

ಡಾ. ಸುರೇಶ್ ನಾಯಕ ಎಂದಾಗ ನಮಗೆ ತಟ್ಟನೆ ನೆನಪಾಗುವುದು ಯಶವಂತ ಚಿತ್ತಾಲರ ಬದುಕು’ಬರಹದ ಹರಿಕಾರ. ಹೌದು ಕೊಂಕಣ ರೈಲ್ವೆ ಅಧಿಕಾರಿಯಾಗಿದ್ದು ಕೊಂಡು ಸಾಹಿತ್ಯ ತಮ್ಮ ಬದುಕು ಉಸಿರು ಎನ್ನುತ್ತಲೇ ಪ್ರಯಾಣದ ವೇಳೆಯಲ್ಲಿ ಪುಸ್ತಕವನ್ನು ತಮ್ಮ ಸೂಟ್ಕೇಸ್ ನಲ್ಲಿ ಹಾಕಿಕೊಂಡೆ ಬಿಡುವಿನ ಸಮಯದಲ್ಲಿ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡವರು.
ಡಾ. ಸೈಯದ್ ಜಮೀರುಲ್ಲಾ ಷರೀಫ್ ರ ಮಾರ್ಗದರ್ಶನದಲ್ಲಿ ಸುರೇಶ್ ನಾಯಕ್ ಹಾಗೂ ನಾನು ಒಟ್ಟೊಟ್ಟಿಗೆ ಪಿ ಎಚ್ ಡಿ ಮಾರ್ಗದರ್ಶನದಲ್ಲಿ ಪದವಿ ಪಡೆದುಕೊಂಡವರು. ಯಶವಂತ ಚಿತ್ತಾಲರ ಬದುಕು’ಬರಹ ಸಂಶೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿತು.
ಅಷ್ಟಕ್ಕೇ ಸುಮ್ಮನಾಗದ ಸುರೇಶ್ ನಾಯಕ್ ಸಂಶೋಧನಾ ದೀಪ, ಅನನ್ಯ ಕಾದಂಬರಿಕಾರ ಯಶವಂತ ಚಿತ್ತಾಲ್, ಕನಕನ ತಲ್ಲಣಗಳು, ಹೊಳೆಸಾಲು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರತಿಯನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ತಮ್ಮ ತಂದೆಯ ಹೆಸರಿನಲ್ಲಿ ಶ್ರೀ ನಾರಾಯಣ ಸಾಹಿತ್ಯಕ-ಸಾಂಸ್ಕೃತಿಕ ಪ್ರತಿಷ್ಠಾನ’ವನ್ನು ಸ್ಥಾಪಿಸಿಕೊಂಡು ಅದರ ಮೂಲಕ ಜಾನಪದ ಯಕ್ಷಗಾನ ಸಾಹಿತ್ಯಕ ಚರ್ಚೆ ಕಮ್ಮಟವನ್ನು ಏರ್ಪಡಿಸಿ ಸಾಹಿತ್ಯದ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು.
ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.ತಮ್ಮ ತೀಕ್ಷ್ಣ ವಿಮರ್ಶೆ ಮೂಲಕ ಬಹುಬೇಗ ನಾಡಿಗೆ ಪರಿಚಿತರಾದವರು.2020 ನಮಗೆ ಬಹಳ ದೊಡ್ಡ ದುರಂತ ಕೋವಿಡ್ 19ರ ಕಾರಣದಿಂದ ಆತ್ಮೀಯರಾದ ಹಲವು ಒಡನಾಡಿಗಳನ್ನು ನಾವು ಕಳೆದುಕೊಂಡಿದ್ದು ಇದೀಗ ಗೆಳೆಯ ಆತ್ಮೀಯ ಒಡನಾಡಿ ಸುರೇಶ ನಾಯಕ ಇಂದು 31-12-2020 ಮುಂಜಾನೆ 9:00 ಗಂಟೆಗೆ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿರುವುದು ಅವರ ಕುಟುಂಬಕ್ಕೆ , ಅವರ ಒಡನಾಡಿ ಗಳಿಗೆ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.
ಅವರ ಪತ್ನಿ ಸುವರ್ಣ ಮತ್ತು ಮಕ್ಕಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಶ್ರೀದುರ್ಗಾಪರಮೇಶ್ವರಿ ಕರುಣಿಸಲಿ ಎಂಬ ಪ್ರಾರ್ಥನೆ.ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ನೆನಪೊಂದೇ ಶಾಶ್ವತ ಎನ್ನುವಂತೆ ಸುರೇಶ್ ನಾಯಕ್ ಅವರ ಪ್ರೀತಿ ಸಾಹಿತ್ಯದ ಒಡನಾಟ ಎಲ್ಲವೂ ನೆನಪಿನ ಬುತ್ತಿಯಲ್ಲಿ ಇಟ್ಟುಕೊಳ್ಳುತ್ತಾ ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಇಂದು ಮತ್ತೊಮ್ಮೆ ಪ್ರಾರ್ಥಿಸಿಕೊಳ್ಳುತ್ತೇನೆ.ಓಂ ಶಾಂತಿ.
ಡಾ. ಶ್ರೀಧರ್ ಗೌಡ ಉಪ್ಪಿನ ಗಣಪತಿ
ಡಾ.ಸುರೇಶ್ ನಾಯ್ಕ ನಮ್ಮ ಸಮಾಜಮುಖಿ ಪತ್ರಿಕೆಯ ಬಹುಕಾಲದ ಓದುಗರಾಗಿದ್ದರು. ಸಮಾಜಮುಖಿ ವಾರ ಪತ್ರಿಕೆಗೆ ಬರೆಯುತಿದ್ದ ಅವರು ಕೆಲವು ಸಾಹಿತಿಗಳು, ಸಾಹಿತ್ಯ ಕೃತಿಗಳ ಬಗ್ಗೆ ಆಗಾಗ ಬರೆದುಕೊಟ್ಟವರು. ಕಳೆದ ದಶಕದಲ್ಲಿ ಅಪರೂಪವಾಗಿದ್ದ ಅವರ ನಿಧನ ನಮ್ಮ ಸಮಾಜಮುಖಿ ಬಳಗಕ್ಕೂ ಅತೀವ ನೋವು ತಂದಿದೆ. ಕನ್ನಡ ಸಾರಸ್ವತ ಲೋಕದ ಬಿಂದುವಂತಿದ್ದು ಸಿಂಧುವಾಗಿದ್ದ ಅವರಿಗೆ ನಮ್ಮ ನಮನ. ಅವರ ಕುಟುಂಬ ವರ್ಗ ಬೇಗ ಸುಧಾರಿಸಿಕೊಳ್ಳುವಂತಾಗಲಿ – ಕನ್ನೇಶ್




