


ಸಾಹಿತಿ ಮತ್ತು ಬರಹಗಾರರನ್ನು ಅಪ್ರತ್ಯಕ್ಷ ಜನಪ್ರತಿನಿಧಿಗಳು ಎನ್ನುತ್ತಾರೆ. ಯಾಕೆಂದರೆ ಬರಹಗಳ ಮೂಲಕ ಜನಸಾಮಾನ್ಯರ ಪರವಾಗಿ ವಕಾಲತ್ತು ವಹಿಸುವ ಸಾಹಿತಿ ನಿತ್ಯದ ಪರೋಕ್ಷ ಜನಪ್ರತಿನಿಧಿ. ಈ ವರ್ಷ ಉತ್ತರ ಕನ್ನಡದ ಸಾಹಿತಿ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತೆ ಮತ್ತೆ ನೆನಪಾಗುತಿದ್ದಾರೆ ಅದಕ್ಕೆ ಕಾರಣ ಈ ವರ್ಷದ ಲೋಕಸಭಾ ಚುನಾವಣೆ ಮತ್ತು ಅವರ ಶಿಷ್ಯ ಸಾಹಿತಿ ವಿಷ್ಣು ನಾಯ್ಕರ ನಿರ್ಗಮನ.

ದಿನಕರ ದೇಸಾಯಿಯವರ ಒಡನಾಡಿಯಾಗಿ ಅವರ ಕೆನರಾ ವೆಲ್ಫೆರ್ ಟ್ರಸ್ಟ್ ಸದಸ್ಯರಾಗಿ ದಿನಕರದೇಸಾಯಿಯವರ ಮಾನಸ ಪುತ್ರರಂತಿದ್ದ ಸಾಹಿತಿ ವಿಷ್ಣು ನಾಯ್ಕರು ಈ ವರ್ಷ ನಿಧನರಾದರು. ವಿಷ್ಣು ನಾಯ್ಕ ನಿಧನದ ನಂತರ ಅವರ ಸಾಹಿತ್ಯ,ಸೇವೆ, ಸಂಘಟನೆಗಳೆಲ್ಲಾ ಚರ್ಚೆಗೆ ಬಂದವು. ಈ ಸಾಹಿತ್ಯ ದಿಗ್ಗಜ ವಿಷ್ಣುನಾಯ್ಕ ಸಮಾಜಮುಖಿ ದಿನಕರದೇಸಾಯಿಯವರ ಪಟ್ಟಶಿಷ್ಯರಾಗಿದ್ದರು.
ಚುನಾವಣೆ ರಾಜಕಾರಣದಿಂದ ದಿನಕರ ದೇಸಾಯಿಯವರನ್ನು ಪರಿಚಯಿಸಬೇಕಾದರೆ ಸ್ವತಂತ್ರವಾಗಿ ಸಂಸತ್ ಪ್ರವೇಶಿಸಿದ್ದ ಕನ್ನಡ ಸಾಹಿತಿ ದಿನಕರ ದೇಸಾಯಿಯವರ ಮೊದಲು ಮತ್ತು ನಂತರ ಯಾವ ಸಾಹಿತಿಯೂ ಜನರಿಂದ ಆಯ್ಕೆ ಆಗಿ ಸಂಸತ್ ಪ್ರವೇಶಿಸಿದ ದೃಷ್ಟಾಂತಗಳೇ ಇಲ್ಲ.
ಡಾ. ದಿನಕರ ದೇಸಾಯಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಲಗೇರಿ ಪ್ರಾಥಮಿಕ ಶಿಕ್ಷಕರ ಮಗನಾಗಿ ಜನಿಸಿ (೧೦-೦೯-೧೯೦೯) ಶಿಕ್ಷಣದ ನಂತರ ವಕೀಲರಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಾಹಿತ್ಯ, ಚುಟುಕುಗಳ ಮೂಲಕ ಜನರನ್ನು ಮುಟ್ಟಿ-ತಟ್ಟಿದ ದಿನಕರ ದೇಸಾಯಿ ೧೯೫೩ ರಲ್ಲಿ ಕೆನರಾ ವೆಲ್ ಫೇರ್ ಟ್ರಸ್ಟ್ ಸ್ಥಾಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ೨೭ ಹೈಸ್ಕೂಲುಗಳ ಸ್ಥಾಪನೆಗೆ ಕಾರಣರಾಗುತ್ತಾರೆ.
