


ಸಿದ್ದಾಪುರ
ಪ್ರಸಿದ್ಧ ಯಕ್ಷಗಾನ ಗುರು, ಹೆಸರಾಂತ ಭಾಗವತ ತಾಲೂಕಿನ ಗೋಳಗೋಡಿನ ಕೆ.ಪಿ.ಹೆಗಡೆಯವರಿಗೆ ಯಕ್ಷಗಾನದ ಪ್ರಸಿದ್ಧ ಕಲಾವಿದರಾಗಿದ್ದ ಅನಂತ ಹೆಗಡೆ ಹೆಸರಿನಲ್ಲಿ ನೀಡಲಾಗುವ ಅನಂತಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ವಿಷಯ ತಿಳಿಸಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಕಳೆದ ೧೨ ವರ್ಷಗಳಿಂದ ಕೊಳಗಿ ಅನಂತ ಹೆಗಡೆಯವರ ನೆನಪಿನಲ್ಲಿ ಪ್ರತಿಷ್ಠಾನ ಆರಂಭಿಸಲಾಗಿದ್ದು ಕಳೆದ ೭ ವರ್ಷದಿಂದ ಹಿರಿಯ,ಸಾಧಕ ಕಲಾವಿದರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ. ಈ ಬಾರಿ ಸೆಪ್ಟೆಂಬರ್ ಎರಡನೇ ವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅನಂತ ಹೆಗಡೆಯವರ ಒಡನಾಡಿಗಳೂ ಆಗಿದ್ದ ಕೆ.ಪಿ.ಹೆಗಡೆಯವರಿಗೆ ಪ್ರಶಸ್ತಿಪ್ರದಾನ ಮಾಡುವದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ೪ ದಶಕಗಳಿಗೂ ಅಧಿಕ ಕಾಲದಿಂದ ಯಕ್ಷಗಾನ ಬಡಗುತಿಟ್ಟಿನ ಭಾಗವತರಾಗಿ,ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಗುರುಗಳಾ ಗಿಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಪರಮೇಸ್ವರ ಹೆಗಡೆ ಎಸ್.ಎಸ್.ಎಲ್.ಸಿ ಬಳಿಕ ನಾರ್ಣಪ್ಪ ಉಪ್ಪೂರು, ಗಣಪತಿ ಹೆಗಡೆ,ಮಂಜುನಾಥ ಭಾಗವತ ಹೊಸ್ತೋಟರ ಶಿಷ್ಯರಾಗಿ ತಮ್ಮ ಕಲಾ ಬದುಕನ್ನು ಆಯ್ಕೆಮಾಡಿಕೊಂಡರು.೧೯೭೯ರಿಂದ ಯಕ್ಷಗಾನ ಕ್ಷೇತ್ರಕ್ಕೆ ಭಾಗವತರಾಗಿ ಪಾದಾರ್ಪಣೆ ಮಾಡಿ, ಕೋಟ,ಪೆರ್ಡೂರು,ಸಾಲಿಗ್ರಾಮ, ಮೂಲ್ಕಿ ಸೇರಿದಂತೆ ಅನೇಕ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ ಕಲಿಕಾ ಕೇಂದ್ರದ ಗುರುಗಳಾಗಿ ಕೆಲಸ ಮಾಡಿದ ಕೆ.ಪಿ.ಹೆಗಡೆ ಮನಾರ್ಣಪ್ಪ ಉಪ್ಪೂರರ ಛಾಪು,ಅಪೂರ್ವ ರಂಗತಂತ್ರ,ಏರುಶೃತಿಯಲ್ಲೂ ಹಾಡಬಲ್ಲ ಕಂಠ,ರಾಗ,ತಾಳ,ಲಯದಲ್ಲಿ ಅಪೂರ್ವ ಹಿಡಿತವನ್ನು ಹೊಂದಿದವರು ಎನ್ನುವುದು ವಿಶೇಷ. ಅಂದಿನಿಂದ ಈವರೆಗೆ ಅವರ ಗರಡಿಯಲ್ಲಿ ಸಾವಿರಕ್ಕೂ ಅಧಿಕ ಶಿಷ್ಯರು ಸಿದ್ಧರಾಗಿ ಹೆಸರುಗಳಿಸಿದ್ದಾರೆ. ಅವರ ಶಿಷ್ಯರಲ್ಲಿ ಪ್ರಸಿದ್ಧ ಭಾಗವತ,ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಕೂಡ ಒಬ್ಬರು ಎನ್ನುವುದು ಹೆಮ್ಮೆ ಎಂದು ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
