

ಖಾಸಗಿ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿರುವ ಜಗದೀಶ್ ಜಿ. ಇಲ್ಲಿ ಸ್ಪಷ್ಟೀಕರಣ ನೀಡಿದ್ದರೆ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕೂಡಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿದ್ದರು ಪೋಟೋಕ್ಕಾಗಿ ನಮ್ಮ ವಿನಂತಿ ಮೇರೆಗೆ ಕೆಲವು ಕ್ಷಣಗಳು ಮಾತ್ರ ಮಾಸ್ಕ್ ತೆಗೆದಿದ್ದರು ಎಂದು ಜಿ.ಪಂ. ಮಾಜಿ ಸದಸ್ಯ ಈಶ್ವರ್ ನಾಯ್ಕ ಮತ್ತು ವಿಧಾನಸಭಾ ಅಧ್ಯಕ್ಷರ ಆಪ್ತ ಸಹಾಯಕ ಕಲ್ಲಪ್ಪ ಸ್ಪಷ್ಟೀಕರಣ ನೀಡಿದ್ದಾರೆ.


ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ತೀವ್ರ ರೀತಿಯಲ್ಲಿ ಹರಡುತ್ತಿದೆ. ಕೊರೊನಾ ಹರಡದಂತೆ ರಾಜ್ಯ ಸರ್ಕಾರ ಈಗಾಗಲೆ ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಲಾಕ್ಡೌನ್ ಹೇರಿದೆ. ಶುಕ್ರವಾರದವರೆಗೂ ಕಟ್ಟು ನಿಟ್ಟಿನ ಮಾರ್ಗಸೂಚಿಗಳೊಂದಿಗೆ ನೈಟ್ ಕರ್ಫ್ಯೂ ಕೂಡಾ ಹೇರಲಾಗಿತ್ತು. ಆದರೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಸ್ಕ್ ಧರಿಸದೆ ರಾತ್ರಿ ಹೊತ್ತಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ರಾತ್ರಿ ಉಡುಪಿಯ ಅಮೃತ್ ಗಾರ್ಡನ್ನಲ್ಲಿ ಹೆಚ್ಚುವರಿ ಎಸ್.ಪಿ. ಕುಮಾರಚಂದ್ರ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಡಿಯೊ ಹಾಗೂ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳೆದ್ದಿತ್ತು. ಮಾಸ್ಕ್, ಕೊರೊನಾ ಮಾರ್ಗಸೂಚಿ, ನೈಟ್ಕರ್ಫ್ಯೂ ಎಲ್ಲವೂ ಸಾಮಾನ್ಯರಿಗೆ ಮಾತ್ರವೆ, ಅದು ಜಿಲ್ಲಾಧಿಕಾರಿಗೆ ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದ್ದರು.
ಈ ಬಗ್ಗೆ ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದ ಪತ್ರಕರ್ತ ಶಶಿಧರ್ ಹೆಮ್ಮಾಡಿ, “ತಡರಾತ್ರಿ ಮನೆಗೆ ತಲುಪುತ್ತಿದ್ದ ಬಡಮನೆಗಳ ಹೆಣ್ಣು ಮಕ್ಕಳನ್ನು ಅವರು ಬಸ್ನಲ್ಲಿ ನಿಂತು ಪಯಣಿಸುತ್ತಾ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬೈದು ಬಸ್ಸಿನಿಂದ ಇಳಿಸಿದ್ದರು. ಇಂದು ನಾಳೆ, ನಾಡಿದ್ದು ನಡೆಯಬೇಕಾಗಿದ್ದ ನೂರಾರು ಮೆಹಂದಿ, ಮದುವೆ ಮನೆಗಳ ಸಂಭ್ರಮಕ್ಕೆ ಕಲ್ಲು ಹಾಕಿದ್ದಾರೆ. ಮದುವೆ ಮನೆಗೆ ಬರುವ ಅತಿಥಿಗಳ ಆಧಾರ್ ಕಾರ್ಡ್ ಅನ್ನು ಕೇಳುತ್ತಾರೆ.
ಆದರೆ ಶುಕ್ರವಾರ ಸಂಜೆ ನಡೆದ ಪೊಲೀಸ್ ಅಧಿಕಾರಿಯೋರ್ವರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಕೂಡ ಹಾಕದೆ ನಗುತ್ತಾ ನಿಂತಿದ್ದಾರೆ. ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೇ ಜಿಲ್ಲಾಧಿಕಾರಿಗಳೇ? ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರೇ ನಿಮಗೆ ನಾಚಿಕೆ ಆಗಬೇಕು. ಅಂದ ಹಾಗೆ ಈ ಮದುವೆಗೆ ಹೋಗುವ ಅತಿಥಿಗಳ ಆಧಾರ್ ಕಾರ್ಡ್ ನೀಡಿದ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿಗಳ ಹೆಸರು ಇತ್ತೆ? ಉತ್ತರಿಸಲೇಬೇಕು ಡಿಸಿ ಸಾಹೇಬರು” ಎಂದು ಹೇಳಿದ್ದರು.
ಸರ್ಕಾರದ ಕೊರೊನಾ ಮಾರ್ಗಸೂಚಿಯಂತೆ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗಷ್ಟೇ ಅವಕಾಶ. ಆದರೆ ಈ ಕಾರ್ಯಕ್ರಮದಲ್ಲಿ ಅದು ಪಾಲನೆ ಆಗಿದೆಯೆ ಎಂದು ಕೂಡಾ ಶಶಿಧರ್ ಹೆಮ್ಮಾಡಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಮಹೆಂದಿ ಕಾರ್ಯಕ್ರಮದ ವಿಡಿಯೊವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ.
