![](https://i0.wp.com/samajamukhi.net/wp-content/uploads/2021/10/IMG-20211002-WA0097.jpg?resize=584%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ಧಾಪುರ ತಾಲೂಕಿನ ಸಾಗರ ರಸ್ತೆಯ ಗೋಳಗೋಡು ಗ್ರಾಮದ ಗದ್ದೆ ಬಯಲೀಗ ಅನೇಕರ ಆಸಕ್ತಿಯ ಕೇಂದ್ರವಾಗಿದೆ. ದೃಷ್ಟಿಹರಿದಷ್ಟೂ ದೂರ ಹಚ್ಚ ಹಸಿರು ಕಾಣುವ ಮಲೆನಾಡಿನ ಈ ಭತ್ತದ ಗದ್ದೆ ಬಯಲಿಗೆ ಈ ಆಕರ್ಷಣೆ ಹೇಗೆ ಬಂತು ಎಂದರೆ ಈ ಕೌತುಕಕ್ಕೆ ಉತ್ತರ ದೊರೆಯುತ್ತದೆ. ಈ ಭಾಗದ ಜನರ ಲಕ್ಷ್ಯ ತನ್ನತ್ತ ಕೇಂದ್ರೀಕರಿಸುವಂತೆ ಮಾಡಿದ ಹಣಜಿಬೈಲಿನ ದ್ಯಾವಾ ಎಂ. ನಾಯ್ಕರ ಸಾಹಸಗಾಥೆಯೇ ಈ ಕೌತುಕದ ಹಿಂದಿನ ಸಾಧನೆ.
ಹಣಜಿಬೈಲಿನ ದ್ಯಾವಾ ನಾಯ್ಕರಿಗೆ ಕಳೆದ ನಾಲ್ಕೈದು ವರ್ಷದ ಹಿಂದೆ ರಸ್ತೆಯ ಪಕ್ಕ ಬಣ್ಣದ ಭತ್ತದ ಗಿಡವೊಂದು ಕಾಣಿಸಿದ್ದೇ ಪ್ರಾರಂಭ. ಹೂವಿನ ಗಿಡವೇನೋ ಎಂದು ಅನುಮಾನದಿಂದಲೇ ಕೊಂಡೊಯ್ದು ಸಾಕಿ ಬೆಳಸಿದ ನಾಯ್ಕರಿಗೆ ಅದು ಭತ್ತದ ಗಿಡ ಎಂದು ತಿಳಿಯಲು ಸಮಯ ಹಿಡಿಯಲಿಲ್ಲ. ಈ ನೀಲಿ ಸಸ್ಯವನ್ನು ನಾಟಿ ಮಾಡಿದ ಭತ್ತದ ಸಸಿಯಿಂದ ನಾಲ್ಕೈದು ತೆನೆ ಭತ್ತ ದೊರೆತಖುಷಿಯಲ್ಲಿದ್ದ ದ್ಯಾವಾ ನಾಯ್ಕರಿಗೆ ಈ ಭತ್ತದ ಕದರನ್ನು ನವಿಲುಗಳು ಕತ್ತರಿಸಿದಾಗಬೇಸರವಾದರೂ ನೆಲಕ್ಕೆ ಬಿದ್ದ ಭತ್ತದಿಂದ ಮಾರನೇ ವರ್ಷ ಕೆಲವು ಸಸಿಗಳನ್ನು ಮಾಡಿ 4ರಿಂದ 5 ವರ್ಷಗಳಲ್ಲಿ ಈಗ ಹತ್ತುಗುಂಟೆಗೂ ಹೆಚ್ಚುಭಾಗದಲ್ಲಿ ಈ ನೀಲಿಭತ್ತವನ್ನು ಬೆಳೆದಿದ್ದಾರೆ.
ಹಚ್ಚಹಸಿರಿನ ಭತ್ತದ ಗದ್ದೆಯ ನಡುವೆ ನೀಲಿಬಣ್ಣದಿಂದ ಸ್ಥಳೀಯರ ಗಮನ ಸೆಳೆಯುತ್ತಿರುವ ಈ ಕೃಷ್ಣ ನೀಲ ಭತ್ತ ಈಗ ಸಾರ್ವಜನಿಕರ ಕೌತುಕ ಮತ್ತು ಆಕರ್ಷಣೆಯ ಕೇಂದ್ರವಾಗಿದೆ.ಇದು ಕೃಷ್ಣ ನೀಲ ಎನ್ನುವ ಭತ್ತದ ತಳಿ ಎನ್ನುವ ದ್ಯಾವಾ ನಾಯ್ಕರಿಗೆ ಈ ಭತ್ತದ ವೈಶಿಷ್ಟ್ಯ, ಪ್ರಾಮುಖ್ಯತೆಗಳ ಬಗ್ಗೆ ತಿಳಿದಿಲ್ಲ. ಈ ಭತ್ತದ ಗದ್ದೆ ನೋಡಿದ ಜನರು ಇದು ಉತ್ತಮ ತಳಿ ಇದರಲ್ಲಿ ಔಷಧೀಯ ಗುಣಗಳಿಗೆ ಎಂದು ಹೇಳುತ್ತಾರಾದರೂ ಈ ಬಗ್ಗೆ ಸ್ಫಷ್ಟ ದಾಖಲೆ, ಮಾಹಿತಿ ಇವರ ಬಳಿ ಇಲ್ಲ.
