


ನಾಟಕ ಕಲೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕತೆಗಳ ಅತ್ಯಂತಿಕ ಉದ್ದೇಶ ಮಾನವನ ಬದುಕನ್ನು ಮತ್ತಷ್ಟು ಹಸನಾಗಿಸುವುದು. ಇದನ್ನು ಕಲಾವಿದ, ಹೋರಾಟಗಾರ ಅಥವಾ ಯಾವುದೋ ಕೆಲವೇ ಕ್ಷೇತ್ರಗಳ ಜನರು ಮಾತ್ರ ನಿರ್ವಹಿಸುವ ಗುತ್ತಿಗೆಯೆ?

ಹೀಗಾದಾಗ ಏನೇನೆಲ್ಲಾ ಸಂಭವಿಸಬಹುದು ಎನ್ನುವ ಕಥಾ ಹಂದರಕ್ಕೆ ಸ್ವಲ್ಪ ತಮಾಸೆ, ಸತ್ಯ, ವಾಸ್ತವ,ಕಲ್ಪನೆ ಬೆರಸಿದರೆ ಒಂದು ಅಂಕದ ಪರದೆ ನಾಟಕ ಸಿದ್ಧವಾಗುತ್ತದೆ.

ಮರಾಠಿ ಮೂಲದ ಅಬಿರಾಮ ಭಡ್ಕಮಕರ್ ನಾಟಕ ಜಯಂತ ಕಾಯ್ಕಿಣಿಯವರ ಕನ್ನಡ ಅವತರಣಿಕೆ ನೀನಾಸಂ ಕಲಾವಿದರ ಮೂಲಕ ರಂಗಭೂಮಿಗೆ ಬಂದ ಅಂಕದ ಪರದೆ ರಂಗಭೂಮಿ ಮೂಲಕ ಒಂದು ಸಮಾಜಮುಖಿ ಚಿಂತನೆಯನ್ನು ಎಷ್ಟು ಹೃದ್ಯವಾಗಿ ಹರಡಬಹುದು ಎಂಬುದಕ್ಕೆ ಉದಾಹರಣೆಯಂತಿದೆ. ವೃದ್ಧಾಶ್ರಮ ಸೇರುವ ಕೆಲವರಲ್ಲಿ ಒಂದು ಹೋರಾಟಗಾರನ ಜೋಡಿ, ರಂಗಭೂಮಿ ಕಲಾವಿದ ಜೊತೆಗೆ ಕೆಲವು ವಿಭಿನ್ನ ಕ್ಷೇತ್ರದ ವೃದ್ಧರು. ಅವರೆಲ್ಲಾ ಮಕ್ಕಳಿಂದ ವಿಮುಖರಾಗಿ ಆಶ್ರಮ ಸೇರಿದವರಲ್ಲದಿದ್ದರೂ ಎಲ್ಲರೂ ತಮ್ಮ ಸಿದ್ಧಾಂತ,ಕರ್ತವ್ಯ ಬದ್ಧತೆಗೆ ಹೆಸರಾದವರು. ಅವರವರಲ್ಲೇ ತುಸು ಅನುಮಾನ, ಹೊಂದಾಣಿಕೆಯ ಕೊರತೆ ಆದರೆ ಜೊತೆಗಿರಬೇಕಾದ ಅನಿವಾರ್ಯ ವಾಸ್ತವವಿದೆಯಲ್ಲ ಅದು ಅವರಲ್ಲಿ ವಿಚಿತ್ರ ಲವಲವಿಕೆಗೂ ಕಾರಣವಾಗುತ್ತದೆ.

