![](https://i0.wp.com/samajamukhi.net/wp-content/uploads/2023/08/IMG20230820124520-scaled.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2023/08/shiralagi.jpg?resize=467%2C701&ssl=1)
ಸಿದ್ದಾಪುರ: ನಿಸ್ವಾರ್ಥ ಮನೋಭಾವ ಹೊಂದಿದಾಗ ಮಾತ್ರ ದೇವರಾಜ ಅರಸು ಅವರಂತೆ ನೊಂದವರ ಬಾಳಿಗೆ ಬೆಳಕಾಗಲು ಸಾಧ್ಯ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಾ ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಪಂಚಾಯ್ತಿ ಆಶ್ರಯದಲ್ಲಿ ಭಾನುವಾರ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ನಡೆದ ಹಿಂದುಳಿದ ವರ್ಗಗಳ ಹರಿಕಾರ ಹಾಗೂ
ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 108ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ,
ಅರಸು ನೀಡಿದ ಬಳುವಳಿಯಿಂದ ನಾವುಗಳೆಲ್ಲಾ ಇಂದು ತಲೆ ಎತ್ತಿ ಓಡಾಡಲು ಸಾಧ್ಯವಾಗಿದೆ. ಭೂಮಾಲಿಕರನ್ನು ಎದುರು ಹಾಕಿಕೊಂಡು ಉಳುವವನೆ ಹೊಲದೊಡೆಯ ಕಾನೂನಿನ ಮೂಲಕ ಭೂಮಿಯ ಹಕ್ಕು ನೀಡಿದ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಸರ್ವ ಜನಾಂಗದ ಶಾಸ್ವತ ಅರಸು ಆಗಿ ವಿರಾಜಮಾನರಾಗಿದ್ದಾರೆ. ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ನೀಡುವ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಾರಣರಾದ ಅರಸು ಅವರನ್ನು ಎಲ್ಲರೂ ಸದಾ ಸ್ಮರಿಸಬೇಕು ಎಂದರು.
ಪಟ್ಟಣ ಪಂಚಾಯತ ಸದಸ್ಯ ರವಿಕುಮಾರ ನಾಯ್ಕ ಮಾತನಾಡಿ, ಭೂಮಾಲಿಕರಿಂದ ಹಿಂದುಳಿದ ವರ್ಗದವರಿಗೆ ಭೂಮಿಯ ಮಾಲಿಕತ್ವ ನೀಡಿದ ದೇವರಾಜ ಅರಸು ಅವರನ್ನು ಹಿಂದುಳಿದ ವರ್ಗ ಶಾಶ್ವತವಾಗಿ ನೆನಪಿಡಬೇಕು. ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದ ಅರಸು ಅವರು ಹಿಂದುಳಿದ ವರ್ಗಕ್ಕೆ ಶಾಶ್ವತವಾಗಿ ಅರಸು ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಅಧ್ಯಯನ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ವೇಳೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ, ಪಟ್ಟಣ ಪಂಚಾಯತ ಸದಸ್ಯರಾದ ರವಿಕುಮಾರ ನಾಯ್ಕ, ಸುಧೀರ ನಾಯ್ಕ, ವೆಂಕೋಬ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆಶಾ ಬೇಗಂ ಸ್ವಾಗತಿಸಿದರು.
![](https://i0.wp.com/samajamukhi.net/wp-content/uploads/2023/08/IMG20230820124520.jpg?resize=638%2C479&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)