![](https://i0.wp.com/samajamukhi.net/wp-content/uploads/2023/12/deshpande.jpg?resize=600%2C450&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2023/12/deshpande.jpg?resize=600%2C450&ssl=1)
ಮುಖ್ಯಮಂತ್ರಿ, ರಾಜ್ಯಪಾಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆಗುವ ಎಲ್ಲಾ ಅರ್ಹತೆ ಇರುವ ಮಾಜಿ ಸಚಿವ ಆರ್. ವಿ. ದೇಶಪಾಂಡೆ ರಾಜ್ಯಪಾಲರೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಬಹುತೇಕ ಎಲ್ಲಾ ಸರ್ಕಾರಗಳಲ್ಲಿ ಮಂತ್ರಿಯಾಗುತಿದ್ದ ದೇಶಪಾಂಡೆಯವರನ್ನು ಈ ಬಾರಿ ಸಚಿವರನ್ನಾಗಿಸದೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿಸಿ ಅಲಂಕಾರಿಕ ವ್ಯಕ್ತಿಯನ್ನಾಗಿಸಲಾಗಿದೆ.
ಇದೇ ಆರ್. ವಿ. ದೇಶಪಾಂಡೆ ಮತ್ತೆ ಸಚಿವರಾದರೂ ಆಶ್ಚರ್ಯವಿಲ್ಲ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ.
ನೂತನ ಸಂಸದ ವಿಶ್ವೇಶ್ವರ ಹೆಗಡೆಯವರಂತೆ ಬೇನಾಮಿ ಆಸ್ತಿ ಮಾಡದ, ಮಾಜಿ ಸಂಸದ ಅನಂತಕುಮಾರ ಹೆಗಡೆಯವರಂತೆ ರಾಜಕೀಯವನ್ನು ಸ್ವಾರ್ಥಕ್ಕಷ್ಟೇ ಬಳಸಿಕೊಳ್ಳದ ದೇಶಪಾಂಡೆ ಎಲ್ಲಾ ಮಾಡಿಯೂ ಏನೂ ಮಾಡದಂತಿರುವ ಚಾಣಕ್ಯ.
ಉತ್ತರ ಕನ್ನಡ ಜಿಲ್ಲೆಯ ವಿಷಯಕ್ಕೆ ಬಂದರೆ…. ಮೂರು ದಶಕಗಳ ಕಾಲ ನಿರಂತರ ಅಧಿಕಾರ ಅನುಭವಿಸಿದ ಮೂವರಲ್ಲಿ ಒಬ್ಬರಾದ ದೇಶಪಾಂಡೆ ಯಾರನ್ನೆಲ್ಲಾ ಬೆಳೆಸಿದ್ದಾರೆ ಎಂದರೆ ಉತ್ತರ ಸೊನ್ನೆ.
ಮೂವತ್ತು ವರ್ಷಗಳಲ್ಲಿ ರಮಾನಂದ ನಾಯಕ, ಸಾಯಿ ಗಾಂವ್ಕರ್, ಜಿ.ಎಂ. ಶೆಟ್ಟಿ, ಜಗದೀಪ ತಂಗೇರಿ, ಕೆ.ಜಿ.ನಾಗರಾಜ್,ಪ್ರಮೋದ್ ಹೆಗಡೆ, ಹೊನ್ನಪ್ಪ ನಾಯಕ, ರಾಮಕೃಷ್ಣ ಮೂಲಿಮನೆ, ಆರ್. ಎಸ್.ರಾಯ್ಕರ್, ವಿಲಾಸ ನಾಯ್ಕ, ಉದಯ ನಾಯ್ಕ ಸೇರಿದಂತೆ ಯಾರನ್ನೂ ಬೆಳೆಸಿಲ್ಲ.