ಜನಪರತೆಯೆಂದರೆ ದಿನಕರದೇಸಾಯಿ ಎನ್ನುವಂತಿದ್ದ ಈ ಪತ್ರಕರ್ತ ೧೯೫೫ ರಲ್ಲಿ ಜನಸೇವಕ ಎನ್ನುವ ವಾರಪತ್ರಿಕೆ ಪ್ರಾರಂಭಿಸಿ ೧೭ ವರ್ಷ ಪತ್ರಿಕೆಯ ಮೂಲಕ ಜನಜಾಗೃತಿ ಮಾಡುತ್ತಾರೆ. ಸಮಾಜಸೇವಕ, ಪ್ರಗತಿಪರ, ಹೋರಾಟಗಾರನಿಗೆ ಎಲ್ಲಾ ಕ್ಷೇತ್ರಗಳೂ ಹೋರಾಟದ ಅಂಗಳಗಳೇ ಸ್ವಾತಂತ್ರ್ಯ ಪೂರ್ವದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೇಣಿ ಹೋರಾಟ ಪ್ರಾರಂಭಿಸುವ ದಿನಕರ ದೇಸಾಯಿ ಪತ್ರಿಕೆ, ಸಂಘಟನೆ, ಸಾಹಿತ್ಯ ಮತ್ತು ಜನಹೋರಾಟಗಳ ಮೂಲಕ ಚಳವಳಿ ಮುಂದುವರಿಸುತ್ತಾರೆ.
ಈ ಚಳವಳಿಯ ಭಾಗವಾಗಿ ೧೯೬೧ ರಲ್ಲಿ ಚುನಾವಣೆ ಎದುರಿಸುವ ದಿನಕರ ದೇಸಾಯಿಯವರಿಗೆ ಸೋಲು ಕಾದಿತ್ತು ನಂತರ ೧೯೬೭ ರಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಿ ಇಂದಿನ ಉತ್ತರ ಕನ್ನಡದ ಅಂದಿನ ಕೆನರಾ ಸಂಸದರಾಗಿ ಆಯ್ಕೆ ಆಗುತ್ತಾರೆ.
ಕಾರ್ಮಿಕ ಮುಖಂಡ, ರೈತ ಹೋರಾಟಗಾರ, ಸಂಪಾದಕ, ಸಾಹಿತಿ, ಚುಟುಕು ಕವಿಯಾಗಿ ಬಹುಮುಖಿ ಯಾಗಿದ್ದ ದಿನಕರ ದೇಸಾಯಿಯವರ ಕ್ರೀಯಾಶೀಲತೆ ನೋಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದಿನಕರ ದೇಸಾಯಿ ಕಾಂಗ್ರೆಸ್ ಸೇರಿದರೆ ದೇಶದ ಶಿಕ್ಷಣ ಮಂತ್ರಿ ಮಾಡುತ್ತೇನೆ ಎಂದು ದಿನಕರರನ್ನು ಕಾಂಗ್ರೆಸ್ ಗೆ ಆಹ್ವಾನಿಸುತ್ತಾರೆ. ಈ ಆಹ್ವಾನ ತಿರಸ್ಕರಿಸುವ ದೇಸಾಯಿ ನಾನು ಉತ್ತರ ಕನ್ನಡದ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದು ಸಚಿವನಾಗಿ ಕೀರ್ತಿ ಗಳಿಸಲಲ್ಲ ಬದಲಾಗಿ ಜನರ ಸೇವೆ ,ಮಾಡಲು ಎಂದು ತಮ್ಮ ಬದ್ಧತೆ ಪ್ರದರ್ಶಿಸುತ್ತಾರೆ.
