![](https://i0.wp.com/samajamukhi.net/wp-content/uploads/2024/03/ತ-ಉ.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2024/03/ತ-ಉ.jpg?resize=760%2C342&ssl=1)
ಸಿದ್ದಾಪುರ: ಶಿವರಾತ್ರಿಯ ಪ್ರಯುಕ್ತ ತಾಲೂಕಿನ ತರಳಿಯ ಸಂಸ್ಥಾನ ಮಠದಲ್ಲಿ 1008 ಶ್ರೀ ಸತ್ಯನಾರಾಯಣ ವೃತ, ಕಳಸ ಪೂಜೆ ಹಾಗೂ ಧರ್ಮಸಭೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗವಾಗಿ ಜರುಗಿತು.
![](https://i0.wp.com/samajamukhi.net/wp-content/uploads/2024/03/ಚಸ.jpg?resize=760%2C342&ssl=1)
ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಸಾರಂಗನಜೆಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ತರಳಿ ಕ್ಷೇತ್ರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಾಗಿರದೇ ಹಿಂದುಳಿದ ವರ್ಗಗಳ ಸ್ವಾಭಿಮಾನದ ಪ್ರತೀಕವಾಗಿ ಬೆಳೆಯುತ್ತಿದೆ. ಮಠ-ಮಂದಿರಗಳ ಮೂಲಕ ಸಮಾಜ ಸಂಘಟನೆ ಬಲಿಷ್ಠಗೊಳಿಸಬೇಕು ಎಂದ ಅವರು, ಸಮಾಜದ ಮಕ್ಕಳು ಐಎಎಸ್, ಐಎಫ್ಎಸ್ ನಂತಹ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಒಟ್ಟಾಗಿ ಮಠ ಕಟ್ಟೋಣ ಎಂದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ ಮಾತನಾಡಿ, ಮಠ ಮತ್ತು ದೇವಾಲಯಗಳ ಮೂಲಕ ಸಮಾಜವನ್ನು ಸಂಘಟಿಸಬೇಕು ಎಂದರು.
ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನಾರಾಯಣಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ತರಳಿ ಸಂಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಲಾಗುವುದು ಎಂದರು.
ಗೃಹ ಸಚಿವರ ಆಪ್ತ ಕಾರ್ಯದರ್ಶಿ ಡಾ. ಕೆ.ಚೆನ್ನಬಸಪ್ಪ ಮಾತನಾಡಿ, ನಾರಾಯಣಗುರುಗಳ ತತ್ವಾದರ್ಶದೊಂದಿಗೆ ನಡೆದುಕೊಂಡು ಬರುತ್ತಿರುವ ಪುಣ್ಯ ಕ್ಷೇತ್ರ ತರಳಿ ಮಠ. ನಾರಾಯಣಗುರುಗಳ ವಿಚಾರದ ಮೇಲೆ ತರಳಿ ಸಂಸ್ಥಾನ ನಡೆಯುತ್ತಿದೆ. ಸಮುದಾಯದ ಏಳಿಗೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದ ಜತೆ ರಾಜಕೀಯ ಪ್ರಾತಿನಿಧ್ಯ ಬೇಕಿದೆ. ನಮ್ಮಲ್ಲಿರುವ ಕೀಳರಿಮೆ ಮೊದಲು ತೊಡೆದು ಹಾಕಬೇಕು ಎಂದರು.
ನ್ಯಾಯವಾದಿ ಜಿ.ಟಿ.ನಾಯ್ಕ ಮಾತನಾಡಿ, ನಾರಾಯಣಗುರುಗಳ ಚಿಂತನೆಯಲ್ಲಿ ಮುಂದಿನ ದಿನಗಳಲ್ಲಿ ಒಟ್ಟಾಗಿ ಸಮಾಜವನ್ನು ಕಟ್ಟೋಣ ಎಂದರು.
ಕರ್ನಾಟಕ ಸರ್ಕಾರದ ಗೃಹ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಾಪುರ ತಾಲೂಕಿನ ಮನಮನೆಯ ಡಾ. ಕೆ. ಚೆನ್ನಬಸಪ್ಪ ಇವರನ್ನು ತರಳಿ ಮಠದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಬಾಲಪ್ರತಿಭೆ ಬೇಡ್ಕಣಿಯ ತೃಪ್ತಿ ನಾಯ್ಕ ಹಾಗೂ ನಿಶಾ ನಾಯ್ಕ ಇವರ ಯಕ್ಷನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ವೃತ ಕಮಿಟಿ ಅಧ್ಯಕ್ಷ ಸಿ.ಆರ್.ನಾಯ್ಕ, ನಾರಾಯಣಗುರು ವಕೀಲರ ಸಂಘದ ಅಧ್ಯಕ್ಷ ಎ.ಕೆ.ವಸಂತ, ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ, ಕೆಎಂಎಫ್ ನಿರ್ದೇಶಕ ಪಿ.ವಿ.ನಾಯ್ಕ, ಪ್ರಮುಖರಾದ ತಬಲಿ ಬಂಗಾರಪ್ಪ, ವಿ.ಎನ್.ನಾಯ್ಕ, ನಾಗರಾಜ ಚಿಕಸ್ವಿ ಉಪಸ್ಥಿತರಿದ್ದರು.
ತರಳಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ಎನ್.ಡಿ.ನಾಯ್ಕ ಸ್ವಾಗತಿಸಿದರು.
ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ನಿರೂಪಿಸಿದರು. ಮಠದ ಕಾರ್ಯದರ್ಶಿ ಎಸ್.ಎಚ್.ನಾಯ್ಕ ವಂದಿಸಿದರು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)