
ಮುನ್ನುಡಿ-
ಮನೋಜೀವಿಯಾದ ಮಾನವ ಕುಲವು ಈ ಭೂಮಿಯ ಮೇಲೆ ನೆಲೆಸಿದ ಅಲ್ಫಾವಧಿಯಲ್ಲಿ ಅಮಿತ ವಿಶ್ವಗಳಿಂದ ಕೂಡಿರುವ, ಬಿಲಿಯಗಟ್ಟಲೆ ವರ್ಷಗಳಿಂದ ಕಾಣಿಸಿಕೊಂಡು ಬಂದ ಮಹಾ ಮಹ ಜಗತ್ತಿನ ಬರಿಯ ಸೆರೆಗೊಂದರ ಸೂಕ್ಷ್ಮ ಎಳೆಯನ್ನು ಕೂಡ ಚೆನ್ನಾಗಿ ಕಂಡಿರಲಾರದು.
ಆದರೆ ಆತ ತನ್ನ ಅಲ್ಪಮತಿಗೆ ಗೋಚರಿಸಿದ ಅದ್ಬುತ, ಆಶ್ಚರ್ಯಗಳಿಂದ ಚಕಿತಗೊಂಡು- ಈ ಜಗತ್ತೇನು ? ಯಾರು ಅದನ್ನು ಸೃಷ್ಟಿಸಿದರು, ಯಾಕೆ,ನಾನು ಎಂಥವ, ಯಾತಕ್ಕಿದ್ದೇನೆ- ಎಂಬ ಪ್ರಶ್ನೆ ಕೇಳತೊಡಗಿದ.
ಬರಿದೆ ಪ್ರಶ್ನೆ ಕೇಳಿದರೆ ಸಾಲದಲ್ಲ : ತನ್ನ ಎಟುಕಿಗೆ ಸಿಗದಂಥ ವಿಷಯವನ್ನು ಸಿಕ್ಕಿದಂತೆಯೇ ನೆನೆದು, ಮನಸ್ಸನ್ನು ಕಲ್ಪನಾಲೋಕಕ್ಕೆ ಹರಿಯಗೊಟ್ಟು, ಅಲ್ಲಿ ಕಂಡ ಕನಸನ್ನು ನಿಜ, ಸತ್ಯ ಎಂದು ಸಾರುತ್ತಲೂ ಬಂಧ !
ಅವರವರ ಕಲ್ಪನೆ ಎಷ್ಟೆಷ್ಟು ಬೆಡಗಿನದೋ, ಭವ್ಯವೋ, ಅದರ ಮೇಲಿಂದ ಅವರು ಹೇಳಿದ್ದೇ ಸತ್ಯವೆನಿಸಿತು.
ಅಷ್ಟೊಂದು ವಿಸ್ತಾರಕ್ಕೆ ಕಲ್ಪನೆಯನ್ನು ಬೆಳೆಯಿಸಲಾರದವರು, ಅಂಥದನ್ನು ಮೂಕ ಮೌನದಿಂದ ಹಿರಿಯರಾಡಿದ ಒಂದೊಂದು ಸೊಲ್ಲೂ ಅಕ್ಷರಶಃ ಸತ್ಯವೆಂದೂ ತಿಳಿದು, ನಂಬಿ ಬಂದರು, ಸಾವಿರ ಜನರು ಸಾವಿರ ಬಗೆಗಳಿಂದ ಹರಿಯಿಸಿದ ಈ ಕಲ್ಪನಾವಿಲಾಸಗಳು ಪರಸ್ಫರ ಘರ್ಷಣೆಗೆ ಕಾರಣವಾದುದೂ ಉಂಟು.
ಭಾರತ ದೇಶ, ಇಲ್ಲಿಯೇ ಇದ್ದ ಜನರು, ಆಮೇಲೆ ಬಂದ ಜನರು ಸಹ ಇದಕ್ಕೆ ಆಕ್ಷೇಪವಲ್ಲ. ಇಲ್ಲಿನ ಜನರು ಪರಂಪರೆಯಿಂದ ಪಡೆದು ಬಂದ ಕಲ್ಪನಾವಿಲಾಸಗಳನ್ನು ಈ ಕಾದಂಬರಿಯ ಮೂಕಜ್ಜಿ ತನ್ನ ಕಲ್ಪನಾವಿಲಾಸದಿಂದ ಕೆದಕಿ ನೋಡುತ್ತಿದ್ದಾಳೆ.
ಈ ಕಾದಂಬರಿಗೆ ಕಥಾನಾಯಕನಿಲ್ಲ: ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾಳೆಯೆ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕøತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು, ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದಿಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ.
ಆ ಅಜ್ಜಿ, ಮೊಮ್ಮಗ ಇಬ್ಬರೂ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದಿರುವ ‘ ಸೃಷ್ಟಿಸಮಸ್ಯೆ’ಯೊಂದನ್ನು ಮಥಿಸಲು ಇಲ್ಲಿ ಯತ್ನಿಸುತ್ತಾರೆ. ಅವಾಸ್ತವಿಕಳೆನಿಸುವ ಅಜ್ಜಿ, ಅನೇಕ ವಾಸ್ತವಿಕ ಇತಿಹಾಸಾಂಶಗಳನ್ನು ತನ್ನ ಒಳದಿಳಿವಿನಿಂದ ನಮ್ಮ ಮುಂದಕ್ಕೆ ಇರಿಸುತ್ತಾಳೆ.
ಕಾದಂಬರಿಯ-ನಾಗಿ, ರಾಮಣ್ಣ, ಜನ್ನ ಮೊದಲಾದವರು ಸೃಷ್ಟಿ ಶಕ್ತಿಯನ್ನು ಅವಹೇಳನ ಮಾಡುವ ಮನೋಧರ್ಮಕ್ಕೆ ವಾದಿಗಳೋ , ಪ್ರವಾದಿಗಳೋ, ಸಾಕ್ಷಿದಾರರೋ ಆಗಿ ಕಾಣಿಸುತ್ತಿದ್ದಾರೆ.
ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ: ಅದರಿಂದಾಗಿ ಇಂದಿನ ನಮಗೆ ಕೇಳಿಸದೆ ಹೋದ ಕೆಲವು ಯಾತನೆಯ ಧ್ವನಿಗಳನ್ನೂ ಕೇಳುವಿರಂತೆ.
ಅಕ್ಟೋಬರ್ 10, 1968 ಇತಿ
ಪುತ್ತೂರು,ದ.ಕ ಡಾ.ಶಿವರಾಮ ಕಾರಂತ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