ಅಂದಿನ ಕಾಂಗ್ರೆಸ್, ಕಾಂಗ್ರೆಸ್ ಮನೋಭಾವದ ವಿರುದ್ಧ ಸಮಾಜವಾದಿಯಾಗಿ ನಿರಂತರ ಜನಹೋರಾಟ ಮಾಡಿದ ದಿನಕರ ದೇಸಾಯಿ ಉತ್ತರ ಕನ್ನಡದ ಇಂದಿನ ಜ್ವಲಂತ ಸಮಸ್ಯೆ ಅರಣ್ಯ ಅತಿಕ್ರಮಣವನ್ನು ನಾಲ್ಕು ದಶಕಗಳ ಹಿಂದೆ ದೇಶದ ಗಮನಕ್ಕೆ ತಂದವರು. ಉತ್ತರ ಕನ್ನಡ ಜಿಲ್ಲೆಯ ರಾಮಕೃಷ್ಣ ಹೆಗಡೆ ಮಂತ್ರಿಯಾಗಿದ್ದಾಗ ಗೇಣಿದಾರರು ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯ ಕೇಳಿ ಕುಮಟಾದಲ್ಲಿ ಪ್ರತಿಭಟನೆ ನಡೆಸುವ ದಿನಕರ ದೇಸಾಯಿ ಇದೇ ಹೋರಾಟ,ರೈತ ಸಂಘಟನೆ ಕಾರಣಕ್ಕೆ ಜಿಲ್ಲೆಯ ಭೂಮಾಲಿಕರಿಂದ ಕುಮಟಾ ಹಿರೇಗುತ್ತಿಯಲ್ಲಿ ಪೆಟ್ಟು ತಿಂದ ಘಟನೆ ಇತಿಹಾಸದ ಪುಟದಲ್ಲಿ ಸೇರಿಹೋಗಿದೆ.
ಉತ್ತರ ಕನ್ನಡ ಜಿಲ್ಲೆಯ ಕೆನರಾ ಕ್ಷೇತ್ರದಲ್ಲಿ ಸೋತ ಸಾಹಿತಿ ಕಲಾವಿದರಲ್ಲಿ ಶಿವರಾಮ ಕಾರಂತ, ಅನಂತನಾಗ್, ನೀರ್ನಳ್ಳಿ ರಾಮಕೃಷ್ಣ ಸೇರಿದ ಕೆಲವರ ಹೆಸರು ಆಗಾಗ ಚರ್ಚೆಗೆ ಬರುತ್ತದೆ ಆದರೆ ಸಾಹಿತಿ, ಹೋರಾಟಗಾರನಾಗಿ ಸ್ವತಂತ್ರವಾಗಿ ಸಂಸತ್ ಪ್ರವೇಶಿಸಿದ್ದ ಜನಸಾಮಾನ್ಯರ ಧ್ವನಿ, ಜನಸೇವಕ ದಿನಕರ ದೇಸಾಯಿ ಹೆಸರು ಪ್ರಚಾರಕ್ಕೆ ಬರುತ್ತಿಲ್ಲ. ಆದರೆ ಈ ವರ್ಷ ಉತ್ತರ ಕನ್ನಡದ ಸಮಾಜಮುಖಿ ಜನಸೇವಕ ದಿನಕಾರ ದೇಸಾಯಿ ವಿಷ್ಣುನಾಯ್ಕರ ಸಾವಿನ ನಂತರ ಮತ್ತು ಲೋಕಸಭೆ ಚುನಾವಣೆ ೨೪ ಮೊದಲು ಮತ್ತೆ ಮತ್ತೆ ನೆನಪಿಗೆ ಬಂದರು. ಇದು ಅವರ ಸಾರ್ವಕಾಲಿಕ ಪ್ರಸ್ತುತತೆಗೆ ಸಾಕ್ಷಿ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
