


ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ!

ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!
ದುಡ್ಡಿನ ಮೋದದಪಮ್ಯಾ ಮೂವತ್ತು ದಾಟುವ ಮೊದಲೇ ಬರೋಬ್ಬರಿ ಕೋಟಿ ದುಡಿಯುವ ಸ್ಕೆಚ್ ಹಾಕಿದ್ದ.. ಅದಕ್ಕಾಗಿ ಹಗಲಿರುಳು ದುಡಿಯುತಿದ್ದ. ಈತನ ಶ್ರಮ ಪ್ರಾಮಾಣಿಕ-ಕ್ರಮಬದ್ಧವಾಗಿದ್ದರೆ… ಆಗಲೂ ಈತ ಗೆಲ್ಲುತಿದ್ದನೇನೋ ಆದರೆ, ಈಗ ಕಂಬಿ ಎಣಿಸುತ್ತಿರುವ ಪಮ್ಯಾ ತನ್ನ ಅಕ್ರಮ ವ್ಯವಹಾರ ಹೀಗೆ ತನ್ನನ್ನು ಜೈಲುವಾಸಿ ಮಾಡುತ್ತದೆ ಎಂದು ಯೋಚಿಸಿದ್ದರೆ… ಇಂಥ ಕೃತ್ಯಕ್ಕಿಳಿಯುತ್ತಿರಲಿಲ್ಲವೇನೋ?



ಎಸ್. ಕುಡುಗುಂದದ ಅವಳಿ ಸಹೋದರರ ಹತ್ಯೆಯಾಯಿತಲ್ಲ… ಅದೇ ಸಿದ್ದಾಪುರ ತಾಲೂಕಿನ ಬಡ ದಲಿತಯುವಕರಿಬ್ಬರು ದಟ್ಟಾರಣ್ಯದ ಹೊನ್ನಾವರ-ಬೆಂಗಳೂರು ರಸ್ತೆಯ ಸುಳಿಮುರುಕಿ ಬಳಿ ಅರೆ ಬೆಂದ ಸ್ಥಿತಿಯಲ್ಲಿ ಹದಿನೈದು ದಿನಗಳ ಹಿಂದೆ ಪತ್ತೆಯಾಗಿ ಸುದ್ದಿಯಾಯತಲ್ಲ.. ಅದೇ ಕೇಸ್.

ಈ ಸಹೋದರರು ( ಚಂದ್ರಶೇಖರ್ ಹಸ್ಲರ್ & ಮಂಜುನಾಥ ಹಸ್ಲರ್) ಚಂದ್ರಘಟಕಿಯ ಪ್ರಮೋದ್ ಬಳಿ ಕೆಲಸ ಮಾಡಿಕೊಂಡಿದ್ದವರು. ಪ್ರಮೋದನ ಹಗಲು-ರಾತ್ರಿ ವ್ಯವಹಾರ ಅರಿತ ಬಹುತೇಕರು ಇವನ ಬಳಿ ಕೆಲಸಕ್ಕೇನು ಯಾತಕ್ಕೂ ಸುಳಿಯುತ್ತಿರಲಿಲ್ಲ! ಆದರೆ ಕಾಡಿನ ಧೀರರಂತಿದ್ದ ಈ ಹುಡುಗರು ಲಾಭಕ್ಕಾಗಿ ಪ್ರಮೋದನೊಂದಿಗೆ ಸೇರಿದ್ದರು. ಮೊದಮೊದಲು ದಿನಗೂಲಿಗೆ ದುಡಿಯುತಿದ್ದ ಈ ಹಸ್ಲರ್ ಹುಡುಗರು ಪ್ರಮೋದನೊಂದಿಗೆ ಸೇರಿ ಅನೇಕ ವ್ಯವಹಾರಗಳನ್ನೂ ಕಲಿತಿದ್ದರು ಎಂಬುದು ಕ್ಲೈಮ್ಯಾಕ್ಸ್ ರಹಸ್ಯ.

ಈ ಸಹೋದರರ ಅಂತ್ಯದ ಸುದ್ದಿ ಹೊರ ಬಂದ ಹಿಂದಿನ ದಿನ ಶಿರಸಿಗೆ ಹೋಗಿ ಹಣ ತರುವುದಿದೆ ಎಂದು ಮನೆಯವರಿಗೆ ಹೇಳಿ ಹೋದ ಈ ಹಸ್ಲರ್ ಸಹೋದರರು ಮಾರನೇ ದಿನ ಹೊನ್ನಾವರ ತಾಲೂಕಿನ ಸುಳಿಮುರ್ಕಿ ಬಳಿ ಮುಂಜಾನೆ ಮೂರರ ಸುಮಾರಿಗೆ ಕಾರಿನಲ್ಲಿ ಸುಟ್ಟುಕರಕಲಾಗಿದ್ದಾರೆ ಎನ್ನುವ ಸುದ್ದಿ ಸ್ಫೋಟವಾಗುತ್ತದೆ.

