

ಭಕ್ತಿಯ ಹೆಸರಲ್ಲಿ ಅಧರ್ಮಮಾಡಬೇಡಿ…

ರಾಜಧರ್ಮ ಬಿಟ್ಟಾಗ ಲೋಕಕ್ಕೆ ಕಂಟಕ.
ಜೀತ ಅಧರ್ಮ… ಈಗ ದೈವ ಸ್ಥಾಪನೆ ಬೇಡ, ಧರ್ಮ ಸ್ಥಾಪನೆ ಬೇಕು.


ಹೀಗೆ ಪುಂಕಾನುಪುಂಕ ಮಾತನಾಡುವ ಬುಡಕಟ್ಟು ನಾಯಕ. ತಮ್ಮ ಸೀಮೆ ಈಶ್ವರನ ತೋಟ ರಕ್ಷಿಸುತ್ತಾ ಅದರ ಆದಾಯ ಅನ್ಯರ ಪಾಲಾಗುವುದನ್ನು ತಪ್ಪಿಸಿ ತಮ್ಮ ಕಾಂತಾರದ ಮಸಾಲೆ ಪದಾರ್ಥಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಜೊತೆಗೆ ತಮ್ಮ ಅನ್ನ ತಾವೇ ಸಂಪಾದಿಸುವ ಕೃಷಿ ವ್ಯವಸಾಯ ದ ಮೂಲಕ ರಾಜಪ್ರಭುತ್ವಕ್ಕೆ ಸೆಡ್ಡು ಹೊಡೆಯುವುದು… ಇವೆಲ್ಲಾ ಒಬ್ಬ ಸಮಾಜವಾದಿ ನಾಯಕನ ಅಸಹನೆ, ಚಳವಳಿಯಾಂಶಗಳು. ಇವುಗಳನ್ನು ಬಳಸಿಕೊಂಡು ಕಾಂತಾರ ಒಂದು ದಂತಕತೆ ಮೊದಲ ಅಧ್ಯಾಯ ಪ್ರಾರಂಭವಾಗಿದೆ.
ಇದೇ ಮಾದರಿಯಲ್ಲಿ ಕಾರ್ಮಿಕರ ಶೋಷಣೆ ವಿರೋಧಿಸಿ ಬಂಡೇಳುವ ನಾಯಕ ಮುಬೈ ಭೂಗತ ಲೋಕ ಸೇರಿ ಶೋಷಕರಿಗೆ ಪಾಠ ಕಲಿಸುವ ಜೊತೆಗೆ ಶ್ರಮಿಕರಿಗೆ ನ್ಯಾಯ ಕೊಡಿಸುತ್ತಾನೆ. ಈ ತಿರುಳಿನ ಕೆ.ಜಿ.ಎಫ್. ಎರಡು ಕಂತುಗಳಲ್ಲಿ ಬಂದು ಸಂದೇಶ ಸಾರುವ ಮೂಲಕ ಯಶಸ್ಸನ್ನು ಕಂಡಿದೆ.
ಈ ಕಾಂತಾರ ದಂತಕತೆ ಮತ್ತು ಕೆ.ಜಿ.ಎಫ್. ಗಳಲ್ಲಿ ಕಥೆ, ನಿರೂಪಣೆ ವಿಚಾರಗಳಲ್ಲಿ ಮೊದಲ ಕಂತುಗಳೇ ಗೆದ್ದಿವೆ. ಅದ್ಧೂರಿತನ, ತಾಂತ್ರಿಕತೆಗಳಲ್ಲಿ ಎರಡನೇ ಅಧ್ಯಾಯಗಳದ್ದು ಮೇಲುಕೈ.
ಈ ಮೊದಲ ಕಂತನ್ನು ಬಳಸಿ ಹಣ ಮಾಡುವ ಹೋರಾಟದಲ್ಲಿ ಮುಂದುವರಿದಕಂತುಗಳು ಯಶಸ್ವಿಯಾಗಿವೆ.
ಸಿನೆಮಾ ವಿದ್ಯಾರ್ಥಿಯಾದ ನನಗೆ ಮನೋರಂಜನೆ ದೃಷ್ಟಿಯಿಂದ ಎರಡು+ಎರಡೂ ಸೇರಿ ನಾಲ್ಕೂ ಚಿತ್ರಗಳೂ ಗೆದ್ದಿವೆ ಎನ್ನುವ ಸಂಬ್ರಮ. ಈ ಸಾಹಸದಲ್ಲಿ ಎರಡು ಕನ್ನಡದ ಕುಡಿಗಳು ರಾಷ್ಟ್ರೀಯ ಆಕರ್ಷಣೆಗಳಾಗಿವೆ. ಈ ಎಲ್ಲಾ ಮೆಚ್ಚುಗೆಗಳ ಜೊತೆಗೆ ಕೆ.ಜಿ.ಎಫ್. ೨ ಭಾಗಗಳು ಮನುಷ್ಯರೇ ಮನುಷ್ಯನನ್ನು ಶೋಷಿಸುವ ಅಪಾಯಕಾರಿ ಪ್ರವೃತ್ತಿ ಖಂಡಿಸುವ ಜೊತೆಗೆ ಸಾಮಾನ್ಯನೊಬ್ಬ ದೊರೆ ಆಗಬಹುದೆನ್ನುವ ಉತ್ತಮ ಸಂದೇಶ ಕೊಟ್ಟಿವೆ.