ದೇಶಪಾಂಡೆಯವರಿಂದ ಬೆಳೆದವರೆಂದರೆ…. ಎಸ್.ಎಲ್, ಘೊಟ್ನೇಕರ್, ವಿ.ಡಿ.ಹೆಗಡೆ, ಶುಭಲತಾ ಅಸ್ನೋಟಿಕರ್ (ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಶಿವಾನಂದ ಹೆಗಡೆ) ಅವರ್ಯಾರೂ ಇವರೊಂದಿಗೂ ಇಲ್ಲ,ಕಾಂಗ್ರೆಸ್ ನಲ್ಲೂ ಇಲ್ಲ. ದೇಶಪಾಂಡೆಯವರನ್ನು ಧಿಕ್ಕರಿಸಿ ಬೆಳೆದವರೆಂದರೆ.. ಅದು ಶಿರಸಿಯ ಭೀಮಣ್ಣ ನಾಯ್ಕ, ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಇಬ್ಬರೇ. ಜಿಲ್ಲೆಯಲ್ಲಿ ದೇಶಪಾಂಡೆಯವರಿಂದ ಬೆಳಕಿಗೆ ಬಂದವರೊಬ್ಬರೇ ಅವರು ಭಟ್ಕಳದ ಜೆ.ಡಿ. ನಾಯ್ಕ (ಇವರ ಮಾವ -ಅತ್ತೆ ಕಟ್ಟಾ ಕಾಂಗ್ರೆಸ್ಸಿಗರೆಂಬುದು ಕಾರಣ)
ಇಂಥ ಚರಿತ್ರೆಯ ದೇಶಪಾಂಡೆ ತನಗೆ ಬೇಕಾದವರನ್ನು ಪಕ್ಷದ ಸಂಘಟನೆಯಲ್ಲೇ ಉಳಿಸಿದರು. ಕೆಲವರಿಗೆ ಜಿ.ಪಂ. ಸದಸ್ಯ, ಅಧ್ಯಕ್ಷ, ತಾ.ಪಂ. ಅಧ್ಯಕ್ಷರನ್ನಾಗಿಸಿದರು ಬಿಟ್ಟರೆ ದೇಶಪಾಂಡೆಯವರಿಂದಲೇ ನಾನೀಮಟ್ಟಕ್ಕೆ ಬೆಳೆದೆ ಎನ್ನುವ ಒಬ್ಬರನ್ನೂ ಬೆಳೆಸದ ದೇಶಪಾಂಡೆ ತನ್ನ ೫೦ ವರ್ಷಗಳ ರಾಜಕಾರಣದಲ್ಲಿ ಅರ್ಧಕ್ಕಿಂತ ಹೆಚ್ಚು ಅವಧಿ ಕಾಂಗ್ರೆಸ್ ನಲ್ಲೇ ಇದ್ದು ಜನಪ್ರತಿನಿಧಿಯಾಗುತ್ತ ಮಂತ್ರಿಯೂ ಆಗಿದ್ದವರು. ಇವರ ರಾಜಕೀಯ ಜೀವನದಲ್ಲಿ ಒಬ್ಬನೇ ಒಬ್ಬ ಬದ್ಧತೆಯ ಜಾತ್ಯಾತೀತ, ಕಾಂಗ್ರೆಸ್ ಮನುಷ್ಯ ಬೆಳೆದಿದ್ದೇ ಇಲ್ಲ ಇದರ ಪರಿಣಾಮ ಈಗ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಧೂಳೀಪಟವಾಗುವಂತಾಗಿದೆ.
ಕಾಂಗ್ರೆಸ್ ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅಖಿಲಭಾರತ ವಿಪ್ರ ಸಮ್ಮೇಳನದಲ್ಲಿ ಭಾಗವಹಿಸಿ ಬ್ರಾಹ್ಮಣರು ಒಂದಾಗಬೇಕು ಎಂದು ಕರೆಕೊಡುತ್ತಾರೆ. ಅಧಿಕಾರಿಗಳು, ಅವಕಾಶಗಳು ಕೂಡಿ ಬಂದಾಗಲೆಲ್ಲಾ ಗುಟ್ಟಾಗಿ ಬ್ರಾಹ್ಮಣರಿಗೆ ಮೀಸಲಾತಿ ಕಲ್ಫಿಸುತ್ತಾರೆ ಎನ್ನುವ ಗುರುತರ ಆರೋಪ ಇವರ ಮೇಲಿದೆ. ಇದೇ ದೇಶಪಾಂಡೆ ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದ ಕ್ಷೇತ್ರವನ್ನು ಜೆ.ಡಿ.ಎಸ್. ಗೆ ಬಿಟ್ಟುಕೊಟ್ಟು ಕಾಂಗ್ರೆಸ್ ಉಮೇದುವಾರಿಕೆ ಇಲ್ಲದಂತೆ ಮಾಡಿಬಿಟ್ಟಿದ್ದರು.
ಈ ಬಾರಿ ಡಾ. ಅಂಜಲಿ ನಿಂಬಾಳ್ಕರ್ ಗೆ ಅವಕಾಶ ನೀಡಿ ಜಿಲ್ಲೆಯ ಬಹುಸಂಖ್ಯಾತರ ವಿಶ್ವಾಸ ಕಳೆದುಕೊಂಡರು. ಇದರ ಪರಿಣಾಮ ವಿಶ್ವೇಶ್ವರ ಹೆಗಡೆಯವರ ಭರ್ಜರಿ ಗೆಲುವು. ಈ ಹಿಂದೆ ಶಿರಸಿ ಕ್ಷೇತ್ರದಲ್ಲಿ ಗುಟ್ಟಾಗಿ ಕಾಗೇರಿಯವರಿಗೆ ಸಹಕರಿಸುತಿದ್ದ ದೇಶಪಾಂಡೆ ಈ ಬಾರಿ ಕೂಡಾ ಗೇಮ್ ಮಾಡಿದರೆ ಎಂದು ಸಂಶಯಿಸುವವರಿದ್ದಾರೆ.!
