

ರೈತರ ವಿರೋಧದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇಂದು ತನ್ನ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ಬೆನ್ನಲ್ಲೇ ದೇಶದ ಹಲವು ರಾಜಕೀಯ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.


ನವದೆಹಲಿ: ರೈತರ ವಿರೋಧದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇಂದು ತನ್ನ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ಬೆನ್ನಲ್ಲೇ ದೇಶದ ಹಲವು ರಾಜಕೀಯ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಬಿಜೆಪಿಯ ಕ್ರೂರತ್ವವನ್ನು ಮೆಟ್ಟಿನಿಂತು ಹೋರಾಟ ನಡೆಸಿ ಜಯಿಸಿದ್ದೀರಿ, ಇದು ರೈತರ ಜಯ ಎಂದು ಶ್ಲಾಘಿಸಿದ್ದಾರೆ. ‘ಯಾವುದೇ ಒತ್ತಡಕ್ಕೂ ಮಣಿಯದೇ ಹೋರಾಟ ನಡೆಸಿದ ಪ್ರತಿಯೊಬ್ಬ ರೈತರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಬಿಜೆಪಿಯ ಕ್ರೂರತ್ವವನ್ನು ಮೆಟ್ಟಿನಿಂತು ಹೋರಾಟ ನಡೆಸಿದ್ದೀರಿ. ಇದು ನಿಮ್ಮ ವಿಜಯವಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.