ಮಾಜಿ ಕಲಾವಿದ ರಂಗಭೂಮಿ, ರಂಗಪ್ರಯೋಗ, ಪಾತ್ರಗಳ ನೆನೆದು ಗಂಭೀರನಾಗುತ್ತಲೇ ಭಾವುಕನಾಗುವುದು, ಹೋರಾಟಗಾರ ಗಥದ ವೈಭವದಲ್ಲಿ ಮೈಮರೆಯುವುದು,ಪ್ರಾಮಾಣಿಕ ಉದ್ಯೋಗಿಯೊಬ್ಬನ ಮಗನ ದುರಂತ ಸಾವಿನ ನೆನಪು ವಾಸ್ತವವನ್ನು ವಿವರಿಸಲು ಬಳಕೆಯಾದ ಪಾತ್ರಗಳು ಹೀಗೆ ಮೂಲಕ್ಕೆ ಭಂಗಬರದೆ ತಮ್ಮ ಭಾಷೆ, ನವ ಶಬ್ಧಗಳು, ಸರಳವಾದ ಕಟ್ಟುವಿಕೆ ಗಳನ್ನೆಲ್ಲಾ ಸೇರಿಸಿ ಅನುವಾದಿಸಿದ ಜಯಂತ ಕಾಯ್ಕಿಣಿಯವರ (ಭಾಷಾ) ರೂಪಾಂತರ ನಮ್ಮ ನೆಲದ ನೇಟಿವಿಟಿಗಿಂತ ಭಿನ್ನ ಎನ್ನುವ ತಕರಾರು ಎತ್ತಲು ಸಾಧ್ಯವಿಲ್ಲದಷ್ಟು ಸೊಗಸಾಗಿದೆ.
ಒಂದು ಸಂವಿಧಾನ, ಒಂದು ಆಡಳಿತ ಅಪಾತ್ರರ ಕೈಗೆ ಸಿಕ್ಕರೆ ಹೇಗೆ ದಿಕ್ಕು ತಪ್ಪುತ್ತದೆಯೋ ಹಾಗೆಯೇ ನಾಟಕ, ಸಾಹಿತ್ಯದ ಆಶಯ ಯೋಗ್ಯರಿಗೆ ಸಿಗದಿದ್ದರೆ ಅದರ ಸಾರ್ಥಕತೆಗೆ ಕುಂದಾಗುತ್ತದೆ. ಮರಾಠಿ ಮೂಲದ ಕತೆ, ಜಯಂತರ ಸೊಗಸಾದ ನಿರೂಪಣೆಯ ಭಾಷೆ, ಈ ವಿಶೇಶಗಳಿಗೆ ಒಪ್ಪವಿಟ್ಟಂತಹ ನೀನಾಸಂ ಕಲಾವಿದರ ಲವಲವಿಕೆಯ ಭಾಗವಿಸುವಿಕೆ ಇವೆಲ್ಲಾ ಸೇರಿ ಅಂಕದ ಪರದೆಯನ್ನು ಕಲಾತ್ಮಕವಾಗಿ ಶೃಂಗರಿಸಿದಂತಾಗಿದೆ.
ನೀನಾಸಂ ಅನೇಕ ವರ್ಷಗಳಿಂದ ಇಂಥ ಪ್ರಯೋಗಗಳ ಮೂಲಕ ಚಾಲ್ತಿಯಲ್ಲಿದೆ. ಆದರೆ ಇಂಥ ಪ್ರಯತ್ನಗಳನ್ನು ಜನರ ನಡುವೆ ಕೊಂಡೊಯ್ಯುವವರು ಯಾರು? ರಾಜ್ಯಾದ್ಯಂತ ಅನೇಕ ಸಂಘ, ಸಂಸ್ಥೆ, ಸಂಘಟನೆ, ಸಮೂಹಗಳ ಮೂಲಕ ನೀನಾಸಂ ನ ಆಶಯ ಕೊನೆ ಮುಟ್ಟುತ್ತಿದೆ.ಈ ಪ್ರಯತ್ನಕ್ಕೆ ಸಿದ್ಧಾಪುರದಲ್ಲಿ ಕೈ ಜೋಡಿಸಿದವರು ಒಡ್ಡೋಲಗದ ಹಿತ್ತಲಕೈ ಗಣಪತಿ. ಕಲಾವಿದರಾದ ಗಣಪತಿ ಹಿತಲಕೈ ಸ್ಥಳೀಯ ಶಕರಮಠದ ನೆರವು ಪಡೆದು ಆಯೋಜಿಸಿದ್ದ ನೀನಾಸಂ ನ ನಾಟಕ ಪ್ರದರ್ಶನ ಈ ಎಲ್ಲಾ ಹಿನ್ನೆಲೆಗಳಲ್ಲಿ ಪ್ರಮುಖ ಎನಿಸಿತು.