ಕಾಂತಾರ ಸಿನೆಮಾಗಳನ್ನು ಬಲಪಂಥೀಯರು ಹೊಗಳುವ ಜೊತೆಗೆ ತಮ್ಮ ಲಾಭದಾಯಕ ವ್ಯವಹಾರಕ್ಕೆ ಉತ್ತೇಜನ ಕೊಡುವ ಮದ್ದುಗಳಿವು ಎಂದು ಬಿಂಬಿಸಿದ್ದಾರೆ. ರಾಷ್ಟಪತಿ ಭವನದಿಂದ ಮುಂಬೈ ರಸ್ತೆಗಳ ವರೆಗೆ ಮೆರವಣಿಗೆ ಮಾಡಿರುವ ಇಂದಿನ ಆಡಳಿತ ದೇವರು, ಧರ್ಮ-ದೈವಗಳ ವಿಚಾರ ಬಿಂಬಿಸಿ ನಂಬಿಕೆಗಳ ಲಾಭ ಪಡೆಯುವ ತಮ್ಮ ಗುಪ್ತ ಕಾರ್ಯ ಸೂಚಿಯನ್ನು ಬಹಿರಂಗ ಮಾಡಿದ್ದಾರೆ.
ಕನ್ನಡದ ಇಬ್ಬರು ಪ್ರತಿಭೆಗಳು ವಿಶ್ವಮಾನ್ಯವಾಗಿರುವ ಖುಷಿಯ ಜೊತೆಗೆ ಕಾಂತಾರದಂಥ ಅಧ್ಯಾಯಗಳು ನಂಬಿಕೆ, ದೇವರು-ಧರ್ಮಗಳ ವಿಜೃಂಬಣೆಯ ಮೂಲಕ ಜನಸಾಮಾನ್ಯರಲ್ಲಿ ಮೂಢ ನಂಬಿಕೆ ಪುನರ್ ಪ್ರತಿಷ್ಠಾಪನೆಗೆ ಪ್ರಯತ್ನಿಸಿರುವ ಆರೋಪದ ವಾಸ್ತವವನ್ನು ನಿರ್ಲಕ್ಷಿಸುವಂತಿಲ್ಲ.
ಸಿನೆಮಾಗಳು ದೊಡ್ಡ ಮಟ್ಟದಲ್ಲಿ ಸಂದೇಶವಾಹಕಗಳು ಎನ್ನುವ ಸತ್ಯ ಒಪ್ಪುವ ಜನತೆ ಕೆ.ಜಿ.ಎಫ್. ಅಧ್ಯಾಯಗಳು ಮತ್ತು ಕಾಂತಾರ ದಂತಕತೆಗಳನ್ನು ಒಪ್ಪಿ ಸ್ವೀಕರಿಸಿರುವ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಭಾರತ ಚಿತ್ರರಂಗ ಮನೋರಂಜನೆಯ ಮಹೋನ್ನತ ಉದ್ದೇಶಗಳ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ, ಜನಪರತೆಯ ಬದ್ಧತೆ ಜೊತೆಗೆ ನಿಂತಿದೆ. ವೃಷಬ್ ಶೆಟ್ಟಿ ಕಾಲ್ಪನಿಕ ಸತ್ಯದ ವಿಜೃಂಬಣೆ ಜೊತೆಗೆ ಕಟು ವಾಸ್ತವದ ಸತ್ಯ ಪ್ರತಿಪಾದನೆಗೂ ಗಮನಹರಿಸಿದರೆ ಈಗಿನ ಆಳುವವರಿಂದ ಪ್ರಶಸ್ತಿ-ಸನ್ಮಾನ, ಅಭಿನಂದನೆ, ಹೊಗಳಿಕೆ ಸಿಗದಿದ್ದರೂ ಜನಸಾಮಾನ್ಯನ ಪ್ರೀತಿ ಅವರನ್ನು ಪೊರೆಯಲಿದೆ.
ವೃಶಬ್ ಶೆಟ್ಟಿ- ಯಶ್, ಪ್ರಶಾಂತ್ ನೀಲ್ ಸೇರಿದ ಕನ್ನಡದ ಪ್ರತಿಭಾವಂತರ ಪಡೆ ಸು. ಫ್ರಾಮ್ ಸೋನಂತೆ ವಾಸ್ತವಕ್ಕೆ ತೆರೆದುಕೊಂಡೇ ಜನಸಾಮಾನ್ಯನ ಪರ ನಿಂತರೆ ಅದು ಕನ್ನಡ, ದೇಶ, ವಿಶ್ವಕ್ಕೇ ಉತ್ತಮ. ಎಲ್ಲರಿಗೂ ಅಭಿನಂದನೆಗಳೊಂದಿಗೆ… ಪ್ರಯೋಗಶೀಲತೆಗೆ ಬೆನ್ನು ತಟ್ಟಿದ ಭಾರತೀಯರಿಗೂ ಶರಣು. (ಕೋಕ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






