

ಶಿವಮೊಗ್ಗದ ಫ್ಲೆಕ್ಸ್ ಪ್ರಕರಣದಲ್ಲಿ ಬಂಧಿತನಾದ ಜಬೀವುಲ್ಲಾನ ಮೊಬೈಲ್ನಿಂದಾಗಿ ಈ ಮೂವರು ಉಗ್ರ ಚಟುವಟಿಕೆಯಲ್ಲಿರುವುದು ಬೆಳಕಿಗೆ ಬಂದಿದೆ. ಮೂರು ಜನ ಮನೆ ಬಿಟ್ಟು ವಿಧ್ವಂಸಕ ಕೃತ್ಯಕ್ಕೆ ಕೈ ಹಾಕಿದ್ದರು ಎಂಬುದು ತಿಳಿಯುತ್ತಿದೆ.

ಶಿವಮೊಗ್ಗ : ಕರಾವಳಿ ಭಾಗದಲ್ಲಿ ಕಂಡು ಬರುತ್ತಿದ್ದ ಉಗ್ರರ ನಂಟು ಈಗ ಮಲೆನಾಡಿಗೂ ಆವರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಕಲೆ, ಸಾಹಿತ್ಯ, ರಾಜಕೀಯಕ್ಕೆ ಹೆಸರುವಾಸಿಯಾಗಿತ್ತು. ಈಗ ಇದಕ್ಕೆ ಉಗ್ರರ ನಂಟು ಸೇರ್ಪಡೆಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮೂವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದಾಗ ಶಿವಮೊಗ್ಗದ ಸಿದ್ದಶ್ವರ ನಗರದ ನಿವಾಸಿ ಸೈಯ್ಯದ್ ಯಾಸೀನ್ ಹಾಗೂ ಮಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ಮಾಜ್ ಮುನೀರ್ ಅಹಮ್ಮದ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೂರ್ವ ಆರೋಪಿ ತೀರ್ಥಹಳ್ಳಿ ಸೂಪ್ಪುಗುಡ್ಡೆಯ ಶಾರೀಕ್ ತಲೆ ಮರೆಸಿಕೊಂಡಿದ್ದಾನೆ. ಸೆರೆ ಸಿಕ್ಕವರನ್ನು ಪೊಲೀಸರು ಹಲವು ಕಡೆ ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಾ, ಸ್ಥಳ ಮಹಜರು ಮಾಡುತ್ತಿದ್ದಾರೆ.
ಯುಎಪಿಎ ದೂರು ದಾಖಲಾದ ಮೂವರು ಹೈಸ್ಕೂಲ್ ಗೆಳೆಯರು
ಯುಎಪಿಎ ದೂರು ದಾಖಲಾದ ಮೂವರು ಹೈಸ್ಕೂಲ್ ಗೆಳೆಯರು : ಹಾಲಿ ಯುಎಪಿಎ ಕಾಯ್ದೆಯಡಿ ದಾಖಲಾದ ಮೂವರು ಸಹ ಹೈಸ್ಕೂಲ್ ಗೆಳೆಯರು. ಇವರು ಶಿವಮೊಗ್ಗ ನಗರದ ಪ್ರತಿಷ್ಠಿತ ಅಕ್ಷರ ಕಲಿಸುವ ಶಾಲೆಯ ವಿದ್ಯಾರ್ಥಿಗಳು. ನಂತರ ಯಾಸೀನ್ ನಗರದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಈತ ಹಾಲಿ ಅಂತಿಮ ವರ್ಷದ ವಿದ್ಯಾಭ್ಯಾಸ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ.
ವಾರದ ಹಿಂದೆ ಕಾಣೆಯಾಗಿದ್ದ ಯಾಸೀನ್ : ಫಲಿತಾಂಶಕ್ಕಾಗಿ ಕಾಯುತ್ತಿದ್ದ ಯಾಸೀನ್ ಕಳೆದ 20 ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಟೂರ್ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ. ಕಳೆದ ವಾರ ಪೋನ್ ಸಂಪರ್ಕ ಸಿಗದ ಕಾರಣ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈತ ಮೊಬೈಲ್ ನೆಟ್ ವರ್ಕ್ ಹೆಬ್ರಿ ಬಳಿಯಲ್ಲಿ ಸ್ವೀಚ್ ಆಫ್ ಆಗಿತ್ತು. ನಂತರ ಪೊಲೀಸರು ಹುಡುಕಿ ಕರೆ ತಂದಿದ್ದಾರೆ.
ಮಂಗಳೂರಿನಲ್ಲಿ ಬಂಧಿತನಾದ ಮಾಜ್ ಮುನೀರ್ ಅಹಮ್ಮದ್ರನ್ನು ಪ್ರತ್ಯೇಕವಾಗಿ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಾರೀಕ್ ತೀರ್ಥಹಳ್ಳಿಯ ಸೂಪ್ಪುಗುಡ್ಡೆಯ ನಿವಾಸಿಯಾಗಿದ್ದು, ತನ್ನ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ತನ್ನ ತಂದೆ ತೀರಿಹೋಗಿದ್ದಾಗ ಸಹ ಶಾರೀಕ್ ತಂದೆ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ.
