![](https://i0.wp.com/samajamukhi.net/wp-content/uploads/2019/11/Devi_Bhuvaneswari_at_Parashakthi_Temple.jpg?resize=603%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ದಾಪುರ: ಮನುಷ್ಯನಿಗೆ ಮರಕ್ಕೆ, ಮೃಗಗಳಿಗೆ ರೋಗ ಹೆಚ್ಚಾಗುತ್ತಿದೆ. ಮನುಷ್ಯನಲ್ಲಿ ಹೆಚ್ಚಿದ ಅಧರ್ಮವೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.
ಮಂಗಳವಾರ ಅವರು ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ಹಾಗೂ ಲಲಿತಾ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಗಾಯತ್ರೀ ಜಪ ಯಜ್ಞದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಕೊರೋನಾದಂತಹ ಸಮಸ್ಯೆ ಮನುಷ್ಯನಿಗೆ ಕಾಡುತ್ತಿದೆ. ಮರಕ್ಕೆ ಎಲೆ ಚುಕ್ಕೆ ರೋಗ ಬಂದಿದೆ. ಪರಿಹಾರ ಸಿಕ್ಕಿಲ್ಲ. ದೇವರೇ ಕಾಪಾಡಬೇಕು ಎಂಬ ಸ್ಥಿತಿಯಲ್ಲಿದೆ. ಪೂಜಿಸುವ ಗೋವುಗಳಿಗೆ ಚರ್ಮಗಂಟು ರೋಗ ಬಂದಿದೆ. ಅಧರ್ಮ ಹೆಚ್ಚಿದ್ದು ರೋಗಗಳಿಗೆ ಮೂಲ ಕಾರಣ. ಉತ್ತರ ಕಾಣದ ಸಮಸ್ಯೆ, ರೋಗಗಳಿಗೆ ಅಧರ್ಮ ಕಾರಣ. ಇದರ ನಿವಾರಣೆಗೆ ಗಾಯತ್ರೀ ಮಾತೆ ಉಪಾಸನೆ ಮಾಡಬೇಕು ಎಂದರು.
ಅಶುದ್ಧವಾದ ಮನಸ್ಸು ಅನೇಕ ಸಮಸ್ಯೆಗಳಿಗೆ ಕಾರಣ ಆಗುತ್ತಿದೆ. ಕುಟುಂಬ ಕಲಹಗಳು, ಪತಿ ಪತ್ನಿಯರ ವಿರಸಗಳು ಹೆಚ್ಚಾಗುತ್ತಿದೆ. ಪತಿ ಪತ್ನಿಯರೇ ದೂರವಾದರೆ ಕುಟುಂಬ ವ್ಯವಸ್ಥೆಗೇ ಧಕ್ಕೆ ಆಗಲಿದೆ ಹೆಚ್ಚಾಗಿದೆ. ನಮ್ಮ ಮನಸ್ಸು ಶುದ್ದವಾಗಿದ್ದರೆ ಇಂಥ ಕಲಹಗಳು ಇರುವದಿಲ್ಲ. ಮನಸ್ಸು ಶುದ್ದಿಗೆ, ರೋಗ ರುಜಿನೆಗಳ ನಿವಾರಣೆಗೆ, ಆರೋಗ್ಯಕ್ಕೆ, ಭಗವಂತನ ಸಾಕ್ಷಾತ್ಕಾರಕ್ಕೆ ಇಂಥ ಗಾಯತ್ರೀ ಮಾತೆ ಉಪಾಸನೆ ಸದಾ ಆಗಬೇಕು ಎಂದರು.
ಗಾಯತ್ರೀ ಎಂದರೆ ಬ್ರಹ್ಮ ವಿದ್ಯೆ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಗಾಯತ್ರಿ ಉಪಾಸನೆ ಮಾಡಬೇಕು. ಬ್ರಹ್ಮ ವಿದ್ಯೆಯ ಮೂಲಕ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಪರಮಾತ್ಮನ ಅನುಭವಕ್ಕೆ ಗಾಯತ್ರೀ ಉಪಾಸನೆ ಮಾಡಬೇಕು ಎಂದರು.
ಗಾಯತ್ರೀ ಉಪಾಸನೆ ನಿತ್ಯವೂ ಆಗಬೇಕಾದ ಅನುಷ್ಠಾನ. ಉಪನೀತರು ಮಾಡಬೇಕಾದ ಮೂಲಭೂತ ಕರ್ತವ್ಯ ಗಾಯತ್ರೀ ಉಪಾಸನೆ ಎಂದು ಹೇಳಿದರು.
ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ರಷ್ಮಿ ಹೆಗಡೆ ದಂಪತಿಗಳು ಶ್ರೀಗಳ ಪಾದ ಪೂಜೆ ನಡೆಸಿದರು.
ಈ ವೇಳ ಗಾಯತ್ರೀ ಮಹಾಸತ್ರದ ಎರಡನೇ ದಿನದ ಪೂರ್ಣಾಹುತಿಯಲ್ಲಿ ಶ್ರೀಗಳು ಪಾಲ್ಗೊಂಡರು. ಮಾತೆಯರು ಲಲಿತಾ ಸಹಸ್ರನಾಮ ಅರ್ಚನೆ ನಡೆಯಿತು.
ಗಾಯತ್ರೀ ಅನುಷ್ಠಾನ ಮಾಡುವ ಕ್ರಮ ಮನೆ ಮನೆಗಳಲ್ಲಿ ಹೆಚ್ಚಬೇಕು. ಆ ದಿನಗಳು ಮರಳಿ ಬರಬೇಕು. ಸಂಧ್ಯಾ ವಂದನೆ ಮನೆ ಮನೆಗಳಲ್ಲಿ ನಡೆಯಲಿ. ಕ್ಷೇತ್ರದಲ್ಲಿ ಕೂಡ ಶಕ್ತಿ ಹೆಚ್ಚಲಿ, ಗಾಯತ್ರೀ ಮಹಾ ಸತ್ರದಲ್ಲಿ ಪಾಲ್ಗೊಂಡವರಿಗೂ ದೇವರ ಅನುಗ್ರಹ ಸಿಗಲಿ-ಸ್ವರ್ಣವಲ್ಲಿ ಶ್ರೀ
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)