

ಕರೋನೋತ್ತರ ಕಾಲದ ದೀಪಾವಳಿ ಸರಳವಾಗಿ ಸಾಂಪ್ರದಾಯಿಕವಾಗಿ ಸಡಗರದಿಂದಲೇ ನಡೆಯಿತು. ಮಲೆನಾಡಿನ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಜಾನುವಾರುಗಳಿಗೆ ಶೃಂಗರಿಸಿ ಬೆಳಕಿನ ಹಬ್ಬ ದೀಪಾವಳಿ ನಡೆದಿದೆ. ತಾಂತ್ರಿಕತೆ, ರೈತರು ಅಳವಡಿಸಿಕೊಳ್ಳುತ್ತಿರುವ ಆಧುನಿಕತೆಗಳ ಪರಿಣಾಮ ವರ್ಷದಿಂದ ವರ್ಷಕ್ಕೆ ದೀಪಾವಳಿಯ ರೂಢಿ-ಸಾಂಪ್ರದಾಯಿಕತೆ ಬದಲಾಗುತ್ತಿದೆ. ಆದರೂ ಮಲೆನಾಡಿನ ಕೃಷಿಕರು ಈ ಹಬ್ಬವನ್ನು ನಾಲ್ಕೈದು ದಿವಸ ಆಚರಿಸುವುದು ವಿಶೇಶ.


`ಮಹಾ ಬ್ರಾಹ್ಮಣ’ ಯಕ್ಷಗಾನ ದಾಖಲೀಕರಣ 17ಕ್ಕೆ
ಸಿದ್ದಾಪುರ: ತಪಸ್ಸಿನಿಂದ ಬ್ರಹ್ಮರ್ಷಿಯಾದವನ ಕಥೆ ಆಧರಿಸಿದ ಮಹಾ ಬ್ರಾಹ್ಮಣ ಯಕ್ಷಗಾನ ದಾಖಲೀಕರಣ ನ.17ರಂದು ಸಂಜೆ 6ಕ್ಕೆ ಪಟ್ಟಣದ ಶಂಕರ ಮಠದಲ್ಲಿ ನಡೆಯಲಿದೆ ಎಂದು ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ತಿಳಿಸಿದ್ದಾರೆ.
ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರತಿಷ್ಠಾನಕ್ಕೆ ಈ ವರ್ಷ ದಶಮಾನೋತ್ಸವ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ದಾಖಲೀಕರಣದ ಭಾಗವಾಗಿ ಈ ಕಥಾನಕ ಪ್ರದರ್ಶಿಸಲಾಗುತ್ತಿದೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ಪ್ರಸನ್ನ ಹೆಗ್ಗಾರ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಕೃಷ್ಣಯಾಜಿ ಬಳಕೂರು, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ನರಸಿಂಹ ಚಿಟ್ಟಾಣಿ, ಪ್ರಭಾಕರ ಹಣಜಿಬಯಲು, ವೆಂಕಟೇಶ ಬೊಗ್ರಿಮಕ್ಕಿ, ಪ್ರಣವ ಭಟ್ಟ ಸಿದ್ದಾಪುರ, ಅವಿನಾಶ ಕೊಪ್ಪ, ಕಾರ್ತೀಕ ಕಣ್ಣಿ, ತುಳಸಿ ಹೆಗಡೆ ಪಾಲ್ಗೊಳ್ಳಲಿದ್ದು, ಸ್ತ್ರೀ ವೇಷದಲ್ಲಿ ಶಂಕರ ಹೆಗಡೆ ನೀಲಕೋಡು, ಹಾಸ್ಯದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ ಪಾಲ್ಗೊಳ್ಳುವರು. ವೇಷ ಭೂಷಣವನ್ನು ಎಂ.ಆರ್.ನಾಯ್ಕ ಒದಗಿಸಲಿದ್ದಾರೆ.
ಇದಕ್ಕೂ ಮುನ್ನ ನಡೆಯುವ ದಾಖಲೀಕರಣದ ಉದ್ಘಾಟನೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ನಡೆಸಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಂ.ಹೆಗಡೆ ಬಾಳೇಸರ, ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ವೈದ್ಯ ಡಾ. ಕೆ.ಎಸ್.ಶ್ರೀಧರ, ಪತ್ರಕರ್ತ ರಮೇಶ ಹಾರ್ಸಿಮನೆ, ಸಾಮಾಜಿಕ ಪ್ರಮುಖರಾದ ಎಂ.ಎಲ್.ಭಟ್ಟ ಸಾಗರ, ರಾಮಕೃಷ್ಣ ತೀರ್ಥಹಳ್ಳಿ, ನಾರಾಯಣ ಮೂರ್ತಿ ಬೆಂಗಳೂರು, ಎಂ.ಎಸ್.ಜೋಶಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಅಂತರ, ಸರಕಾರದ ನಿಬಂಧನೆಗೆ ಒಳಪಟ್ಟು ಕಾರ್ಯಕ್ರಮ ನಡೆಯಲಿದೆ. ಆಸಕ್ತರಿಗೆ ಮಾತ್ರ ಪ್ರವೇಶ ಒದಗಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ.
ಗಾಳಿಜಡ್ಡಿ ಕಾರ್ಯಕ್ರಮ- ಸಿದ್ದಾಪುರ
ಸಹಕಾರಿ ಸಂಘಗಳು ಅಭಿವೃದ್ದಿ ಹೊಂದಬೇಕಾದರೆ ಎಲ್ಲರ ಪ್ರೀತಿ ವಿಶ್ವಾಸಗಳಿಸಿಕೊಳ್ಳುವುದು ಮುಖ್ಯ. ಸಹಕಾರಿ ಸಂಘದ ಮೂಲಕ ಸಿಗುವ ಸೌಲಭ್ಯಗಳು ಎಲ್ಲ ಸದಸ್ಯರಿಗೆ ಸಿಗುವಂತಾಗಬೇಕೆಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಗಾಳಿಜಡ್ಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನಬಾರ್ಡ ಯೋಜನೆ ಮತ್ತು ಕೆಡಿಸಿಸಿ ಬ್ಯಾಂಕ್ ಶಿರಸಿ ಇವರಿಂದ ಹೈನುಗಾರಿಕೆ ಉದ್ದೇಶದ ಕುರಿತು ಹೆಚ್ಚುವರಿ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯ ಸಾಲಸೌಲಭ್ಯದ ಆದೇಶ ಪತ್ರವನ್ನು ಗಾಳಿಜಡ್ಡಿ, ಹಾರ್ಸಿಕಟ್ಟಾ ಹಾಗೂ ವಾಜಗದ್ದೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಫಲಾನುಭವಿ ಹೈನುಗಾರರಿಗೆ ವಿತರಿಸಿ ಅವರು ಗುರುವಾರ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಗುಣಮಟ್ಟದ ಹಾಲನ್ನು ಸಂಘ ಖರೀದಿ ಸಬೇಕು. ಒಕ್ಕೂಟದಿಂದ ಸಿಗುವ ಸೌಲಭ್ಯವನ್ನು ಸಂಘದ ಸದಸ್ಯರಿಗೆ ನೀಡುವುದು ಮುಖ್ಯ ಎಂದು ಹೇಳಿದರು.
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ ಹೆಗಡೆ ಹೆಚ್ಚುವರಿ ಕೆಸಿಸಿ ಸಾಲ ಸೌಲಭ್ಯದ ಹಾಗೂ ಧಾರವಾಡ ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ. ಜಾನುವಾರು ವಿಮೆ, ಕಲ್ಯಾಣ ಸಂಘದ ಕುರಿತು ಮಾಹಿತಿ ನೀಡಿದರು. ಗಾಳಿಜಡ್ಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ಹೆಗಡೆ ಹಿರೇಕೈ ಅಧ್ಯಕ್ಷತೆವಹಿಸಿದ್ದರು. ಹಾರ್ಸಿಕಟ್ಟಾ ಹಾಲು ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ, ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಶೋಕ ಹೆಗಡೆ ಹಿರೇಕೈ ಉಪಸ್ಥಿತರಿದ್ದರು. ಗಾಳಿಜಡ್ಡಿ ಹಾಲು ಸಂಘದ ಕಾರ್ಯದರ್ಶಿ ಮಹಾಬಲೇಶ್ವರ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಹೆಚ್ಚುವರಿ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯ 27ಫಲಾನುಭವಿಗಳಿಗೆ ಮಂಜೂರಿಯಾದ 69ರಾಸುಗಳ ನಿರ್ವಹಣೆಗೆ 8ಲಕ್ಷದ 62ಸಾವಿರದ 500ರೂಗಳ ಆದೇಶ ಪತ್ರವನ್ನು ವಿತರಿಸಲಾಯಿತು.
ಅಪಘಾತಕ್ಕೀಡಾದ ಹೋರಿ ರಕ್ಷಣೆ- ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಒಂದು ಹೋರಿ ಕರುವು ವಾಹನಕ್ಕೆ ಅಡ್ಡಸಿಕ್ಕಿ ಅಪಘಾತಕ್ಕೆ ಒಳಗಾಗಿದ್ದು, ಅದರ ವಾರಸುದಾರರು ಯಾರೆಂದು ತಿಳಿಯದ ಕಾರಣ ಮನಮನೆ ಗ್ರಾಮ ಕಮಿಟಿ ಅಧ್ಯಕ್ಷರಾದ ವೀರಭದ್ರ ನಾಯ್ಕ್ ಮನಮನೆ ಬಜರಂಗದಳದ ಅಧ್ಯಕ್ಷರಾದ ಮಂಜುನಾಥ ಡಿ ನಾಯ್ಕ್, ಕಾರ್ಯಕರ್ತರಾದ ಪ್ರಜ್ವಲ, ಮೋಹನ, ಕೃಷ್ಣ ನಾಯ್ಕ್, ಗೋಪಾಲ ನಾಯ್ಕ್, ರವಿ ಇನ್ನಿತರರು ಸೇರಿ ಆ ಕರುವಿಗೆ ಪೂಜೆ ಮಾಡಿ ಪ್ರಸಾದವನ್ನು ಕಟ್ಟಿ ನಂತರ ಅದನ್ನು ಸಾಗರದ ಪುಣ್ಯಕೋಟಿ ಗೋರಕ್ಷಣಾ ವೇದಿಕೆ ನಿರ್ವಾಹಕರಾದ ಪುರುಷೋತ್ತಮ್ ಭಟ್ ಇವರಿಗೆ ಹಸ್ತಾಂತರಿಸಲಾಯಿತು. ಇದರ ಜೊತೆಗೆ ಮೋಹನ ನಾಯ್ಕ್, ದ್ಯಾವಪ್ಪ ಕಾಶಿ, ಲೋಕೇಶ್ ಚೂರಿ ಇವರು ಕರುವಿಗೆ ಬೇಕಾಗುವ ಮೇವನ್ನು ದಾನವಾಗಿ ನೀಡಿದರು.





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