ಈ ಹಿಂದೆಲ್ಲಾ ತಾನು ತನ್ನ ಕುಟುಂಬದ ಉಮೇದುವಾರಿಕೆ ಹೊರತು ಪಡಿಸಿ ಉಳಿದ ಸಮಯಗಳಲ್ಲಿ ಅನಂತಕುಮಾರ ಮತ್ತು ವಿಶ್ವೇಶ್ವರ ಹೆಗಡೆಯವರಿಗೆ ಸಹರಿಸುತಿದ್ದ ದೇಶಪಾಂಡೆ ಜಿಲ್ಲೆಯ ಹಿಡಿತ ಬ್ರಾಹ್ಮಣರ ಕೈ ತಪ್ಪಬಾರದೆಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ದೋಸ್ತಿ ನಿಭಾಯಿಸುತಿದ್ದರೆ? ಎನ್ನುವ ಅನುಮಾನಗಳಿವೆ!
ಏನೇ ಇರಲಿ ದೇಶಪಾಂಡೆ ತನ್ನ ರಾಜಕೀಯ ಜೀವನದಲ್ಲಿ ಕಠ್ಠರ್ ಕಾಂಗ್ರೆಸ್ಸಿಗ, ಜಾತ್ಯಾತೀತ ಆಗದೆ ಉತ್ತರ ಕನ್ನಡ ಜಿಲ್ಲೆಯನ್ನು ಕೋಮುವಾದಿಗಳ ಆಡೊಂಬಲ ಮಾಡಿದ್ದಾರೆ ಎನ್ನುವ ಆರೋಪಕ್ಕೆ ತುತ್ತಾಗಿದ್ದಾರೆ. ಕಾಂಗ್ರೆಸ್ ನಲ್ಲಿದ್ದು ಲಾಭದಾಯಕ ಸಚಿವ ಸ್ಥಾನ ಅಲಂಕರಿಸುತಿದ್ದ ಆರ್. ವಿ. ದೇಶಪಾಂಡೆ ಕಾಂಗ್ರೆಸ್ ನ ಮತದಾರರಾದ ಜಿಲ್ಲೆಯ ಬಹುಸಂಖ್ಯಾತರನ್ನು ತುಳಿದು ಆಳ್ವಾ ಜೊತೆ ಸ್ಫರ್ಧೆಗಿಳಿದರು ಎಂಬುವುದನ್ನು ಬಿಟ್ಟರೆ ಉತ್ತರ ಕನ್ನಡದ ಅಭಿವೃದ್ಧಿ, ಎರಡನೇ ಹಂತದ ನಾಯಕರ ಸೃಷ್ಟಿ ವಿಚಾರದಲ್ಲಿ ದೇಶಪಾಂಡೆವರದ್ದು ಜೀರೋ ಸಾಧನೆ.
ಇದೇ ವಿಚಾರದಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆಯವರಿಗೆ ಸ್ಫರ್ಧೆ ನೀಡಿದ ಇವರು ಅವರಂತೆಯೇ ಜಿಲ್ಲೆಯ ಮತ್ತೊಬ್ಬ ಎರಡನೇ ಹಂತದ ನಾಯಕನನ್ನು ಪೋಶಿಸಿಲ್ಲ ಇದೇ ಉತ್ತರ ಕನ್ನಡ ಜಿಲ್ಲೆಗೆ ಶಾಪವಾಗಿದ್ದು ಈ ಮೂವರು ಬ್ರಾಹ್ಮಣ ಮುಖಂಡರು ತಮ್ಮ ಯುಗದ ನಂತರ ಉತ್ತರ ಕನ್ನಡ ಜಿಲ್ಲೆಗೆ ಒಬ್ಬ ನಾಯಕನನ್ನೂ ಪರಿಚಯಿಸದಿರುವುದು ಜಿಲ್ಲೆಯ ರಾಜಕೀಯ ದುರಂತ. ಕಾಂಗ್ರೆಸ್ ಯಾಕೆ ಸೋಲುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಕನ್ನಡದಿಂದ ನಿರಂತರವಾಗಿ ಮೂವರು ಬ್ರಾಹ್ಮಣ ಮುಖಂಡರೇ ಗೆಲ್ಲುತಿದ್ದರು ಎನ್ನುವುದೇ ಉತ್ತರ. ಈ ಮೂವರ ರಾಜಕೀಯ ಸ್ವಾರ್ಥಕ್ಕೆ ಕನಿಷ್ಟ ನೂರಾರು ಯುವ ನಾಯಕರು ಬಲಿಯಾಗಿ ಹುತಾತ್ಮರಾಗಿದ್ದಾರೆ ಎನ್ನುವುದು ವಾಸ್ತವ. ಹೆಚ್ಚಿನ ಸತ್ಯಗಳನ್ನು ಬಹುಜನರಿಗೆ ತಿಳಿಸದೆ ಜಿಲ್ಲೆಯನ್ನು ಉತ್ತರ ಕಾಣದ ಜಿಲ್ಲೆಯಾಗಿಸಿದ್ದೇ ಮೂರು ದಶಕಗಳ ಮೂವರು ನಾಯಕರ ಸಾಧನೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)