ಸಿದ್ದಾಪುರ
ಜ್ಞಾನ, ಕೌಶಲ್ಯಗಳಿಂದ ಮಾತ್ರ ವೈದ್ಯಕೀಯ ಕಾರ್ಯ ಸಾಧ್ಯವಿಲ್ಲ. ವಿಶ್ವಾಸ, ಶೃದ್ಧೆ, ಪ್ರಾಮಾಣಿಕತೆ, ತಾಳ್ಮೆ, ಅನುಕಂಪಗಳು ಅತ್ಯಗತ್ಯ. ಈ ಗುಣಗಳು ಡಾ|ಎಸ್.ಆರ.ಹೆಗಡೆಯವರಲ್ಲಿರುವದಕ್ಕೆ ಅವರೊಬ್ಬ ಜನಪರ, ಮಾದರಿ ವೈದ್ಯರಾಗಿ ಕಳೆದ ೫೦ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನೇತ್ರತಜ್ಞ ಡಾ|ಕೆ.ವಿ.ಶಿವರಾಂ ಶಿರಸಿ ಹೇಳಿದರು.
ಅವರು ಹಿರಿಯ ವೈದ್ಯ ಡಾ|ಎಸ್.ಆರ್.ಹೆಗಡೆ ಹಾರ್ಸಿಮನೆಯವರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಅರ್ಧ ಶತಮಾನದ ಹಿಂದೆಯೇ ಎಂ.ಬಿ.ಬಿ.ಎಸ್. ಪದವಿ ಪಡೆದು ಅಪ್ಪಟ ಗ್ರಾಮೀಣ ಭಾಗವಾದರು ತನ್ನ ಹುಟ್ಟೂರಿನ ಸಿದ್ದಾಪುರದಲ್ಲಿ ವೃತ್ತಿಯನ್ನು ಆರಂಭಿಸಿ, ನಂತರದಲ್ಲಿ ಆಧುನಿಕ ವೈದ್ಯಕೀಯ ಸೇವೆಯನ್ನು ನೀಡಿದವರು ಎಸ್.ಆರ್.ಹೆಗಡೆ. ಸೇವಾ ಕ್ಷೇತ್ರದಲ್ಲಿ ಇರುವವರಿಗೆ ಇವರು ಮಾರ್ಗದರ್ಶಿಯಾಗಿದ್ದಾರೆ ಎಂದರು.
ಅಭಿನಂದನಾ ಮಾತುಗಳನ್ನಾಡಿದ ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ನಗರ ಪ್ರದೇಶದಲ್ಲಿ ಅವಕಾಶವಿದ್ದರೂ ಹುಟ್ಟಿದ ಊರಿನಲ್ಲಿ ವೈದ್ಯಕೀಯ ಸೇವೆಗೆ ಮುಂದಾದ ಡಾ|ಎಸ್.ಆರ್.ಹೆಗಡೆ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತ ಬಂದವರು. ಸಿದ್ದಾಪುರಕ್ಕೆ ಮೊದಲ ಅಂಬುಲೆನ್ಸ, ಎಕ್ಸರೇ ಯೂನಿಟ್ ಮುಂತಾಗಿ ಅನೇಕ ಪ್ರಥಮಗಳನ್ನು ತಂದವರು. ಹಣವೇ ಮುಖ್ಯವೆಂದುಕೊಳ್ಳದೇ ತೀರಾ ಕುಗ್ರಾಮಗಳ ರೋಗಿಗಳ ಶುಶ್ರೂಷೆಯನ್ನು ಮಾಡಿದ್ದು ಅವರ ಅತಿ ದೊಡ್ಡ ಗುಣ. ಕಳೆದ ೫೦ ವರ್ಷಗಳಿಂದ ಜನರ ವಿಶ್ವಾಸವನ್ನು ಉಳಿಸಿಕೊಂಡದ್ದು ಅವರ ವೃತ್ತಿಪರತೆಗೆ ಸಾಕ್ಷಿ ಎಂದರು.
