ಈಡಿಗರು ಮತ್ತು ಮಾದಿಗರು ಈಚಲ ಮರವನ್ನು ಮಾತಂಗಿ ಎಂದೇ ಪೂಜಿಸುತ್ತಾರೆ

ಶಾಕ್ತಪಂಥದ ಈಡಿಗರು ತಮ್ಮ ಶಾಕ್ತೇಯ ಆಚರಣೆಗಳಲ್ಲಿ ಮತ್ತು ಬದುಕಿನಲ್ಲಿ ಹೆಂಡ ಕೊಡುವ ಈಚಲ ಮರವನ್ನು ಪವಿತ್ರವೆಂದು ಭಾವಿಸಿದ್ದಾರೆ. ಅವರ ಬಹುಮುಖ್ಯ ಪೂಜನೀಯ ವಸ್ತುಗಳಲ್ಲಿ ಈಚಲ ಮರ ಮತ್ತು ಹೆಂಡಕ್ಕೆ ಪ್ರಧಾನವಾದ ಸ್ಥಾನವಿದೆ. ಈಚಲ ಮರದಂತೆಯೇ ಹೆಂಡ ನೀಡುವ ತೆಂಗು ತಾಳೆ ಭಗಿನಿ (ಬೈನಿ) ಮರಗಳನ್ನು ಈಡಿಗರು ಕನಿಷ್ಠವೆಂದು ತಿಳಿದಿಲ್ಲವಾದರೂ ಪವಿತ್ರ ಸ್ಥಾನ ನೀಡಿರುವುದು ಈಚಲ ಮರಕ್ಕೆ ಮಾತ್ರ.

ವಸಿಷ್ಠ ಮತ್ತು ಇಂದ್ರನ ವಿರುದ್ಧ ಕೋಪಗೊಂಡ ವಿಶ್ವಾಮಿತ್ರ ಎಮ್ಮೆ ಮತ್ತು ಈಚಲ ಮರವನ್ನು ಸೃಷ್ಟಿಸಿದನೆಂಬ ಕಥೆಗಳಿವೆ. ಮಹರ್ಷಿ ವಿಶ್ವಾಮಿತ್ರ ಒಬ್ಬ ಚಾಂಡಾಲ ಮಹಿಳೆಯ ಮಗ. ಶ್ವಪಚನಾದ ವಿಶ್ವಾಮಿತ್ರ ತನ್ನ ತಪಸ್ಸಾಧನೆಗಳಿಂದ ಬ್ರಹ್ಮ ಪದವಿಯನ್ನು ಪಡೆದು ಮಹಾ ಬ್ರಾಹ್ಮಣನಾಗುತ್ತಾನೆ. ಬ್ರಾಹ್ಮಣನೆಂಬ ಪದವಿ ಹುಟ್ಟಿನಿಂದ ನಿರ್ಧಾರವಾಗುವುದಿಲ್ಲ ಎಂದು ನಿರೂಪಿಸುತ್ತಾನೆ.

