


ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ ಸಂಸ್ಕಾರದಿಂದ ಬದುಕಿನ ಮೌಲ್ಯ ವರ್ಧಿಸುತ್ತದೆ ಎಂದು ನಾಟ್ಯಾಚಾರ್ಯ ಶಂಕರ ಭಟ್ಟ ಹೇಳಿದರು.
ಅವರು ಸ್ಥಳೀಯ ಶ್ರೀ ಬೊಮ್ಮೇಶ್ವರ ಯಕ್ಷಗಾನ ಕಲಾಕೇಂದ್ರ ಹಾಗೂ ಯಕ್ಷ ತರಂಗಿಣಿ ಹಾರ್ಸಿಕಟ್ಟಾ ಸಹಯೋಗದಲ್ಲಿ ಶಂಕರಮಠದಲ್ಲಿ ಏರ್ಪಡಿಸಲಾದ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲೆ ಬೆಳೆಯ ಬೇಕಿದ್ದರೆ ಅದನ್ನು ಅಭ್ಯಾಸ ಮಾಡಿ ಪ್ರಸಾರ ಮಾಡುವ ಕಲಾವಿದರು ಹಾಗೂ ನೋಡಿ ಪ್ರೋತ್ಸಾಹಿಸುವ ಪ್ರೇಕ್ಷಕ ವರ್ಗ ಎರಡೂ ಮುಖ್ಯವಾಗಿದೆ. ಅಧ್ಯಯನ ಮಾಡಿದ ಮಕ್ಕಳಿಗೆ ರಂಗಪ್ರವೇಶ ಹೆಚ್ಚಿನ ಕಲಿಕೆಗೆ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಪತ್ರಕರ್ತ ಕನ್ನೇಶ ಕೋಲಶಿರ್ಸಿ, ವಿಜಯಾ ಹೆಗಡೆ, ಮುಖ್ಯ ಶಿಕ್ಷಕಿ ವಿಜಯಾ ನಾಯ್ಕ, ನಿರ್ದೇಶಕ ನಂದನಕುಮಾರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕದೊಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಲೋಕೇಶ ಅಪ್ಪಿನಬೈಲ್ ಸ್ವಾಗತಿಸಿದರು. ಪ್ರಾಚಾರ್ಯ ಎಂ. ಕೆ ನಾಯ್ಕ ಹೊಸಳ್ಳಿ ನಿರೂಪಿಸಿದರು. ನಂದನ ನಾಯ್ಕ ವಂದಿಸಿದರು. ನಂತರ ಕಲಿಕಾ ವಿದ್ಯಾರ್ಥಿಗಳ ಜೊತೆಗೆ ಜೈ ಕುಮಾರ ಎಸ್ ನಾಯ್ಕ ಹಾಗೂ ಶೋಭಾ ಸತ್ಯನಾರಾಯಣರಿಂದ ಆಖ್ಯಾನ ಮಹಿಷಾಸುರ ವಧೆ ಪ್ರದರ್ಶಿಸಲ್ಪಟ್ಟಿತು. ಭಾಗವತರಾಗಿ ಕೃಷ್ಣ ಮರಾಠಿ ಕಲ್ಲಬ್ಬೆ, ಭಾರ್ಗವ ಹೆಗಡೆ ಮುಂಡಿಗೆಸರ, ಮದ್ದಲೆವಾದಕರಾಗಿ ನಾರಾಯಣ ಗುಡ್ಡೆಕಣ, ಚೆಂಡೆವಾದಕರಾಗಿ ಗಣೇಶ ಹೆಗಡೆ ಕೆರೆಕೈ ಸಹಕರಿಸಿದರು. ಎಮ್ ಆರ್ ನಾಯ್ಕ ಕರ್ಸೆಬೈಲ್ ವೇಷ ಭೂಷಣ ಹಾಗೂ ರಂಗಸಜ್ಜಿಗೆ ಒದಗಿಸಿದ್ದರು.
