

ಎಲ್ಲಿಯೋ ಹುಟ್ಟಿ ಕರ್ನಾಟಕದವರೇ ಆಗಿರುವ ಹಿರಿಯಜೀವ, ದಕ್ಷ ಆಡಳಿತಗಾರನಾಗಿ ಗುರುತಿಸಿಕೊಂಡು ಈಗ ವಿಶ್ರಾಂತ ಜೀವನದಲ್ಲಿದ್ದರೂ ಕರ್ನಾಟಕದ ಅಷ್ಟೇಕೆ ಜಾಗತಿಕವಾಗಿಯೂ ದರ್ಶನಾತ್ಮಕವಾಗಿ ಮಾತನಾಡಬಲ್ಲ ಶ್ರೀಚಿರಂಜೀವಿ ಸಿಂಗ್ ರ ಅನುಭವದ ನುಡಿಗಳಿಗೆ ನಾವೆಲ್ಲಾ ಕಿವಿಯಾಗಲೇಬೇಕಾದ ಸಂದರ್ಭವನ್ನು ನಾವೇ ನಮ್ಮೆದುರು ತಂದು ನಿಲ್ಲಿಸಿಕೊಂಡಿರುತ್ತೇವೆ.

ಮಾನ್ಯರು ಹೇಳಿದ ಹಾಗೆ ಕರ್ನಾಟಕದ ಅಣೆಕಟ್ಟಗಳಲ್ಲಿ ಕೆಲವು ತಮ್ಮ ಅಂತಿಮ ಹಂತದಲ್ಲಿದ್ದರೆ, ಇನ್ನು ಕೆಲವು ಹೂಳಿನಲ್ಲಿ ಹುದುಗುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳಿಂದ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಗತಿ. ನೀರಾವರಿ ಉದ್ದೇಶದಿಂದ ಕಟ್ಟಿದ ಉತ್ತರ ಕರ್ನಾಟಕದ ಜಲಾಶಯಗಳಿಂದ ಸತತ ಹರಿದ ನೀರು ಅಲ್ಲಿನ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿದೆಯೆಂದರೆ ನಾವು ಮಾಡಿದ, ಮಾಡುತ್ತಿರುವ ಕೆಲಸದಲ್ಲಿ ಮುಂದಾಲೋಚನೆಯ ಕೊರತೆ ತೀವ್ರವಾಗಿದೆ ಎಂದೆನ್ನಿಸುತ್ತದೆ.
ಹಿಂದಿನ ಇಂತಹ ಹಲವು ತಪ್ಪು ನಡೆಗಳು ನಮ್ಮ ಕಣ್ಣಮುಂದಿವೆ. ಆ ಕಾಲಕ್ಕೆ ಅದು ಕ್ರಾಂತಿಕಾರಕವಾಗಿತ್ತು ಎಂದೆನ್ನಿಸಿದರೂ ಕೇವಲ ಕೆಲವೇ ದಶಕಗಳಲ್ಲಿ ಅವುಗಳ ವೈಫಲ್ಯ ಎದ್ದುಕಾಣುವಂತಾಗಿದೆ ಎಂದರೆ ಇದು ನಮ್ಮ ಅಲ್ಪಕಾಲೀನ ಆಲೋಚನೆಯೇ ಸೈ.


ಟೀಕೆ ಮಾಡುತ್ತಾ ಕೂರೋಣವೆ? ಪ್ರಯೋಜನವಿಲ್ಲ. ಆದರೆ ಪಾಠ ಕಲಿಯಬಹುದಲ್ಲವೆ? ತಿದ್ದಿಕೊಳ್ಳಬಹುದಲ್ಲವೆ?
