾನ್ಯ ಹುಡುಗ. ಶಾಲಾದಿನಗಳ ಹೋರಾಟ ಹುಡುಗಾಟದಂತಾಗಬಹುದಾದರೂ ಶಾಲಾ ಕಾಲೇಜು ದಿನಗಳ ನಂತರ ವೃತ್ತಿ-ಪ್ರವೃತ್ತಿಗಳೊಂದಿಗೆ ವಿಠ್ಠಲ್ ಬೆಳೆದದ್ದು ಸಮಾಜಮುಖಿಯಾಗಿ.
ತಂದೆ, ಕಮ್ಯುನಿಸ್ಟ್ ಸ್ನೇಹಿತರ ಪ್ರಭಾವದಡಿ ಹೋರಾಟಗಾರನಾಗಿ ಬೆಳೆಯತೊಡಗಿದ ವಿಠ್ಠಲ್ ಆರ್.ವಿ.ಭಂಡಾರಿ ಬದುಕಿದ್ದಾಗ ತೆರೆಮರೆಯಲ್ಲೇ ಕೆಲಸ ಮಾಡಿದ ಮೌನಿ. ಆರ್.ವಿ. ಗತಿಸಿದ ನಂತರ ತಂದೆಯವರ ಆದರ್ಶ , ಆಶಯಗಳನ್ನು ಬೆಳೆಸಿದ ವಿಠ್ಠಲ್ ಬರೀ ಭೋದಿಸುವ ಉಪನ್ಯಾಸಕರಾಗಲಿಲ್ಲ ಎಳೆಯರಿಗೆ ಮಾರ್ಗದರ್ಶಿ ಯಾದರು. ಸಾಹಿತ್ಯ,ಸಾಂಸ್ಕೃತಿಕತೆಗಳನ್ನು ವಿದ್ಯಾರ್ಥಿಗಳ ಮನಸಲ್ಲಿ ಬಿತ್ತಿದ ವಿಠ್ಠಲ್ ಸಿದ್ಧಾಪುರ ಕಾಲೇಜಿನಿಂದ ರಾಜ್ಯಮಟ್ಟದ ವರೆಗೆ ಮಾಡಿದ ಕೆಲಸಗಳು ಅಪಾರ. ಸಾಹಿತ್ಯ ಗೋಷ್ಠಿ, ಸಂಘಟನೆ, ಹೋರಾಟ, ಜನಪರ ಕೆಲಸ ಯಾವುದೇ ಇರಲಿ ಪ್ರತ್ಯಕ್ಷ-ಪರೋಕ್ಷವಾಗಿ ಸಹಯಾನಿಯಾಗಿರುತಿದ್ದ ವಿಠ್ಠಲ್ ತಲೆಯಲ್ಲಿ ಅವೇ ತುಂಬಿರುತಿದ್ದವು.
ಒಂದ್ ಕಾರ್ಯಕ್ರಮ ಮಾಡ್ಬಹುದಿತ್ತು ಮಾರಾಯ, ಒಂದು ಮೀಟಿಂಗ್ ಮಾಡಬಹುದಿತ್ತು ಎನ್ನುತ್ತಲೇ ಒಂದರಹಿಂದೊಂದು ಯೋಚನೆ, ಯೋಜನೆ ಹೊಂದಿರುತಿದ್ದ ವಿಠ್ಠಲ್ ಒಬ್ಬವ್ಯಕ್ತಿ,ಉಪನ್ಯಾಸಕ, ಹೋರಾಟಗಾರ ಮಾಡುವ ಹತ್ತು ಪಟ್ಟು ಕೆಲಸ ಮಾಡಿದ್ದಾರೆಂದರೆ ಅತಿಶಯೋಕ್ತಿಯಲ್ಲ.
ರಾಜ್ಯದಾದ್ಯಂತ ನಾನಾ ಕಾರ್ಯಕ್ರಮಗಳಿಗಾಗಿ ಗೆಜ್ಜೆಕಟ್ಟಿಕೊಂಡಂತೆ ಅಲೆಯುತಿದ್ದ ವಿಠ್ಠಲ್ ರಲ್ಲೊಬ್ಬ ಕ್ರೀಯಾಶೀಲನಿದ್ದ, ಮನುಷ್ಯತ್ವದ ಮಾನವನಿದ್ದ, ಸಮಾಜದ ಗಿಲೀಟುಗಳಿಗೆ ಬೆಂಕಿಯಾಗುವ ಚಿಕಿತ್ಸಕನಿದ್ದ.ಎಲ್ಲಕ್ಕಿಂತ ಹೆಚ್ಚಾಗಿ ಪರಿರ್ತನೆಗೆ ತವಕಿಸುವ ಸಮತಾವಾದಿ ಕನಸುಗಾರನಿದ್ದ. ಈ ಎಲ್ಲಾ ವೇಷ, ಪಾತ್ರಗಳನ್ನು ೫೨ ನೇ ವಯಸ್ಸಿಗೇ ಮುಗಿಸಿಬಿಡಬೇಕೆಂಬ ಧಾವಂತದಲ್ಲಿ ಬಹುಮುಖಿಯಾಗಿದ್ದ ವಿಠ್ಠಲ್ ವೈಶಿಷ್ಟ್ಯ ಅವರನ್ನು ತಿಂದುಬಿಟ್ಟಿತೆ? ನಿಜ ವಿಠ್ಠಲ್ ತನ್ನ ಅಲ್ಫ ಆಯುಷ್ಯದಲ್ಲಿ ಎಲ್ಲವನ್ನೂ ಹಠಕ್ಕೆ ಬಿದ್ದವರಂತೆ ಮಾಡಿಟ್ಟು ಹೊರಟುಬಿಟ್ಟರು.
ತಾಲೂಕು, ಜಿಲ್ಲೆಯ ಒಳ್ಳೆಯ ಕಾರ್ಯಕ್ರಮಕ್ಕೆ ಸಲಹೆಗಾರನಾಗಿ, ಉಪನ್ಯಾಸಕನಾಗಿ, ಸಂಘಟಕನಾಗಿ, ಪ್ರೇಕ್ಷಕನಾಗಿ ಶಕ್ತಿಯಾಗಿ ದಕ್ಕುತಿದ್ದ ವಿಠ್ಠಲ್ ನಮ್ಮೊಡನಿಲ್ಲ ಎನ್ನುವಾಗ ಅವರು ಮಾಡಿಕೊಟ್ಟ ಕರೋನಾ ಕಷಾಯ, ಎಲ್ಲೆಲ್ಲೋ ಹುಡುಕಿ ಸಂಗ್ರಹಿಸಿಟ್ಟುಕೊಳ್ಳುತಿದ್ದ ಡ್ರೈಫ್ರುಟ್, ಕೋಣೆಯಿಡಿ ತುಂಬಿರುತಿದ್ದ ಪುಸ್ತಕದ ರಾಶಿ, ಯಮುನಾಗೆ ಗಂಡನಾಗಿ, ಹೆಂಡತಿಯಾಗಿ!,ಸಂಗಾತಿಯಾಗಿ ಮಗನಾಗಿ, ಅಕ್ಕ ಮಾಧವಿಗೆ ಅಪ್ಪನಾಗಿ, ತಮ್ಮನಾಗಿ ನಮ್ಮಂಥ ಅನೇಕರಿಗೆ ಗುರುವಾಗಿ ಸ್ನೇಹಿತನಾಗಿ ನಡೆದುಕೊಳ್ಳುತಿದ್ದ ವಿಠ್ಠಲ್ ಪಾತ್ರ, ಕಾಳಜಿ ಅವರನ್ನು ಬಿಟ್ಟು ಬೇರೆಯವರಿಂದ ಮಾಡಲಾಗದ ಅಸಾಧ್ಯ ಸಾಧನೆ.ಅವರದೇ ಅನನ್ಯತೆ.
ವ್ಯಕ್ತಿಗಳ ಬಗ್ಗೆ ಅವರು, ಅವರ ಆಪ್ತರು ಮಾತನಾಡುವುದಕ್ಕಿಂತ ಅವರ ಕೆಲಸ ಮಾತನಾಡಬೇಕಂತೆ ಈಗ ವಿಟ್ಠಲ್ ನೆನಪು ಆದರೆ ಅವರ ಕೆಲಸಗಳು ಮಾತನಾಡುತ್ತಿವೆ. ಅವರ ಕೆಲಸ, ಅವರ ವ್ಯಕ್ತಿತ್ವ ಧ್ಯಾನಿಸುತಿದ್ದ ಸಮಾಜಮುಖಿ ಚಿಂತನೆ,ವಾತಾವರಣ ಸೃಷ್ಟಿಯಾಗಲು ಶ್ರಮಿಸುವ ಎಲ್ಲಾ ಮನಸುಗಳಲ್ಲಿ ವಿಠ್ಠಲ್ ಇರುತ್ತಾರೆ. ಸಂವಿಧಾನ ಓದು, ಸಹಯಾನ ಚಟುವಟಿಕೆ ಎಲ್ಲವನ್ನೂ ನಿಲ್ಲಿಸಿದ ಕರೋನಾ ವಿಠ್ಠಲ್ ರಂಥ ಮಾನವೀಯತಾವಾದಿ ಕ್ರೀಯಾಶೀಲನ ಉಸಿರು ನಿಲ್ಲಿಸಬಾರದಿತ್ತು. ಸ್ನೇಹಿತ ರತ್ನಾಕರ ನಾಯ್ಕರಿಗೆ ಅಭಿಪ್ರಾಯ, ಅನಿಸಿಕೆ, ಸಲಹೆ, ಸಹಕಾರ ಕೇಳಿದಾಗಲೆಲ್ಲಾ ಥಟ್ಟನೆ ಹೊರಬರುತಿದ್ದ ಸುಬ್ರಾಯಮತ್ತೀಹಳ್ಳಿ ಸರ್, ವಿಠ್ಠಲ್ ಸರ್ ಎನ್ನುವ ಎರಡೇ ಹೆಸರುಗಳಲ್ಲಿ ವಿಠ್ಠಲ್ ಮಿಸ್ಸಾಗುತ್ತಿರುವುದು ನಮಗೆಲ್ಲಾ ಜೀವಮಾನದ ನೋವು, ಕೊರತೆ. ಅವರ ಹೆಸರಲ್ಲಿ ಹಣತೆ ಹಚ್ಚಿದರೂ ನಾವೆಲ್ಲಾ ನಮ್ಮ ಮುಖ ನೋಡಿಕೊಳ್ಳುವಂತಾಗಿರುವುದು ರಾಜ್ಯ, ಕನ್ನಡ ಸಾರಸ್ವತ ಲೋಕಕ್ಕಾದ ಹಾನಿ. ಗುರುವಲ್ಲದ ಗುರುವಿಗೆ, ಗುರುವಾಗಿದ್ದು ಗುರುವಾಗಿಲ್ಲದ ಮಾನಸ ಗುರುವಂಥ ವಿಠ್ಠಲ್ ಸರ್ ಗೆ ವಿಠ್ಠಲ್ ಅಮರ್ ರಹೆ ಅನ್ನೋದು ಕೂಡಾ ಕೇವಲ ಘೋಷಣೆಯಲ್ಲ.ಅವರ ಅಮರತ್ವಕ್ಕೆ ಅವರ ಕೆಲಸಗಳೇ ಸಾಕ್ಷಿ.
-ಕನ್ನೇಶ್ವರ ನಾಯ್ಕ ಕೋಲಶಿರ್ಸಿ, ಸಮಾಜಮುಖಿ ಸಿದ್ಧಾಪುರ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