ಅದರ ಹಿಂದಿನ ದಿನ ಈ ಇಬ್ಬರು ಸಹೋದರರಿಗೆ ವಿಷಬೆರೆಸಿ ಕಂಟಮಟ ಕುಡಿಸಿದ ಪ್ರಮೋದ್ ನಾಯ್ಕ ಅವರ ಕೊನೆಯ ಎಣ್ಣೆ ಪಾರ್ಟಿಗೆ ಬಳಸಿದ್ದು ಸಿದ್ಧಾಪುರ ಬಳಿಯ ದುಗಡಿಮನೆ ಬಳಿಯ ಅರಣ್ಯ ಪ್ರದೇಶವನ್ನು, ಅಲ್ಲೇ ವಾಂತಿಮಾಡಿಕೊಂಡು ಪ್ರಜ್ಞಾಹೀನರಾದ ಈ ಸಹೋದರರನ್ನು ಮಾರುತಿ ಜೆನ್ ಕಾರಿನಲ್ಲಿ ಮುಚ್ಚಿಟ್ಟು ರಾತ್ರಿಯ ವೇಳೆ ಕಾರನ್ನು ಇನ್ನೊಂದು ಸ್ಥಳಕ್ಕೆ ಕೊಂಡೊಯ್ದು ಅಲ್ಲಿಂದ ರಾತ್ರಿ ಕಾರ್ಯಾಚರಣೆ ನಡೆಸಿ ಮುಂಜಾನೆ ಮೂರು ಗಂಟೆಯ ವೇಳೆಗೆ ಇನ್ನಿಬ್ಬರ ಸಹಕಾರದಿಂದ ದಹಿಸಿ ಕಾರ್ ಅಪಘಾತವೆಂದು ಕಥೆ ಕಟ್ಟಿದ್ದ.!
ಮಾರನೇ ದಿನ ಅಂದರೆ ದಲಿತ ಸಹೋದರರು ದಹನವಾದ ದಿನ ಪ್ರಮೋದ ನಾಯ್ಕ ಚಂದ್ರಘಟಕಿ ನಾಪತ್ತೆಯಾಗಿದ್ದ….
ಸಂಶಯ, ಕೆಲವು ಮಾಹಿತಿ ಆಧರಿಸಿ ತನಿಖೆಗೆ ಇಳಿದ ಪೊಲೀಸರಿಗೆ ಕೈ ಸುಟ್ಟುಕೊಂಡು ಜೋಗ ಬಳಿಯ ಕಾರ್ಗಲ್ ಬಳಿ ಅಮಾಯಕನಂತಿದ್ದ ಪ್ರಮೋದ್ ನನ್ನು ಹಿಡಿದ ಪೊಲೀಸರಿಗೆ ಅವನ ಸುಟ್ಟುಹೋದ ಒಂದು ಕೈ ಭಯಾನಕ ಸತ್ಯವನ್ನು ಹೊರಗೆಳೆದಿತ್ತು.!

ಪ್ರಮೋದನನ್ನು ಪೊಲೀಸರು ಬೆನ್ನುಹತ್ತುವ ಮುನ್ನ ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ ಮತ್ತು ಇತರ ಸಂಘಟನೆಗಳು ಕುಡುಗುಂದ ಹಸ್ಲರ್ ಸಹೋದರರ ಸಾವಿನಲ್ಲಿ ಅನುಮಾನ, ಸಂಶಯಗಳಿವೆ ಎಂದು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದ್ದವು.
ಮಂಜುನಾಥ ಮತ್ತು ಚಂದ್ರಶೇಖರ್ ಹಸ್ಲರರ ಕುಟುಂಬ ಮತ್ತು ತಾಲೂಕಿನ ಕೆಲವು ಸಂಘಟನೆಗಳ ಆಗ್ರಹದ ಮೇರೆಗೆ ತನಿಖೆ ಪ್ರಾರಂಭಿಸಿದ ಉತ್ತರ ಕನ್ನಡ ಪೊಲೀಸರಿಗೆ ಪ್ರಮೋದ ನಾಯ್ಕನ ಒಂದೊಂದೇ ವ್ಯವಹಾರ ಹೊರಬೀಳ ತೊಡಗಿದಂತೆ ಹಣಕ್ಕಾಗಿ ಮನುಷ್ಯನೊಬ್ಬ ಮಾಡಬಹುದಾದ ಎಲ್ಲಾ ಕುಕ್ರತ್ಯ ಮಾಡಿರುವ ಪ್ರಮೋದ ಅಂತಿಂಥ ಆಸಾಮಿಯಲ್ಲ ಎನ್ನುವುದು ತಿಳಿಯುತ್ತದೆ.
ಪ್ರಮೋದ್ ನಾಯ್ಕ ಚಂದ್ರಘಟಕಿ ಕ್ರಾಸ್ ನಲ್ಲಿ ಸಾಧ್ಯವಿರುವ ಎಲ್ಲಾ ಅಕ್ರಮ ವ್ಯವಹಾರ ಮಾಡುತಿದ್ದ ಈತನ ವ್ಯವಹಾರ ಅರಿತಿದ್ದ ಕೆಲವು ಅಧಿಕಾರಿಗಳು ಈತನಿಂದ ಆಗಾಗ ಕಸಿದು ಇವನಿಗೆ ಅಡ್ಡಿ ಮಾಡುತ್ತಿರಲಿಲ್ಲ ಎನ್ನುವುದು ಈ ಕತೆಯ ರಹಸ್ಯ.

