


2 ಎಕರೆ ಅಡಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 5 ರಿಂದ 6 ಲಕ್ಷ ರೂ. ಹಾನಿಯುಂಟಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಕಂತ್ರಾಜಿ ಗ್ರಾಮದಲ್ಲಿ ನಡೆದಿದೆ.
ಶಿರಸಿ: ಆಕಸ್ಮಿಕ ಬೆಂಕಿ ತಗುಲಿ ಅಂದಾಜು 2 ಎಕರೆ ಅಡಕೆ ತೋಟ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಕಂತ್ರಾಜಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದಾಗಿ ಸುಮಾರು 5 ರಿಂದ 6 ಲಕ್ಷ ರೂ. ಹಾನಿಯುಂಟಾಗಿದೆ.
ಗುಡ್ನಾಪುರ ಪಂಚಾಯತ್ ವ್ಯಾಪ್ತಿಯ ಕಂತ್ರಾಜಿ ಗ್ರಾಮದಲ್ಲಿರುವ ರೇಣುಕಾ ಬಸವಣ್ಣಿ ಮಡಿವಾಳ ಎಂಬುವರು ಸೊಸೈಟಿ ಸೇರಿದಂತೆ ಅನೇಕ ಕಡೆ ಸಾಲ ಮಾಡಿಕೊಂಡು ಕಳೆದ 4 ವರ್ಷಗಳ ಹಿಂದಷ್ಟೇ ತೋಟ ಹಾಕಿದ್ದರು. ಇದೀಗ ಬೆಂಕಿಗೆ ಅಡಕೆ ಸಸಿಗಳು ಸುಟ್ಟು ಕರಕಲಾಗಿದ್ದು, ಮುಂದೆ ಏನು ಮಾಡಬೇಕು ಅಂತ ತೋಚದೇ ರೈತ ಕಂಗಾಲಾಗಿದ್ದಾನೆ.
ಸುಟ್ಟು ಕರಕಲಾದ 2 ಎಕರೆ ಅಡಿಕೆ ತೋಟ
2 ಎಕರೆಯಲ್ಲಿದ್ದ 1,300 ಅಡಕೆ ಗಿಡಗಳಿಗೆ ಬೆಂಕಿ ತಗುಲಿದ್ದು, ನೀರಾವರಿ ವ್ಯವಸ್ಥೆಗಾಗಿ ಹಾಕಲಾಗಿದ್ದ ಪೈಪ್ಗಳು ಸಹ ಸುಟ್ಟು ಹೋಗಿ, 1 ಲಕ್ಷ ಹೆಚ್ಚುವರಿ ಹಾನಿಯಾಗಿದೆ. ರಸ್ತೆ ಬದಿಯೇ ತೋಟವಿದ್ದು, ಯಾರೋ ದಾರಿ ಹೋಕರು ಬೆಂಕಿ ಹಾಕಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ಸೂಕ್ತ ತನಿಖೆ ನಡೆಸಿ, ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ರೈತ ಮನವಿ ಮಾಡಿದ್ದಾರೆ. (etbk)