ಮನೆ ಬಿಟ್ಟು ಹೋಗಿ ಯೋಜನೆ : ಮೂವರು ಸಹ ತುಂಬ ಮುಂದಾಲೋಚನೆಯಿಂದ ತಮ್ಮ ತಮ್ಮ ಮನೆಯನ್ನು ಬಿಟ್ಟು ಹೊರಟಿದ್ದರು ಎಂಬ ಅಂಶ ತಿಳಿದು ಬಂದಿದೆ. ಬಂಧಿತ ಇಬ್ಬರ ಮೊಬೈಲ್ ಹಾಗೂ ಮನೆಯನ್ನು ತಲಾಷ್ ನಡೆಸಿದಾಗ ಹಲವು ದೇಶದ್ರೋಹಿ ಚಟುವಟಿಕೆ ನಡೆಸಿದ ಉಗ್ರ ಸಂಘಟನೆ ಐಸಿಸ್ನ ವಿಡಿಯೋ ಹಲವು ಬರಹಗಳು ಸೇರಿದಂತೆ ಬಾಂಬ್ ತಯಾರಿಕೆಯ ವಸ್ತುಗಳು ಪತ್ತೆಯಾಗಿವೆ. ಬಂಧಿತ ಯಾಸೀನ್ನನ್ನು ನಿನ್ನೆಯಿಂದ ಹಲವು ಕಡೆ ಪೊಲೀಸರು ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ.
ಸ್ಥಳ ಮಹಜರು : ಯಾಸೀನ್ ಸೂಚಿಸಿದ ಜಾಗಗಳಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಮೊದಲು ಯಾಸೀನ್ ಮನೆ ಮಹಜರು ಮಾಡಲಾಯಿತು. ಇಲ್ಲಿ ಹಲವು ವಸ್ತುಗಳು ಲಭ್ಯವಾಗಿವೆ. ನಂತರ ಹಳೆಗುರುಪುರದ ತುಂಗಾ ನದಿ ದಂಡೆಯ ಬಳಿ ಇವರು ತಯಾರಿಸಿದ ಕಚ್ಚಾ ಬಾಂಬ್ಗಳನ್ನು ಸ್ಫೋಟಿಸಿ ಪರೀಕ್ಷಿಸುತ್ತಿದ್ದ ಎನ್ನಲಾಗಿದೆ. ಅದರಂತೆ ಶಿವಮೊಗ್ಗದ ಹೊರ ವಲಯ ಅಬ್ಬಲಗೆರೆಯ ಈಶ್ವರ ವನದ ಬಳಿ ಸಹ ಇಂದು ಬೆಳಗ್ಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಗಿದೆ. ಅದೇ ರೀತಿ ಮಾಜ್ನನ್ನು ಸಹ ಮಂಗಳೂರಿಗೆ ಕರೆದು ಕೊಂಡು ಹೋಗಿ ಅಲ್ಲಿ ಸ್ಥಳ ಮಹಜರು ಮಾಡಿದ್ದಾರೆ.
ಮಹಜರು ವೇಳೆ ಸ್ಫೋಟಕ ವಸ್ತು ಪತ್ತೆ : ಯಾಸೀನ್ನನ್ನು ಕರೆದುಕೊಂಡು ಹೋಗಿ ವಿವಿಧೆಡೆ ಸ್ಥಳ ಮಹಜರು ಮಾಡಿದ ವೇಳೆ ಅನೇಕ ವಸ್ತುಗಳು ಪತ್ತೆಯಾಗಿವೆ. ಮುಖ್ಯವಾಗಿ ಹಳೇಗುರುಪುರದ ತುಂಗಾ ನದಿಯ ಬಳಿ ಮಹಜರು ನಡೆಸಿದ ವೇಳೆ ಸ್ಫೋಟಕ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಈ ಮಹಜರು ಮಾಡಲು ಶಿವಮೊಗ್ಗದ ಬಾಂಬ್ ಸ್ಕ್ವಾಡ್ ಹಾಗೂ ದಾವಣಗೆರೆಯ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದ ವೇಳೆ ಯಾವುದೇ ಜೀವಂತ ಸ್ಫೋಟಕಗಳು ಪತ್ತೆಯಾಗಿಲ್ಲ.
