![](https://i0.wp.com/samajamukhi.net/wp-content/uploads/2022/03/IMG-20220315-WA0093.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಒಂದೊಂದು ಹುದ್ದೆಗೂ ಕೋಟ್ಯಂತರ ಹಣ, ರಾಜಕಾರಣಿಗಳ ಬಂಡವಾಳ ಬಿಚ್ಚಿಡುವೆ: ಭಾಸ್ಕರ್ ರಾವ್ ಗುಡುಗು
ಖಾಕಿ ಕಳಚಿಟ್ಟು ಎಎಪಿ ಪಕ್ಷ ಸೇರಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕಾರಣಿಯಾಗುವ ತವಕದಲ್ಲಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಭಾಸ್ಕರ್ ರಾವ್ ಅವರು…
![ಭಾಸ್ಕರ್ ರಾವ್ baskar](https://i0.wp.com/media.kannadaprabha.com/uploads/user/imagelibrary/2022/4/6/w900X450/baskar.jpg?w=760&ssl=1)
ಬೆಂಗಳೂರು: ಖಾಕಿ ಕಳಚಿಟ್ಟು ಎಎಪಿ ಪಕ್ಷ ಸೇರಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕಾರಣಿಯಾಗುವ ತವಕದಲ್ಲಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಭಾಸ್ಕರ್ ರಾವ್ ಅವರು, ಕಳೆದ ಮೂರು ದಶಕಗಳಿಂದ ಜನಪ್ರತಿನಿಧಿಗಳನ್ನ ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನ ಚೆನ್ನಾಗಿ ಅರಿತಿದ್ದೇನೆ. ಕೊರೋನಾ ಸಂದರ್ಭದಲ್ಲಿ ಜನರ ಕಷ್ಟವನ್ನ ಹತ್ತಿರದಿಂದ ನೋಡಿದೆ. ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಜನರ ಪರಿಸ್ಥಿತಿ ಬದಲಾವಣೆ ಆಗಲೇ ಇಲ್ಲ. ಎಲ್ಲವೂ ಕಾಗದದ ಮೇಲೆ ಸೀಮಿತವಾಗಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ನೈತಿಕತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
![](https://i0.wp.com/samajamukhi.net/wp-content/uploads/2022/03/12.jpg?resize=586%2C413&ssl=1)
ಒಂದೊಂದು ಹುದ್ದೆಗೂ ಕೋಟ್ಯಂತರ ಹಣ ಕೊಡಬೇಕಾಗುತ್ತೆ. ಉತ್ತಮವಾಗಿ ಮಾತನ್ನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ. ಇದುವರೆಗೂ ಯಾರಿಂದಲಾದರೂ ಸ್ವಚ್ಛ ಆಡಳಿತ ಕೊಡಲು ಆಗಿದೆಯಾ? ಎಂದು ಪ್ರಶ್ನಿಸಿದರು. ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ. ಮುಂದೆ ನನ್ನ ಮನೆ ಮೇಲೆ ದಾಳಿಯಾಗಬಹುದು. ಏನೇ ಆದರೂ ಎದುರಿಸಲು ಸಿದ್ಧನಿದ್ದೇನೆ. ಇದೂವರೆಗೂ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಕರ್ನಾಟಕದಲ್ಲಿ ಒಳ್ಳೆಯ ಅಧಿಕಾರಿಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಎಷ್ಟೋ ಜನ ಕರ್ನಾಟಕ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಅಡಳಿತ ಕೊಡಬೇಕಾದ ಪಕ್ಷದ ಅಗತ್ಯ ಇದೆ. ಅದನ್ನು ಎಎಪಿ ಮಾಡುತ್ತಿದೆ. ಎಲ್ಲಾ ರಾಜಕಾರಣಿಗಳ ಪುರಾಣ ನನಗೆ ಚನ್ನಾಗಿ ಗೊತ್ತಿದೆ. ಕಾಲ ಬಂದಾಗ ಅದೆಲ್ಲವನ್ನೂ ಹೇಳುತ್ತೇನೆ ಎಂದು ಗುಡುಗಿದರು.
ಪೊಲೀಸ್ ಅಧಿಕಾರಿಯಾಗಿದ್ದರಿಂದ ನಾನು ಆಗ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ. ಇನ್ಮುಂದೆ ಎಲ್ಲರ ಬಂಡವಾಳ ಬಿಚ್ಚಿಡ್ತೀನಿ ಎಂದರು. ಹಿಜಾಬ್, ಹಲಾಲ್, ಆಜಾನ್ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿ, ನಾವೆಲ್ಲರೂ ಭಾರತೀಯರು. ಬೆಲೆ ಏರಿಕೆಯಿಂದ ಜನರು ಸಾಯುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಅದೇ ಕಾರಣಕ್ಕೆ ವಿಷಯಾಂತರ ಮಾಡಲು ವಿವಾದಗಳು ಸೃಷ್ಟಿಯಾಗುತ್ತಿವೆ ಎಂದು ಆರೋಪಿಸಿದರು. ಚುನಾವಣೆ ಯಾವಾಗ ಬೇಕಾದರೂ ನಡೆಯಲಿ. ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕುವ ಉತ್ಸುಕತೆಯಲ್ಲಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಎಎಪಿ ಅಧ್ಯಕ್ಷ ಪೃಥ್ವಿರೆಡ್ಡಿ, ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. (kpc)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)