ಸಾಗರದ ನೇತ್ರತಜ್ಞ ಡಾ|ಎಚ್.ಎಸ್.ಮೋಹನ್ ಮಾತನಾಡಿ ಕೇವಲ ವೈದ್ಯರಾಗಿ ಮಾತ್ರವಲ್ಲದೇ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ ಡಾ|ಎಸ್.ಆರ್.ಹೆಗಡೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ದಾನಿ, ಉದ್ಯಮಿ ಆನಂದ ಈರಾ ನಾಯ್ಕ ಹೊಸೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿ ಡಾ|ಎಸ್.ಆರ್.ಹೆಗಡೆಯವರ ವ್ಯಕ್ತಿತ್ವ, ಸೇವೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಡಾ|ಎಸ್.ಆರ್.ಹೆಗಡೆ ಸನ್ಮಾನ ಸಮಿತಿ ವತಿಯಿಂದ ಡಾ|ಎಸ್.ಆರ್.ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಹಿತೈಷಿಗಳು, ಆತ್ಮೀಯರು ಸನ್ಮಾನಿಸಿದರು.
ಎಂ.ಎಂ.ಹೆಗಡೆ ಮಗೇಗಾರ ಸ್ವಾಗತಿಸಿದರು. ಪ್ರೊ}ಎಂ.ಕೆ.ನಾಯ್ಕ ನಿರೂಪಿಸಿದರು.
ಕಾನೂನು ಅರಿವು-
ಸಿದ್ದಾಪುರ
ಪ್ರತಿಯೊಬ್ಬರೂ ಕಾನೂನನ್ನು ತಿಳಿದುಕೊಂಡಾಗ ಮಾತ್ರ ಸಮಾಜ ಸುಸ್ಥಿರವಾಗಿರುತ್ತದೆ. ಕಾನೂನಿನ ಅರಿವಿಲ್ಲದಿದ್ದರೆ ನ್ಯಾಯ ಪಡೆಯುವುದು ಕಷ್ಠವಾಗುತ್ತದೆ. ಪ್ರಾಚೀನ ಕಾಲಕ್ಕೂ ಹಾಗೂ ಇಂದಿನ ಆಧುನಿಕ ಕಾಲಕ್ಕೂ ಕಾನೂನಿನಲ್ಲಿ ಬದಲಾವಣೆ ಆಗಿದೆ ಎಂದು ಸಿದ್ದಾಪುರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಮ ಎಸ್ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಹಾಗೂ ಕಾನೂನು ನೆರವು-ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ತಹಸೀಲ್ದಾರ ಪ್ರಸಾದ ಎಸ್.ಎ.ಮಾತನಾಡಿ ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ತಲುಪಿಸಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದೆ. ಜನರು ಸಹ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಇದೊಂದು ಮುಕ್ತ ವೇದಿಕೆ ಆಗಿದೆ ಎಂದು ಹೇಳಿದರು.
ಎಪಿಪಿ ಚಂದ್ರಶೇಖರ ಎಚ್.ಎಸ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ವಕೀಲ ಅಶೋಕ ನಾಯ್ಕ ಕಾನೂನು ಅರಿವು-ನೆರವು ಕುರಿತು ಮಾತನಾಡಿದರು. ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಎಸ್.ಎಂ.ಹೆಗಡೆ,ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯದ ಕುರಿತು ಮಾಹಿತಿ. ಔಷಧಿ ಹಾಗೂ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ,ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ ಪಕ್ವಾಡ ಕಾರ್ಯಕ್ರಮ,ಮತದಾರರ ಪಟ್ಟಿಯಲ್ಲಿ ಹೆಸರು ಕಡಿಮೆ ಮಾಡುವುದು/ ಸೇರ್ಪಡೆಮಾಡುವ ಹಾಗೂ ಆಧಾರ ನೋಂದಣಿ ಕುರಿತು ಮಾಹಿತಿ, ಜನಪ್ರತಿನಿಧಿಗಳಿಂದ ಕಂದಾಯ ಇಲಾಖೆಯ ವಿವಿಧ ಯೋಜನೆಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಣೆ ನಡೆಯಿತು.