ಬೆಲೆ ಇರುವ ವನ್ಯ ಪ್ರಾಣಿಗಳನ್ನು ಹಿಡಿದು ಸಾಗಿಸುತಿದ್ದ ಪ್ರಮೋದ್ ನಿಗೆ ನೆರವಾಗುತಿದ್ದ ಈ ಹಸ್ಲರ್ ಸಹೋದರರು ತಮ್ಮನ್ನು ಬಳಸಿ ಕಾಸು ಮಾಡಿಕೊಳ್ಳುವ ಪ್ರಮೋದ್ ನಿಂದ ಯಾಮಾರಿಸುವ ಕಲೆ ಕಲಿತು ಪ್ರಮೋದ್ ಗೆ ಬರಬೇಕಾದ ಕೋಟ್ಯಾಂತರ ಹಣವನ್ನು ಈ ಸಹೋದರರಿಬ್ಬರು ನಾಪತ್ತೆ ಮಾಡಿದ್ದರು! ಎನ್ನುವ ಕತೆ ಈ ದುರಂತ ಅಧ್ಯಾಯದ ಪ್ರಾರಂಭ ಎನ್ನಲಾಗುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಚಿಪ್ಪೆಹಂದಿ ಸಾಗಿಸಿದ ಪ್ರಮೋದ ಅದರ ಕೊಟ್ಯಾಂತರ ರೂಪಾಯಿ ಹಣವನ್ನು ಈ ಸಹೋದರರಿಂದ ತರಿಸಿಕೊಳ್ಳುವಾಗ ದುಡ್ಡಿನ ವ್ಯಾಮೋಹಕ್ಕೆ ಒಳಗಾದ ಈ ಸಹೋದರರು ತಾವು ಸಾಗಿಸುತಿದ್ದ ಕೊಟ್ಯಾಂತರ ಹಣ ಕಾರಿನೊಂದಿಗೆ ಸುಟ್ಟು ಕರಕಲಾಯಿತು ಎಂದು ಕಥೆ ಕಟ್ಟಿದ್ದರಂತೆ!
ಮೊದಮೊದಲು ಇದು ಸತ್ಯವೇನೋ ಎಂದು ಭಾವಿಸಿದ್ದ ಪ್ರಮೋದ್ ನಂತರ ಸುಟ್ಟು ಹೋದ ಹಣದ ನೋಟುಗಳು ಸಿದ್ಧಾಪುರದಲ್ಲಿ ಚಲಾವಣೆಯಲ್ಲಿವೆ! ಎಂದು ಅರಿತು ತನಿಖೆ ನಡೆಸಿದ ಕ್ರಿಮಿನಲ್ ಪ್ರಮೋದ ತನಗೇ ಮೋಸ ಮಾಡಿದ ಈ ಸಹೋದರರಿಗೂ ಹಣ ಸುಟ್ಟ ಬೆಂಕಿಯ ರುಚಿ ತೋರಿಸಬೇಕೆಂದು ಸ್ಕೆಚ್ ಹಾಕಿದ್ದನಂತೆ! ಇದೆಲ್ಲಾ ಕತೆ ನಿಜವಾದರೆ,…. ಹಣ ದೋಖಾ ಮಾಡಿರುವ ಹಸ್ಲರ್ ಸಹೋದರರ ಬಳಿ ಹಣ ಅಥವಾ ಅದರಿಂದ ಬಂದ ಸಂಪತ್ತಾದರೂ ಸಿಗಬೇಕಿತ್ತು ಆದರೆ ಹಣವೂ ಇಲ್ಲ ಗುಣವೂ ಇಲ್ಲ ಅಂತಾದ ಸಹೋದರರು ಅಷ್ಟುಭಾರಿ ಮೊತ್ತದ ಹಣವನ್ನು ಏನು ಮಾಡಿದರು ಎನ್ನುವುದು ನಿಗೂಢ!
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