ವಿಶ್ವಾಮಿತ್ರನ ಸಹೋದರಿಯಾದ ವಾರಕಾಂತೆಯ ಮಗನೇ ವಸಿಷ್ಠ. ವಸಿಷ್ಠನು ಮಾದಿಗರ ಅರುಂಧತಿಯನ್ನು ಮದುವೆಯಾಗುತ್ತಾನೆ. ಈಡಿಗರು ತಮ್ಮ ಸಾಂಸ್ಕೃತಿಕ ಅನನ್ಯತೆಯ ಸಂಕೇತವಾಗಿ ಈಚಲ ಮರವನ್ನು ಪವಿತ್ರವೆಂದು ಭಾವಿಸಿರುವಂತೆಯೇ ಆದಿಜಾಂಬವರು (ಮಾದಿಗರು) ಕೂಡಾ ಈಚಲ ಮರ ಮತ್ತು ಹೆಂಡವನ್ನು ಪವಿತ್ರವೆಂದೇ ಪರಿಗಣಿಸಿದ್ದಾರೆ. ಬನ್ನಿಮರ, ಬಿಲ್ವಪತ್ರೆ ಮರ, ಅರಳಿ ಮರ, ತಾರೆ ಮರ, ಬೇವಿನ ಮರ ಮುಂತಾದ ಮರಗಳನ್ನು ಕೆಲವು ಸಾಮಾಜಿಕ ವಲಯಗಳು ಪವಿತ್ರೀಕರಿಸಿಕೊಂಡಿರುವ ರೀತಿಯಲ್ಲಿಯೇ ಈಚಲ ಮರದಲ್ಲಿ ತಮ್ಮ ಕುಲದ ದೇವತೆಯಾದ ಮಾತಂಗಿ ನೆಲೆಸಿರುವಳೆಂಬ ನಂಬಿಕೆ ಅದಿಜಾಂಬವರಲ್ಲಿದೆ. ಈಡಿಗರು ಈಚಲ ಮರದಲ್ಲಿ ರೇಣುಕಾ ಎಲ್ಲಮ್ಮ ಮತ್ತು ಮಾತಂಗಿ ನೆಲೆಸಿದ್ದಾರೆಂದು ನಂಬಿದ್ದಾರೆ. ಹೀಗಾಗಿ ಹೆಂಡ ಕೊಡುವ ಈಚಲ ಮರದವ್ವನನ್ನು ಮತ್ತು ಹೆಂಡವನ್ನು ರೇಣುಕಾ, ಮಾತಂಗಿ, ಎಲ್ಲಮ್ಮ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಮಾತಂಗಿ ಮತ್ತು ಈಚಲಮರ ಮಾದಿಗರನ್ನು ಈಡಿಗರೊಂದಿಗೆ ಬೆಸೆಯುವ ಅನನ್ಯ ಕೊಂಡಿಗಳು.

ಕಾಳಿದಾಸ ಕವಿಯ ಶಾಕುಂತಲ ಕಾವ್ಯದಲ್ಲಿ ದುಷ್ಯಂತ ಮಹಾರಾಜನು, ಮುದ್ರೆಯುಂಗುರದ ಮೂಲಕ ಶಕುಂತಲೆಯನ್ನು ನೆನಪಿಗೆ ತರಲು ಕಾರಣನಾದ ಮೀನಿಗನನ್ನು ಅಮೂಲ್ಯವಾದ ಉಡುಗೊರೆಗಳನ್ನು ನೀಡಿ ಗೌರವಿಸುತ್ತಾನೆ. ಆ ಬೆಸ್ತನ ಮನಸ್ಸಂತೋಷಪಡಿಸಲು ಅವನ ಸ್ನೇಹಕ್ಕಾಗಿ ಹಸ್ತ ಚಾಚುತ್ತಾ ಹೆಂಡದಂಗಡಿಗೆ ಹೋಗೋಣವೆಂದು ಆಹ್ವಾನಿಸುತ್ತಾನೆ.

ಕವಿ ಕಾಳಿದಾಸನಿಗೆ ವಿದ್ಯೆಯನ್ನು ನೀಡಿದ್ದು ದೇವಿ ಮಾತಂಗಿ. ಇವಳು ವಿದ್ಯೆಯ ಅಧಿದೇವತೆ ಸರಸ್ವತಿಯೇ ಆಗಿದ್ದಾಳೆ. ಮಾತಂಗಿ ಮತಂಗಮುನಿಯ ಮಗಳು. ಹಂಪಿಯ ಮಾತಂಗ ಪರ್ವತ ಇವರ ನೆಲೆ. ಪಂಪಾಕ್ಷೇತ್ರ ಅಥವಾ ಹಂಪಿಯ ಪೂರ್ವದ ಹೆಸರು ಕಿಷ್ಕಿಂಧೆ. ಜಾಂಬವ ಹನುಮಂತ ಶಬರಿ ವಾಲಿ ಇದ್ದದ್ದು ಇಲ್ಲಿಯೇ. ತ್ರೇತಾಯಗದಲ್ಲಿ ಸೀತಾನ್ವೇಷಣೆಗಾಗಿ ಇಲ್ಲಿಗೆ ಬಂದ ಶ್ರೀರಾಮ ಸಹಾಯ ಕೋರಿದ್ದು ಇವರ ಬಳಿಯೇ.‌ ಹೀಗೆಂದು ರಾಮಾಯಣ ಕಾವ್ಯದಿಂದ ತಿಳಿದುಬರುತ್ತದೆ.