ಪ್ರಸ್ತುತ ಕರ್ನಾಟಕದಲ್ಲಿ ಅಂದಾಜು ಮೂರುಕೋಟಿ ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಲ್ಪಡುತ್ತಿದೆ. ಈ ಭೂಮಿಯಲ್ಲಿ ಪ್ರತಿ ಎಕರೆಗೆ ಒಂದು ಗುಂಟೆ ಜಾಗದಲ್ಲಿ ಅಂದರೆ 33×33ಅಳತೆಯ ಜಾಗದಲ್ಲಿ ಕೇವಲ 5ಅಡಿ ಆಳದ ಇಂಗುಗುಂಡಿ ತೋಡುವುದರಿಂದ ನಮ್ಮ ಅಂತರ್ಜಲವನ್ನು ಸಮೃದ್ಧವಾಗಿಸಬಹುದಲ್ಲವೆ? ಇದಕ್ಕೆ ಸರ್ಕಾರ ಬರಿದೇ ಆದೇಶ ಹೊರಡಿಸಿ, ಯಾವುದೋ ಇಲಾಖೆಗೆ ಜವಾಬ್ದಾರಿ ಹೊರಿಸಿದರೆ ಸಾಲದು. ಇದಕ್ಕಾಗಿ ಸರ್ಕಾರವೇ ಜನಾಲೋಂದನ ನಡೆಸಬೇಕು. ಇದಕ್ಕಾಗಿಯೇ ಒಂದು ಕಾರ್ಯಪಡೆ ಕಟ್ಟಬೇಕು. ಅದರಲ್ಲಿ ಸಾಹಿತಿಗಳು, ಸಮಾಜಸೇವಕರು, ಮಠಾಧೀಶರು, ಸಮಾಜ ವಿಜ್ಞಾನಿಗಳು, ಕಲಾವಿದರು(ಕೇವಲ ಚಿತ್ರನಟರಲ್ಲ), ಚಿಂತಕರು ಇರುವ ಜೊತೆಗೆ ಜನಸಾಮಾನ್ಯರನ್ನು ತೊಡಗಿಸಿಕೊಳ್ಳಬೇಕು.
ಅಂಬರದಿಂದ ಭೂಮಿಗೆ ಬೀಳುವ ಮಳೆಯ ಪ್ರಮಾಣ ಕಡಿಮೆಯೇನಾಗಿಲ್ಲ. ಆದರೆ ಬೀಳಬೇಕಾದ ಜಾಗದಲ್ಲಿ, ಸಮಯದಲ್ಲಿ ಬೀಳುತ್ತಿಲ್ಲವಷ್ಟೆ. ಬಿದ್ದಷ್ಟಾದರೂ ಮಳೆಯ ನೀರನ್ನು ನಾವು ಎಷ್ಟು ನಿಲ್ಲಿಸಿಕೊಳ್ಳಲು ಯತ್ನಿಸುತ್ತಿದ್ದೇವೆ? ಅದೇ ಒಂದಿಷ್ಟು ಅಣೆಕಟ್ಟುಗಳಲ್ಲಿ ಒಂದಿಷ್ಟು ಪ್ರಮಾಣ. ಆದರೆ ಈ ಅಣೆಕಟ್ಟುಗಳು ಏನು ಪರಿಣಾಮ ಬೀರುತ್ತಿವೆ ಎಂದು ಈಗಾಗಲೆ ಹೇಳಿ ಆಗಿದೆಯಲ್ಲ. ಅದಕ್ಕೆ ಒಂದುಗುಂಟೆ ಒಂದು ದೊಡ್ಡ ಪರ್ಯಾಯ ಪರಿಹಾರವಾದೀತು ಎಂಬುದು ಒಂದು ಅನಿಸಿಕೆ.