ಈ ಬಗ್ಗೆ ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಅದು ವಿಶಿಷ್ಟ ತಳಿಯ ಭತ್ತ ಇದನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಸಾಧ್ಯತೆ ಇದೆ. ಆದರೆ ಅನಿರೀಕ್ಷಿತವಾಗಿ ದೊರೆತ ಈ ಭತ್ತದ ಗಿಡದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೃಷ್ಣನೀಲಿ ಭತ್ತ ಬೆಳೆದ ರೈತರ ಸಾಧನೆ ದೊಡ್ಡದು ಎನ್ನುತ್ತಾರೆ. (ಚಿತ್ರಗಳು,ಮಾಹಿತಿ-ವಿಜಯಕುಮಾರ್ & ಲೋಹಿತ್ ಕುಮಾರ್ ಹಣಜೀಬೈಲ್)
ಕಳ್ಳಭಟ್ಟಿ ಸಂಗ್ರಹಿಸಿದ್ದಕ್ಕೆ 21ಸಾವಿರ ರೂ ದಂಡ-
ದಿನಾಂಕ:೨೬೦೧೨೦೧೭ ರಂದು ಕೃಷ್ಣ ದ್ಯಾವಾ ನಾಯ್ಕ ವಾಸ:_ಐಗಳಕೊಪ್ಪ, ತಾಲ್ಲೂಕು:ಸಿದ್ದಾಪುರ ಎಂಬ ಆರೋಪಿಯು ತನ್ನ ಮನೆಯಲ್ಲಿ ಕಳ್ಳ ಭಟ್ಟಿ ಸರಾಯಿಯನ್ನು ದಾಸ್ತಾನಿಸಿದ್ದನ್ನು ಪತ್ತೆ ಹಚ್ಚಿ,ಸಿ.ಸಿ. ನಂ.೪೬೧/೨೦೧೭ ರಲ್ಲಿ ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಶ್ರೀ ಸಿದ್ದರಾಮ ಎಸ್. ಮಾನ್ಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರು ಆರೋಪಿಗೆ, ಕ.ಅ. ಕಾಯ್ದೆ ಕಲಮ್- ೩೨ ರಲ್ಲಿ ೧ ವರ್ಷ ಸಾಧಾ ಸಜೆ ಮತ್ತು ರೂ. ೧೦,೦೦೦/ಗಳ ದಂಡ,ಕಲಮ್- ೩೪ ರಲ್ಲಿ ೧ ವರ್ಷ ಸಾಧಾ ಸಜೆ ಮತ್ತು ರೂ. ೧೦,೦೦೦/ಗಳ ದಂಡ ಹಾಗೂ ಐ.ಪಿ.ಸಿ.ಕಲಮ್- ೨೭೩ ರಲ್ಲಿ ೬ ತಿಂಗಳ ಸಾಧಾ ಸಜೆ ಮತ್ತು ರೂ. ೧,೦೦೦/ಗಳ ದಂಡ, ಈ ರೀತಿ ಒಟ್ಟು ಎರಡುವರೆ ವರ್ಷಗಳ ಸಾಧಾ ಸಜೆ ಮತ್ತು ರೂ.೨೧೦೦೦/-ಗಳು ದಂಡವನ್ನು ವಿಧಿಸಿರುತ್ತಾರೆ.ಈ ಪ್ರಕರಣದಲ್ಲಿ ಚಂದ್ರಶೇಖರ ಎಚ್. ಎಸ್.ಸಹಾಯಕ ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದಿಸಿದ್ದರು. ಮಹೇಂದ್ರ ಎಸ್. ನಾಯ್ಕ ಅಬಕಾರಿ ಉಪ-ಅಧೀಕ್ಷಕರು (ಪ್ರಭಾರ)ಉಪ_ವಿಭಾಗ ಶಿರಸಿ ಇವರು ಮೊಕದ್ದಮೆ ದಾಖಲಿಸಿದ್ದು, ಶ್ರೀಮತಿ ಜ್ಯೋತಿಶ್ರೀ ಜಿ. ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ವಲಯ ನ್ಯಾಯಾಲಯದಲ್ಲಿ ಆರೋಪಣಾ ಪಟ್ಟಿ ಸಲ್ಲಿಸಿದ್ದರು..
![](https://i0.wp.com/samajamukhi.net/wp-content/uploads/2021/10/IMG-20211002-WA0098.jpg?resize=375%2C210&ssl=1)
![](https://i0.wp.com/samajamukhi.net/wp-content/uploads/2021/10/IMG-20211006-WA0041.jpg?resize=440%2C623&ssl=1)
![](https://i0.wp.com/samajamukhi.net/wp-content/uploads/2021/09/IMG-20210929-WA0060.jpg?resize=356%2C533&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)