ಸಂಗೀತ ಶಾಸ್ತ್ರವನ್ನು ಕುರಿತು ‘ಬೃಹದ್ದೇಶಿ’ ಎಂಬ ಗ್ರಂಥವನ್ನು ರಚಿಸುವ ಮೂಲಕ ಶಿಷ್ಟರ ‘ಮಾರ್ಗ’ ಪರಿಕಲ್ಪನೆಯ ಎದುರು ‘ದೇಶಿಯೇ ಬೃಹತ್ – ಬೃಹದ್ದೇಶಿ’ ಎಂದು ತಳಸ್ತರೀಯ ಸಮುದಾಯಗಳ ಘನತೆ ಎತ್ತರಿಸಿದ ದಾರ್ಶನಿಕ ಮತಂಗಮುನಿ. ಮಾತಂಗಮುನಿ ಮತ್ತು ಆತನ ಮಗಳಾದ ಮಾತಂಗಿ(ಸರಸ್ವತಿ) ಯನ್ನು ಕವಿ ಕಾಳಿದಾಸ ತನ್ನ ‘ಶಾಮಲಾದೇವಿ ದಂಡಕದಲ್ಲಿ’ ಮನಸಾರೆ ಸ್ಮರಿಸಿದ್ದಾನೆ. ಅವನ ಪ್ರಕಾರ ಕಪ್ಪು ವರ್ಣಾತ್ಮಿಕೆಯಾದ ಮಾತಂಗಿ ಜಂಬೂಫಲ ಪ್ರಿಯಳು, ಸಂಗೀತ ರಸಿಕೆ, ಕದಂಬ ವನವಾಸಿನಿ, ಸರ್ವ ಯಂತ್ರಾತ್ಮಿಕೆ, ಸರ್ವ ತಂತ್ರಾತ್ಮಿಕೆ, ಸರ್ವ ವರ್ಣಾತ್ಮಿಕೆ, ಸರ್ವರೂಪೇ ಜಗನ್ಮಾತೃಕೆ ಆಗಿರುತ್ತಾಳೆ.

ಈಡಿಗರು ಮತ್ತು ಮಾದಿಗರು ಈಚಲ ಮರವನ್ನು ಮಾತಂಗಿ ಎಂದೇ ಪೂಜಿಸುತ್ತಾರೆ. ಈಚಲ ಮರ, ಭಗಿನಿ ಮರ, ತಾಳೆಮರ, ತೆಂಗಿನ ಮರ ಮುಂತಾದ ಮರಗಳಿಂದ ಇಳಿಸಿದ ಹೆಂಡವನ್ನು ಈಡಿಗರು, ಮಾದಿಗರಿಂದ ತಯಾರಿಸಲಾದ ಚರ್ಮದ ತಿತ್ತಿಗಳಲ್ಲಿ ತುಂಬಿ ಕತ್ತೆಯ ಮೇಲೇರಿಕೊಂಡು ಸಾಗಿಸುತ್ತಿದ್ದರು. ಮಾದಿಗರು ತಯಾರಿಸಿಕೊಟ್ಟ ಅದೇ ಚರ್ಮದ ಚೀಲಗಳಲ್ಲಿ ಮೇಲ್ಜಾತಿಗಳ ವರ್ತಕರು ಎಣ್ಣೆ ಮತ್ತು ತುಪ್ಪವನ್ನು ತುಂಬಿ ಎತ್ತುಗಳ ಮೇಲೆ ಹೇರಿಕೊಂಡು ಊರೂರು ಸುತ್ತಿ ಮಾರಾಟ ಮಾಡುತ್ತಿದ್ದರು. ಅಂಬಿಗರ ಚೌಡಯ್ಯನ ಒಂದು ವಚನದಲ್ಲಿ :

ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು

ಅದಕ್ಕದು ಸತ್ಯವಯ್ಯಾ

ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು

ಅದಕ್ಕದು ಸತ್ಯವಯ್ಯಾ

ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು

ನಿತ್ಯ ಗುರುಲಿಂಗ ಜಂಗಮಕ್ಕೆ ನೀಡುವ

ಭಕ್ತರ ಭಕ್ತಿ ಎಂತಾಯಿತ್ತೆಂದರೆ

ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂತ

ಕಡೆಯೆಂದಾ ನಮ್ಮ ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯನ ವಚನದಲ್ಲಿ ಹೆಂಡ, ತೈಲ, ತುಪ್ಪ ಇತ್ಯಾದಿ ದ್ರವ ಪದಾರ್ಥಗಳನ್ನು ಚರ್ಮದ ತಿತ್ತಿಗಳಲ್ಲಿ ತುಂಬಿ ಸಾಗಾಣಿಕೆ ಮಾಡುತ್ತಿದ್ದರೆಂಬ ಪುರಾವೆ ಉಲ್ಲೇಖಗೊಂಡಿದೆ. ತಿತ್ತಿಯನ್ನು ಹೊಲೆಯುವವರು ಚಮ್ಮಾರರಾದ ಮಾದಿಗರಾಗಿದ್ದರು. ಮರದಿಂದ ಹೆಂಡ ಇಳಿಸಿ ಸಾಗಾಟ ಮತ್ತು ‌ಮಾರಾಟ ಮಾಡುವವರು ಈಡಿಗರಾಗಿದ್ದರು.

ಸ್ಮಶಾನವನ್ನು ಕಾಯುತ್ತಿದ್ದ ವೀರಬಾಹು ಎಂಬ ಹೊಲೆಯನಿಗೆ ಹರಿಶ್ಚಂದ್ರ ತನ್ನನ್ನೇ ಮಾರಿಕೊಂಡನು. ಸ್ಮಶಾನದಲ್ಲಿ ಹರಿಶ್ಚಂದ್ರ ಕರ್ತವ್ಯನಿರತನಾಗಿದ್ದ ಕಾಲದಲ್ಲಿ ಹೊಲೆಯರು ಗೋಮಾಂಸ ಮತ್ತು ಹೆಂಡವನ್ನು ಸೇವಿಸುತ್ತಿದ್ದ ವಿಷಯವು ಪ್ರಸ್ತಾಪನೆಯಾಗಿರುವುದನ್ನು ಗಮನಿಸಿರಿ :