ಅದೇರೀತಿ ಕನಿಷ್ಠ ಒಂದುಕೋಟಿ ಮನೆಗಳಲ್ಲಿ ನೀರಿನ ಸಂಪನ್ನು ನಿರ್ಮಿಸುವಂತೆ ಕ್ರಮಕೈಗೊಂಡು ಬಿದ್ದ ಮಳೆನೀರನ್ನು ಸಂಗ್ರಹಿಸಿಕೊಳ್ಳುವಂತೆ ಸಮರೋಪಾದಿಯಲ್ಲಿ ಯೋಜನೆಯೊಂದನ್ನು ರೂಪಿಸಿ ಜನಾಂದೋಲನವಾಗಿಸುವುದು ಕೂಡಾ ಸರ್ಕಾರದ ಕೆಲಸದ ಭಾಗವಾಗಬೇಕು. ಬರಿದೇ ಆದೇಶ, ಅದಕ್ಕೊಂದಿಷ್ಟು ದುಡ್ಡು ಎತ್ತಿಡುವುದಾದರೆ ಸರ್ಕಾರಕ್ಕೆ ಈ ಉಸಾಬರಿ ಬೇಡ. ಈ ಯೋಜನೆ ಕರ್ನಾಟಕದ ಜನರ 6ತಿಂಗಳ ಕುಡಿವ ನೀರಿನ ಬವಣೆಯನ್ನು ತೊಲಗಿಸಿಬಿಡುತ್ತದೆ.
‘ಗೃಹಜ್ಯೋತಿ’-ಉಚಿತ ವಿದ್ಯುತ್ ಯೋಜನೆ ಬದಲಿಗೆ ಒಂದುಕೋಟಿ ಮನೆಗಳಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ನಾಲ್ಕು ದೀಪಗಳ ಒಂದೊಂದು ಸೌರವಿದ್ಯುತ್ ಘಟಕಗಳನ್ನು ಕೊಟ್ಟಿದ್ದಲ್ಲಿ ವಿದ್ಯುತ್ ಸಮಸ್ಯೆಯೂ ನೀಗುತ್ತಿತ್ತು, ಕರ್ನಾಟಕ ಸೌರವಿದ್ಯುತ್ ಬೆಳಕಲ್ಲಿ ಮಿಂದೇಳುತ್ತಿತ್ತು. ಉಳಿತಾಯವಾದ ವಿದ್ಯುತ್ ಹಗಲಲ್ಲೆ ರೈತರಿಗೆ ನೀಡಬಹುದಿತ್ತು. ನಗರಕ್ಕೆ, ಕೈಗಾರಿಕೆಗಳಿಗೆ ಬಳಸಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ.
ಹಾಗೆಯೇ ಮುಂದಿನ ದಿನಗಳಲ್ಲಿ ಸೌರ ಬಿಸಿನೀರ ಘಟಕ, ಸೌರ ಅಡುಗೆ ಘಟಕಗಳನ್ನು ಸರ್ಕಾರವೇ ವಿತರಿಸುವುದರ ಮೂಲಕ ಸ್ವಚ್ಛ-ಸ್ವಸ್ಥ ಪರಿಸರಕ್ಕೂ ನಾಂದಿ ಹಾಡಬಹುದು. ಕಟ್ಟಿಗೆ ಉರುವುಲಾಗುವುದನ್ನು ಸಾಕಷ್ಟು ಕಮ್ಮಿಮಾಡಬಹುದು.
ಪೆಟ್ರೋಲಿಯಂ ಗ್ಯಾಸ್ ಉರಿಸಿದಾಗ ಹೊಮ್ಮುವ ಕಾರ್ಬನ್ ಡೈಆಕ್ಸೈಡ್ ಎಂಬ ವಿಷದಿಂದ ಬಳಲುವ ನಾಡಿನ ಶೇ.98ರಷ್ಟು ಮಹಿಳೆಯರನ್ನು ಪಾರುಮಾಡಬಹುದು. ವಾಯು ವಿಷವಾಗುವುದನ್ನು ತಡೆಯಬಹುದು.
