

ಊರು,ಸಂಬಂಧ,ಜಾತಿ,ಧರ್ಮ ನಿರುಪಯುಕ್ತ ಎನ್ನುವ ಅನುಭವವಾಗಿ, ಅವಮಾನ,ಅಪಮಾನವಾದಾಗಲೆಲ್ಲಾ ಛಲ ಜಾಗೃತವಾಗುತಿತ್ತು. ಸೋಲುವ, ಕಳೆದುಕೊಳ್ಳುವ ಭಯಗಳಿಂದ ಶ್ರಮದಿಂದ ಸಾಧಿಸುವುದು ರೂಢಿಯಾಯಿತು ಎಂದು ತಮ್ಮ ಗೆಲುವಿನ ಗುಟ್ಟನ್ನು ಹೇಳಿದವರು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ.
ಸಿದ್ಧಾಪುರದ ಶಂಕರಮಠದಲ್ಲಿ ನಡೆದ ಗಣೇಶ್ ಹೆಗಡೆ ಸ್ಮೃತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ನಾನು ಶಾಲಾ-ಕಾಲೇಜುಗಳಲ್ಲಿ 35-36 ಪ್ರತಿಶತಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿರಲಿಲ್ಲ. ನನ್ನ ಓರಗೆಯವರೆಲ್ಲಾ ಅಧಿಕಾರಿಗಳಾಗಿ ಅವರ ಸ್ವಂತ ವಾಹನಗಳಲ್ಲಿ ಠೀವಿಯಿಂದ ಊರಿಗೆ ಬರುತಿದ್ದಾಗ ಬಡ ಮಾಸ್ತರರ ದಡ್ಡಮಗನಾಗಿ ನಾನು ಒಳಗೊಳಗೆ ಕುಸಿಯುತಿದ್ದೆ.
ಊರು, ನೆರೆಹೊರೆಯವರು, ಓರಿಗೆಯವರು ಎಲ್ಲರ ಎದುರು ಸಣ್ಣವನಾಗಿ ಬದುಕುವುದು ಕಷ್ಟವಾಗಿ ಊರು ಬಿಟ್ಟೆ. ಅಲ್ಲಿಂದ ಮಾವಿನಗುಂಡಿ, ಲಿಂಗನಮಕ್ಕಿ ನಿರ್ಮಾಣ ಕೆಲಸಗಾರನಾಗಿ, ಡಿಸೇಲ್ ತುಂಬುವ ಹುಡುಗನಾಗಿ ಕೆಲಸ ಪ್ರಾರಂಭಿಸಿದೆ. ಅಲ್ಲಿಂದ ಕಾರವಾರಕ್ಕೆ ಪತ್ರಿಕೆ ಹಂಚುವ ಹುಡುಗನಾಗಿ ಹೋದೆ. ಸಿನೆಮಾ ಮಂದಿರ,ಪತ್ರಿಕೆ, ಫೊಟೊಗ್ರಾಫಿ ಹೀಗೆ ದುಡಿಯುತ್ತಾ ಬಾಡಿಗೆ ರೂಮಿನ ಸೆಕೆ,ಸೊಳ್ಳೆಗೆ ಹೆದರಿ ಸಮುದ್ರದ ದಂಡೆಯಲ್ಲಿ ಮಲಗುತ್ತಾ ರಾತ್ರಿ ಕಳೆದೆ.
ಮುಂಗಾರು ಪತ್ರಿಕೆಯಲ್ಲಿ ಸೋಮಾರಿಯೆಂದು ಟೀಕಿಸಿಕೊಂಡೆ ನಂತರ ಅದೇ ಪತ್ರಿಕೆಯ ರಾಜ್ಯದ ಉತ್ತಮ ವರದಿಗಾರ ಪುರಸ್ಕಾರ ಪಡೆದೆ. ನಂತರ ಅಧಿಕಾರಿಯೊಬ್ಬರ ನೆರವು, ವಸಂತ ಅಸ್ನೋಟಿಕರರ ಸಹಕಾರದಿಂದ ಪತ್ರಿಕೆ, ಬದುಕು ಪ್ರಾರಂಭಿಸಿ ಒಂದೊಂದೇ ಮೆಟ್ಟಿಲೇರುತ್ತಾ ಇಂಥ ಪ್ರಶಸ್ತಿ ಸ್ವೀಕರಿಸುವಂತಾದೆ.
ಹೀಗೆ ತಮ್ಮ ಅನುಭವ ಹೇಳುತ್ತಾ ಹೋದಂತೆ ಅವರ ಪಕ್ಕದಲ್ಲಿ ಕೂತಿದ್ದ ಮಾಧ್ಯಮ ದಿಗ್ಗಜರು ದಿಗ್ಭ್ರಮೆಗೊಳಗಾದಂತೆ ಕಂಡುಬಂದರು.