ಮಾಜಿ ಪ್ರಧಾನಿ ದೇವೇಗೌಡ
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೇಗೌಡ ಸ್ವಾಗತಿಸಿದ್ದು, ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಕಾಯ್ದೆಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ರೂಪಿಸಿದ ರೈತ ಸಮೂಹಕ್ಕೆ ನನ್ನ ಸಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಸಂಸದೀಯ ವ್ಯವಸ್ಥೆಯಲ್ಲಿ ವಾದ ಮಂಡನೆ ಮತ್ತು ಚರ್ಚೆಗಳು ಅತ್ಯಂತ ಪ್ರಮುಖ. ಸೆಪ್ಟೆಂಬರ್ 2020ರಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯಸಭೆಯಲ್ಲಿ ನಾನು ಮಾಡಿದ ಭಾಷಣದ ವಿವರ ಇಲ್ಲಿದೆ ಎಂದು ಹೇಳಿಕೆಯ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
ಅನ್ಯಾಯದ ವಿರುದ್ಧದ ಜಯ: ರಾಹುಲ್ ಗಾಂಧಿ
ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದ ಮೂಲಕ ಗರ್ವದ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿರ್ಧಾರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇದು ‘ಅನ್ಯಾಯದ ವಿರುದ್ಧದ ಜಯ’ ಎಂದು ಅವರು ಬಣ್ಣಿಸಿದ್ದು, ‘ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದ ಮೂಲಕ ಗರ್ವದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅನ್ಯಾಯದ ವಿರುದ್ಧದ ಈ ಜಯಕ್ಕೆ ಅಭಿನಂದನೆಗಳು. ಜೈ ಹಿಂದ್ ಎಂದು ಅವರು ಹೇಳಿದ್ದಾರೆ.
ರೈತರಿಗೆ ಸಲ್ಯೂಟ್: ಕೇಜ್ರಿವಾಲ್
ಪ್ರಕಾಶಮಾನ ದಿನವಾದ ಇಂದು ನನಗೆ ಎಂತಹ ಸಂತಸದ ಸುದ್ದಿ ಸಿಕ್ಕಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. 700ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಅವರೆಲ್ಲರ ಬಲಿದಾನ ಅಮರವಾಗಿ ಉಳಿಯುತ್ತದೆ. ಕೃಷಿ ಮತ್ತು ರೈತರನ್ನು ಉಳಿಸಲು ಈ ದೇಶದ ರೈತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂಬುವುದನ್ನು ಮುಂಬರುವ ಪೀಳಿಗೆಯವರಿಗೆ ಸದಾ ನೆನಪಿಸುತ್ತಿರುತ್ತದೆ. ನನ್ನ ದೇಶದ ರೈತರಿಗೆ ನಾನು ಸಲ್ಯೂಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಒಡಿಶಾ ಸಿಎಂ ನವೀನ್ ಪಟ್ನಾಯಕ್
“ದೇಶ ಮತ್ತು ಅದರ ರೈತರ ಹಿತದೃಷ್ಟಿಯಿಂದ ಎಲ್ಲಾ 3 ಮಾದರಿಯ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಿಮ್ಮ ತೋಟಗಳು ಮತ್ತು ನಿಮ್ಮ ಕುಟುಂಬಗಳು ಬಹಳ ಸಮಯದಿಂದ ನಿಮಗಾಗಿ ಕಾಯುತ್ತಿವೆ. ಅವರು ನಿಮ್ಮನ್ನು ಸ್ವಾಗತಿಸಲು ಸಂತೋಷಪಡುತ್ತಾರೆ. BJD ರೈತರಿಗೆ ತನ್ನ ಬೆಂಬಲ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ
ರೈತರ ತ್ಯಾಗಕ್ಕೆ ಫಲ ಸಿಕ್ಕಿದೆ. 3 ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂದೆಯೇ ತೆಗೆದುಕೊಳ್ಳಬೇಕಿತ್ತು. ಇನ್ನೂ ಎಂಎಸ್ಪಿ ಕಾನೂನೊಂದಕ್ಕೆ ರೈತರ ಬೇಡಿಕೆ ಬಾಕಿ ಇದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ (ಎಂಎಸ್ಪಿ) ಕಾನೂನು ತರಬೇಕು ಎಂದು ಬಿಎಸ್ಪಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ಮೂರೂ ಕರಾಳ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಘೋಷಣೆಯು ಪ್ರಜಾಪ್ರಭುತ್ವದ ಗೆಲುವು ಮತ್ತು ಮೋದಿ ಸರ್ಕಾರದ ದುರಹಂಕಾರದ ಸೋಲು, ಇದು ಕಳೆದ ಒಂದು ವರ್ಷದಿಂದ ಆಂದೋಲನ ನಡೆಸುತ್ತಿರುವ ರೈತರ ತಾಳ್ಮೆಯ ವಿಜಯವಾಗಿದೆ. ಮೋದಿ ಸರ್ಕಾರದ ದೂರದೃಷ್ಟಿ ಮತ್ತು ಅಭಿಮಾನದಿಂದ ನೂರಾರು ರೈತರು ಪ್ರಾಣ ಕಳೆದುಕೊಂಡಿರುವುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ರೈತ ಚಳವಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಎಲ್ಲ ರೈತರಿಗೆ ನಮನ. ಇದು ಅವರ ತ್ಯಾಗದ ಜಯ ಎಂದು ಹೇಳಿದ್ದಾರೆ.
SAD ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್
ಇತಿಹಾಸದಲ್ಲಿ ನಿರ್ಣಾಯಕ ಕ್ಷಣ ಮತ್ತು ಗುರುಪುರಬ್ನಲ್ಲಿ ರೈತರ ಐತಿಹಾಸಿಕ ವಿಜಯ.
ತೆಲಂಗಾಣ ಸಚಿವ ಮತ್ತು ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್
ಅಧಿಕಾರದಲ್ಲಿರುವ ಜನರಿಗಿಂತ ಜನರ ಶಕ್ತಿ ಯಾವಾಗಲೂ ದೊಡ್ಡದಾಗಿದೆ, ತಮ್ಮ ಅವಿರತ ಆಂದೋಲನದ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡ ಭಾರತೀಯ ರೈತರು ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ.. ಜೈ ಕಿಸಾನ್ ಜೈ ಜವಾನ್.”
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್
ಗಾಂಧಿ ಚಳುವಳಿ ಮತ್ತೊಮ್ಮೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಮೂರು ಕರಾಳ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಕ್ಕಾಗಿ ದೇಶದ ರೈತರಿಗೆ ಅಭಿನಂದನೆಗಳು. ಇದು ರೈತರು ಮಾತ್ರವಲ್ಲದೆ ಪ್ರಜಾಪ್ರಭುತ್ವ ಅನ್ಯಾಯದ ವಿರುದ್ಧದ ಪ್ರಜಾಪ್ರಭುತ್ವದ ವಿಜಯವಾಗಿದೆ.
ಎಂಡಿಎಂಕೆ ಸಂಸ್ಥಾಪಕ ವೈಕೊ
ರೈತರ ವರ್ಷಪೂರ್ತಿ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರವು “ಮಂಡಿಯೂರಿದೆ” ಮತ್ತು ಪ್ರಧಾನಿ ಮೋದಿ ಅವರ ಘೋಷಣೆಯು ರೈತರ ಪ್ರತಿಭಟನೆಗೆ ಸಂದ “ಬೃಹತ್ ವಿಜಯ” ಎಂದು ಬಣ್ಣಿಸಿದರು. (ಕಪಡಾ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