ಹೆಸರು ಬದಲಾದ ‘ಕರ್ನಾಟಕ’ಕ್ಕೆ 50ತುಂಬಿದೆ. ಸುವರ್ಣ ಮಹೋತ್ಸವ ಹೆಸರಿಗೆ. ವಿಷವರ್ಣ ಬದುಕು ಇನ್ನೂಇದೆ ಜನರ ಪಾಲಿಗೆ.
ಮಾನ್ಯ ಸಿಂಗ್ ಅವರು ಹೇಳಿದಂತೆ ಮುಂದಿನ 25ವರ್ಷಗಳ ಬದುಕನ್ನು ಮುಂದಿಟ್ಟುಕೊಂಡು ಇಂದಿನಿಂದಲೇ ಅದಕ್ಕೆ ತಕ್ಕ ಹೆಜ್ಜೆ ಹಾಕುವತ್ತ ಈಗಿನ ಸರ್ಕಾರ ಮನಸ್ಸು ಮಾಡಬೇಕು. ಸರ್ವರನ್ನೂ ಒಳಗೊಂಡ ಜನಾಂದೋಲನವೊಂದನ್ನು ಸರ್ಕಾರವೇ ಪ್ರಾರಂಭಿಸಬೇಕು. ಬರಿದೇ ಸಭೆ-ಸಮಾರಂಭಗಳ ಮೂಲಕವಲ್ಲ, ಪ್ರತಿಮನೆಗೂ ಮುಟ್ಟುವ ಕಾರ್ಯಯೋಜನೆಯ ಮೂಲಕ. ಯೋಚಿಸಿ, ಇಂತವುಗಳೆಲ್ಲಾ ಅನುಷ್ಠಾನಗೊಂಡಲ್ಲಿ ‘ಸುವರ್ಣ ಕರ್ನಾಟಕ’ಕ್ಕೆ ವಿಶ್ವಮಾನ್ಯತೆ ದೊರೆಯುತ್ತದೆ.
ಮಾನ್ಯ ಮುಖ್ಯಮಂತ್ರಿ ಗಳು, ಉಪ ಮುಖ್ಯಮಂತ್ರಿಗಳು, ಸಂಪುಟದ ಎಲ್ಲಾ ಸಚಿವರು ಈ ಕುರಿತು ಕಾರ್ಯೋನ್ಮುಖರಾಗುವರೆಂದು ಆಶಿಸೋಣವೆ?
ಹಣ ಚಲಾವಣೆಯೊಂದೇ ರಾಜಕಾರಣವಲ್ಲ, ಅಭಿವೃದ್ಧಿಯಲ್ಲ. ಮುಂದಿನ ಪೀಳಿಗೆಗೆ ಭದ್ರತೆಯ ಬದುಕನ್ನು, ಸುವ್ಯವಸ್ಥಿತ ‘ಕರ್ನಾಟಕ’ ವನ್ನು ಸೃಷ್ಟಿಸುವುದು ಕೂಡ ನಮಗೆ ಸಿಕ್ಕಿರುವ ‘ಸುವರ್ಣ’ಕಾಲ. ವಜ್ರ ಮಹೋತ್ಸವ ಆಚರಿಸಲು ನಾವಿರುತ್ತೇವೊ ಇಲ್ಲವೊ, ನಮ್ಮ ಮಕ್ಕಳು-ಮೊಮ್ಮಕ್ಕಳಿಗಾದರೂ ‘ವಜ್ರ ಮಹೋತ್ಸವ’ ಚೆನ್ನಾಗಿ ಆಚರಿಸುವಂತಾಗಲಿ ಎಂದು ಹಾರೈಸುವುದಕ್ಕಾದರೂ ನಾವಿವತ್ತು ನೆಲ- ಜಲದೊಂದಿಗಿನ ಬಾಳ್ವೆಗೆ ನಾಂದಿ ಹಾಡಬೇಕಿದೆ.
–ಚಂದ್ರಶೇಖರ್ ಎನ್, ಸಿರಿವಂತೆ,ಸಾಗರ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