ಈ ಸಂದರ್ಭದಲ್ಲಿದ್ದವರು ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಸಂಪಾದಕ ರವಿ ಹೆಗಡೆ, ಹಿರಿಯ ಪತ್ರಕರ್ತ ಭಾಸ್ಕರರಾವ್ ಮತ್ತು ಔಟ್ಲುಕ್ ನ ಕೃಷ್ಣಪ್ರಸಾದ.
ರವಿ ಹೆಗಡೆ ಮಾತನಾಡುತ್ತಾ ಸಿದ್ಧಾಪುರ ಕಳೆದ 30-40 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹೀಗೇ ಇದೆ. ಇದನ್ನು ಸಹಜ ಎನ್ನೋಣವೋ? ಅಭಿವೃದ್ಧಿಯಾಗಿಲ್ಲ ಎಂದು ವಿಶಾದಿಸುವುದೋ. ದೇಶದ ಸಂತಸ ಸೂಚ್ಯಂಕದ ಆಧಾರದಲ್ಲಿ ಪರಿಗಣಿಸುವುದಾದರೆ ಹೀಗಿರುವುದೇ ಒಳ್ಳೆಯದು, ಅಭಿವೃದ್ಧಿ-ಜಿ.ಡಿ.ಪಿ. ಎನ್ನುವುದಾದರೆ ಇದು ದುರಂತ ಇಂಥ ಕಾಡುವ ಅಂಶಗಳೇ ನನ್ನನ್ನು ಇಲ್ಲಿಗೆ ಕರೆತಂದದ್ದು ಎಂದರು.
ಹಿರಿಯ ಪತ್ರಕರ್ತ ಭಾಸ್ಕರರಾವ್ ಮಾತನಾಡಿ ಏಕಚಿತ್ತ, ಏಕವ್ಯಕ್ತಿಯಾಗಿ, ಏಕಲವ್ಯ ಸಾಧನೆ ಮೂಲಕ ಗಣೇಶ್ಹೆಗಡೆ ಸ್ಮೃತಿ ಪುರಸ್ಕಾರ ಪಡೆದ ಗಂಗಾಧರ ಹಿರೇಗುತ್ತಿ ದಿಕ್ಕುತಪ್ಪುತ್ತಿರುವ ಸಮಾಜವನ್ನು ನಿರ್ಧೇಶಿಸುವ ಕೆಲಸಮಾಡುತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಂದು-ಇಂದು ವಿಷಯದ ಮೇಲೆ ಅದ್ಭುತ ಉಪನ್ಯಾಸ ನೀಡಿದ ಕೃಷ್ಣಪ್ರಸಾದ ಲಾಭ-ಅನುಕೂಲಕ್ಕಾಗಿ ಜನರನ್ನು ವಿಭಜಿಸುವ, ಉಳ್ಳವರ, ಅಧಿಕಾರಸ್ಥರ ಪರವಹಿಸುವ, ಜನರನ್ನು ವಿಭಜಿಸುವ ಕೋಮುವಾದಿ ಕಾರ್ಯಾಚರಣೆಯ ಮಾಧ್ಯಮಗಳು ಇಂದು ದೇಶದ ಗಂಡಾಂತರಕಾರಿ ದುಸ್ಥಿತಿಗೆ ಕಾರಣ. ಈ ಮಾಧ್ಯಮಗಳನ್ನು ತಿದ್ದುವ, ಸರಿಪಡಿಸುವ ಶಕ್ತಿ ಜನಸಮೂಹಕ್ಕಿದೆ,ಓದುವ ವರ್ಗಕ್ಕಿದೆ ಎಂದರು.
ಮಾಧ್ಯಮಗಳು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಅನಾರೋಗ್ಯಕರ ವಿಷಯಗಳನ್ನು ವಿಜೃಂಬಿಸುತ್ತಿರುವುದು ಅಪಾಯಕಾರಿ ವಿದ್ಯಮಾನ ಎಂದು ಎಚ್ಚರಿಸಿದರು.
ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಆರ್.ಪಿ.ಹೆಗಡೆ, ಮತ್ತು ಗಣೇಶ್ ಹೆಗಡೆ ದೊಡ್ಮನೆಯವರನ್ನು ಸ್ಮರಿಸಿದರು. ಸಾಹಿತಿ ಗಂಗಾಧರ ಕೊಳಗಿ ಮತ್ತು ಕಾಶ್ಯಪ ಪರ್ಣಕುಟಿ ದೊಡ್ಮನೆ ಗಣೇಶ್ ಹೆಗಡೆಯವರ ವ್ಯಕ್ತಿತ್ವದ ಬಗ್ಗೆ ಸಾದ್ಯಂತವಾಗಿ ಮಾತನಾಡಿದರು. ಗಂಗಾಧರ ಹಿರೇಗುತ್ತಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