ಅದರಲ್ಲಿ, “ಇದು ನಿನ್ನೆ ಉಡುಪಿ ಜಿಲ್ಲಾಧಿಕಾರಿಗಳು, ದೈಹಿಕ ಅಂತರ ಕಾಪಾಡದೇ ಮಾಸ್ಕ್ ಧರಿಸದೇ ಹಾಜರಾದ ASP ಅವರ ಮಗಳ ಮದುವೆಯ ಒಂದು ದೃಶ್ಯ. ಈ ಒಂದು ವಿಡಿಯೊದಲ್ಲೇ ನಾನು ಲೆಕ್ಕ ಹಾಕಿದ ಹಾಗೆ 24 ಜನರಿದ್ದಾರೆ. ಮಾಸ್ಕ್ ಧರಿಸಿದ್ದು ಒಬ್ಬ ಪುಣ್ಯಾತ್ಮ ಮಾತ್ರ. ಮತ್ತೆ ಯಾರಿಗೂ ಮಾಸ್ಕ್ ಇಲ್ಲ. ಸಾಮಾಜಿಕ ಅಂತರವಿಲ್ಲ. ಬಾಗಿಲಿಂದ ಒಳ ಬರುವ ಈ ವಿಡಿಯೋದಲ್ಲೇ 24 ಜನರಿದ್ದಾರೆ ಎಂದರೆ ಇನ್ನು ಒಳಗೆ ಎಷ್ಟು ಜನರಿರಬಹುದು ಎಂದು ಊಹಿಸಿ” ಎಂದು ಬರೆದಿದ್ದಾರೆ.
“ನಮಗೆ ASP ಮಗಳ ಮದುವೆಯನ್ನು ಸಂಭ್ರಮದಿಂದ ಮಾಡಿದ್ದಾರೆ ಎಂಬ ಆಕ್ಷೇಪವಿಲ್ಲ. ಅವರ ಮಗಳ ಮದುವೆಯ ಬಗ್ಗೆ ಸಾವಿರಾರು ಕನಸು ಕಂಡಿರುತ್ತಾರೆ. ಅವರ ಮಗಳ ಮದುವೆ ಚೆನ್ನಾಗಿಯೇ ನಡೆಯಲಿ. ಆದರೆ ಕಾನೂನು ಮಾಡುವ, ಪಾಲಿಸದಿದ್ದರೆ ಶಿಕ್ಷೆ ಕೊಡುವ ಇವರುಗಳು ಕನಿಷ್ಟ ಪಕ್ಷ ದೈಹಿಕ ಅಂತರ, ಮಾಸ್ಕ್ ನಿಯಮ ಪಾಲಿಸಲಿ. ಜೊತೆಗೆ ಜನಸಾಮಾನ್ಯರ ಮನೆಯ ಮದುವೆಗಳನ್ನೂ ಒಂದಷ್ಟು ನಿಯಮಗಳೊಂದಿಗೆ, ಶಿಸ್ತುಬದ್ದವಾಗಿ ಸಂಭ್ರಮದಿಂದ ನಡೆಯಲು ಬಿಡಲಿ. ಪಾಸು, ಆಧಾರ್ ಕಾರ್ಡು, ಮಣ್ಣು ಮಸಿ ಎಂಬ ತುಘಲಕ್ ದರ್ಬಾರ್ ಅನ್ನು ಇಲಾಖೆಗಳು ನಿಲ್ಲಿಸಲಿ. ನಮಗೂ ನಮ್ಮನೆ ಮಕ್ಕಳ ಬಗ್ಗೆ ಕನಸುಗಳಿರುತ್ತವೆ ಸ್ವಾಮಿ. ತಿಂಗಳುಗಳಿಂದ ಸಿದ್ಧತೆ ನಡೆಸಿದ್ದೇವೆ. ಮದುವೆ ಮನೆ ಎಂದು ಸಂಭ್ರಮಪಟ್ಟಿದ್ದೇವೆ. ಖರ್ಚು ಮಾಡಿದ್ದೇವೆ. ನೆಮ್ಮದಿಯಿಂದ, ಖುಷಿಯಿಂದ ನಮ್ಮ ಸಮಾರಂಭಗಳು ನಡೆಯಲು ಬಿಡಿ. ಕೋವಿಡ್ ನಿಯಮ ಪಾಲಿಸುವ ಹೊಣೆ ನಿಮಗಿಂತ ಜಾಸ್ತಿ ನಮಗಿದೆ” ಎಂದು ಶಶಿಧರ್ ಹೆಮ್ಮಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಈ ಬಗ್ಗೆ ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಯ ನಡೆಯನ್ನು ಟೀಕಿಸಿದ್ದಾರೆ. ಈ ಘಟನೆಯ ಬಗ್ಗೆ ವಾ ರ್ತಾಭಾರತಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್, “ಮದುವೆ ಕಾರ್ಯಕ್ರಮವು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕುಟುಂಬದ ಆಪ್ತರಷ್ಟೇ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದುದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ. ಅಲ್ಲದೆ ಶುಕ್ರವಾರ ರಾತ್ರಿ 8.40 ಕ್ಕೆ ಆ ಕಾರ್ಯಕ್ರಮಕ್ಕೆ ಹೋಗಿ 8.50ಕ್ಕೆ ಕರ್ಫ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ. ಮಧುಮಗಳ ಕೋರಿಕೆ ಮೇರೆಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ’’ ಎಂದು ಹೇಳಿದ್ದಾರೆ.
( ಕೃಪೆ-ನಾನು ಗೌರಿ.ಕಾಮ್)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