ಹಲವೆಲುವಿನೆಕ್ಕೆಗಳ ಬಿಗಿದು ಜೀವಂ ನೆಯ್ದ

ನುಲಿಯ ಹರಿದೊಗಲ ಹಾಸಿನೊಳು ಮಂಚಂ ಜಡಿಯೆ

ಹೊಲೆಯನೋಲಗವಿತ್ತು ನರಕಪಾಲದೊಳು ತೀವಿದ ಹಸಿಯ ಮಾಂಸವಾ ||

ಮೆಲುತ ಮದ್ಯವನೀಂಟುತಿರ್ಪ ಪತಿಯಿಂಗೋಮಾಂಸದಾ

ನೆಲದಲ್ಲಿ ಕುಳ್ಳಿರ್ದ ರವಿಕುಲನ ಹೆಗಲ

ಮೇಲೆ ನೀಡಿದನು ಕಾಲಂ ಕಾಲ ನೊಂದೆರಡು ಕುಲಗಿರಿಯ ಭಾರವೆನಲು

ಹರಿಶ್ಚಂದ್ರನನ್ನು ದುಡ್ಡಿನ ಬೆಲೆ ಕೊಟ್ಟು ಕೊಂಡುಕೊಂಡ ಸ್ಮಶಾನದ ಒಡೆಯ ಹೊಲೆಯ ವೀರಬಾಹು ಅತ್ಯಂತ ಸಿರಿವಂತನಾಗಿದ್ದನು.

ಸರ್ವಜ್ಞ ಕವಿ ತನ್ನ ವಚನಗಳಲ್ಲಿ ಹೆಂಡದ ಒಳಿತು ಕೆಡುಕು ಕುರಿತು ಹೇಳಿದ್ದಾನೆ. ಹೆಂಡದ ಒಳಿತು :

ಈಚಲ ಮರಸವ್ವ ಊಚಮೊಲೆ ಪಾಲುಣಿಸಿ

ನೀಚ ರುಜೆಗಳನ್ನು ನೀಗಿಸಲು ನಿನ್ನಂಗ

ಲಾಚಿ ಕರೆದಿಹಳು ಸರ್ವಜ್ಞ

ಹೆಂಡದ ಕೆಡುಕು :

ಸಿಂದಿಯನು ಸೇವಿಪನು ಹಂದಿಯಂತಿರುತಿಹನು

ಹಂದಿಯೊಂದೆಡೆಗೆ ಉಪಕಾರಿ ಕುಡುಕನು

ಹಂದಿಗೂ ಕಷ್ಟ ಸರ್ವಜ್ಞ

ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಗಿ

ಬಿದ್ದು ಬರುವವನ ಸದ್ದಡಗಿ ಸಂತಾನ

ವೆದ್ದು ಹೋಗುವುದು ಸರ್ವಜ್ಞ.

ಶರಣ ಹೆಂಡದ ಮಾರಯ್ಯ ವಚನ :

ನಾ ಮಾರ ಬಂದ ಸುರೆಯ ಕೊಂಬವರಾರೂ ಇಲ್ಲ

ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ ಉಂಡು ದಣಿದು, ಕಂಡು ದಣಿದು, ಸಂದೇಹ ಬಿಟ್ಟು

ದಣಿದು ಕಂಡುದ ಕಾಣದೆ,

ಸಂದೇಹದಲ್ಲಿ ಮರೆಯದೆ

ಆನಂದವೆಂಬುದ ಆಲಿಂಗನವಂ

ಮಾಡಿ

ಕಂಗಳಂ ಮುಚ್ಚಿ ಮತ್ತಮಾ

ಕಂಗಳಂ ತೆರೆದು

ನೋಡಲಾಗಿ ಧರ್ಮೇಶ್ವರ ಲಿಂಗವು ಕಾಣ ಬoದಿತ್ತು.

ಹೆಂಡದ ಮಾರಯ್ಯ ಹೆಂಡವನ್ನು

ಮಾರುವ ಈಡಿಗರ ಕಾಯಕ ಮಾಡುತ್ತಿದ್ದ ವಚನಕಾರ. ಧರ್ಮೇಶ್ವರಲಿಂಗ ವಚನಾಂಕಿತದಲ್ಲಿ ಬರೆದಿರುವ ಮಾರಯ್ಯನ 12 ವಚನಗಳು ನಮಗೆ ದೊರಕಿವೆ.

ಮುಂದುವರೆಯುತ್ತದೆ…

*ಡಾ.ವಡ್ಡಗೆರೆ ನಾಗರಾಜಯ್ಯ*

8722724174

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *