![](https://i0.wp.com/samajamukhi.net/wp-content/uploads/2021/08/neeraj.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಇತಿಹಾಸದ ಗರ್ಭದಲ್ಲಿ ಸರಪಟ್ಟ ಪರಂಪರೆಗಳೆಷ್ಟಿವೆಯೋ?
ಹೆಸರು ಬದಲಾಯಿಸಲೇ ಬೇಕೆಂದಿದ್ದರೆ 1928ರಲ್ಲಿ ಮೊದಲ ಒಲಂಪಿಕ್ಸ್ ಚಿನ್ನ ಗೆದ್ದ ಹಾಕಿ ತಂಡದ ನಾಯಕ ‘ಜೈಪಾಲ್ ಸಿಂಗ್ ಮುಂಡಾ ಖೇಲ್ ರತ್ನ ಪ್ರಶಸ್ತಿ’ ಎಂದು ಪುನರ್ ನಾಮಕರಣ ಮಾಡಬಹುದಿತ್ತು. ‘ಹಾಕಿ ಜಾದೂಗಾರ’ ಧ್ಯಾನ್ ಚಂದ್ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ, ಅದು ಅವರ ಸಾಧನೆಗೆ ಸಂದಿರುವ ಗೌರವವೂ ಹೌದು. ಆದರೆ ಗುಡ್ಡಗಾಡು ಜನಾಂಗದಲ್ಲಿ ಹುಟ್ಟಿದ ಜೈಪಾಲ್ ಸಿಂಗ್ ಮುಂಡಾ ಬಗ್ಗೆ ತಿಳಿದಿರುವವರೇ ಕಡಿಮೆ. ಜೈಪಾಲ್ ಸಿಂಗ್ ಮುಂಡಾ ಹೆಸರಿನಿಂದ ಅವರಿಗಷ್ಟೇ ಅಲ್ಲ, ಹಾಕಿ ತಂಡಕ್ಕೆ ಪ್ರತಿಭಾವಂತ ಆಟಗಾರರನ್ನು ನೀಡಿದ್ದ ಗುಡ್ಡಗಾಡು ಪ್ರದೇಶಕ್ಕೂ ಗೌರವ ಸಂದಾಯವಾಗುತ್ತಿತ್ತು.
ಜೈಪಾಲ್ ಸಿಂಗ್ ಮುಂಡಾ ಎಂಬ ಈ ಗುಡ್ಡಗಾಡು ಜನಾಂಗದ ಬಾಲಕ ಬ್ರಿಟಿಷ್ ಮಿಷನರ್ ಗಳ ಕಣ್ಣಿಗೆ ಬಿದ್ದು ಅವರ ಪಾಲನೆ-ಪೋಷಣೆಯಲ್ಲಿಯೇ ಬ್ರಿಟನ್ ನಲ್ಲಿ ಉನ್ನತ ವ್ಯಾಸಂಗ ಮಾಡಿ ಅಲ್ಲಿಯೇ ಹಾಕಿ ದೀಕ್ಷೆ ಪಡೆದು 1928ರ ಒಲಂಪಿಕ್ಸ್ ನಲ್ಲಿ ಹಾಕಿ ತಂಡದ ನಾಯಕತ್ವ ವಹಿಸಿದವರು. ಅಲ್ಲಿನ ಬ್ರಿಟಿಷ್ ಕ್ರೀಡಾಧಿಕಾರಿಗಳೊಂದಿಗಿನ ಸಂಘರ್ಷದಿಂದ ಭಾರತಕ್ಕೆ ಹಿಂದಿರುಗಿ ಗುಡ್ಡಗಾಡು ಜನಾಂಗದ ಪರವಾಗಿ ರಾಜಕೀಯ ಹೋರಾಟ ಪ್ರಾರಂಭಿಸಿದವರು. ಸಂವಿಧಾನ ರಚನಾ ಸಭೆಯ ಸದಸ್ಯರೂ ಆಗಿದ್ದ ಜೈಪಾಲ್ ಸಿಂಗ್, ಗುಡ್ಡಗಾಡು ಜನರಿಗಾಗಿ ಪ್ರತ್ಯೇಕ ರಾಜ್ಯದ ಮೊದಲ ಕೂಗು ಹಾಕಿದವರು. ಇದಕ್ಕಾಗಿಯೇ ಜಾರ್ಖಂಡ್ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇಂದಿನ ಜಾರ್ಖಂಡ್ ರಾಜ್ಯ ಅವರು ಪ್ರಾರಂಭಿಸಿದ್ದ ಹೋರಾಟದ ಫಲ.
ಜೈಪಾಲ್ ಸಿಂಗ್ ಮುಂಡಾ ಹೆಸರಿನಿಂದ ರಾಜಕೀಯವಾಗಿಯೂ ಬಿಜೆಪಿಗೆ ಲಾಭವಾಗುತ್ತಿತ್ತು , ಹೀಗಿದ್ದರೂ ಪ್ರಧಾನಿನರೇಂದ್ರ ಮೋದಿಯವರಿಗೆ ಯಾಕೆ ನೆನಪಾಗಲಿಲ್ಲ ಎಂದು ಕೆದಕುತ್ತಾ ಹೋದಾಗ ಸತ್ಯ ಗೊತ್ತಾಯಿತು. ಕೊನೆಗಾಲದಲ್ಲಿ ಜೈಪಾಲ್ ಸಿಂಗ್ ಮುಂಡಾ ತಮ್ಮ ಜಾರ್ಖಂಡ್ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು.ಜೈಪಾಲ್ ಸಿಂಗ್ ಮುಂಡಾ ಅವರಿಗೆ ಎಣ್ಣೆಪ್ರಿಯರು ಮತ್ತು ಉಳಿದವರು ಋಣಿಗಳಾಗಿರಬೇಕು. ಗಾಂಧಿ ಅಭಿಮಾನಿಗಳು ತುಂಬಿದ್ದ ಸಂವಿಧಾನ ರಚನಾ ಸಭೆಯಲ್ಲಿ ಮದ್ಯಪಾನ ನಿಷೇಧವನ್ನು ಹಟ ಹಿಡಿದು ವಿರೋಧಿಸಿದವರು ಜೈಪಾಲ್ ಸಿಂಗ್ ಅವರಂತೆ. ಗುಡ್ಡಗಾಡು ಜನರಿಗೆ ಮದ್ಯ ಆಹಾರ ಇದ್ದಂತೆ ಎಂದು ಅವರು ವಾದಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಸಂವಿಧಾನದಲ್ಲಿ ಮದ್ಯಪಾನವನ್ನು ನಿಷೇಧಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಸುಮ್ಮನೆ ನಮ್ಮ ರಾಜ್ಯದ ಬಜೆಟ್ ಒಳಗೆ ಇಣುಕಿ ಬಿಡಿ. ವಾರ್ಷಿಕ 20,000 ಕೋಟಿ ಆದಾಯ ಬರುವುದೇ ಎಣ್ಣೆಪ್ರಿಯರಿಂದ. ಇದೊಂದು ಆದಾಯ ಇಲ್ಲದೆ ಇದ್ದರೆ ಈಗಾಗಲೇ ನಮ್ಮ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿತ್ತು. -ದಿನೇಶ್ ಅಮ್ಮಿನಮಟ್ಟು
ಚಿನ್ನದ ಮೂರ್ತಿ ಕೆತ್ತಿದ ಕಾಶಿನಾಥ್- ಎರಡು ತಿಂಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಜಾವಲಿನ್ ಎಸೆತಗಾರರ ಬಗ್ಗೆ ಮಾಹಿತಿ ಕೇಳಲು ಪುಣಿಯಲ್ಲಿ ಆರ್ಮಿಯಲ್ಲಿರುವ ಜಾವಲಿನ್ ಗುರು ಕಾಶಿನಾಥ್ ನಾಯ್ಕ್ ಅವರೊಂದಿಗೆ ಮಾತನಾಡುತ್ತಿದ್ದೆ. “ಸರ್ ಈ ಬಾರಿ ಜಾವಲಿನ್ ನಲ್ಲಿ ಒಂದು ಪದಕ ಇದೆ ….ಅದು ಚಿನ್ನವಾದರೂ ಅಚ್ಚರಿಯಲ್ಲ….ಅದು ನೀರಜ್ ಅವರಿಂದ ಮಾತ್ರ ಸಾಧ್ಯ” ಎಂದಿದ್ದರು.
ಒಬ್ಬ ಗುರುವಿಗೆ ಮಾತ್ರ ತನ್ನ ಶಿಷ್ಯರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯ. ನೀರಜ್ ಚೋಪ್ರಾ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ವಿಶ್ವದಾಖಲೆ ಬರೆಯುವಲ್ಲಿ ಕಾಶಿನಾಥ್ ಅವರ ಪಾತ್ರ ಪ್ರಮುಖವಾಗಿತ್ತು. ಸುಮಾರು ಎರಡೂವರೆ ವರ್ಷಗಳ ಕಾಲ ತರಬೇತಿ ನೀಡಿ ನೀರಜ್ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವಲ್ಲಿ ಕಾಶಿನಾಥ್ ಅವರ ಪಾತ್ರ ಪ್ರಮುಖವಾಗಿತ್ತು. ದನ ಮೇಯಿಸುವಾಗ ಉದ್ದನೆಯ ಕೋಲನ್ನು ಗದ್ದೆಯಲ್ಲಿ ಎಸೆಯುತ್ತ ನಂತರ ತಾಲೂಕು ಮಟ್ಟದ ಜಾವೆಲಿನ್ ಎಸೆತಗಳಲ್ಲಿ ಪಾಲ್ಗೊಂಡು…ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು….ಸೇನೆ ಸೇರಿ ಅಲ್ಲಿಯೂ ಜಾಗತಿಕ ಮಟ್ಟದಲ್ಲಿ ಪದಕ ಗೆದ್ದ ಕರ್ನಾಟಕದ ಈ ಜಾವೆಲಿನ್ ತರಬೇತುದಾರ ಕಾಶಿನಾಥ್ ಅವರನ್ನು ಇಂಥ ಐತಿಹಾಸಿಕ ದಿನದಂದು ನಾವು ಅಭಿನಂದಿಸಲೇಬೇಕು. ನೀರಜ್ ಗೆದ್ದಿರುವ ಚಿನ್ನದ ಪದಕ ಅದೆಷ್ಟೋ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ. ನೀರಜ್ ಚೋಪ್ರಾ ಹಾಗೂ ಕಾಶಿನಾಥ್ ಅವರಿಗೆ ಅಭಿನಂದನೆಗಳು. Neeraj Chopra #kashinathnaik ನಿಮ್ಮ ಸಾಧನೆಯ ಕಾಲದಲ್ಲಿ ನಾವು ಬದುಕಿದ್ದೇವೆ….ನಿಮ್ಮ ಬಗ್ಗೆ ಎರಡಕ್ಷರ ಬರೆಯುವ ಅವಕಾಶ ಸಿಕ್ಕಿತ್ತು ಎಂಬುದೇ ಧನ್ಯತಾ ಭಾವ. -ಬರಹ Somashekar Padukare
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)