ಆದರೆ ಸ್ಫೋಟಕಕ್ಕೆ ಬಳಸುವ ಕಚ್ಚಾ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಐಇಡಿಗೆ ಬಳಸುವ ಸಾಮಗ್ರಿಗಳು ಪತ್ತೆಯಾಗಿವೆ. ಇದರಲ್ಲಿ ಆಕ್ಸಿವೇಟರ್ ರ್ಸ್ಫೋಟಕಕ್ಕೆ ಬಳಸುವ ಸ್ವೀಚ್, ಪ್ಯೂಸ್, ಕಂಟೈನರ್, ಬ್ಯಾಟರಿ ಮಾದರಿ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ಮನೆಯಲ್ಲಿ ಪಾಸ್ಪರಸ್ ಹಾಗೂ ಸಲ್ಪರ್ ರೀತಿ ವಸ್ತುಗಳು ಪತ್ತೆಯಾಗಿವೆ. ಇವುಗಳು ಬಾಂಬ್ ತಯಾರಿಸಲು ಬೇಕಾದ ಮೂಲ ಕಚ್ಚಾ ವಸ್ತುಗಳಾಗಿವೆ. ಹಳೇ ಗುರುಪುರದ ತುಂಗಾ ನದಿ ದಂಡೆಯನ್ನು ಲಾಂಚ್ ಪ್ಯಾಡ್ ರೀತಿ ಬಳಕೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಜಬೀವುಲ್ಲಾ ಬಂಧನದ ನಂತರ ಶಂಕಿತ ಉಗ್ರರ ಸುಳಿವು : ಆಗಸ್ಟ್ 15 ರಂದು ಶಿವಮೊಗ್ಗ ನಗರದಲ್ಲಿ ನಡೆದ ಸಾರ್ವಕರ್ ಪ್ಲೇಕ್ಸ್ ಪ್ರಕರಣದಲ್ಲಿ ಪ್ರೇಮ್ ಸಿಂಗ್ ಮೇಲೆ ಚಾಕು ಇರಿತವಾಗಿತ್ತು. ಈ ಪ್ರಕರಣದ ಎ-1 ಆರೋಪಿ ಜಬೀವುಲ್ಲಾನ ವಿಚಾರಣೆಯ ವೇಳೆ ಆತನ ಮೊಬೈಲ್ನಲ್ಲಿ ಶೋಧ ನಡೆಸಿದಾಗ ಆತ ಉಗ್ರರ ವಿಡಿಯೋ ನೋಡಿದ ಹಾಗೂ ಮಾತನಾಡಿದ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಇದರ ಮೇಲೆ ಯಾಸೀನ್, ಮಾಜ್ ಹಾಗೂ ಶಾರೀಕ್ ಅವರ ಜಾಡು ಪತ್ತೆಯಾಗಿದೆ. ಜಬೀವುಲ್ಲಾ ಹಾಗೂ ಇತರ ಇಬ್ಬರ ವಿರುದ್ಧ ಸಹ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ಮತ್ತೆ ಮೂವರ ವಿರುದ್ಧ ಸಹ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ಯುಎಪಿಎ ಪ್ರಕರಣ ದಾಖಲಿಸಿದ ಕಾರಣ ಈ ಪ್ರಕರಣವನ್ನು ಎನ್ಐಎರವರು ಯಾವಾಗ ಬೇಕಾದರೂ ಸಹ ತನಿಖೆಗೆ ತೆಗೆದುಕೊಳ್ಳಬಹುದಾಗಿದೆ.
ಬಂಧಿತ ಶಂಕಿತ ಉಗ್ರರ ಮನೆಯವರ ಆಕ್ರೋಶ : ಬಂಧಿತ ಯಾಸೀನ್ ತಂದೆ ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂರು ಜನ ಮಕ್ಕಳು, ಅದರಲ್ಲಿ ಇಬ್ಬರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು. ಹಿರಿಯವ ಯಾಸಿನ್ ಚೆನ್ನಾಗಿ ಓದುತ್ತಿದ್ದ ಕಾರಣ ಆತನನ್ನು ಎಲೆಕ್ಟ್ರಾನಿಕ್ ಇಂಜಿನಿಯರ್ ಓದಿಸಲಾಯಿತು. ಎರಡನೇಯವ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಹೆಣ್ಣು ಮಗಳು ಈಗ ಎಂಟನೇ ತರಗತಿ ಓದುತ್ತಿದ್ದಾಳೆ.
ಯಾಸೀನ್ ಕುಟುಂಬಸ್ಥರಿಗೆ ಈತ ಈ ರೀತಿ ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ಅಚ್ಚರಿ ಹಾಗೂ ಬೇಸರ ತಂದಿದೆ. ಅದೇ ರೀತಿ ಶಾರೀಕ್ ಕುಟುಂಬಸ್ಥರಿಗೂ ಸಹ ನೋವುಂಟು ಮಾಡಿದೆ. ಸದ್ಯ ಇನ್ನೂ ಬಂಧಿತರ ವಿಚಾರಣೆ ಮುಂದುವರೆದಿದ್ದು, ಸೆಪ್ಟೆಂಬರ್ 29ರ ತನಕ ಬಂಧಿತ ಇಬ್ಬರು ಪೊಲೀಸ್ ವಿಚಾರಣೆಯಲ್ಲಿ ಇರುತ್ತಾರೆ. ತನಿಖೆ ಮುಂದುವರೆದಿದ್ದು, ಸದ್ಯಕ್ಕೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
